‘ಭವಾನಿಪುರ’ ಕೃತಿಯ ಮುಖ್ಯ ಪಾತ್ರಗಳು ಇಬ್ಬರು ಮಹಿಳೆಯರು ಒಬ್ಬರು ಸಂಗೀತದ ಸೆಳೆತಕ್ಕೆ ಒಳಗಾದವರಾದರೆ, ಇನ್ನೊಬ್ಬರು ಕಮ್ಯೂನಿಸಂನಲ್ಲಿ ನಿಷ್ಠೆಯನ್ನಿಟ್ಟವರು. ಈ ಭವಾನಿಪುರ ಮೂಲ ಕೃತಿಯನ್ನು ಶಶಿ ದೇಶಪಾಂಡೆ ಅವರು ಇಂಗ್ಲೀಷನಲ್ಲಿ ಬರೆದಿದ್ದಾರೆ ಅದನ್ನು ಕನ್ನಡಕ್ಕೆ ವಿಜಯಾ ಕಣೇಕಲ್ ಅವರು ಅನುವಾದವನ್ನು ಮಾಡಿದ್ದಾರೆ, ಈ ಕೃತಿಯ ಕುರಿತು ಶಿವಕುಮಾರ್ ಬಾಣಾವರ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಭವಾನಿಪುರ.
ಮೂಲ ಆಂಗ್ಲ ಲೇಖಕರು: ಶಶಿ ದೇಶಪಾಂಡೆ.
ಅನುವಾದಕರು: ವಿಜಯಾ ಕಣೇಕಲ್.
ಪ್ರಕಾಶಕರು: ಅಂಕಿತ ಪುಸ್ತಕ
ಮೊದಲ ಮುದ್ರಣ: ೨೦೧೬.
ಬೆಲೆ: ರೂ. ೨೯೫/-
ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಶಶಿ ದೇಶಪಾಂಡೆಯವರದು ಪ್ರಮುಖ ಹೆಸರು. ಇವರು ತಮ್ಮ ಸೂಕ್ಷ್ಮ ಕಥಾನಕಕ್ಕೆ ಹೆಸರಾದವರು.

‘ಭವಾನಿಪುರ’ ಕೃತಿಯ ಮುಖ್ಯ ಪಾತ್ರಗಳು ಇಬ್ಬರು ಮಹಿಳೆಯರು ಒಬ್ಬರು ಸಂಗೀತದ ಸೆಳೆತಕ್ಕೆ ಒಳಗಾದವರಾದರೆ, ಇನ್ನೊಬ್ಬರು ಕಮ್ಯೂನಿಸಂನಲ್ಲಿ ನಿಷ್ಠೆಯನ್ನಿಟ್ಟವರು. ಇಬ್ಬರೂ ತಮ್ಮ ತಮ್ಮ ಕುಟುಂಬದಿಂದ ಹೊರಬಂದು ಸಾಧನೆಯ ಕಠಿಣ ಮಾರ್ಗದಲ್ಲಿ ಶ್ರಮಿಸಿ, ಅದರಲ್ಲೇ ಸಾರ್ಥಕತೆ ಕಾಣಲು ಯತ್ನಿಸಿದವರು. ಸಾವಿತ್ರಿಬಾಯಿ ಇಂದೋರ್ಕರ್ ಸಂಪ್ರದಾಯಸ್ಥ ಹಿಂದೂ ಕುಟುಂಬದಿಂದ ಬಂದವಳು. ಸಂಗೀತದ ಹಂಬಲದಿಂದ ಪ್ರಿಯಕರ ಹಾಗೂ ತಬಲಾ ವಾದಕ ಗುಲಾಮ್ ಸಾಬ್ ನೊಂದಿಗೆ ಪಲಾಯನ ಮಾಡಿ ತನ್ನ ಇಡೀ ಬದುಕನ್ನು ಸಂಗೀತ ವೃತ್ತಿಗೆ ಸಮರ್ಪಿಸಿಕೊಂಡವಳು. ಸೂಕ್ಷ್ಮ ಹಾಗೂ ಗಟ್ಟಿ ಮನಸ್ಸಿನವಳಾದ ಲೀಲಾ ತನ್ನ ಇಡೀ ಜೀವನವನ್ನು ಕಮ್ಯುನಿಸ್ಟ್ ಪಾರ್ಟಿಯ ಚಟುವಟಿಕೆಗಳಿಗೆ ತೆತ್ತುಕೊಂಡವಳು.

೫೦ ವರ್ಷದ ಈ ಕಥಾನಕದಲ್ಲಿ ತನ್ನ ಜೀವಿತದ ಕೊನೆಯ ಘಟ್ಟದಲ್ಲಿರುವ ಪ್ರಸಿದ್ಧ ಸಂಗೀತಗಾರ್ತಿ ಸಾವಿತ್ರಿಬಾಯಿಯ ಜೀವನ ಕಥೆಯನ್ನು ಬರೆಯಲು ಆಯೋಜಿತಳಾಗಿ ಭವಾನಿಪುರದ ಮಧು (ಲೀಲಾಳ ಸೋದರಿ ಮಗಳು) ತನ್ನ ಏಕಮಾತ್ರ ಪುತ್ರನನ್ನು ಕಳೆದುಕೊಂಡು ದುಃಖದಲ್ಲಿದ್ದಾಳೆ. ಸಾವಿತ್ರಿಬಾಯಿಯ ಕಥನದೊಂದಿಗೆ ತನ್ನ ಸುತ್ತಲಿನ ಬಂಧು ಬಾಂಧವರ ಬದುಕಿನ ನಾನಾ ಮಗ್ಗುಲುಗಳನ್ನು ಪರಿಭಾವಿಸುತ್ತಾ ತನ್ನ ದುಃಖದಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನವೇ ‘ಭವಾನಿಪುರ’ ಕೃತಿ.
ಇಲ್ಲಿನ ಶಕ್ತಿಯುತ ಬರವಣಿಗೆ, ಮಾರ್ದವ ಎಲ್ಲರನ್ನೂ ಸೆರೆ ಹಿಡಿಯುವಂಥದ್ದು.
- ಶಿವಕುಮಾರ್ ಬಾಣಾವರ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಶಿವಮೊಗ್ಗ
