‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾದ ಕತೆ ರೀಲ್ಸ್ ಮಾಡುವ ಯುವ ಜನರ ಸುತ್ತ , ಅಪ್ಪ ಮನಗ ಬಾಂಧವ್ಯದ ಸುತ್ತ, ಭಾವನಾತ್ಮಕತೆಯ ಸುತ್ತ ಸುತ್ತುವುದರ ಜೊತೆಗೆ ಮನಸ್ಸಿಗೆ ಹತ್ತಿರವಾಗುವಂತಹ ಸಿನಿಮಾವಾಗಿದೆ. ಎಲ್ಲರೂ ನೋಡಲೇಬೇಕಾದಂತಹ ಸಿನಿಮಾ…ತಪ್ಪದೆ ನೋಡಿ…
ಸಿನಿಮಾ : ಎಲ್ಲೋ ಜೋಗಪ್ಪ ನಿನ್ನ ಅರಮನೆ
‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್
ನಿರ್ದೇಶಕರು : ಹಯವದನ ವಾದಿರಾಜ್
ತಾರಾಂಗಣ : ಅಂಜನ್ ನಾಗೇಂದ್ರ, ವನ್ಯಾ ರೈ, ಸಂಜನಾ ದಾಸ್, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ಲಕ್ಷ್ಮಿ ನಾಡಗೌಡ, ದಾನಪ್ಪ, ಸ್ವಾತಿ,ದಿನೇಶ್ ಮಂಗಳೂರು ಮುಂತಾದವರು
ನಿನ್ನೆ ಒಂದು ಒಳ್ಳೆ ಸಿನಿಮಾ ನೋಡಿದೆ. ಸಿನಿಮಾದ ಹೆಸರು ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಅಂತ. ಈ ಸಿನಿಮಾವನ್ನು ರೀಲ್ಸ್ ಹುಚ್ಚು ಇರೋರು, ಇಂದಿನ ಯುವ ಪೀಳಿಗೆಯವರು ಖಂಡಿತ ನೋಡಲೇಬೇಕಾದಂತಹ ಸಿನಿಮಾ.. ಯಾಕೆ ನೋಡಲೇಬೇಕು ಅಂದ್ರೆ ಇಂದು ಭಾವನೆಗಳೇ ಸತ್ತು ಹೋಗಿದೆ. ಗಂಡ – ಹೆಂಡಿರ ಮಧ್ಯೆ, ಮಕ್ಕಳ ಮಧ್ಯೆ, ಅಪ್ಪ ಅಮ್ಮನ ಮಧ್ಯೆ, ಸ್ನೇಹದ ಮಧ್ಯೆ ತೋರಿಕೆಯ ಪ್ರೀತಿ ಮಾತ್ರ ಉಳಿದುಕೊಂಡಿದೆ. ಈ ಸಿನಿಮಾ ಎಲ್ಲ ಭಾವನೆಗಳನ್ನು ಮರು ಹುಟ್ಟು ಹಾಕುತ್ತದೆ. ಇಲ್ಲಿ ಅಪ್ಪ ಅಮ್ಮನ ಪ್ರೀತಿ, ಮಕ್ಕಳ ಮೇಲಿನ ಪ್ರೀತಿ, ಹದಿಹರೆಯದಲ್ಲಿ ಹುಟ್ಟುವ ಪ್ರೀತಿ, ಜೀವನದ ಮೇಲಿನ ಪ್ರೀತಿ ಎಲ್ಲವನ್ನು ಈ ಸಿನಿಮಾ ಕಟ್ಟು ಕೊಟ್ಟಿದೆ.

