‘ಕ್ಲಾಸ್ ಟೀಚರ್’ ಕೃತಿ ಪರಿಚಯ

ಲೇಖಕ ಕಲೀಮ್ ಉಲ್ಲಾರವರ ‘ಕ್ಲಾಸ್ ಟೀಚರ್’ ಕೃತಿಯಲ್ಲಿ ೫೦ ಲೇಖನಗಳಿವೆ. ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ತಮ್ಮದೇ ಮುಂದೆ ಓದಿ…

ಕೃತಿ  : ಕ್ಲಾಸ್ ಟೀಚರ್
ಲೇಖಕರು:ಕಲೀಮ್ ಉಲ್ಲಾ 
ಅಂಕಿತ ಪುಸ್ತಕ ಬೆಂಗಳೂರು
ಮುದ್ರಣದ ವರ್ಷ:೨೦೧೬& ೨೦೧೯.
ಪುಟಗಳು: ೨೮೦.
ಬೆಲೆ: ರೂ. ೨೫೦.

ಲೇಖಕ ಕಲೀಮ್ ಉಲ್ಲಾರವರು ಲಂಕೇಶ್ ಪತ್ರಿಕೆ, ಉದಯವಾಣಿ ಹಾಗೂ ಪ್ರಜಾವಾಣಿ, ಕೆಂಡಸಂಪಿಗೆ ಮುಂತಾದ ಪತ್ರಿಕೆಗಳಿಗೆ ಬರೆದ ಅಂಕಣ ಬರಹದ ಸಂಕಲನವಿದು. ಇಲ್ಲಿ ಒಟ್ಟೂ ೫೦ ಲೇಖನಗಳಿವೆ. ಅವುಗಳಲ್ಲಿ ಕೆಲವನ್ನು ನೋಡೋಣವೇ?…

* ಒಡಕು ಬಾಯಿಯ ಮಡಿಕೆಯಂತೆ ಸದಾ ವಟ ವಟ ಎನ್ನುವ ಪ್ರಿನ್ಸಿಪಾಲರ ಸ್ವಭಾವದಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಅಕ್ಷತಾ ಮೇಡಂ ಅವರ ಬೋಳು ತಲೆಯ ಗಂಡನನ್ನು ಅವರ ತಂದೆ ಎಂದು ಹೇಳಿ ಮುಜುಗರವನ್ನುಂಟು ಮಾಡಿದ್ದರು.ಮತ್ತೊಮ್ಮೆ ಪರಿಚಿತರೊಬ್ಬರು ತಮ್ಮ ಜೀನ್ಸ್ ಹಾಕಿದ್ದ ಹೆಂಡತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಬಂದಾಗ ನಿಮ್ಮ ಮಗಳಾ?..ಎಂದು ಕೇಳಿ ಅವರ ಮರ್ಯಾದೆ ಕಳೆದಿದ್ದರು.

* ವಿದ್ಯಾರ್ಥಿಗಳು ಮೇಷ್ಟ್ರುಗಳಿಗೆ ಹಿಂದಿನಿಂದ ಅಡ್ಡ ಹೆಸರಿಟ್ಟು ಕರೆಯುವುದು ಹೊಸದೇನಲ್ಲ. ಎಲೆ ಅಡಿಕೆ ಹಾಕಿ ಎಲ್ಲೆಂದರಲ್ಲಿ ಪಿಚಕ್ಕನೆ ಉಗಿಯುವ ಅವರಿಗೆ ‘ಬಕೀಟ್ ‘ , ಪಾಠ ಮಾಡುವಾಗ ಉಗುಳು ಎಸಿಯುವ ಒಬ್ಬರಿಗೆ ‘ಪಿಟಿ ಪಿಟಿ ಸೋನೆ ಮಳೆ,’ ಕೂದಲಿಲ್ಲದವರಿಗೆ ‘ಬಾಂಡ್ಲಿ ‘ ಎಂದೆಲ್ಲ ಕಿಚಾಯಿಸುವ ವಯಸ್ಸು ಮತ್ತು ಮನಸ್ಸು ಕಾಲೇಜು ಹಂತದಲ್ಲಿಯೇ ಜಾಸ್ತಿ ಎನ್ನುವ ಈ ಲೇಖನ ನಗೆಯುಕ್ಕಿಸುವಂತಿದೆ.

