ಕರುಣೆಯ ತೋರಿ ಹೇ ಜಗನ್ಮಾತೆ, ಮೈಸೂರು ಒಡೆಯರ ಕುಲದೈವ ನೀನೆ…ಕವಿ ಪದ್ಮನಾಭ. ಡಿ. ಅವರು ಬರೆದಿರುವ ಸುಂದರ ಸಾಲುಗಳು ಓದುಗರ ಮುಂದೆ, ತಪ್ಪದೆ ಓದಿ…
ಬಾರಮ್ಮ ಗೌರಮ್ಮ ಭಕುತರ ಹರಸಮ್ಮ
ಕರುಣೆಯ ತೋರಿ ಹೇ. ಜಗನ್ಮಾತೆ
ನವರಾತ್ರಿ ಸಮಯದಿ ನವವಿಧರೂಪದಿ
ನಿನ್ನ ಪೂಜಿಸುವೆವು ಹೇ ಭಾಗ್ಯದಾತೆ//
ಆಶ್ವಯುಜ ಮಾಸದಲಿ ಶುಕ್ಲಪಕ್ಷದಲ್ಲಿ
ಒಂಬತ್ತು ದಿನಗಳ ಪರ್ಯಂತ
ನಿನ್ನಯ ಹಿರಿಮೆಯ ನೆನೆಯುತ್ಥ ಹಾಡುತ್ತ
ನಲಿವ ಭಕ್ತರ ಕಾಯೇ ಹೇ ಲಲಿತೆ//
ಹೊರತೆಗೆದು ಪೆಟ್ಟಿಗೆಯೊಳಿದ್ದ ಬೊಂಬೆಗಳ
ಅನುವಿಂದ ಸಿಂಗರಿಸಿ ಮಂಟಪದಿ ಕೂರಿಸಿ
ಬೊಂಬೆ ಬಾಗಿನವೆಂದು ಭಕ್ಷ್ಯವ ಅರ್ಪಿಸಿ
ನಲಿವ ಮಕ್ಕಳ ನೋಡು ಹೇ ಲೋಕಮಾತೆ//
ಪಟ್ಟದ ಬೊಂಬೆಯು ಇಷ್ಟದ ಬೊಂಬೆಯು
ಚಾಮುಂಡಿಬೆಟ್ಟದ ಸಿರಿದೇವಿ ಗೊಂಬೆಯು
ಗಜ ಹಯ ರಥ ಹಸು ವಿಧವಿಧ ಗೊಂಬೆಗಳ
ಪೂಜಿಸೊ ಮಕ್ಕಳ ನೀ ನೋಡು ಜಗದಂಬೆ//
ಕಾಳಿ ದುರ್ಗೆ ನೀನೆ ಮೂಕಾಂಬಿಕೆ ನೀನೆ
ಮೈಸೂರು ಒಡೆಯರ ಕುಲದೈವ ನೀನೆ
ನಾಡಿನೆಲ್ಲೆಡೆ ಸಿರಿ ಸಂಭ್ರಮ ಸಂತಸವು
ಕಾಣಲು ಕಾರಣ ನಿನ್ನ ಮಹಿಮೆ ತಾನೇ//
- ಪದ್ಮನಾಭ. ಡಿ. ( ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು) ಮೈಸೂರು.