ರೀಲ್ಸ್ ಹುಚ್ಚಿರುವ, ಸಾಕಷ್ಟು ಫ್ಯಾನ್ಸ್, ಲೈಕ್ಸ್ ಹುಚ್ಚಿರುವ ಆದಿಯ ಎನ್ನುವ ಹುಡುಗನ ಕತೆಯಿದು. ಅವನ ಪಯಣ ವಿಜಾಪುರದಿಂದ ಆರಂಭವಾಗಿ, ಪಂಡರಾಪುರ, ಮನಾಲಿವರೆಗೂ ಹೋಗಿ ತಲುತ್ತದೆ. ದಾರಿಯಲ್ಲಿ ಅವನು ಪ್ರೀತಿಯ ವಿವಿಧ ಮುಖಗಳನ್ನು ನೋಡುತ್ತಾನೆ ಹಾಗೂ ಪ್ರೇಕ್ಷಕರಿಗೂ ತೋರಿಸುತ್ತಾನೆ, ಈ ಸಿನಿಮಾದಲ್ಲಿ ಮನಸ್ಸಿಗೆ ನಾಟುವಂತಹ ಪ್ರೀತಿಯೆಂದರೆ ಅಪ್ಪ ಮಗನ ಪ್ರೀತಿ. ಹತ್ತಿರವಿದ್ದಾಗ ಅಪ್ಪನ ಪ್ರೀತಿ ಅರ್ಥವಾಗದೇ ಉಡಾಫೆ ಮಾಡುವ ಮಗ, ಮುಂದೆ ಆ ಪ್ರೀತಿಗಾಗಿ ದುಃಖಿಸುತ್ತಾನೆ ಮಗ. ಪ್ರತಿಯೊಬ್ಬ ಅಪ್ಪನ ಕನಸ್ಸು ಮಗ ಬೆಳೆದ ಮೇಲೆ ತನ್ನ ಹೆಗಲಿಗೆ ಹೆಗಲು ಕೊಡುತ್ತಾನೆ ಎನ್ನುವುದೇ ಆಗಿರುತ್ತದೆ, ಆದರೆ ಮಗ ದಾರಿ ತಪ್ಪಿದಾಗ ಆ ತಂದೆಯ ಹೃದಯದಲ್ಲಾಗುವ ನೋವು, ಸಂಕಟಗಳು ಹೇಳತೀರದು. ಮಕ್ಕಳು ಸಹ ಅಪ್ಪನ ಬೈಗುಳವನ್ನು ಅರ್ಥ ಮಾಡಿಕೊಳ್ಳದೆ, ಆತ್ಮಹತ್ಯೆಗೆ ಶರಣಾಗುವುದು ಅಥವಾ ಮನೆ ಬಿಟ್ಟು ಹೋಗುವುದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಲ್ಲಿ ಮಚ್ಚು, ಲಾಂಗ್ ಹಿಡಿಯುವ ದೃಶ್ಯಗಳಿಲ್ಲ, ಆದರೆ ಭಾವನೆಯಲ್ಲಿಯೇ ಕೊಲ್ಲುವ ಸಾಕಷ್ಟು ದೃಶ್ಯಗಳನ್ನು ನಿರ್ದೇಶಕ ಹಯವದನವರು ಸಿನಿಮಾದಲ್ಲಿ ಚಿತ್ರೀಕರಿಸಿದ್ದಾರೆ. ಪ್ರೇಕ್ಷಕನ ಕಣ್ಣಲ್ಲಿ ಧಾರಾಕಾರವಾಗಿ ಇಳಿಯುತ್ತದೆ.
ನಾಪತ್ತೆಯಾದ ಅಪ್ಪನನ್ನು ಹುಡುಕಿಕೊಂಡು ಹೋಗುವ ಮಗ ಒಂದೆಡೆಯಾದರೆ, ಇರುವ ಅಪ್ಪನನ್ನು ಬಿಟ್ಟು ಮನೆಯಿಂದ ಆಚೆ ಬರುವ ಮಗ ಇನ್ನೊಂದೆಡೆ. ಮಧ್ಯೆ ಮಧ್ಯೆ ಉತ್ತರಕರ್ನಾಟಕ ಭಾಷೆಯ ಗಮ್ಮತ್ತಿರುವ ಹಾಸ್ಯ ಪ್ರೇಕ್ಷಕನನ್ನು ಒಂದೆಡೆ ಹಿಡಿದಿಡುತ್ತದೆ. ದೊಡ್ಡ ದೊಡ್ಡ ಸಿನಿಮಾಗಳ ಅಬ್ಬರದಲ್ಲಿ ಸಣ್ಣ ಸುಂದರ ಕತೆಗಳು ಕಾಣೆಯಾಗುತ್ತಿದೆ. ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಮನಸ್ಸಿಗೆ ನಾಟುವಂತಹ ಸಿನಿಮಾ. ಹಾಗಾಗಿ ಸಿನಿಮಾವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಚಿತ್ರತಂಡ ಪ್ರೇಕ್ಷಕರಿಗೆ ನೀಡಿದ್ದಾರೆ.
