‘ಚೌಚೌ ಬಾತ್’ ಅಂಕಣ (ಭಾಗ – ೪೬)

ಸುವರ್ಣ ಗಡ್ಡೆ ತಿಂದು ಅಭ್ಯಾಸ ಇಲ್ಲದವರು ಆಸೆ ಪಟ್ಟು ಮಾಡಿದಾಗ ಏನಾಯಿತು.ತಪ್ಪದೆ ಮುಂದೆ ಓದಿ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಸುವರ್ಣ ಗಡ್ಡೆಯ ರುಚಿ.’ …

ಅಂದು ನಾನು ಮತ್ತು ನನ್ನ ಮಗಳು ಇಬ್ಬರೇ ಮನೆಯಲ್ಲಿ. ನನ್ನ ಯಜಮಾನರು ಮತ್ತು ಮಗ ಯಾವುದೋ ಕೆಲಸದ ನಿಮಿತ್ತ ಊರಿಗೆ ಹೋಗಿದ್ದರು. ಬೆಳಗ್ಗೆ ತಿಂಡಿಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ದೆ. ಆಚೆ ತಳ್ಳುಗಾಡಿಯವನು ತರಕಾರಿ ತರಕಾರಿ ಎಂದು ಕೂಗುತ್ತಿದ್ದ. ಮನೆಯಲ್ಲಿ ತರಕಾರಿ ಖಾಲಿಯಾಗಿತ್ತು. ಬುಟ್ಟಿ ಹಿಡಿದು ನಾನು ಹೊರ ಬಂದೆ. ನನ್ನ ಜೊತೆ ನನ್ನ ಮಗಳು ಬಂದಳು. ಟೊಮ್ಯಾಟೋ ಬೀನ್ಸ್ ಕೊಳ್ಳುತ್ತಾ ಹಾಗೆ ಕಣ್ಣಾಡಿಸಿದೆ. ತರಕಾರಿ ಗಾಡಿಯಲ್ಲಿ ಸುವರ್ಣಗಡ್ಡೆ ಕೂಡ ಇತ್ತು. ಮಗಳು ಅದನ್ನೇ ನೋಡುತ್ತಿದ್ದಳು. ಇದು ಏನ್ ಮಮ್ಮಿ ಅಂತ ಕೇಳಿದಳು. ನಾನು ಸುವರ್ಣ ಗಡ್ಡೆ ಎಂದೆ. ಅವಳಿಗೆ ಅರ್ಥವಾಗಲಿಲ್ಲ. ಎಲಿಫೆಂಟ್ ಫೂಟ್ ಎಂದೆ. ಓ ಹೌದಾ, ನೀನು ಒಂದು ಸಲನೂ ತಂದಿಲ್ಲ, ಅದರಲ್ಲಿ ಏನೂ ಮಾಡಿ ಕೊಟ್ಟಿಲ್ಲ ಮಮ್ಮಿ ತಗೋ ಇದನ್ನ ಇವತ್ತು ಎಂದು ಪೀಡಿಸಿದಳು. ನಾನು ಎಂದೂ ಅದರ ಅಡುಗೆ ಮಾಡಿರಲಿಲ್ಲ. ಕಾರಣ ಅದು ನಮ್ಮ ಕಡೆಯ ತರಕಾರಿ ಅಲ್ಲ. ಅದರ ಬಗ್ಗೆ ಕೇಳಿದ್ದೆ ಅಷ್ಟೇ ಆದರೆ ಎಂದೂ ರುಚಿ ನೋಡಿರಲಿಲ್ಲ. ಜೊತೆಗೆ ಅದರ ರೆಸಿಪಿ ಹೇಗೆ ಮಾಡಬೇಕೆಂಬುದು ಕೂಡ ನನಗೆ ತಿಳಿದಿರಲಿಲ್ಲ. ಯೂಟ್ಯೂಬ್ ನಲ್ಲಿ ನೋಡಿಕೊಂಡು ಮಾಡಲು ಆಗ ಮೊಬೈಲ್ ಇನ್ನು ನಮ್ಮ ಕೈಗೆ ಬಂದಿರಲಿಲ್ಲ. ಸರಿ ಏನಾದರೂ ಒಂದು ತಿಂಡಿ ಮಾಡೋಣವೆಂದು ಕಾಲು ಕೆಜಿ ಸುವರ್ಣಗಡ್ಡೆ ಕೊಡಪ್ಪ ಎಂದೆ. ಕಾಲು ಕೆಜಿ ಎಷ್ಟು ಬರುತ್ತೆ ಮೇಡಂ, ಅರ್ಧ ಕೆಜಿ ತೊಗೋಳಿ ಎಂದ. ಇಲ್ಲಪ್ಪ ಬೇಡ ಸಾಕು ಅಷ್ಟೇ ಕೊಡು ಎಂದು ಕಾಲು ಕೆಜಿ ತಗೊಂಡೆ. ಮೊದಲ ಸಲ ಬೇರೆ ತಿನ್ನಲು ಹೇಗಿರುತ್ತೋ ಏನೋ ಎಂದು ಅನುಮಾನದಿಂದಲೇ ತೆಗೆದುಕೊಂಡೆ ನನ್ನ ಮಗಳ ಬಲವಂತಕ್ಕೆ.

ಫೋಟೋ ಕೃಪೆ : google

ತರಕಾರಿ ತೆಗೆದುಕೊಂಡು ಒಳಬಂದು ಏನು ಮಾಡಬೇಕೆಂದು ಯೋಚಿಸ ತೊಡಗಿದೆ. ಅದರಲ್ಲಿ ಸಾಗೂ, ಪಲ್ಯ ಏನಾದರೂ ಮಾಡಬಹುದೇ ಎಂದು ಅಂದುಕೊಂಡೆ. ಆದರೆ ಮಾಡುವ ವಿಧಾನ, ಬೇಕಾಗುವ ಸಾಮಗ್ರಿ ಏನೊಂದು ಗೊತ್ತಿರಲಿಲ್ಲ. ಒಂದು ಮಾಡಲು ಹೋಗಿ ಇನ್ನೊಂದು ಆದರೆ ಕಷ್ಟ ಎಂದುಕೊಂಡು ಸುಮ್ಮನಾದೆ. ಮಗಳು ಏನ್ ತಿಂಡಿ ಮಾಡ್ತೀಯಾ ಮಮ್ಮಿ ಎಂದಳು. ನಾನು ಏನು ಮಾಡಬೇಕು ಪುಟ್ಟಿ ಎಂದೆ. ಪಲಾವ್ ಮಾಡು ಎಂದಳು. ಆಗ ತಕ್ಷಣ ಆ ಸುವರ್ಣ ಗಡ್ಡೆ ಹಾಕಿ ಪಲಾವ್ ಮಾಡುವ ಯೋಜನೆ ಹೊಳೆಯಿತು . ಸರಿ ಸುವರ್ಣ ಗಡ್ಡೆಯನ್ನು ತೊಳೆದು ಸ್ವಚ್ಛ ಮಾಡಿ ಕಟ್ ಮಾಡಿದೆ. ಅದರ ಜೊತೆಗೆ ಬೇರೆ ಒಂದೆರಡು ತರಕಾರಿ ಹಾಕಿದರೆ ಚೆನ್ನಾಗಿರುತ್ತಿತ್ತು. ಆದರೆ ಸುವರ್ಣಗಡ್ಡೆಯ ಫ್ಲೇವರ್ ಜಾಸ್ತಿ ಇರಲಿ ಅಂತ ನಾನು ಅದೊಂದೇ ಜಾಸ್ತಿ ಹಾಕಿ ಮಾಮೂಲಿಯಂತೆ ಪಲಾವ್ ಮಾಡಿದೆ.

ಘಮ ಘಮ ಪಲಾವ್ ಅರ್ಧ ಗಂಟೆಯಲ್ಲಿ ರೆಡಿಯಾಯಿತು. ಕುಕ್ಕರ್ ಪ್ರೆಷರ್ ಬಿಟ್ಟಿದ್ದೆ ತಡ ನಾವಿಬ್ಬರು (ಮಗಳು ನಾನು) ಬ್ಯಾಟಿಂಗ್ ಗೆ ರೆಡಿಯಾದೆವು. ಪಲಾವ್ ಗೆ ನೆಂಚಿಕೆಯಾಗಿ ಮೊಸರುಬಜ್ಜಿ, ಸೌತೆಕಾಯಿ ಹೊಂದಿಸಿಕೊಂಡೆವು. ಬಿಸಿ ಬಿಸಿ ಪಲಾವ್ ತಟ್ಟೆಗೆ ಹಾಕಿಕೊಂಡೆವು. ಮೊದಲ ಸಲ ಸುವರ್ಣಗಡ್ಡೆ ಸವಿಯುತ್ತಿರುವುದು ಹೇಗಿರುತ್ತೋ ಏನೋ ಎಂಬ ಕುತೂಹಲ ಬೇರೆ. ಒಂದು ಕೈ ನೋಡೇ ಬಿಡೋಣ ಇವತ್ತು ಎಂದುಕೊಂಡು ತಟ್ಟೆಗೆ ಕೈ ಹಾಕಿದೆವು. ಮೊದಲ ತುತ್ತಿನಲ್ಲೇ ಅನ್ನದ ಜೊತೆಗೆ ಸ್ವರ್ಣ ಗಡ್ಡೆಯ ಒಂದು ತುಂಡನ್ನು ತಿಂದೆವು. ತುಂಬ ರುಚಿ ಅನ್ನಿಸಿತು. ಪಲಾವ್ ಬಿಸಿಬಿಸಿ ಇದ್ದಿದ್ದರಿಂದ ತುಂಬಾ ಟೆಸ್ಟ್ ಅನಿಸಿತು. ಅದೇ ಉತ್ಸಾಹದಲ್ಲಿ ಒಂದು ನಾಲ್ಕೈದು ತುಂಡು ಸುವರ್ಣ ಗಡ್ಡೆಯನ್ನು ಅನ್ನದ ಜೊತೆ ಕಲಸಿ ತಿಂದೆವು. ತಿನ್ನುತ್ತಾ ತಿನ್ನುತ್ತಾ ಗಂಟಲಿನಲ್ಲಿ ಮತ್ತು ನಾಲಿಗೆಯಲ್ಲಿ ಕೆರೆತ ಶುರುವಾಯಿತು.ನನಗೊಬ್ಬಳಿಗೇ ಹೀಗೆ ಆಗಿರಬಹುದೇನೋ ಎಂದುಕೊಂಡರೆ ಮಗಳಿಗೂ ಹಾಗೆ ಆಯಿತು. ಅವಳು ತಿನ್ನುವುದನ್ನು ನಿಲ್ಲಿಸಿ ಮಮ್ಮಿ ಗಂಟಲಿನಲ್ಲಿ ಕೆರೆತಿದೆ ಎಂದಳು.

ಫೋಟೋ ಕೃಪೆ : google

ನಾನು ತಿನ್ನುವುದನ್ನು ನಿಲ್ಲಿಸಿದೆ, ಏನು ಮಾಡುವುದೆಂದು ತಿಳಿಯದೆ ನೀರು ಕುಡಿದೆವು. ಆದರೂ ಗಂಟಲು ಕೆರೆತ ನಿಲ್ಲಲಿಲ್ಲ, ಮೈ ಮೇಲೆ ಎಲ್ಲಾದರೂ ಕೆರೆತ ಶುರುವಾದರೆ ಕೆರೆದುಕೊಳ್ಳಬಹುದು. ಆದರೆ ಗಂಟಲಲ್ಲಿ ನವೆ ಉಂಟಾದರೆ ಏನು ಮಾಡುವುದು. ನಾಲಿಗೆಯನ್ನು ಹೇಗೆ ಕೆರೆದುಕೊಳ್ಳುವುದು. ಪಲಾವ್ ನೋಡಿದರೆ ಅಷ್ಟು ಚಂದ ಇದೆ. ಹೊರಗೆ ಚೆಲ್ಲಲು ಮನಸ್ಸಾಗಲಿಲ್ಲ.ಅದೂ ಅಲ್ಲದೆ ನಾಲ್ಕೈದು ತುತ್ತಿಗೆ ಹೊಟ್ಟೆ ತುಂಬಲಿಲ್ಲ. ನಾವಾಗ ಸುವರ್ಣ ಗಡ್ಡೆಯ ತುಂಡುಗಳನ್ನು ಬೇರ್ಪಡಿಸಿ ಪಲಾವ್ ತಿಂದೆವು. ಮತ್ತೆ ಯಾರನ್ನೋ ಇದರ ಅಡಿಗೆ ಬಲ್ಲವರನ್ನು ಕೇಳಿದಾಗ ಹೋಳುಗಳನ್ನು ಮೊದಲು ನೀರಿನಲ್ಲಿ ಬೇಯಿಸಿ ನೀರು ಹೊರ ಚೆಲ್ಲಬೇಕು ಎಂದು ಹೇಳಿದರು. ನನಗೆ ಇದು ಗೊತ್ತಿರಲಿಲ್ಲ ಅಂದಿನಿಂದ ಇಂದಿನವರೆಗೂ ಸುವರ್ಣ ಗಡ್ಡೆಯನ್ನು ಮತ್ತೆ ಮನೆಗೆ ತರುವ ಸಾಹಸ ಮಾಡಿಲ್ಲ. ಮತ್ತೊಮ್ಮೆ ಗಂಟಲು ಕೆರೆತ ಅನುಭವಿಸಲು ಮನಸ್ಸೇಕೋ ಒಪ್ಪಲಿಲ್ಲ.ಇದರ ಸಹವಾಸವೇ ಬೇಡವೆಂದು ಸುಮ್ಮನಾಗಿದ್ದೇನೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ – ಲೇಖಕಿ , ಗೌರಿಬಿದನೂರು.

1 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW