ಬಣ್ಣಗಳ ಒಡನಾಟದಲ್ಲಿ ಅರಳಿದ ಯುವ ಕಲಾವಿದೆ ಚೈತನ್ಯಾ ಎನ್ ಭಟ್. ಅವರ ಕುಂಚದಲ್ಲಿ ಮೂಡಿ ಬಂದ ಸುಂದರ ಚಿತ್ರಗಳು. ನೋಡುಗರನ್ನು ಬೆರಗುಗೊಳಿಸುವುದರ ಜೊತೆಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ, ಚೈತನ್ಯಾ ಎನ್ ಭಟ್ ಅವರ ಪ್ರತಿಭೆಯ ಅನಾವರಣ, ಮುಂದೆ ಓದಿ…
ಚೈತನ್ಯಾ ಎನ್ ಭಟ್ ಒಬ್ಬ ಪ್ರತಿಭಾನ್ವಿತ ಚಿತ್ರಕಲಾವಿದೆ. ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದು, ಅದಕ್ಕೆ ಬಣ್ಣ ತುಂಬುವುದೆಂದರೆ ಬಲು ಪ್ರೀತಿ. ಬಣ್ಣಗಳ ನಡುವೆ ಆಟಾಡುತ್ತಾ, ಕಲಿಯುತ್ತಾ ಬಣ್ಣದಲ್ಲಿಯೇ ಬೆಳೆದಂತಹ ಹುಡುಗಿ. ಈಕೆ ಯಾವುದೇ ಚಿತ್ರಕಲೆ ಸ್ಪರ್ಧೆಗೆ ಹೋಗಲಿ ಅಲ್ಲಿ ಬಹುಮಾನವಿಲ್ಲದೆ ಖಾಲಿ ಕೈಯಲ್ಲಿ ಬಂದದ್ದೇ ಇಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅಪ್ಪ-ಅಮ್ಮ.
ನರಸಿಂಹಮೂರ್ತಿ ಭಟ್ ಮತ್ತು ಮಧುರಾ ಮೂರ್ತಿ ದಂಪತಿಗಳ ಹಿರಿಯ ಪುತ್ರಿ ಈ ಚೈತನ್ಯ ಭಟ್. ತಂದೆ ನರಸಿಂಹ ಮೂರ್ತಿ ಅವರು ತಮ್ಮದೇ ಸ್ವಉದ್ಯೋಗದಲ್ಲಿ ಮಗ್ನರಾಗಿದ್ದರೇ, ತಾಯಿ ಮಧುರಾ ಮೂರ್ತಿ ಲೇಖನಿ ಹಿಡಿದು ಸಾಕಷ್ಟು ಕವನಗಳನ್ನು ಸಾಹಿತ್ಯಲೋಕಕ್ಕೆ ನೀಡಿದವರು. ಮನೆಯಲ್ಲಿಯೇ ಕಲೆಯ ವಾತಾವರಣ ಸೃಷ್ಠಿಯಾದ್ದರಿಂದ ಚೈತನ್ಯಳಿಗೆ ಚಿತ್ರಕಲೆ ಎನ್ನುವುದು ರಕ್ತಗತವಾಗಿಯೇ ಬೆಳೆದು ಬಂದಿದೆ ಎನ್ನಬಹುದು. ಚೈತನ್ಯಾ ಬೆಂಗಳೂರಿನ ವಿಡಿಯಾ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಳೆ.
ಐದನೆಯ ಹಾಗೂ ಆರನೇ ತರಗತಿಯಲ್ಲಿ ತನ್ನದೇ ಶಾಲೆಯ ಚಿತ್ರಕಲಾ ಶಿಕ್ಷಕರಾದ ಎಸ್ ಸುರೇಶ್ ಅವರ ಬಳಿ ಚಿತ್ರಕಲೆಯನ್ನು ಕಲಿಯಲು ಆರಂಭಿಸಿದಳು. ಸೌಮ್ಯ ಸ್ವಭಾವದವಳಾದ ಚೈತನ್ಯ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ವ್ಯರ್ಥಮಾಡದೆ ಚಿತ್ರಕಲೆಯ ಕಲಿಕೆಯಲ್ಲಿ ತನ್ನನ್ನು ತಾನು ಇನ್ನಷ್ಟು ಮೊನಚಾಗಿಸಿಕೊಂಡಳು. ಆ್ಯಕ್ರಿಲಿಕ್ ಪೇಂಟಿಂಗ್ಸ್, ಕ್ಲಾಥ್ ಪೇಂಟಿಂಗ, ಆಯ್ಲ್ ಪೇಂಟಿಂಗ್ಸ್ ಗಳನ್ನು ಯೌಟ್ಯೂಬ್ ನಲ್ಲಿ ನೋಡಿ ಕಲಿತ ಜಾಣೆ. ಕೆಲವು ಕಡೆ ಚಿತ್ರಕಲಾ ಪ್ರದರ್ಶನವನ್ನು ನೀಡಿ ಸನ್ಮಾನ ಪಡೆದಿದ್ದಾಳೆ. ಸ್ವರ್ಣ ಕಲಾರತ್ನ ಹಾಗೂ ಕನ್ನಡ ಕುಲ ತಿಲಕವೆಂಬ ಬಿರುದನ್ನು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪಡೆದಿದ್ದಾಳೆ. ಚಿತ್ರಕಲೆಯಲ್ಲಿ ಸ್ಟೇಟ್ ಲೆವೆಲ್, ನ್ಯಾಷನಲ್ ಲೆವೆಲ್ ಲಿ ಮಾತ್ರವಲ್ಲದೇ ಇಂಟರ್ ನ್ಯಾಷನಲ್ ಲೆವೆಲ್ ಲಿ ಭಾಗವಹಿಸಿ ಮೂರನೇ ಸ್ಥಾನವನ್ನ ಪಡೆದಿದ್ದಾಳೆ.

ಇಷ್ಟಲ್ಲದೇ ಕರಕುಶಲತೆಯಲ್ಲಿ ಪೇಪರ್ ಕ್ರ್ಯಾಪ್ಟಿಂಗ್, ಸ್ಟೋನ್ ಡಿಸೈನ್ಸ್ ಇತ್ಯಾದಿ ಚಟುವಟಿಕೆಗಳು, ಅಡುಗೆ ಮಾಡುವುದರಲ್ಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾಳೆ. ಚೈತನ್ಯಾಳ ಎಲ್ಲ ಕ್ರಿಯಾಶೀಲತೆಗೆ ತಂದೆ ತಾಯಿಯ ಸಂಪೂರ್ಣ ಪ್ರೋತ್ಸಾಹ ಹಾಗೂ ಸಹಕಾರವಿದೆ. ಚೈತನ್ಯಳ ನಾಡಿನ ಹೆಸರಾಂತ ಕಲಾವಿದಳಾಗಿ ಹೊರಹೊಮ್ಮಲಿ ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ.
- ಶಾಲಿನಿ ಹೂಲಿ ಪ್ರದೀಪ್
