ಬಾಲ್ಯದಲ್ಲಿ ನಾನು ಬಾವಿಯಲ್ಲಿ ಬಿದ್ದಿದ್ದೆ

ಬಾಲ್ಯದಲ್ಲಿ ನಾನು ಬಾವಿಯಲ್ಲಿ ಬಿದ್ದಿದ್ದೆ. ಪ್ರಜ್ಞೆ ಬಂದ ಮೇಲೆ ಅತ್ತೂ ಕರೆದರೂ ಯಾರೂ ಬರಲಿಲ್ಲ. ಈಗ ಬಾವಿ ನೋಡಿದಾಗ ಮತ್ತೆ ಮತ್ತೆ ನೆನಪಾಗುವ ನೆನಪು ಅದು ಅರುಣ್ ಪ್ರಸಾದ್ ಅವರು ಬರೆದಿರುವ ಬಾವಿ ಕತೆಯನ್ನು ತಪ್ಪದೆ ಮುಂದೆ ಓದಿ…

ಬಹುಶಃ 1968-69ರಲ್ಲಿ ನನಗೆ ಮೂರರಿಂದ ನಾಲ್ಕು ವರ್ಷ ಇರುವಾಗ ನಮ್ಮ ಊರಿನ ಸಮೀಪದ ತಾವರೇಹಳ್ಳಿಯ ನಮ್ಮಜ್ಜಿಯ ಸಂಬಂಧಿ ಗೋಡೆ ಕೃಷ್ಣಣ್ಣರ ಮನೆಯಲ್ಲಿ ಸತ್ಯನಾರಾಯಣ ವೃತ ಕಾಯ೯ಕ್ರಮದ ಆಹ್ವಾನ ನೀಡಿದ್ದರಿಂದ ನನ್ನ ತಾಯಿ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು.ಮನೆ ಗೋಡೆಗಳನ್ನು ಆ ಕಾಲದಲ್ಲಿ ಮಣ್ಣಿನಿಂದಲೇ ಸಂಪ್ರದಾಯಿಕವಾಗಿ ನಿರ್ಮಿಸುತ್ತಿದ್ದರು. ಕಲ್ಲು ಇಟ್ಟಿಗೆ ಗೋಡೆ ಇತ್ತೀಚೆಗೆ ಹೆಚ್ಚಾಗಿದೆ. ಅಂತಹ ಮಣ್ಣಿನ ಗೋಡೆ ನಿರ್ಮಾಣದಲ್ಲಿ ತಾವರೇಹಳ್ಳಿ ಕೃಷ್ಣಣ್ಣ ಎಕ್ಸ್ ಪರ್ಟ್ ಆಗಿದ್ದರಿಂದ ಜನ ಪ್ರೀತಿಯಿಂದ ‘ಗೋಡೆ ಕೃಷ್ಣಣ್ಣ’ ಎಂದು ಅವರನ್ನು ಕರೆಯುತ್ತಿದ್ದರು.

ತಾವರೇಹಳ್ಳಿ ಗೋಡೆ ಕೃಷ್ಣಣ್ಣರ ಮಗ ನಾಗರಾಜ ಈಗಿಲ್ಲ, ಇವರ ಮಗ ರಾಘವೇಂದ್ರ ಈಗ ಆನಂದಪುರಂನಲ್ಲಿ ಖ್ಯಾತ ಪೋಟೋಗ್ರಾಪರ್ ಆಗಿದ್ದಾರೆ. ಅವರ ಮನೆಯಲ್ಲಿ ಅವತ್ತಿನ ಸತ್ಯನಾರಾಯಣ ಕಥೆ ನಡೆಸಿಕೊಡುವ ಅರ್ಚಕರು ಆನಂದಪುರಂನ ಕಿಟ್ಟಾ ಜೋಯಿಸರು.

ಅವರು ಸ್ವಲ್ಪ ತಡವಾಗಿ ಬಂದು ಪೂಜೆ ಪ್ರಾರಂಭಿಸಿ ಕಥೆ ಹೇಳಲು ಪ್ರಾರಂಭಿಸಿದಾಗ ಹಿರಿಯರೆಲ್ಲ ಭಕ್ತಿ ಪರವಶೆಯಿಂದ ಸತ್ಯನಾರಾಯಣ ಕಥೆ ಕೇಳುತ್ತಾ ತಲ್ಲೀನರಾಗಿದ್ದಾಗ ನನ್ನದೇ ವಯೋಮಾನದ ಮಕ್ಕಳೆಲ್ಲ ಮನೆ ಎದುರಿನ ಗದ್ದೆ ಬಯಲಲ್ಲಿ ಆಡುತ್ತಾ ತಿರುಗಾಡಲು ಶುರು ಮಾಡಿದ್ದು ಯಾರಿಗೂ ಗಮನಕ್ಕೆ ಬರಲಿಲ್ಲ.

ಮನೆಯಿಂದ ಕೊಂಚ ದೂರದಲ್ಲೇ ಹೊಸದಾಗಿ ಬಾವಿ ಒಂದು ತೋಡಲು ಪ್ರಾರಂಭಿಸಿ 10-12 ಅಡಿ ಆಳದವರೆಗೆ ಮಣ್ಣು ತೆಗೆದ ವೃತ್ತಾಕಾರದ ಭಾವಿ ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ನಾವೆಲ್ಲ ಮಕ್ಕಳು ಬಾವಿ ಸುತ್ತಲೂ ಕುತೂಹಲದಿಂದ ವೃತ್ತಾಕಾರವಾಗಿ ನಿಂತಿದ್ದು ನೆನಪು.

ಸ್ವಲ್ಪ ಹೊತ್ತಿನ ನಂತರ ನನಗೆ ಎಚ್ಚರವಾದಾಗ ಬಾವಿಯಲ್ಲಿ ಜೇಡಿ ಮಣ್ಣಿನ ಮೃದು ಹಾಸಿಗೆಯಲ್ಲಿ ಮಲಗಿದ್ದೆ! ನನಗೆ ತಕ್ಷಣ ನೆನಪಾಗಿದ್ದು ನನ್ನಮ್ಮ ಅಷ್ಟೇ ಭಯ – ದುಃಖದಿಂದ ಅತ್ತೂ ಕರೆದು ಸುಸ್ತಾದರೂ ಯಾರೂ ಬರಲಿಲ್ಲ.

ಬಹುಶಃ ಎಲ್ಲಾ ಮಕ್ಕಳು ಸೇರಿ ಬಾವಿ ವೀಕ್ಷಿಸುವಾಗ ಒಬ್ಬರಿಗೊಬ್ಬರು ದೂಡಾಡಿ ನಾನು ಆಯಾ ತಪ್ಪಿ ಬಾವಿಯಲ್ಲಿ ಬಿದ್ದು ಪ್ರಜ್ಞೆ ತಪ್ಪಿರಬೇಕು. ಇದರಿಂದ ಭಯ ಪಟ್ಟ ಮಕ್ಕಳೆಲ್ಲ ಮನೆಗೆ ಓಡಿ ಹೋಗಿ ಕಿಟ್ಟಾ ಜೋಯಿಸರ ಸತ್ಯನಾರಾಯಣ ಕಥೆ ತಲ್ಲೀನರಾಗಿ ಕೇಳುತ್ತಿದ್ದ ಅವರವರ ತಾಯ೦ದಿರ ಮಡಲು ಸೇರಿದ್ದಾರೆ. ಸತ್ಯನಾರಾಯಣ ಕಥೆ ಮುಗಿದು ಜೋಯಿಸರು ಬಹು ರುಚಿಯ ಸಪಾದ ಭಕ್ಷ್ಯ ಪ್ರಸಾದ ವಿನಿಯೋಗ ಪ್ರಾರಂಭ ಮಾಡಿದಾಗ ನನ್ನ ತಾಯಿ ನನ್ನ ಹುಡುಕಿದರೆ ನಾನೆಲ್ಲಿಯೂ ಇಲ್ಲದ್ದರಿಂದ ಗಾಬರಿ ದುಃಖದಿಂದ ಹುಡುಕಿದ್ದಾರೆ ಪ್ರೀತಿಯ ಮಗ ಎಲ್ಲೂ ಇಲ್ಲದಾಗ ಅಂತಿಮವಾಗಿ ಬಾವಿಯಲ್ಲಿ ಇಣುಕಿದ್ದಾರೆ, ಅಲ್ಲಿ ಅತ್ತೂ ಕರೆದು ದಣಿದಿದ್ದ ನನ್ನ ನೋಡಿದ್ದಾರೆ, ನನ್ನ ತಾಯಿಯ ಮುಖ ಬಾವಿಯ ಮೇಲಿಂದ ಕಂಡು ತಕ್ಷಣ ಅದೃಷ್ಯವಾಗಿದ್ದು ನನಗೆ ಪುನಃ ಅಳುವ ಶಕ್ತಿ ನೀಡಿತ್ತು.

