ಕಾದಂಬರಿಗಾರ್ತಿ ಆಶಾ ರಘು ಅವರ ‘ಗತ’ ಕಾದಂಬರಿಯನ್ನು ಶ್ರೀ ಎಸ್. ಎಲ್. ಭೈರಪ್ಪನವರು ತಮ್ಮ ಸ್ವಗೃಹದಲ್ಲಿ ಬಿಡುಗಡೆ ಮಾಡಿದರು. ‘ಗತ’ ಕಾದಂಬರಿಯ ಬಗ್ಗೆ ಶ್ರೀ ಎಸ್. ಎಲ್. ಭೈರಪ್ಪನವರ ಮನದಾಳದ ಮಾತು ಹೀಗಿದೆ. ಮುಂದೆ ಓದಿ…
“ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ. ಹುಟ್ಟು ಆರಂಭವು ಅಲ್ಲಾ, ಸಾವು ಅಂತ್ಯವೂ ಅಲ್ಲಾ…’ ಎಂದು ಭಾರತೀಯ ವೇದಾಂತವು, ಹಲವು ಜಾಗತಿಕ ಧರ್ಮಗಳು ಹೇಳುತ್ತವೆ. ವೈಜ್ಞಾನಿಕವಾಗಿ ಈ ಕುರಿತು ಇನ್ನೂ ಅಧ್ಯಯನ ನಡೆಯುತ್ತಲೇ ಇದೆ. ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕುತೂಹಲಕಾರಿಯಾದದ್ದು”.
ಖ್ಯಾತ ಲೇಖಕರಾದ ಶ್ರೀ ಎಸ್.ಎಲ್. ಭೈರಪ್ಪನವರು ಮೆಚ್ಚುಗೆ ಪಡೆದ “ಆವರ್ತ” ಕಾದಂಬರಿ ರಚಿಸಿದ ಶ್ರೀಮತಿ ಆಶಾ ರಘುರವರು ತಮ್ಮ “ಗತ” ಕಾದಂಬರಿಯ ಮೂಲಕ ಮತ್ತೊಮ್ಮೆ ಓದುಗರ ಮುಂದೆ ಬಂದಿದ್ದಾರೆ. ವಿಶೇಷವೇನೆಂದರೆ ‘ಗತ’ ಕಾದಂಬರಿಯನ್ನು ಶ್ರೀ ಎಸ್. ಎಲ್. ಭೈರಪ್ಪನವರು ತಮ್ಮ ಸ್ವಗೃಹದಲ್ಲೇ ಆಶೀರ್ವಾದಿಸಿ ಬಿಡುಗಡೆ ಮಾಡಿದ್ದಾರೆ.
ಈ ಕೃತಿಯಲ್ಲಿ ಪುನರ್ಜನ್ಮದ ಕೊತೂಹಲಕಾರಿಯಾದ ಪರಿಕಲ್ಪನೆಯಿದೆ ಹಾಗೆ ಅವರೇ ಹೇಳಿಕೊಂಡಂತೆ ಖ್ಯಾತ ಲೇಖಕರಾದ ಶ್ರೀಯುತ ಕೆ ಎನ್ ಗಣೇಶಯ್ಯ ನವರ ಬರಹದ ತಂತ್ರವು ಇದೆ.
‘ಗತ’ ಕಾದಂಬರಿ ಬಿಡುಗಡೆ ಮಾಡಿದ ಶ್ರೀ ಎಸ್. ಎಲ್. ಭೈರಪ್ಪನವರ ಮಾತು ಹೀಗಿದೆ :
“ಭಾರತದಲ್ಲಿ ಹುಟ್ಟಿದ ಎಲ್ಲಾ ಧರ್ಮಗಳೂ ಕೂಡಾ ಪುನರ್ಜನ್ಮದಲ್ಲಿ ನಂಬಿಕೆ ಇರಿಸಿವೆ. ಅದು ವೈದಿಕ ಪರಂಪರೆಯಿಂದ ಹೊರಗೆ ಬಂದಂತ ಬೌದ್ಧ ಹಾಗೂ ಜೈನ ಧರ್ಮವಾಗಲೀ ಸಹ ಇದನ್ನು ನಂಬುತ್ತಾರೆ. ನಮ್ಮ ಹಿಂದಿನ ಸಾಹಿತ್ಯವನ್ನು ನೋಡಿದರೆ ಪುನರ್ಜನ್ಮದ ಕುರಿತು ಕತೆಗಳು ಬೇಕಾದಷ್ಟಿವೆ. ಬೌದ್ಧ ಧರ್ಮದಲ್ಲಂತೂ ಬುದ್ಧನೇ ಅದೆಷ್ಟೋ ಜನ್ಮಗಳನ್ನು ಎತ್ತಿ ಬಂದು ಕೊನೆಗೆ ಬುದ್ಧನಾದ ಅಂತಲೂ ಒಂದು ಕತೆಯಿದೆ. ಈ ಆಧುನಿಕತೆಯ ಯುಗದಲ್ಲಿ ಕೆಲವು ಜನರು ನಂಬದೆ ಇದ್ದರೂ ಸಹ ಸಾಹಿತ್ಯದಲ್ಲಿ ಅದನ್ನು ಬಳಸಬಹುದು. ಈ ವಸ್ತುವನ್ನು ತೆಗೆದುಕೊಂಡು ಆಶಾ ರಘು ಅವರು ‘ಗತ’ ಅನ್ನುವ ಕಾದಂಬರಿಯನ್ನು ಬರೆದಿದ್ದಾರೆ. ಕಥಾವಸ್ತು ಬಹಳ ಆಕರ್ಷಕವಾಗಿದೆ.”
ಈ ಕಾದಂಬರಿಯನ್ನು ಶ್ರೀ ರಘುವೀರ್ ತಮ್ಮ ಸಾಹಿತ್ಯಲೋಕ ಪಬ್ಲಿಕೇಶನ್ ವತಿಯಿಂದ ಅಂದವಾಗಿ ಮುದ್ರಣ ಮಾಡಿ ಹೊರತಂದಿದ್ದಾರೆ. ಈ ಕಾದಂಬರಿಯ ಪ್ರತಿಗಳು ಈಗ ಮಾರಾಟಕ್ಕೆ ಲಭ್ಯವಿದ್ದು, ಶ್ರೀಯುತ ರಘುವೀರ್ ರವರ ೯೯೪೫೯೩೯೪೩೬ (9945939436) ಸಂಖ್ಯೆಗೆ ಕರೆ ಮಾಡಿದರೆ ಖುದ್ದು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.
ಸದಾಭಿರುಚಿಯ ಕೃತಿಗಳಿಂದ ಕನ್ನಡ ಓದುಗರನ್ನು ಆಕರ್ಷಸುತ್ತಿರುವ ಶ್ರೀಮತಿ ಆಶಾ ರಘು ರವರಿಗೆ ಈ ಪುಸ್ತಕ ಬಿಡುಗಡೆಯ ಶುಭ ಸಂದರ್ಭದಲ್ಲಿ ನಮ್ಮ ಆಕೃತಿ ಕನ್ನಡವೂ ಶುಭಾಶಯಗಳನ್ನು ಕೋರುತ್ತದೆ.
- ಕು ಶಿ ಚಂದ್ರಶೇಖರ್
(ಕಾದಂಬರಿಗಾರ್ತಿ ಆಶಾ ರಘು ಅವರೊಂದಿಗೆ ಆಕೃತಿ ಕನ್ನಡದ ಲೇಖಕ ಕು ಶಿ ಚಂದ್ರಶೇಖರ್)