*ಹದಿಹರೆಯದ ಹೇಳಿದ ಮಾತುಕೇಳದ ಕಾಲೇಜು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದೆಂದರೆ ಪ್ರಾಣ ಸಂಕಟ ಎನ್ನುತ್ತಾ ಗೋವಾ ಪ್ರವಾಸ ಕಥನವೊಂದನ್ನು ಬಲು ಚೆಂದವಾಗಿ ಬಣ್ಣಿಸಿದ್ದಾರೆ.

*ಓದುವ ವಯಸ್ಸಿನಲ್ಲಿ, ಭಾವನೆಗಳ ನಿಯಂತ್ರಣ ಅರಿಯದ ಹುಡುಗರು ತಮ್ಮ ಅಪಕ್ವ ಪ್ರೀತಿ -ಪ್ರೇಮಗಳ ಚಲಾವಣೆ ಮಾಡಲು ಹೋಗಿ ಸೋತು,ಜೀವನವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ. ಈಗಿನ ಮಾಧ್ಯಮಗಳೂ ಕೂಡ ವಯಸ್ಸು ತುಂಬುವ ಮೊದಲೇ ಮನೆಬಿಟ್ಟು ಓಡಿಹೋಗುವ ಪ್ರೇಮ ಕಥನಗಳನ್ನು ಒಂದು ಮೌಲ್ಯ ಎಂಬಂತೇ ಬಿಂಬಿಸುತ್ತಿವೆ ಎನ್ನುತ್ತಾರೆ.

* ಎಂದೂ ಮುಗಿಯದ ನಗುವನ್ನು ಮೊಗದಲ್ಲಿ ಮೂಡಿಸಿಕೊಂಡ ಚುರುಕಿನ ಕಪ್ಪು ಹುಡುಗಿ ದೀಪಾ ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಳು. ಬಡತನದ ಹಿನ್ನಲೆಯ ಅವಳು ಹಗಲು ಉಪವಾಸವಿದ್ದು ಸಂಜೆ ಮಾತ್ರ ಊಟ ಮಾಡುತ್ತಾಳೆಂಬ ವಿಷಯ ತಿಳಿದಾಗ ಒಂದಿಷ್ಟು ಉಪನ್ಯಾಸಕರು ಸೇರಿ ಅವಳ ಓದಿಗೆ ಸಹಾಯ ಮಾಡಲೆಂದು ಮುಂದಾಗಿದ್ದರು. ಆದರೆ ತಾನು ದುಡಿದು ಓದುವೆ.ಎಲ್ಲಾದರೂ ಒಂದು ಪಾರ್ಟ್ ಟೈಮ್ ಕೆಲಸ ನೋಡಿ ಎಂದವಳ ಆತ್ಮವಿಶ್ವಾಸಕ್ಕೆ ಮೆಚ್ಚಿ ಹತ್ತಿರದ ಝೆರಾಕ್ಸ್ ಅಂಗಡಿಯವನಿಗೆ ಹೇಳಿ ಕೆಲಸ ನೋಡಿದ್ದರು.

ಆದರೆ ಎರಡು ದಿನದ ಹಿಂದೆ ದೀಪ ನೇಣು ಬಿಗಿದು ಸತ್ತಿದ್ದಳು ಎನ್ನುವ ಸುದ್ದಿ ಕೇಳಿ ಬಂದಿತ್ತು. ‘ದೀಪವೂ ನಿನ್ನದೆ…. ‘ಎಂಬ ಶೀರ್ಷಿಕೆಯ ಲೇಖನ ಮನ ಮಿಡಿಯುವಂತಿದೆ.

* ಜಗತ್ತು ನಿಂತಿರೋದೆ ದುಡ್ಡಿನ ಮೇಲೆ. ದುಡ್ಡಿದ್ರೆ ಮಾತ್ರ ಮಜವಾಗಿರಬಹುದು ಎನ್ನುತ್ತಿದ್ದ ಸ್ನೇಹಿತ ಜಗ್ಗಿ ಮಹೇಶ ಅರ್ಥಶಾಸ್ತ್ರದ ಉಪನ್ಯಾಸಕ.!ತನ್ನ ಜಿಪುಣತನದ ದೆಸೆಯಿಂದ ಎಲ್ಲರಿಗೂ ಹಾಸ್ಯದ ವಸ್ತುವಾಗಿದ್ದ.ಅಂತಹವನು ಮದುವೆಯಾಗಿದ್ದೂ ಶ್ರೀಮಂತರ ಮನೆಯ ಹುಡುಗಿಯನ್ನೇ. ಕೆಲವು ವರ್ಷಗಳ ನಂತರ ಆತ ನಿಮಾನ್ಸ್ ಆಸ್ಪತ್ರೆಯ ವಾರ್ಡಿನಲ್ಲಿದ್ದಾನೆಂದು ತಿಳಿದು ನೋಡಲೆಂದು ಇವರು ಹೋಗಿದ್ದರು.

ಮಹೇಶ ಬಿಳಚಿಕೊಂಡ ಮುಖದಲ್ಲಿ ಬೆಕ್ಕಿನಂತೆ ಅಡ್ಡಾದಿಡ್ಡಿಯಾಗಿ ಕಣ್ಣು ಬಿಡುತ್ತಾ, ಇದ್ದಕ್ಕಿದ್ದಂತೆ ಪುಸಕ್ಕನೆ ನಗುತ್ತಿದ್ದ.ಯಾರನ್ನೂ ಗುರ್ತಿಸದೆ ಏನೇನೋ ಹಲುಬುತ್ತಿದ್ದ. ಷೇರು ಮಾರುಕಟ್ಟೆ ಹಾಕಿದ್ದ ದುಡ್ಡು ಮುಳುಗಿ ಹೋಯಿತು. ಅವತ್ತಿನಿಂದ ಹಿಂಗಾಗಿದ್ದಾರೆ.ಎಂದು ಅವನ ಹೆಂಡತಿ ದುಃಖದ ಧ್ವನಿಯಲ್ಲಿ ಹೇಳಿದ್ದಳು. ಮರುಕದಿಂದ ಅವನತ್ತ ನೋಡಿದರೆ, ಆಟವಾಡುವ ಮಗುವಿನಂತೆ ಪೇಪರ್ ಚೂರುಮಾಡಿ ಎಣಿಸುತ್ತಾ ಇದು ನನ್ನ ದುಡ್ಡು ಯಾರಿಗೂ ಕೊಡೋಲ್ಲ ಎಂದು ಕೂಗಾಡುತ್ತಿದ್ದ.

‘ಜಿಪುಣ ಈ ಜಗತ್ತಿನ ಶ್ರೇಷ್ಠದಾನಿ ‘ಎಂದು ಬಲ್ಲವರು ಹೇಳುತ್ತಾರೆ. ಅದು ನಿಜವಿರಬಹುದು.ಮಹೇಶ ಜೀವಮಾನದಲ್ಲಿ ತಾನು ಗಳಿಸಿ ಜಿಗುಟುತನದಿಂದ ಜೋಪಾನ ಮಾಡಿದ ಎಲ್ಲವನ್ನೂ ಒಂದೇ ಸಲಕ್ಕೆ ಕಣ್ಣಿಗೆಕಾಣದ ಯಾರಿಗೋ ದಾನಮಾಡಿ ಕೂತಿದ್ದ. ರದ್ದಿ ಕಾಗದದಲ್ಲಿ ಕಳೆದುಕೊಂಡ ಗರಿ ಗರಿ ನೋಟುಗಳನ್ನು ಹುಡುಕುತ್ತಿದ್ದ.

ಹೀಗೆ ಇಲ್ಲಿನ ಹಲವು ಬರಹಗಳು ಕಾಲೇಜು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸ್ನೇಹಿತರ ನಡುವೆ ನಡೆದ ಎಷ್ಟೋ ಚಿಕ್ಕ ಪ್ರಸಂಗಗಳನ್ನು ತಮ್ಮ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಿ ಲೇಖಕರು ಬರೆದಿರುವ ರೀತಿ ಮನರಂಜನೆಯ ಜೊತೆ ಮನಮುಟ್ಟುವಂತಿದೆ.

ತನ್ನ ನೈಜತೆ ಹಾಗೂ ಹಾಸ್ಯ ಮಿಶ್ರಿತ ಗುಣದಿಂದ ಕುತೂಹಲದಿಂದ ಕೂಡಿದ ಇಲ್ಲಿನ ಎಲ್ಲಾ ಅನುಭವ ಕಥನಗಳು ಲಲಿತ ಪ್ರಬಂಧದ ಮಾದರಿಯಲ್ಲಿದ್ದು ಸರಾಗವಾಗಿ ಓದಿಸಿಕೊಳ್ಳುತ್ತವೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW