ಕೊರೊನ ಬಗ್ಗೆ ನೋವಿನ ಕತೆಗಳೇ ಸಾಕಷ್ಟಿವೆ. ಆದರೆ ಅದೇ ಕೊರೊನ ಸಮಯವನ್ನು ಲಾಭ ಪಡೆದು ಸಾಹಿತ್ಯ ಕೃಷಿ ಮಾಡಿದ ವಾಸಂತಿ ಅಂಬಲಪಾಡಿಯವರ ಸ್ಪೂರ್ತಿಯ ಒಂದು ಲೇಖನ ನಿಮ್ಮ ಮುಂದಿದೆ.
ಅದು ೨೦೨೦ ರ ಜನವರಿ ೨೫. ಸುದೀರ್ಘ ಹದಿನೆಂಟು ವರ್ಷಗಳ ನಂತರ ಮೂರನೇಯ ಕೃತಿ ‘ಉಯ್ಯಾಲೆ‘ ಅನ್ನುವ ಕಥಾ ಸಂಕಲದ ಬಿಡುಗಡೆ. ಏಕೆಂದರೆ ಮದುವೆಗೆ ಮೊದಲು ಎರಡು ಕವನ ಸಂಕಲನ ಹೊರತಂದಿದ್ದು, ವಿವಾಹಾನಂತರ ಸಾಹಿತ್ಯ ಚಟುವಟಿಕೆ ನಿಧಾನ ಗತಿಯಲ್ಲಿತ್ತು.
ಕಾರಣ ವಿವಾಹಾನಂತರ ಸಾಂಸಾರಿಕ ಜವಾಬ್ದಾರಿ, ಪ್ರೀತಿಯ ಅಣ್ಣ, ಅಮ್ಮನ ಸಾವು, ನಮ್ಮೊಂದಿಗೇ ಇದ್ದ ಅತ್ತೆಯ ಅಕ್ಕ ಪಾರ್ಶ್ವವಾಯು ಪೀಡಿತರಾಗಿದ್ದುದರಿಂದ ಅವರ ಸೇವೆ, ನಂತರದ ಅವರ ನಿಧನ ನನ್ನನ್ನು ಸ್ವಲ್ಪ ಮಟ್ಟಿಗೆ ಕಂಗೆಡಿಸಿತ್ತು. ಆದರೆ ಈ ವರ್ಷ ಯಾಕೋ ನನ್ನ ಸಾಹಿತ್ಯ ಜೀವನದ ನವ ಪಲ್ಲವ ಅಂತಲೇ ಹೇಳಬೇಕು. ಆಗಲೇ ಬರೆದಿಟ್ಟ ಸ್ವರಚಿತ ಹಲವಾರು ಕತೆ, ಕವನಗಳಲ್ಲಿ ಕತೆಗಳನ್ನು ಹುಡುಕಿ ತೆಗೆದು ನನ್ನ ಆತ್ಮೀಯರು ಹಾಗೆಯೇ ಪತಿಯ ಪ್ರೋತ್ಸಾಹದಿಂದ ಕಥಾ ಸಂಕಲನ ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬಿಕರು, ಹಾಗೆಯೇ ಸಾಹಿತಿಗಳ ಸಮ್ಮುಖದಲ್ಲಿ ಬಿಡುಗಡೆ ಆಗಿಯೇ ಬಿಟ್ಟಿತು.
ಆಗ ಕೊರೊನಾ ಭಾರತ ಹೊರತು ಪಡಿಸಿ ಬೇರೆ ಕಡೆ ತನ್ನ ಕಹಳೆ ಊದುತ್ತಿದ್ದದ್ದು ಅರಿವಿಗೇ ಬಂದಿರಲಿಲ್ಲ. ಫೆಬ್ರವರಿ, ಮಾರ್ಚ್ ತಿಂಗಳ ಅವಧಿಯಲ್ಲಿ ಏಕಾ ಏಕಿಯಾಗಿ ಕೊರೊನಾ ಭಾರತಕ್ಕೂ ಕಾಲಿಟ್ಟು ಒಂದಷ್ಟು ಜನರನ್ನು ಬಲಿ ತೆಗೆದುಕೊಂಡು ಮುಂಜಾಗೃಕತಾ ಕಾರಣ ಲಾಕ್ ಡೌನ್. ತದ ನಂತರದ ವಿಷಯಗಳು ನಿಮಗೆಲ್ಲಾ ತಿಳಿದೇ ಇದೆ. ದ್ವಿತೀಯ ಪಿಯುಸಿ ಮೌಲ್ಯ ಮಾಪನಕ್ಕೂ ಕೊರೊನಾ ಭೀತಿಯಿಂದಾಗಿ ಹೋಗಲಿಲ್ಲ. ಆ ಅವಧಿಯಲ್ಲೇ ಹುಟ್ಟಿಕೊಂಡಿದ್ದವು ಅನೇಕ ಸಾಹಿತ್ಯ ಸಂಬಂಧಿತ ವಾಟ್ಸಪ್ ಗುಂಪುಗಳು. ಆ ಗುಂಪುಗಳು ನಡೆಸುವ ಸ್ಪರ್ಧೆಯಲ್ಲೂ ಭಾಗವಹಿಸುತ್ತಿದ್ದೆ. ಹೊರಗೆಲ್ಲಾ ಕೊರೊನಾ ಭೀತಿ, ಅರೆ ವೇತನ, ಪತ್ರಿಕೆಯಲ್ಲಿ ಛಾಯಾ ಪತ್ರಕರ್ತರಾಗಿರುವ ಪತಿಗೂ ಹೊರ ಹೋಗುವಂತಿಲ್ಲ. ಉಳಿಸಿದ ಸ್ವಲ್ಪ ಹಣದಲ್ಲೇ ಜೀವನ ನಿರ್ವಹಣೆ. ಮೊದಲಿನಿಂದಲೂ ಸರಳ ಜೀವನಕ್ಕೆ ಒಗ್ಗಿಕೊಂಡಿದ್ದರಿಂದಲೋ ಏನೋ ಬದಕಲು ಹೊಟ್ಟೆ ಗೊಂದಿಷ್ಟು ಅನ್ನವಿದ್ದರೆ ಬದುಕಬಹುದಲ್ಲ.ಹಾಗಾಗಿ ಅಷ್ಟಾಗಿ ಕಷ್ಟವೆನಿಸಲಿಲ್ಲ.
ಹೌದು ಮೊದಲೇ ಹೇಳಿದ ಹಾಗೆ ಕೇಂದ್ರ ಸಾಹಿತ್ಯ ವೇದಿಕೆಯ ಘಟಕವೊಂದು ಆಧುನಿಕ ವಚನ ಸ್ಪರ್ಧೆ ಏರ್ಪಡಿಸಿತ್ತು. ಅದುವರೆಗೆ ವಚನ ಸಾಹಿತ್ಯ ಓದಿಕೊಂಡಿದ್ದರೂ ನಾವೂ ಕೂಡಾ ಅಂದರೆ ಈಗಿನ ಸಾಹಿತಿಗಳೂ ವಚನ ಸಾಹಿತ್ಯ ಬರೆಯಬಹುದು ಎಂದು ತಿಳಿದದ್ದು ಕೂಡ ಆಗಲೇ. ಸರಿ ಚಂದ್ರ ಮೌಳೀಶ್ವರಾ ಎಂಬ ಅಂಕಿತ ನಾಮದಲ್ಲಿ ಬರೆದ ವಚನಕ್ಕೆ ರಾಜ್ಯ ಮಟ್ಟದಲ್ಲಿ ತೃತೀಯ ಬಹುಮಾನ ಬಂದಾಗ ಆದ ಸಂತಸ ಅಷ್ಟಿಷ್ಟಲ್ಲ. ನಂತರ ಹೆಚ್ಚು ಆಸಕ್ತಿಯಿಂದ ಪ್ರತಿದಿನವೂ ಆಧುನಿಕ ‘ವಚನ ಮಾಲಿಕೆ’ ಎಂಬ ಹೆಸರಿನಲ್ಲಿ ಬರೆದ ವಚನಕ್ಕೆ ದೊರೆತ ಪ್ರೊತ್ಸಾಹ, ಪ್ರತಿಕ್ರಿಯೆಗಳು ಅಷ್ಟಿಷ್ಟಲ್ಲ. ಕೆಲವರಂತೂ ಕೃತಿ ರೂಪದಲ್ಲಿ ಪ್ರಕಟಿಸಲು ಉತ್ತೇಜಿಸಿದರು.
‘ನಾ ಕಂಡ ಜಗವು ಇಂತಿಹುದಯ್ಯಾ’ ಎಂಬ ಹೆಸರಿನಲ್ಲಿ ಆಧುನಿಕ ವಚನ ಸಂಕಲನವನ್ನು ಪ್ರಕಟಿಸಿಯೇ ಬಿಟ್ಟೆ. ಅದೂ ಕೂಡಾ ೨೭/ ೧೧ / ೨೦೨೯ ರಂದು ನಮ್ಮ ಊರಿನ ಪ್ರಸಿದ್ಧ ಸಾಹಿತಿ ಚಿಂತಕರಾದ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರ ಮುನ್ನುಡಿಯೊಂದಿಗೆ, ಪಣಿಯಾಡಿಯ ಅನಂತ ಪದ್ಮನಾಭ ದೇವಸ್ಥಾನದ ಶಿಲಾನ್ಯಾಸ ಸಂದರ್ಭದಲ್ಲಿ ಉಡುಪಿ ಪುತ್ತಿಗೆ ಮಠದ ಸ್ವಾಮೀಜಿ ಶ್ರೀ ಶ್ರೀ ಸುಗುಣೇಂದ್ರ ಶ್ರೀ ಪಾದರ ಅಮೃತ ಹಸ್ತದಿಂದ ಬಿಡುಗಡೆ ಕೊರೊನಾ ಮಧ್ಯೆಯೂ ನಡೆಯಿತು ಎಂದರೆ ಅದು ದೈವ ಕೃಪೆ ಮತ್ತು ಆತ್ಮೀಯರ ಪ್ರೋತ್ಸಾಹದಿಂದ ಮಾತ್ರ ಸಾಧ್ಯ. ಅದರ ನಡುವೆಯೂ ದೇಶ ಪಾಂಡೆ ಪ್ರತಿಷ್ಠಾನದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ವೇದಿಕೆಯ ಡಾ.ದೊಡ್ಡ ರಂಗೇ ಗೌಡ ಕಾವ್ಯ ಪ್ರಶಸ್ತಿ ದೊರೆತದ್ದು ಕೂಡಾ ಕೊರೋನಾ ಕಾಲದಲ್ಲೇ.
ಹಾಗೆಯೇ ಕೊರೊನಾ ಮಧ್ಯ ಭಾಗದಲ್ಲಿ ತುಳು ಭಾಷೆಯ ಬರವಣಿಗೆಯಲ್ಲೂ ನನ್ನನ್ನು ತೊಡಗಿಸಿಕೊಂಡಿದ್ದೆ. ದಿನಕ್ಕೊಂದು ‘ಎಲ್ಯ ಕಥೆಗಳು’ ( ಸಣ್ಣ ಕಥೆಗಳು )ಎಂದು ತುಳು ಗುಂಪಿನಲ್ಲಿ ಬರೆದು ಹಾಕುತ್ತಿದ್ದೆ. ಇದಕ್ಕೂ ಸಿಕ್ಕಿದ ಪ್ರೋತ್ಸಾಹ, ಪ್ರತಿಕ್ರಿಯೆಗಳು ಮತ್ತು ಕೃತಿ ರೂಪದಲ್ಲಿ ಪ್ರಕಟಿಸಿರಿ ಎನ್ನುವ ಪ್ರೋತ್ಸಾಹ ದ ಮಾತುಗಳು ‘ಇರ್ನೂದೆದ ಒಂಜಿ ನೋಟು’ ( ೨೦೦ ರ ಒಂದು ನೋಟು) ಎಂಬ ಕಥಾ ಸಂಕಲನ ಪ್ರಕಟವಾಗಿಯೇ ಬಿಟ್ಟಿತು. ಅದೂ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಸೀಮಿತ ಜನರ ನಡುವೆ ದೇವಾಲಯದ ಧರ್ಮದರ್ಶಿಗಳಾದ ಶ್ರೀ ನಿ.ಬೀ ವಿಜಯ ಬಲ್ಲಾಳರು ಬಿಡುಗಡೆಗೊಳಿಸಿದರು.
ಹೌದು… ಈ ಕೊರೊನಾ ಕೆಲವೊಂದು ವಿಷಯಗಳಲ್ಲಿ ಭೀತಿಯನ್ನುಂಟು ಮಾಡಿದರೂ ಸಾಹಿತ್ಯದಲ್ಲಿ ನನ್ನನ್ನು ನಾನು ತುಸು ಹೆಚ್ಚೇ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟದ್ದು ಸುಳ್ಳಲ್ಲ. ಅಂತೂ ಕೊರೊನಾ ಕಾಲದಲ್ಲಿ ಸಾಹಿತ್ಯದ ಮೂರು ಕೃತಿಗಳನ್ನು ಹೊರ ತಂದಿರುವುದಕ್ಕೆ ಹೆಮ್ಮೆ ಅನಿಸುತ್ತದೆ.
- ವಾಸಂತಿ ಅಂಬಲಪಾಡಿ (ಕತೆಗಾರ್ತಿ ಮತ್ತು ಕವಿಯತ್ರಿ, ಉಡುಪಿ)