ಗತಕಾಲದ ದನಿಗಳು, ನೆನಪಿನ ಮರುಕಟ್ಟೋಣ



”ನಾನು ಅರವತ್ತರ ದಶಕದಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದೇನೆ. ಆ ಕಾಲಕ್ಕೂ ಈ ಕಾಲಕ್ಕೂ ವಸ್ತುಸ್ಥಿತಿ ಸುಧಾರಿಸಿದೆ ಎಂದೇನೂ ಅಲ್ಲ. ಮೂಲಭೂತ ಬದಲಾವಣೆಗಳು ಆಗಿಲ್ಲದಿರಬಹುದು ಎಂದಷ್ಟೇ ಹೇಳುತ್ತಿರುವೆ. ಇದ್ದರೂ ಪ್ರತಿಯೊಬ್ಬರೂ ಬದಲಾಗಿದ್ದಾರೆ” – ಅಬ್ದುಲ್ ರಜಾ಼ಕ್ ಗುರ್ನ್ಹಾ. ಮುಂದೆ ಓದಿ ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾಧಕಾರ ಕೇಶವ ಮಳಗಿ ಅವರು…

* ಅಬ್ದುಲ್ ರಜಾ಼ಕ್ ಗುರ್ನ್ಹಾ: ಸಾಹಿತ್ಯ ವಿಚಾರಗಳು

(೨೦೨೧ರ ನೊಬೆಲ್‌ ಪುರಸ್ಕೃತ ತಾಂಜೇ಼ನಿಯ ಸಾಹಿತಿ)

“ನನ್ನ ಬದುಕು ನೆಲೆ ಕಳೆದುಕೊಂಡ ನಾವೆಯಂತಾಗಿತ್ತು. ನನಗಿದ್ದ ಒಂದೇ ದಾರಿಯೆಂದರೆ, ನೆನಪುಗಳನ್ನು ಮರು ಸಂಘಟಿಸಿ ದಾಖಲಿಸುತ್ತ ಹೋಗುವುದು. ಅನುಭವದ ಮೂಲ ಸೆಲೆಯಾಗಿ ಹಾಗೂ ಯೋಚಿಸುತ್ತಿರುವ ವಿಷಯವಾಗಿ ಹೀಗೆ ನೆನಪುಗಳು ದ್ವಿಪಾತ್ರವನ್ನು ವಹಿಸತೊಡಗಿದವು. ವಿಷಯ ಹೀಗಿದ್ದರೂ, ನಡೆದುದೆಲ್ಲ ಕರಾರುವಾಕ್ಕಾಗಿ ಹೀಗೆಯೇ ನಡೆಯಿತು ಎಂದು ನೆನಪುಗಳು ಖಚಿತವಾಗಿ ನಿರೂಪಿಸಲಾರವು. ಆಗ ಕಲ್ಪನೆಯು ಕಟ್ಟೋಣಕ್ಕೆ ಸಹಾಯ ಮಾಡಿ ಅದೇ ‘ವಾಸ್ತವ’ ಎನ್ನುವಂತೆ ಸಾದರಪಡಿಸುತ್ತದೆ. ಹೀಗಾಗಿ, ಕಥೆಯು ತನ್ನದೇ ನಡೆ, ಕಾರಣ, ಸುಸಂಗತತೆಯನ್ನು ಕಂಡುಕೊಳ್ಳುತ್ತದೆ. ಕಥೆಯಲ್ಲಿ, ಒಂದೆಡೆ ನೆನಪುಗಳ ‘ನಿರ್ಗಮನ’ವಿದ್ದರೆ, ಇನ್ನೊಂದೆಡೆ ನೆಲೆ ಕಂಡುಕೊಳ್ಳುವಾಗ ಕಾಣಿಸಿಕೊಳ್ಳುವ ‘ಆಗಮನ’ದ ತಾಣವಿರುತ್ತದೆ.

ಫೋಟೋ ಕೃಪೆ : worldliteraturetoda

ಇದು ಮನವರಿಕೆಯಾದದ್ದೇ, ಕೃತಿಯೊಂದನ್ನು ಬರೆಯುವುದು ಹೇಗೆ? ಎನ್ನುವುದು, ಮತ್ತು, ಕೃತಿ ರಚನೆಗೆ ಅಗತ್ಯವಾದ ಕನಸುವಿಕೆ, ವಿಚಾರಗಳನ್ನು ಒಂದು ಚೌಕಟ್ಟಿಗೆ ಹೊಂದಿಸಿಕೊಳ್ಳುವ ವಿಧಾನಗಳ ನಡುವಿನ ವ್ಯತ್ಯಾಸವನ್ನು ನನಗೆ ಸ್ಪಷ್ಟವಾಗತೊಡಗಿತು.

ಬರಹಗಾರರು ಕೃತಿಯೊಂದನ್ನು ರಚಿಸಲು ತೊಡಗಿದಾಗ ಕಾಲೂರಲಷ್ಟೇ ಸಾಧ್ಯವಾಗುವ ಒಂದು ಸಣ್ಣ ನೆಲೆಯನ್ನು ಹೊಂದಿರುತ್ತಾರೆ. ಆ ನೆಲೆಯನ್ನೇ ಬೇರೆ ಬೇರೆ ಆಯಾಮಗಳಲ್ಲಿ ಮತ್ತೆ ಮತ್ತೆ ಮುಖಾಮುಖಿಯಾಗಿಸುತ್ತಾರೆ. ಇದೇ ತನಗೆ ಅತ್ತ್ಯುತ್ತಮ ಆಯ್ಕೆ ಎನ್ನುವುದಕ್ಕಾಗಿ ಅಲ್ಲ. ಬದಲಿಗೆ, ನಮ್ಮನ್ನು ಕಾಡುವ ಸಂಗತಿಗಳು ಮತ್ತೆ ಮತ್ತೆ ವ್ಯಕ್ತಿತ್ವವನ್ನು ವ್ಯಾಪಿಸಿಕೊಳ್ಳುತ್ತವೆ, ಎನ್ನುವ ಕಾರಣಕ್ಕಾಗಿ. ಆ ಭಾವನೆಯನ್ನು ಅದುಮಿಟ್ಟಿದ್ದೇವೆ, ಎಂದುಕೊಳ್ಳುತ್ತೇವೆ. ಆದರೆ, ನಮಗರಿವಿಲ್ಲದೆ ನಮ್ಮ ಕಾಳಜಿಗಳು ಮತ್ತೆ ಪುಟಿದು ಬರುತ್ತವೆ. ಅವು ಬರಹಗಾರನೊಬ್ಬ ಹೇಗೆ ಯೋಚಿಸುತ್ತಾನೆ ಎನ್ನುವುದನ್ನು ಕೂಡ ಹೇಳುತ್ತಿರುತ್ತವೆ. ಅಷ್ಟೇಕೆ, ನಮ್ಮ ಚಿಂತನೆಯನ್ನೇ ರೂಪಿಸುತ್ತಿರುತ್ತವೆ. ಹೀಗಾಗಿ, ಇನ್ನೂ ಬಗೆಹರಿಯದ ವಿಚಾರಗಳು ಪುಸ್ತಕದಿಂದ ಪುಸ್ತಕಕ್ಕೆ ಹಾರುತ್ತಲೇ ಇರುತ್ತವೆ. ಆ ಕಾರಣಕ್ಕಾಗಿಯೇ ಬರೆಯುವ ಎಲ್ಲ ವಸ್ತುಗಳೂ ಖಾಸಗಿ ಅನುಭವಗಳೇ ಆಗಿರಬೇಕೆಂದಿಲ್ಲ. ಆ ಸ್ಥಳ, ಆ ಸಮಾಜ, ಆ ಪ್ರದೇಶದಲ್ಲಿ ಬದುಕುವಾಗಿನ ಅನುಭವಗಳ ಕುರಿತು ನಾನು ಚಿಂತಿಸುತ್ತಿರಬಹುದು. ಇದು ಹೇಗೆಂದರೆ, ನೀವು ಯಾವ ವಿಷಯಕ್ಕೆ ಬೆನ್ನು ಹಾಕಿ, ಮುಂದಡಿ ಇಡಬೇಕು ಎಂದು ಬಯಸಿರುತ್ತೀರೋ ಅದೇ ವಿಷಯವೇ ನನ್ನ ತೀರ ಖಾಸಗಿ ಅನುಭವೆನ್ನುವಷ್ಟು ಹತ್ತಿರವಾಗಿ, ನೀವು ಅದರೊಂದಿಗೆ ಬದುಕತೊಡಗುವುದು.

ನಾನು ಅರವತ್ತರ ದಶಕದಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದೇನೆ. ಆ ಕಾಲಕ್ಕೂ ಈ ಕಾಲಕ್ಕೂ ವಸ್ತುಸ್ಥಿತಿ ಸುಧಾರಿಸಿದೆ ಎಂದೇನೂ ಅಲ್ಲ. ಅದರರ್ಥ ಹಿಂದೆ ಬೀದಿಗಳಲ್ಲಿ ನಡೆಯುತ್ತಿದ್ದ ಅಹಿತಕರ ಘಟನೆಗಳು ಇಂದಿಗೂ ನಡೆಯುತ್ತವೆ ಎಂದಲ್ಲ. ಆದರೆ, ಮೂಲಭೂತ ಬದಲಾವಣೆಗಳು ಆಗಿಲ್ಲದಿರಬಹುದು ಎಂದಷ್ಟೇ ಹೇಳುತ್ತಿರುವೆ. ಇದ್ದರೂ ಪ್ರತಿಯೊಬ್ಬರೂ ಬದಲಾಗಿದ್ದಾರೆ. ಕೆಲವು ವಿಷಯಗಳು ಸ್ಪಷ್ಟವಾಗಿದ್ದರೆ, ಇನ್ನೂ ಕೆಲವು ಮತ್ತಷ್ಟು ಕಠಿಣವಾಗಿ ಮಾರ್ಪಟ್ಟಿವೆ.

ಫೋಟೋ ಕೃಪೆ : theguardian

ಯುರೋಪಿಯನ್ ಅಲ್ಲದ ಸಮುದಾಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಆ ಕುರಿತು ಜನಸಾಮಾನ್ಯರು ಹೆಚ್ಚು ‘ನಾಗರಿಕ’ರಾಗಿ ವರ್ತಿಸುತ್ತಾರೆ. ಎಲ್ಲವನ್ನೂ ಮುಖಕ್ಕೆ ಹೊಡೆದಂತೆಯೋ, ಇಲ್ಲ ನಿಂದನಾತ್ಮಕವಾಗಿಯೋ ಹೇಳಿಬಿಡುವುದಿಲ್ಲ! ತಮ್ಮೊಂದಿಗೆ ಬದುಕುವ ಜನರಿಗೂ ಜೀವಿಸುವ ಹಕ್ಕಿದೆ, ಅದು ಕಾನೂನಾತ್ಮಕವಾಗಿ ಲಭಿಸಿದೆ ಎಂದು ಜನ ಬಲ್ಲರು. ಆ ಅರ್ಥದಲ್ಲಿ ಅವರು ಬದಲಾಗಿದ್ದಾರೆ! ಆದರೆ, ಇಂದಿನ ಲೋಕದೃಷ್ಟಿ ಬದಲಾಗಿದೆಯೇ? ಆಗಿದೆ ಎಂದು ಹೇಳಲಾರೆ. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಇಂದಿನ ಸಾಮ್ರಾಜ್ಯಶಾಹಿಯನ್ನು ಅರಗಿಸಿಕೊಳ್ಳುವುದು ಕಷ್ಟ.
ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳೋದಾದರೆ, ಚಕ್ರಾಧಿಪತ್ಯ ಇನ್ನೂ ಕೊನೆಗೊಂಡಿಲ್ಲ. ಜನ ಅದಿನ್ನೂ ‘ನಂಬಬಹುದಾದ ಅತ್ತ್ಯುತ್ತಮ ವ್ಯವಸ್ಥೆ’ ಎಂಬ ಭಾವನೆಯಲ್ಲಿದ್ದಾರೆ. ಬ್ರಿಟನ್ ಜನತೆ ಈಗಲೂ ಹೇಗೆ ತಮ್ಮ ರಾಷ್ಟ್ರವು ಉಳಿದ ವಿಶ್ವಕ್ಕಿಂತ ಭಿನ್ನ ಮತ್ತು ವಿಶಿಷ್ಟವಾಗಿದೆ ಎಂದು ಯೋಚಿಸುತ್ತಾರೆಂಬುದನ್ನು ಕಂಡು ನನಗೆ ಆಘಾತವಾಗುತ್ತದೆ. ಇನ್ನೊಂದೆಡೆ, ಸಮುದಾಯಗಳು ತಮ್ಮ ‘ಅಸ್ತಿತ್ವ’ವನ್ನು ಕಂಡುಕೊಳ್ಳುವ ವಿಧಾನಗಳನ್ನು ನೋಡಿಯೂ ನಾನು ಅಚ್ಚರಿಗೊಂಡಿದ್ದೇನೆ. ತಮ್ಮ ಮೂಲನೆಲೆಯನ್ನು ಕಳೆದುಕೊಂಡಿರುವುದೇ ಜನ ಈ ರೀತಿಯಾಗಿ ಚಿಂತಿಸಲು ಕಾರಣವೆನ್ನುವುದನ್ನು ಕಂಡುಕೊಂಡಿದ್ದೇನೆ. ಸಮುದಾಯಗಳು ಸ್ಥಳಾಂತರಕ್ಕೆ ತಮ್ಮನ್ನು ತಾವು ಹೊಂದಾಣಿಕೆ ಮಾಡಿಕೊಂಡು ಮತ್ತೆ ಬದುಕು ಕಟ್ಟಿಕೊಳ್ಳುವುದು ಬಹಳ ಕುತೂಹಲಕಾರಿ ಸಂಗತಿ. ನನ್ನ ಆರಂಭಿಕ ಕಾದಂಬರಿಗಳಲ್ಲಿ ಈ ಅಂಶದ ಮೇಲೆ ಗಮನಹರಿಸಿದ್ದೇನೆ ಅನ್ನಿಸುತ್ತದೆ. ಈ ಜನರೆಲ್ಲ ಬಹುದೂರದಿಂದ ಯುರೋಪಿಗೆ ಬಂದು ಇಲ್ಲಿನ ಬದಲಾವಣೆ ಅಥವ ರೂಪಾಂತರಕ್ಕೆ ಒಗ್ಗಿಕೊಂಡಿದ್ದಾರೆ. ಅವರಿಗೆ ಬೇರೆ ವಿಧಿಯಿಲ್ಲ. ಹಿಂದಿನಂತೆಯೇ ಅವರಿದ್ದರೆ ಜೀವನ ಸಾಗದು!

ನನ್ನ ದೇಶದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಬಹಳ ವರ್ಷಗಳ ಕಾಲ ನಾನಲ್ಲಿಗೆ ಹೋಗಲಾಗಿರಲಿಲ್ಲ. ಹದಿನೇಳು ವರ್ಷಗಳಾದ ಮೇಲೆ ಮೊದಲ ಬಾರಿಗೆ ಹೋದೆ. ಅದಾದ ಮೇಲೆ ಮತ್ತೊಮ್ಮೆ ಭೇಟಿ ನೀಡಿದೆ. ಅಲ್ಲಿಂದ ಬಂದ ಮೇಲೆ ಬರೆದ ಕಾದಂಬರಿಯಲ್ಲಿ ವಲಸೆಯ ಕುರಿತ ನನ್ನ ಅಭಿಪ್ರಾಯ ಸಂಪೂರ್ಣ ಬದಲಾಗಿತ್ತು. ಆವರೆಗೂ ನನ್ನ ದೃಷ್ಟಿಕೋನ ಕೇವಲ ಒಬ್ಬ ಪ್ರವಾಸಿಗದಾಗಿತ್ತು. ಆಮೇಲೆ, ನಾನು ನನ್ನೊಳಗೆಯೇ ನನ್ನ ಮತ್ತು ನಾನು ಪ್ರತಿನಿಧಿಸುವ ಸಮುದಾಯಗಳ ಅಸ್ತಿತ್ವ ಹುಡುಕಬೇಕು. ಹೊರಗಿನ ಪರಿಸರಕ್ಕೂ ಅದಕ್ಕೂ ಸಂಬಂಧವಿಲ್ಲ, ಎನ್ನುವುದನ್ನು ಕಂಡುಕೊಂಡೆ. ಅಂದರೆ, ಜನ ಎಲ್ಲಿಯೇ ಹೋಗಲಿ ತಮ್ಮೊಳಗೆ ಹೊತ್ತೊಯ್ಯುವ ಒಳಗಿನ ಜಗತ್ತಿನ ಬಗ್ಗೆ ನಾನು ಯೋಚಿಸಬೇಕು, ಎಂಬುದರ ಒಳದರ್ಶನ ನನಗಾಯಿತು.

ಫೋಟೋ ಕೃಪೆ : ilgiornale

ನನ್ನ ಕೃತಿಯೊಂದರಲ್ಲಿ ಇಂಗ್ಲೆಂಡಿನ ಕುರಿತು ಪಾತ್ರವೊಂದು ‘ವಿಫಲಗೊಂಡ ಪ್ರೀತಿ’ ಎಂದು ಉದ್ಗರಿಸುತ್ತದೆ. ವಲಸಿಗರ ಸ್ಥಿತಿಗತಿಯನ್ನು ಕಂಡು ಹೊರಟ ಉದ್ಗಾರವಿದು ಎಂದೇ ನನಗನ್ನಿಸುತ್ತದೆ. ನನ್ನ ಮುಂದಿನ ಕೆಲವು ಪುಸ್ತಕಗಳಲ್ಲಿಯೂ ಈ ಬಡಿದೆಬ್ಬಿಸುವ ಮಾತಿನ ಪ್ರೇರಣೆಯನ್ನು ಕಾಣಬಹುದು. ನೆಲೆ ತಪ್ಪಿಸುವಂತೆ ಮಾಡಿದ ಸನ್ನಿವೇಶವೇ ಇಲ್ಲಿನ ಹತಾಶೆಯನ್ನು ಹುಟ್ಟಿಸಿದೆ. ಈ ವಿಫಲ ಪ್ರೀತಿಯು ಕೇವಲ ಇಂಗ್ಲೆಂಡ್‌ನೊಂದಿಗಾದ ನಿರಾಶೆಯಿಂದ ಹುಟ್ಟಿದ್ದು ಅಲ್ಲವೇ ಅಲ್ಲ. ಇಲ್ಲಿನ ಹತಾಶೆಯು ಒಳಮನಸ್ಸಿಗೆ ಸೇರಿದ್ದು. ವಲಸೆಗಾರನೊಬ್ಬ ತನ್ನ ಅನುಭವದೊಂದಿಗೆ ನಡೆಸುವ ಹೋರಾಟದಲ್ಲಿ ಮುಖಾಮುಖಿಯಾಗಿರುವಂಥದ್ದು. ಇದು ಹೇಗೆ ಆತನ ಆಶೋತ್ತರಗಳ ಭ್ರಮನಿರಸನವೋ, ಹಾಗೆಯೇ ವಾಸ್ತವದೊಂದಿಗಿನ ಮುಖಾಮುಖಿಯಲ್ಲಿ ಹುಟ್ಟಿದ ಹತಾಶೆಯೂ ಹೌದು.
ಇತ್ತೀಚಿನ ವರ್ಷಗಳಲ್ಲಿ ಲೇಖಕರು ಒಂದು ನಿಯಂತ್ರಿತ ದೃಷ್ಟಿಕೋನ ಅಥವ ಸಂಕುಚಿತ ಮನೋಭಾವದ ನಿರ್ಣಾಯಕ ಬರಹಗಳ ಮಾದರಿಯನ್ನು ಮೀರಿ ಬರೆಯಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ನಿರಂತರವಾದ ಸಕಾರಾತ್ಮಕ ಪ್ರಕ್ರಿಯೆ. ಇದು ಹೇಗೆಂದರೆ, ನಾವು ಎಷ್ಟು ಕಡಿಮೆ ತಿಳಿದಿದ್ದೇವೆ; ತಿಳಿದುಕೊಳ್ಳುವುದು ಇನ್ನೂ ಎಷ್ಟೊಂದು ಇದೆಯಲ್ಲ ಎನ್ನುವ ವಿನೀತತೆ ಹುಟ್ಟು ಹಾಕುವಂಥದ್ದು. ನಮಗೆ ಬೇರೆ ಬೇರೆ ದಿಕ್ಕುಗಳಿಂದ ದನಿಗಳು ಕೇಳಿ ಬರುವವರೆಗೂ ಆ ಧ್ವನಿಗಳ ಆಳಗಲ ತಿಳಿದಿರುವುದಿಲ್ಲ. ಅವನ್ನು ಅರ್ಥ ಮಾಡಿಕೊಳ್ಳುವುದೂ ಆಗುವುದಿಲ್ಲ. ಈ ದನಿಗಳ ಸಂಕೀರ್ಣತೆಯನ್ನು ಅರಿತುಕೊಳ್ಳಲು ಸಾಹಿತ್ಯ ನಮಗೆ ಸಹಾಯ ಮಾಡುತ್ತದೆ. ಅರ್ಥ ಮಾಡಿಕೊಳ್ಳವಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಆದರೆ, ಹೊಸ ದನಿಯಂತೂ ಕೇಳುತ್ತದೆ.



ವಸಾಹತುಶಾಹಿ ವ್ಯವಸ್ಥೆಯು ವಿಶಾಲವಾದ ನೆಲೆಯಲ್ಲಿ ಚೆನ್ನಾಗಿಯೇ ಕೆಲಸ ನಿರ್ವಹಿಸುತ್ತಿತ್ತು. ಎಲ್ಲೋ ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸಿದ್ದಿರಬಹುದು. ವಸಾಹತುಪೂರ್ವ ಸಮಾಜವು ಅತ್ಯಂತ ಆದಿಮವಾಗಿತ್ತು ಇತ್ಯಾದಿ ಹೇಳಿಕೆಗಳು ನಾವು ವಿಮರ್ಶಿಸುತ್ತಿರುವ ಕೃತಿಯಲ್ಲಿ ಇದ್ದರೆ ಅಂಥವುಗಳ ಕುರಿತು ನಾವು ವಿಮರ್ಶಾತ್ಮಕವಾಗಿ ನೋಡುವ ಅಗತ್ಯವಿಲ್ಲ. ಮತ್ತು ನನ್ನ ನಿಲುವನ್ನು ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ. ಅಂಥ ಹೇಳಿಕೆಗಳ ಹುಟ್ಟಿನ ಮೂಲ ಯಾವುದು ಮತ್ತು ಅವರು ಹಾಗೇಕೆ ಹೇಳಿದರು? ಎಂದು ನಾವೆಲ್ಲ ಬಲ್ಲೆವು. ನೂರಾರು ವರ್ಷಗಳ ದಬ್ಬಾಳಿಕೆ, ಹತ್ಯಾಕಾಂಡಗಳ ನಂತರ ಖಂಡದಲ್ಲಿ ಬಿಡುಗಡೆಯ ತಹತಹಿಕೆ ಇತ್ತು. ‘ನಾವೆಲ್ಲ ಬಹುಶಃ ಹೀಗೆ ಒಟ್ಟಾಗಬಹುದಾದುದೆಂದು ಕಾಣುತ್ತದೆ’ ಎಂಬ ಭಾವ ಅಲ್ಲಿ ಕಾಣಬಹುದಿತ್ತು. ಇಂಥ ಘಟನೆ ನಮಗೆ ಒರಟಾಗಿ ಕಾಣಲು ಕಾರಣ ನಾವದನ್ನು ಸರಳಗೊಳಿಸಿ ನೋಡುವುದರಿಂದ. ಮತ್ತು ಸಮುದಾಯಗಳನ್ನು ಇನ್ನೂ ಅತ್ಯಂತ ಕ್ರೂರವಾದ ವಿಘಟಿಸುವ ಕೆಲಸ ನಡೆಯುತ್ತಿದ್ದುದರಿಂದ. ಇವುಗಳ ಸಂಕೀರ್ಣತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ನಮ್ಮ ಕೃತಿಗಳಿಗೆ ಪ್ರಶಸ್ತಿಗಳು ಬಂದಾಗ ಆಗುವ ಬಹು ದೊಡ್ಡ ಪ್ರಯೋಜನ ಮತ್ತು ವ್ಯತ್ಯಾಸವೆಂದರೆ ಕೃತಿಗಳನ್ನು ಜನ ನಮ್ಮ ಕೃತಿಗಳನ್ನು ಗಮನಿಸುತ್ತಾರೆ, ಮಾತ್ರವಲ್ಲ, ವಿಮರ್ಶಿಸುತ್ತಾರೆ ಎಂಬುದು, ಅದರಿಂದ ಹೊಸ ಓದುಗರು ದೊರಕುತ್ತಾರೆ. ಇದೇ ಅತ್ಯಂತ ಮಹತ್ವದ್ದು. ಹೊಸ ಓದುಗರು ದೊರಕಿದಾಗ ಕೃತಿಯನ್ನು ಬೇರೊಂದು ರೀತಿಯಲ್ಲಿ ಅರ್ಥೈಸಲು, ವಿಮರ್ಶಿಸಲು ಸಹಾಯವಾಗುತ್ತದೆ. ಹೊಸ ಓದುಗರು ಮಾತನಾಡುವ ಧಾಟಿಯೂ ಭಿನ್ನವಾಗಿರುತ್ತದೆ. ಅದು ಕೂಡ ಸಕಾರಾತ್ಮಕ. ಇದ್ದರೂ, ಅನೇಕ ಲೇಖಕರಿಗೆ ಅರ್ಹತೆಯಿದ್ದರೂ ಸಿಗಬೇಕಾದ ಮಾನ್ಯತೆ ಸಿಕ್ಕುವುದಿಲ್ಲ. ಆದರೆ, ನಾನು ಹೇಳುವುದಿಷ್ಟೇ: ಇಂಥವುಗಳ ಬಗೆಗೆ ಯೋಚಿಸುತ್ತ ಕುಳಿತರೆ ನಾವು ಬರೆಯಬೇಕಾದುದನ್ನು ಬರೆಯಲಾಗುವುದಿಲ್ಲ.


  • ಕನ್ನಡಕ್ಕೆ ಅನುವಾದ : ಕೇಶವ ಮಳಗಿ (ಅನುವಾದಕರು, ಚಿಂತಕರು, ಸಾಹಿತಿಗಳು) ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW