ತೀರ್ಥಹಳ್ಳಿಯ ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ಜಿಂಕೆಯೊಂದನ್ನು ಮರಣೋತ್ತರ ಪರೀಕ್ಷೆಗೆ ಹಾಜರು ಪಡಿಸಿದಾಗ, ಅದರ ಮೇವಿನಚೀಲದಲ್ಲಿ ಚೂರಿ ಕಾಯಿ ಪತ್ತೆಯಾಯಿತು. ಅದರ ಬಗ್ಗೆ ಪಶುವೈದ್ಯ ಡಾ ಯುವರಾಜ್ ಹೆಗಡೆ ಅವರು ಬರೆದ ಲೇಖನವಿದು, ಮುಂದೆ ಓದಿ…
ಪ್ರಕೃತಿಯು ತನ್ನೊಡಲಿನಲ್ಲಿ ಊಹೆಗೂ ನಿಲುಕದ ಅದೆಷ್ಟೋ ಕೌತುಕದ ವಿಷಯಗಳನ್ನು ಅಡಗಿಸಿಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ . ಅಂತೆಯೇ ಪ್ರಕೃತಿಯ ಒಂದು ಭಾಗವಾದ ಅರಣ್ಯ ಹಾಗೂ ಅದರೊಳಗಿನ ಜೀವಿಗಳು, ಅಚ್ಚರಿಯ ಹಾಗೂ ರಹಸ್ಯಮಯ ವಿಷಯಗಳ ಆಗರ ಎಂದೇ ಹೇಳಬಹುದು.

ಕೆಲ ತಿಂಗಳ ಹಿಂದೆ ತೀರ್ಥಹಳ್ಳಿಯ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಮೃತಪಟ್ಟ ಜಿಂಕೆಯೊಂದನ್ನು ಮರಣೋತ್ತರ ಪರೀಕ್ಷೆಗೆ ಹಾಜರು ಪಡಿಸಿದಾಗ, ಅದನ್ನು ಕೂಲಂಕುಷವಾಗಿ ಪರಿಶೀಲಿಸಿದ ನನಗೆ ಅದೊಂದು “ವಯೋಸಹಜ ಮರಣ” ಎಂಬುದರಲ್ಲಿ ಯಾವ ಸಂಶಯವೂ ಇರಲಿಲ್ಲ. ನನ್ನ ಕುತೂಹಲಕ್ಕಾಗಿ ಅದರ ಉದರದಲ್ಲಿ ಆಗಿರಬಹುದಾದ ಬದಲಾವಣೆಗಳ ಕುರಿತು ಅರಿಯುವ ಸಲುವಾಗಿ ಪರಿಶೀಲಿಸಲಾರಂಬಿಸಿದೆ. ಆದರೆ ಅಚ್ಚರಿಯ ವಿಷಯವೊಂದು ಕಣ್ಣಿಗೆ ಬಿದ್ದಿತು. ಅದರ ಜೀರ್ಣಾಂಗದ ಭಾಗವಾದ ಮೇವಿನಚೀಲ “ರುಮೆನ್” ನಲ್ಲಿ ನೂರಾರು ಬೀಜಗಳು ಅರೆಜೀರ್ಣಾವಸ್ಥೆಯಲ್ಲಿ ಪತ್ತೆಯಾದವು. ಅವುಗಳನ್ನು ಸಾಧ್ಯವಾದಷ್ಟು ಸಂಗ್ರಹಿಸಿ, ಶುಚಿಗೊಳಿಸಿ ಗಮನಿಸಿದಾಗ ಅವು ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಕಂಡುಬರುವ “ಚೂರಿ ಕಾಯಿ” ಎಂದು ಖಾತ್ರಿಯಾಯಿತು. ಎಣಿಸಿ ನೋಡಿದಾಗ ಬರೋಬ್ಬರಿ 282 ಬೀಜಗಳು.

ಇನ್ನು ಎಣಿಕೆಗೆ ಸಿಗದೆ ಜೀರ್ಣಾಂಗದಲ್ಲಿ ಮುಂದೆ ಹೋದ ಬೀಜಗಳೆಷ್ಟೋ!! . ಇದರೊಂದಿಗೆ ವನ್ಯಮೃಗಗಳು ನೈಸರ್ಗಿಕವಾಗಿ ಬೀಜ ಪ್ರಸಾರ ಮಾಡುವಲ್ಲಿ ಅದೆಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತವೆ ಹಾಗೂ ತನಗೆ ಆಹಾರ ದೊರಕಿಸಿಕೊಟ್ಪ ಪ್ರಕೃತಿಗೆ ಅವುಗಳ ಬೀಜ ಪ್ರಸಾರ ಮಾಡುವ ಮುಖಾಂತರ ಪರಸ್ಪರ ಸಹಜೀವನ ನಡೆಸುವುದು ಮತ್ತೊಮ್ಮೆ ಸಾಬೀತಾಯಿತು. ಅಷ್ಟೇ ಅಲ್ಲದೆ ನನ್ನ ಕಲಿಕೆ ಹಾಗೂ ಅನುಭವಕ್ಕೆ ಅವಕಾಶವೂ ದೊರಕಿತು.
- ಡಾ ಯುವರಾಜ್ ಹೆಗಡೆ ಪಶುವೈದ್ಯರು, ತೀರ್ಥಹಳ್ಳಿ