ಹೊಸ ತಂಡವಿರುವ ಹೊಸ ಪ್ರಯೋಗವಿರುವ ಸಿನಿಮಾ ಇದಾಗಿದೆ . ಶುಭಮಂಗಳ, ಅಗ್ನಿಸಾಕ್ಷಿ, ನಾಗಿಣಿಯಂತಹ ಯಶಸ್ವಿ ಧಾರಾವಾಹಿಗಳನ್ನು ಕೊಟ್ಟಂತಹ ನಿರ್ದೇಶಕ ಹಯವದನವರು ನಿರ್ದೇಶಿಸಿರುವ ಮೊದಲ ಚಿತ್ರ. ಸಿನಿಮಾಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನೂ ನಾಯಕನ ಪಾತ್ರದಲ್ಲಿ ಕಂಬ್ಳಿಹುಳ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಅಂಜನ್ ನಾಗೇಂದ್ರ, ನಾಯಕಿ ವನ್ಯಾ ರೈ ಹಾಗೂ ಸಂಜನಾ ದಾಸ್ ಎರಡನೆಯ ನಾಯಕಿಯಾಗಿ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶರತ್ ಲೋಹಿತಾಶ್ವ ಅವರ ಗತ್ತು ಗಮ್ಮತ್ತನ್ನು ತೆರೆಯ ಮೇಲೆ ನೋಡುವುದೇ ಚಂದ. ಆದರೆ ಈ ಸಿನಿಮಾದಲ್ಲಿ ಅವರನ್ನು ಮೆತ್ತಗೆ ಮಾಡಿದ್ದು ಯಾಕೋ ಇಷ್ಟವಾಗಲಿಲ್ಲ. ನನ್ನ ನೆಚ್ಚಿನ ಖ್ಯಾತ ನಟ ವೈಜನಾಥ್ ಬಿರಾದಾರ್ ಅವರನ್ನು ತುಂಬಾ ವರ್ಷದ ಮೇಲೆ ಪರದೆ ಮೇಲೆ ನೋಡಿ ಸಂತೋಷವಾಯಿತು. ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಖ್ಯಾತ ನಟಿ ಲಕ್ಷ್ಮಿ ನಾಡಗೌಡ ಅವರಂತೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಹಾಸ್ಯ ನಟ ದಾನಪ್ಪ ಅವರ ಅಭಿನಯವಂತೂ ಪೈಸಾ ವಸಲು ಅನ್ನುವ ಹಾಗೆ, ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದಾರೆ. ದಿನೇಶ್ ಮಂಗಳೂರು ಅಭಿನಯ ಚನ್ನಾಗಿದೆ, ನಟಿ ಸ್ವಾತಿ ಅವರ ಪಾತ್ರ ಸಪ್ಪೆ ಆಗಿದೆ.
ಕೊನೆಯಲ್ಲಿ ನಾಯಕ ನಟ ಆದಿ ವಿಜಾಪುರದಿಂದ ಮನಾಲಿಯವರೆಗೂ ಯಾಕೆ ಪ್ರಯಾಣಿಸುತ್ತಾನೆ ಎನ್ನುವ ಅತಿ ಸೂಕ್ಷ್ಮ ವಿಷಯವನ್ನು ಕೊನೆಯ ದೃಶ್ಯದಲ್ಲಿ ಹಿಡಿದಿಟ್ಟಿದ್ದಾರೆ. ಆ ದೃಶ್ಯವನ್ನು ನೋಡುವಾಗ ಪ್ರೇಕ್ಷಕರ ಕಣ್ಣು ತೇವವಾಗುವುದಂತೂ ನಿಜ. ಸಿನಿಮಾದಲ್ಲಿ ಕೆಲವೆಡೆ ಸಣ್ಣಪುಟ್ಟ ಪಾತ್ರಗಳು, ದೃಶ್ಯಗಳು, ಕತೆಗಳು ಬೇಡವೆನಿಸಿದರೂ ಅಪ್ಪ ಮಗನ ಪ್ರೀತಿ, ಭಾವನೆಯನ್ನು ಸೆಳೆಯುತ್ತದೆ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’.
ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ತಪ್ಪದೆ ನೋಡಿ…ಚಿತ್ರತಂಡವನ್ನು ಗೆಲ್ಲಿಸಿ…
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಪತ್ರಿಕೆಯ ಸಂಪಾದಕಿ









