ವರ್ಣಬೇಧ ತಲತಲಾಂತರದಿಂದ ನಡೆದು ಬಂದಿದೆ….ಬಣ್ಣ ಹೇಗಿದ್ದರೇನು? ವ್ಯಕ್ತಿ ನಡತೆ, ಒಳ್ಳೆ ಆಚಾರ ವಿಚಾರ ಮುಖ್ಯವಾಗಿರುತ್ತೆ…ವರ್ಣಭೇದದ ಕುರಿತು ಯುವ ಬರಹಗಾರ ವಿಕಾಸ್. ಫ್. ಮಡಿವಾಳರ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
“ಅವ್ನ ನೋಡಿ ಎಷ್ಟು ಸುಂದರವಾಗಿ ಇದ್ದಾನೆ. ತುಂಬಾ ಒಳ್ಳೆಯವನಿರಬೇಕು”….”ಅಯ್ಯೊ ಇವನ ಮುಖ ನೋಡಿ, ನೋಡಿದ್ರೆ ಗೊತ್ತಾಗುತ್ತೆ ಇವನೆಂತವನು ಇರ್ಬೇಕು ”
ಈ ಮೇಲಿನ ಮಾತುಗಳನ್ನ ಯಾವುದೊ ಸಿನಿಮಾ, ಧಾರಾವಾಹಿ ಅಥವಾ ಕಾದಂಬರಿಯಿಂದ ಆಯ್ದದಲ್ಲ. ಸ್ವಭಾವಿಕವಾಗಿ ನಮ್ಮ ಸುತ್ತಮುತ್ತಲಿನ ವಠಾರ, ಕಚೇರಿ, ಸಭೆ ಸಮಾರಂಭಗಳಲ್ಲಿ ಕೇಳಿ ಬರುವ ಮಾತುಗಳಿವು. ಕಟ್ಟೆ ಮೇಲೆ ಹರಟೆ ಹೊಡೆಯುತ್ತಿರೊ ಮುದುಕರಲ್ಲಿ, ಮನೆಯಂಗಳದಲ್ಲಿ ಕೂತು ಗಾಸಿಪ್ ಮಾಡೊ ಹೆಂಗಸರಲ್ಲಿ, ಆಫೀಸಿನ ಮುಳಿಯಲ್ಲಿ ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಚರ್ಚಿಸುವ ಗಂಡಸರಲ್ಲಿ ಈ ಮಾತುಗಳು ಸರ್ವೆಸಾಮಾನ್ಯವಾಗಿದೆ. ಅವರೇನು ಆ ಮುಖಗಳ ಭವಿಷ್ಯ ತಿಳಿದ ಸಿದ್ಧಿ ಸಾಧಕರಲ್ಲ. ಕಪ್ಪು ಬಿಳುಪು ಬಣ್ಣಗಳ ವ್ಯತ್ಯಾಸದ ಮೇಲೆ ಜನ್ಮಜಾಲಾಡುತ್ತಿರುವ ಬುದ್ದಿ ಜೀವಿಗಳು.
ನಮ್ಮ ಸುತ್ತಮುತ್ತಲಿನ ವಾತಾವರಣ ನಮ್ಮನ್ನು ಹಾಗೆ ಬೆಳೆಸಿದೆ. ಯಾವುದನ್ನು ನೋಡಿ ನಾವು ಮನುಷ್ಯನನ್ನು ಅಳಿಯಬೇಕೊ ಅದನ್ನ ಬಿಟ್ಟು ಇನ್ನ್ಯಾವುದನ್ನೊ ನೋಡಿ ಮನುಷ್ಯನನ್ನು ಅಳೆಯುತ್ತಿದ್ದೇವೆ. ಈ ತಾಳಮೇಳಗಳನ್ನು ನಾವು ನಮ್ಮ ಪೂರ್ವಜರಿಂದಲೊ, ಸಹಪಾತಿಗಳಿಂದಲೊ, ಇಲ್ಲ ನಮ್ಮ ಸುತ್ತಮುತ್ತಲಿನ ವಾತಾವರಣದಿಂದಲೊ ಬೆಳೆಸಿಕೊಂಡಿದ್ದೇವೆ. ಚಂದದ ಬಟ್ಟೆ, ವಾಚ್, ಶೂ, ಹಾಕಿದವನನ್ನು ಸಭ್ಯಸ್ತನೆಂದು ಕಂಡರೆ, ಹೊಲಸಾದ ಬಟ್ಟೆ, ಹವಾಯಿ ಚಪ್ಪಲಿ ಹಾಕಿದವನನ್ನು ಕೀಳಾಗಿ ಕಾಣುತ್ತೆವೆ. ನಮ್ಮ ಕಣ್ಣುಗಳು ಆ ಸಭ್ಯಸ್ತನೊಳಗಿರುವ ಖದೀಮನನ್ನು ಮಾತ್ತು ಕೀಳಾಗಿರುವವನಲ್ಲಿರುವ ಪ್ರತಿಭೆಯನ್ನು ಗುರುತಿಸುವುದೆ ಇಲ್ಲ.

ಈ ತರಹ ವರ್ಣ ಬೇಧ ಮಾಡುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಂಡಿದ್ದು ಟಿವಿ ನೋಡುವುದರಿಂದ ಎಂದರೆ ತಪ್ಪಾಗದು. ಪಿಕ್ಚರಿನಲ್ಲಿ ಹೀರೊನನ್ನು ಸ್ಮಾರ್ಟ್ ಅಂಡ್ ಶೈನಿಯಾಗಿ ತೋರಿಸಿದರೆ ವಿಲ್ಲನ್ ನನ್ನು ಕುರೂಪಿಯಾಗಿ ತೋರಿಸುತ್ತಾರೆ. ಈ ಫಿಲಂಗಳನ್ನ ಚಿಕ್ಕಂದಿನಿಂದ ನೋಡುತ್ತ ಬೆಳೆದ ನಾವುಗಳು ಕೂಡ ಅದೆ ಮನೋಭಾವನೆಯನ್ನು ಬೆಳೆಸಿಕೊಂಡಿದ್ದೇವೆ. ಬೆಳ್ಳಗಿರುವವನು ಹೀರೊ, ಕಪ್ಪಾಗಿರುವವನು ಜೀರೋ. ಎಷ್ಟು ವಿಪರ್ಯಾಸವಲ್ಲವೆ.
ಮಹಮ್ಮದ್ ಅಲಿ ಒಂದು ಇಂಟರ್ವ್ಯೂನಲ್ಲಿ ಹೇಳುತ್ತಾರೆ. “ಯಾಕೆ ಎಲ್ಲರು ಬಿಳಿಯರನ್ನು ದೇವರಂತೆ, ಕರಿಯರನ್ನು ಗುಲಾಮರಂತೆ ಬಿಂಬಿಸುತ್ತಾರೆ? ಟಾರ್ಜನ್ ಆಫ್ರಿಕಾದ ಕಾಡಿನ ರಾಜ. ಅವನ ಬಣ್ಣ ಕೂಡ ಬಿಳಿ. ಅವನು ಎಲ್ಲ ಕರಿ ಆಫ್ರಿಕನ್ನರನ್ನು ಹೊಡೆಯುತ್ತಾನೆ. ಸಿಂಹದ ಬಾಯಿಯನ್ನು ಮುರಿಯುತ್ತಾನೆ, ಎಲ್ಲ ಪ್ರಾಣಿಗಳ ಜೊತೆ ಮಾತಾಡುತ್ತಾನೆ. ಆಫ್ರಿಕಾದ ಕರಿಯರು ನೂರಾರು ವರ್ಷದಿಂದ ಅಲ್ಲಿ ವಾಸವಿದ್ದರು ಸಹ ಅವರಿಗೆ ಪ್ರಾಣಿಗಳ ಜೊತೆ ಮಾತಾಡಲು ಬರುವುದಿಲ್ಲ. ಆದರೆ ಎಲ್ಲಿಂದಲೋ ಬಂದ ಬಿಳಿ ಮುಖದ ಟಾರ್ಜನ್ ಹೇಗೆ ಮಾತಾಡಲು ಸಾಧ್ಯ? ಬರಿ ಬಿಳಿಯರಲ್ಲೆ ಇಷ್ಟು ಶಕ್ತಿ ಇದೆಯೆ?”.
ವರ್ಣ ಬೇಧನೆ ನೆನ್ನೆ ಮೊನ್ನೆಯದಲ್ಲ. ಕಪ್ಪು ಬಣ್ಣದವರ ಮೇಲೆ ಶೋಷಣೆಗಳು ನಡೆಯುತ್ತಲೇ ಬರುತ್ತಿವೆ. ಅಮೇರಿಕಾ ಇಂಗ್ಲೆಂಡಿನಲ್ಲಷ್ಟೆ ಅಲ್ಲ ಈಗೀಗ ಭಾರತದಲ್ಲೂ ಇಂತ ಶೋಷಣೆಯನ್ನು ಕಾಣಬಹುದು.
ಬೆಳ್ಳಗಿರುವುದೆಲ್ಲ ಹಾಲಲ್ಲ, ಕಪ್ಪಾಗಿರುವುದೆಲ್ಲ ಕಹಿಯಲ್ಲ ಎಂಬ ಗಾದೆಯನ್ನು ನಾವು ಮರೆತುಬಿಟ್ಟಿದ್ದೆವೆ. ಈಗಲಾದರೂ ನಾವು ಅರ್ಥಮಾಡಿಕೊಳ್ಳಬೇಕು, ಹೊರಗಿನ ಬಣ್ಣಕ್ಕಿಂತ ಒಳಗಿನ ಮನಸ್ಸನ್ನು ಗುರುತಿಸಬೇಕು. ಅತ್ತಿ ಹಣ್ಣು ನೋಡಲು ಎಷ್ಟು ಸುಂದರವಾಗಿ ಕಾಣುತ್ತದೋ ಒಳಗಡೆ ಅಷ್ಟೆ ಹುಳುಕಾಗಿರುತ್ತದೆ. ನೇರಳೆಹಣ್ಣು ಎಷ್ಟು ಕಪ್ಪಾಗಿರುತ್ತದೋ ಅಷ್ಟೆ ರುಚಿಯಾಗಿ ಇರುತ್ತದೆ.
- ವಿಕಾಸ್. ಫ್. ಮಡಿವಾಳರ