ದೊಡ್ಡವರೆಲ್ಲ ಸೇರಿ ಎರೆಡು ಏಣಿ ಜೋಡಿಸಿ ಕಟ್ಟಿ ಬಾವಿಗೆ ಇಳಿಸಿ ಅವರಲ್ಲೊಬ್ಬರು ಇಳಿದು ನನ್ನ ಎತ್ತುಕೊಂಡು ಏಣಿ ಏರಿ ನನ್ನ ತಾಯಿಗೆ ನೀಡಿದ್ದು ಇವತ್ತಿಗೂ ನೆನಪಿದೆ. ಚಿಕ್ಕ ಮಕ್ಕಳನ್ನು ಅಷ್ಟೇಕೆ ದೊಡ್ಡವರೂ ಕೆರೆ – ಬಾವಿ ಅಂಚಿನಲ್ಲಿ ರಕ್ಷಣಾ ಕಟ್ಟಿ, ಬೇಲಿ ಇಲ್ಲದಿದ್ದರೆ ಹತ್ತಿರ ಹೋಗಿ ಇಣುಕಿ ನೋಡುವ ಸಾಹಸ ಮಾಡಲೇ ಬಾರದು. ಅವತ್ತು ನಾನು ತಲೆ ಕೆಳಗಾಗಿ ಬಿದ್ದಿದ್ದರೆ, ಬಾವಿಯಲ್ಲಿ ನೀರಿದ್ದರೆ, ಬಿದ್ದ ಜಾಗದಲ್ಲಿ ಕಲ್ಲಿದ್ದರೆ ಬದುಕುವ ಸಾಧ್ಯತೆ ಇರಲೇ ಇಲ್ಲ.

ಇನ್ನು ಬಾವಿಗಳು ವೃತ್ತಾಕರವಾಗಿ ಏಕೆ ತೆಗೆಯುತ್ತಾರೆಂದರೆ ಬಾವಿಯ ನೀರಿನ ಒತ್ತಡ ವೃತ್ತಾಕಾರವಾಗಿ ಹಂಚುವುದರಿಂದ ಬಾವಿ ಕುಸಿಯುವ ಸಾಧ್ಯತೆ ಕಡಿಮೆ ಅಂತೆ, ರಾಜ್ಯದಲ್ಲಿ ಅತಿ ಹೆಚ್ಚು ಭಾವಿ ಇರುವುದು ಕೋಲಾರ ಜಿಲ್ಲೆಯಲ್ಲಿ, ನಂತರದ ಸ್ಥಾನ ಬೆಳಗಾಂ ಮತ್ತು ಬಿಜಾಪುರ. ಬಾವಿ ನೀರು ಸಿಹಿಯಾಗಿರಲು ನೆಲ್ಲಿ ಮರ ಹಾಕುತ್ತಾರೆ ಮತ್ತು ಬಾವಿಗಳಲ್ಲಿರುವ ವಿವಿಧ ಪ್ರಕಾರಗಳು ಕುಂದಹದ ಬಾವಿ, ರಸಬಾವಿ, ಕಟ್ಟಿನ ಬಾವಿ, ಬೆಟ್ಟದ ಭಾವಿ, ಸುರಂಗ ಭಾವಿಗಳೂ ಇದೆ. ಬಾಲ್ಯದಲ್ಲಿ ಬಾವಿಗೆ ಬಿದ್ದು ಬದುಕಿದ ನನ್ನ ಈ ಅನುಭವ ಮರೆಯಲುಂಟೆ?


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW