‘ಸತ್ತವರು ಎಲ್ಲಿಗೆ ಹೋಗುತ್ತಾರೆ?’…. ಕವಿ, ಲೇಖಕ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ಕವನದಲ್ಲಿ ಅರಳಿದ ಅರ್ಥಪೂರ್ಣ ಸಾಲುಗಳನ್ನು ತಪ್ಪದೆ ಓದಿ…
ಸತ್ತವರು ಎಲ್ಲಿಗೆ ಹೋಗುತ್ತಾರೆ?
ಮಸಣಕೆ ಹೆಣವಾಗುತ್ತಾರೆ
ಮಣ್ಣಲ್ಲಿ ಮಣ್ಣಾಗುತ್ತಾರೆ
ಬಾನಂಗಳದಲ್ಲಿ ಚುಕ್ಕಿಯಾಗುತ್ತಾರೆ
ಆಪ್ತರೆದೆಯಲ್ಲಿ ಬಿಕ್ಕಾಗುತ್ತಾರೆ
ಬದುಕಿದವರ ತಿಥಿಯೂಟಕ್ಕೆ ನೆಪವಾಗುತ್ತಾರೆ
ಕಾಸಿರದವರ ಮನೆಯಲ್ಲೂ
ಕಜ್ಜಾಯವಾಗುತ್ತಾರೆ
ಸತ್ತವರು ಎಲ್ಲಿಗೆ ಹೋಗುತ್ತಾರೆ?
ಹಿಂದಿನವರು ಎಲ್ಲಿಗೆ ಹೋದರೋ
ಅಲ್ಲಿಗೇ ಹೋಗುತ್ತಾರೆ
ಬಾನ ಬಯಲಲಿ ನಿಂತು
ಮುಂದೆ ಬರಲಿರುವ ನಮ್ಮ ಹಾದಿ
ಕಾಯುತ್ತಾರೆ!
- ಕು.ಸ.ಮಧುಸೂದನ ರಂಗೇನಹಳ್ಳಿ (ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿ ಎನ್ನುವ ಹಳ್ಳಿಯಲ್ಲ ನೆಲೆಸಿರುವ ಇವರು ‘ಸಂಗಾತಿ’ ಸಾಹಿತ್ಯದ ವೆಬ್ ಪತ್ರಿಕೆಯ ಸಂಸ್ಥಾಪಕರ, ಪ್ರಧಾನ ಸಂಪಾದಕರಾಗಿರುವ ಇವರು ಇದುವರೆಗು ನಾಲ್ಕು ಕವನ ಸಂಕಲನಗಳನ್ನು, ಎರಡು ಕಥಾ ಸಂಕಲನಗಳನ್ನು,ಎರಡು ರಾಜಕೀಯ ಬರಹಗಳ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ)