ಕೊಕ್ಕಳ ಬಳ್ಳಿ ಕೊಯ್ದು, ಇಲ್ಲಿ ಅಂವ ಮಾರಿ ಹೋಗ್ಯಾನ್ರಿ… ನಂದೆನೂ ತಪ್ಪಿಲ್ರಿ…ಕವಿ ವಿಜಯ ಅಮೃತರಾಜ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ಮುಂದೆ ಓದಿ…
ಎತ್ತಿ ಅನಾಮತ್ತಾ
ನೆಲಕ್ಕ ಒಡಿಬ್ಯಾಡ್ರಿ….
ನಂದೆನೂ ತಪ್ಪಿಲ್ರಿ
ಬೀಜ ಇದ್ದಾಗ ಕರ್ರಗ ಇದ್ದನ್ರಿ,
ಹಳ್ಳದಾಗ ಹಾಕಿದಮ್ಯಾಲ
ಹಸರಾದನ್ರಿ….
ಎಪ್ಪಾ ಎವ್ವಾ
ಹೊಡಿ ಬ್ಯಾಡ್ರಿ,
ಸುಮ್ಮಕ ಇದ್ದಾಂವಗ
ಉಸಿರುಗಟ್ಟುವಂಗ,
ಉಸಕನ್ಯಾಗ ತುರುಕಿ,
ಕೊಕ್ಕಳ ಬಳ್ಳಿ ಕೊಯ್ದು
ಇಲ್ಲಿ ಅಂವ ಮಾರಿ ಹೋಗ್ಯಾನ್ರಿ,
ನಂದೆನೂ ತಪ್ಪಿಲ್ರಿ,
ಎಪ್ಪಾ ಎವ್ವಾ
ಹೊಡಿ ಬ್ಯಾಡ್ರಿ,
ಅನಾಮತ ಎತ್ತಿ ಒಗಿಬ್ಯಾಡರಿ…
ಬೀಜ ತಂದಾವ,
ಊರಿ ಬೆಳದಾವ,
ಕತ್ತರಿಸಿ ಮಾರಿದವ
ಬರ್ರಿ ಲಗೂನ ಬರ್ರಿ
ಕೂಗಿದ್ರೂ ಕೇಳಿಸಿದರೂ
ಹೊಳ್ಳಿ ನೋಡಲಿಲ್ಲರ್ರಿ….
ಅದಕ್ಕ ಗಾಡಿ ಹಳಿಗೆ
ಬಿದ್ದಿನ್ರಿ,
ಆ ಒಂದ ಮಾತ್ರಿ
‘ ನನ್ನ ಸಾವಿಗೆ ನಾನ ಕಾರಣರ್ರಿ’.
- ವಿಜಯ ಅಮೃತರಾಜ್ (ವೃತ್ತಿಯಲ್ಲಿ ವಕೀಲರು, ಕವಿಗಳು) ಕೊಪ್ಪಳ.
