‘ಭೀತಿಮುಕ್ತ ನಿನ್ನ ಧ್ಯಾನ, ಗೀತೆ ಬರೆದೆ ನಿನ್ನ ಮೇಲೆ ಸರ್ವ ಶಕ್ತಿಯೇ’ ….ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಸಾಲುಗಳು ಓದುಗರ ಮುಂದೆ, ತಪ್ಪದೆ ಓದಿ…
ನನ್ನೊಳಿರುವುದಂಧಕಾರ
ಭಿನ್ನಹಿಸುತ ಬೇಡುತಿರುವೆ
ನನ್ನ ಹರಸಿ ಸಲಹು ತಾಯಿ ಬ್ರಹ್ಮಚಾರಿಣೀ
ನಿನ್ನೊಳಗಿದೆ ದಿವ್ಯ ಶಕ್ತಿ
ನನ್ನೊಳಗಿದೆ ಭವ್ಯ ಭಕ್ತಿ
ನಿನ್ನ ಕರುಣೆಯೊಲವು ಸಾಕು ವಿಭಾಭರಿತೆಯೇ
ತುಂಬಿತೆನ್ನೊಳಿರುವ ಪಾಪ
ನಂಬಿ ಬಂದೆ ಕಳೆದೆ ಶಾಪ
ಬಿಂಬದಲ್ಲು ನಿನ್ನ ರೂಪ ಶೂಲಪಾಣಿಯೇ
ಹುಂಬತನದ ಕುರುಡನೊಳಗೆ
ಜಂಬವಳಿಸಿದಂಥ ತಾಯೆ
ತಂಬಿಗೆಯಲಿ ನೀರನೆರೆದು ಪೊರೆದ ಗೌರಿಯೇ
ಶ್ವೇತವಸ್ತ್ರಧಾರಿಯಾಗಿ
ಮಾತೆಯಾಗಿ ಕರೆದ ಕ್ಷಣವೆ
ಭೀತಿಯೋಡಿ ಮಾಯವಾಯ್ತು ವೃಷಭ ವಾಹನೇ
ನೀತಿಯುಕ್ತ ನಿನ್ನ ಪಠಣ
ಭೀತಿಮುಕ್ತ ನಿನ್ನ ಧ್ಯಾನ
ಗೀತೆ ಬರೆದೆ ನಿನ್ನ ಮೇಲೆ ಸರ್ವ ಶಕ್ತಿಯೇ.
- ಚನ್ನಕೇಶವ ಜಿ ಲಾಳನಕಟ್ಟೆ(ಕವಿಗಳು, ಲೇಖಕರು) ಬೆಂಗಳೂರು
