ಡಾ.ಯುವರಾಜ್ ಅವರು ವೃತ್ತಿಯಲ್ಲಿ ಪಶು ವೈದ್ಯರು ಮತ್ತು ಸಮಾಜದ ಒಳಿತಿಗಾಗಿ ಮಿಡಿಯುವ ವಿಶಾಲ ಹೃದಯವಂತ ವ್ಯಕ್ತಿ. ತಮ್ಮ ಲೇಖನಿಯಿಂದ ಆಗಾಗ ಸಮಾಜದ ಮೇಲೆ ಬೆಳಕನ್ನು ಹರಿಸುತ್ತಲೇ ಇರುತ್ತಾರೆ. ಅವರು ಚಲ್ಲಿದ ಬೆಳಕು, ಭಗವಾನ್ ಅವರ ಬಾಳಿಗೆ ಬೆಳಕಾಗುತ್ತಾ ನೋಡಬೇಕು…
ತುಂಗಾ ಸೇತುವೆಯ ಮೇಲೆ ಹೋಗುವಾಗ ಕೊರೆವ ಚಳಿಯಲ್ಲಿ ತುಂಗೆಯಲ್ಲಿ ಮಿಂದೆದ್ದು ಸಂಧ್ಯಾವಂದನೆ ಮಾಡುತ್ತಿರುವ ಹಿರಿಯರೊಬ್ಬರು , ನದಿಯ ರೌದ್ರತೆಯನ್ನು ಅರಿತಿದ್ದ ಎರಡು ಸಾಕು ನಾಯಿಗಳು ಮಾಲೀಕನನ್ನು ಕಾಯುತ್ತಾ ಅಲ್ಲಿಯೇ ಬಂಡೆಯ ಮೇಲೆ ಕಾವಲು ಕೂತಿದ್ದ ದೃಶ್ಯವನ್ನು ಕಂಡು ರೋಮಾಂಚನಗೊಂಡೆ. ಸೂಕ್ಷವಾಗಿ ಗಮನಿಸಿದಾಗ ತಿಳಿಯಿತು ಅವರು ನಮ್ಮ ತೀರ್ಥಹಳ್ಳಿಯ ಮುಖ್ಯ ಬಸ್ ಸ್ಟಾಂಡ್ ನಲ್ಲಿ ನೆಲೆಸಿರುವ “ಭಗವಾನ್” ಎಂದು. ಅದು ಅವರ ನಿಜವಾದ ಹೆಸರಲ್ಲ , ಹೆಸರು ಯಾರಿಗೂ ತಿಳಿದಿಲ್ಲ ಕೂಡ.ಇಲ್ಲಿಯ ಜನರೇ ಇಟ್ಟ ಹೆಸರು #ಭಗವಾನ್. ಸುಮಾರು ಆರೇಳು ವರ್ಷಗಳ ಹಿಂದೆ ಎಲ್ಲಿಂದಲೋ ತೀರ್ಥಹಳ್ಳಿ ಬಂದು ಸೇರಿದವರು.

ಪ್ರತಿ ದಿನವೂ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣವನ್ನು ಪೂರ್ತಿಯಾಗಿ , ಯಾವ ಅಪೇಕ್ಷೆಯೂ ಇಲ್ಲದೆ ಸ್ವಚ್ಛಗೊಳಿಸುವ ಇವರು ಅದು ತಮ್ಮ ದೈನಂದಿನ ಕರ್ತವ್ಯವೆಂದೇ ಭಾವಿಸಿದ್ದಾರೆ. ಉಳಿಯುವುದಕ್ಕೆ ಸೌಲಭ್ಯವೇನೂ ಇಲ್ಲದ ಇವರು ಬಸ್ ನಿಲ್ದಾಣದಲ್ಲಿ ಎಲ್ಲಾದರೂ ಒಂದು ಕಡೆ ತಂಗುತ್ತಾರೆ. ಮರಾಠಿ ಹಾಗೂ ಹಿಂದಿ ಭಾಷೆಯನ್ನು ಬಲ್ಲವರಾಗಿದ್ದು ಮಹಾನ್ ಧೈವ ಭಕ್ತರೂ ಹೌದು.ಇವರ ಸಾತ್ವಿಕ ಗುಣಗಳನ್ನು ಅರಿತ ಹಲವರು ( ಹೊರ ಜಿಲ್ಲೆಯವರೂ ಕೂಡ) ಇವರಿಂದ ಆಶೀರ್ವಾದ ಪಡೆದು ತಾವಾಗಿಯೇ ನೀಡುವ ಹಣದಲ್ಲಿ ಇವರ ಹಸಿವು ನೀಗುತ್ತದೆ. ಹಾಗೆಂದು ಯಾವುದೇ ಹೋಟೆಲ್, ಅಂಗಡಿಗಳಲ್ಲಿ ಕೈ ಚಾಚುವುದಿಲ್ಲ. ಬಿಡುವಿದ್ದಾಗ ಯಾವುದಾದರೂ ಶಾಲೆ-ಕಾಲೇಜುಗಳನ್ನು, ದೇವಸ್ಥಾನ, ಪಾರ್ಕ್ ಗಳನ್ನು ಸ್ವಚ್ಛ ಗೊಳಿಸುವುದು ಇವರ ದಿನನಿತ್ಯದ ಕಾರ್ಯ. ಯಾವುದಾದರೂ ಸಮಾರಂಭಗಳಿಗೆ , ಮನೆ ಗೃಹ ಪ್ರವೇಶಕ್ಕೆ ಕರೆದೊಯ್ದರೆ ಒಂದು ಬದಿಯಲ್ಲಿ ಕುಳಿತು ಭಜನೆ ಮಾಡುತ್ತಾರೆ. ಭಾರತದ ಪ್ರಸಿದ್ಧ ದೇವಾಲಯಗಳು , ಪಾರಂಪರಿಕ ತಾಣಗಳ ಹೆಸರು, ಅದರ ವೈಶಿಷ್ಟ್ಯತೆಗಳನ್ನು ಸಹ ಬಲ್ಲರು.ಅವರ ಮಾನಸಿಕ ಆರೋಗ್ಯದ ಬಗ್ಗೆ ಬಸ್ ನಿಲ್ದಾಣದಲ್ಲಿ ಕಛೇರಿ ಹೊಂದಿರುವ ರಾಘವ ರಾಘು ಅವರನ್ನು ವಿಚಾರಿಸಿದಾಗ ಯಾವುದೇ ಸಮಸ್ಯೆ ಇಲ್ಲವೆಂದು ತಿಳಿಸಿದರು .

ಇವರ ಸ್ನೇಹ ಬೆಳೆಸಿರುವ ಎರಡು ನಾಯಿಗಳು ಅವರಿಗೆ Z plus ರಕ್ಷಣೆ ನೀಡುತ್ತಿವೆ . ಯಾರಾದರೂ ಏಕಾ ಏಕಿ ಅವರನ್ನು ಸಂಪರ್ಕಿಸುವ ಅಥವಾ ಜೋರಾಗಿ ಕರೆಯುವ ಮುನ್ನ ಅವರ ಶ್ವಾನಗಳ ಬಗ್ಗೆ ಗಮನವಿರಲಿ. ಅಪ್ಪಣೆ ಪಡೆದೇ ಮಾತನಾಡಬೇಕಂತೆ. ವರ್ಷಕೊಮ್ಮೆ ಸ್ವಚ್ಟತಾ ಕಾರ್ಯ ನಡೆಸುವ ನಮ್ಮೆಲ್ಲರಿಗಿಂತ ನಿಸ್ವಾರ್ಥ ಸೇವೆ ನೀಡುವ ಇವರ ನಡುವೆ ನಾವೆಲ್ಲಿ ಎಂಬ ಪ್ರಶ್ನೆ ಮೂಡದಿರದು.

(ಫೋಟೋ ಕೃಪೆ- ರಾಘವ )
ಇತ್ತೀಚೆಗೆ ನಾನು ಗಮನಿಸಿದಂತೆ ಅವರು ತಮ್ಮಷ್ಟಕ್ಕೆ ತಾವೇ ಅತಿಯಾಗಿ ಮಾತನಾಡುವುದನ್ನು ನೋಡಿದ್ದೇನೆ. ಇದಕ್ಕೆ ಕಾರಣಗಳು ತಿಳಿದಿಲ್ಲ.ಮಾನವೀಯತೆ ದೃಷ್ಟಿಯಿಂದ ಇವರ ಆರೋಗ್ಯದ ಕುರಿತಾಗಿ ಯಾವುದಾದರೂ ಸಂಘಟನೆಯಿಂದ ಸೂಕ್ತ ವ್ಯವಸ್ಥೆ ಮಾಡುವುದು ಒಳ್ಳೆಯದು.
- ಡಾ. ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ
