ತಲೆ ಬುರುಡೆಯನ್ನು ಕದಿಯಲು ಉದ್ದೇಶವಾದರೂ ಏನು?….ಕದ್ದವರು ಯಾರು? ಕುತೂಹಲಕಾರಿ ಪತ್ತೇದಾರಿ ಕಾದಂಬರಿಯ ಲೇಖಕರು ಕೌಶಿಕ್ ಕೂಡುರಸ್ತೆ. ಪುಸ್ತಕದ ಕುರಿತು ಎಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : “ತಲೆಬುರುಡೆ ಮಿಸ್ಸಿಂಗ್ ಕೇಸ್ “
ಲೇಖಕರು : ಕೌಶಿಕ್ ಕೂಡುರಸ್ತೆ
ಪ್ರಕಾಶಕರು : ಸ್ನೇಹ ಬುಕ್ ಹೌಸ್
9845031335
ಬೆಲೆ : 225/-
ಏರೋನಾಟಿಕಲ್ ಇಂಜಿನಿಯರ್ ಆದ ಶ್ರೀ ಕೌಶಿಕ್ ಕೂಡುರಸ್ತೆ ಅವರು ಈಗಾಗಲೇ ಪತ್ತೇದಾರಿ ಸಾಹಿತ್ಯದಲ್ಲಿ ಓದುಗರ ಮನವನ್ನು ಗೆದ್ದಿದ್ದಾರೆ. ಈ ಓದುಗರ ಗುಂಪಿನಲ್ಲಿ ನಾನು ಕೂಡ ಒಬ್ಬಳು ಎಂಬ ಹೆಮ್ಮೆ ನನಗಿದೆ. ಇದಕ್ಕೆ ಕಾರಣ ಕೌಶಿಕ್ ಅವರು ರಚಿಸುವ ಕಥೆಗಳು ಓದುಗರಲ್ಲಿ ಕುತೂಹಲ ಮತ್ತು ನಿರಂತರವಾಗಿ ಓದಬೇಕೆಂಬ ಆಸಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ.

ವೀರಲೋಕ ಸಂಸ್ಥೆಯವರು ಆಯೋಜಿಸಿದ್ದ “ಪುಸ್ತಕ ಸಂತೆ” ಕಾರ್ಯಕ್ರಮದಲ್ಲಿ ನಾ ಕೊಂಡ ಪುಸ್ತಕಗಳಲ್ಲಿ ಕೌಶಿಕ್ ಕೂಡುರಸ್ತೆ ಅವರ ಕಾದಂಬರಿ “ತಲೆ ಬುರುಡೆ ಮಿಸ್ಸಿಂಗ್ ಕೇಸ್ ” ಕೂಡ ಒಂದಾಗಿತ್ತು. ಈ ಪುಸ್ತಕವನ್ನು ಬೇಗನೆ ಓದಿ ಮುಗಿಸಬೇಕು ಎಂದಿದ್ದ ನನಗೆ ದೆಹಲಿಗೆ ಮಗನ ಮನೆಗೆ ಹೋಗುವ ಪ್ರೋಗ್ರಾಮ್ ಇದ್ದಿದ್ದರಿಂದ ಪುಸ್ತಕವನ್ನು ಕೊಂಡ ದಿನವೇ ಓದಲು ಆಗಲಿಲ್ಲ. ಆದರೆ ಪುಸ್ತಕವನ್ನು ದೆಹಲಿಗೆ ತೆಗೆದುಕೊಂಡು ಹೋಗುವ ನನ್ನ ಸೂಟ್ ಕೇಸ್ನಲ್ಲಿ ಇಟ್ಟುಕೊಳ್ಳಲು ಮರೆಯಲಿಲ್ಲ.
ಅಬ್ಬಬ್ಬಾ!!! ಕೌಶಿಕ್ ಅವರ ತಲೆಬುರುಡೆಯು ಅವರ 11ನೇ ಕಾದಂಬರಿಯಾದ “ತಲೆಬುರುಡೆ ಮಿಸ್ಸಿಂಗ್ ಕೇಸ್” ಕಥೆಗಿಂತಲೂ ಪ್ರಚಂಡವಾಗಿದೆ. ಕಥೆ, ಕಥೆಯ ಪಾತ್ರಧಾರಿಗಳು, ಸನ್ನಿವೇಶಗಳ ಸೃಷ್ಟಿ ಒಂದಾ… ಎರಡಾ!!!! ಇಂತಹ ಕಥೆಗಳನ್ನು ಹೆಣಿಯುವಲ್ಲಿ ಕೌಶಿಕ್ ಅವರು ಓರ್ವ ನಿಪುಣ ಪತ್ತೇದಾರಿ ಸಾಹಿತಿ ಎಂದು ಸಾಬೀತುಪಡಿಸಿದ್ದಾರೆ.
ಕಥೆ ಬಗ್ಗೆ ಹೇಳಲೇ!

ಡೈನಾಮೈಟ್ ಸಿಡಿದು ಮೃತ ಪಟ್ಟಿದ್ದ ತಂದೆಯವರ ಸಮಾಧಿಯನ್ನು ಅಗೆದು ಅವರ ತಲೆ ಬುರುಡೆಯನ್ನು ಯಾರೋ ಕದಿದ್ದಾರೆ ಎಂದು ತಿಳಿದ ಹದಿ ಹರೆಯದ ನೀಲಿ ಕಂಗಳ ಚೆಲುವೆ ಚಾರ್ವಿ ಸಕಲೇಶಪುರದ ಸೋಮೇನಹಳ್ಳಿಗೆ ಬರುತ್ತಾಳೆ.
ತಲೆ ಬುರುಡೆಯನ್ನು ಕದಿಯಲು ಉದ್ದೇಶವಾದರೂ ಏನು?….ಕದ್ದವರು ಯಾರು?… ನಂತರ ಏನಾಯಿತು!! ಎಂಬುದನ್ನು ತಿಳಿಯಲು ನೀವೇ ಪುಸ್ತಕವನ್ನು ಕೊಂಡು ಓದಿದರೆ ಸಾರ್ಥಕ ಎಂದು ನನ್ನ ಭಾವನೆ .
ಶ್ರೀ ಕೌಶಿಕ್ ಕೂಡುರಸ್ತೆ ಅವರು ವೃತ್ತಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. ಇವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ 2022 ರಲ್ಲಿ ಇವರ ಪತ್ತೇದಾರಿ ” ಒಂದು ಕೋಪಿಯ ಕಥೆ” ಕಾದಂಬರಿಗೆ “ಯುವ ಸಾಹಿತ್ಯರತ್ನ” ಪ್ರಶಸ್ತಿ ದೊರಕಿದೆ. ಇವರ ಎಲ್ಲಾ ಪತ್ತೇದಾರಿ ಕಾದಂಬರಿಗಳು ಮೆಚ್ಚುಗೆಯನ್ನು ಗಳಿಸಿದೆ. ಶ್ರೀ ಕೌಶಿಕ್ ಕೂಡುರಸ್ತೆ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ….
ಸರ್ ಕೌಶಿಕ್ ಅವರೆ ನಿಜಕ್ಕೂ ನಿಮ್ಮ ತಲೆ ಬುರುಡೆಯೊಳಗಿನ ಜಾಣತನಕ್ಕೆ ನಿಮ್ಮ ಅಭಿಮಾನಿಯಾದ ನನ್ನ ಅನೇಕ ನಮಸ್ಕಾರಗಳು ನಿಮ್ಮ ಮುಂದಿನ ಕೆಲಸಗಳಿಗೆ ಶುಭವಾಗಲಿ.
- ಎಚ್ ವಿ ಮೀನಾ
