ಡಾ. ಪ್ರಕಾಶ ಬಾರ್ಕಿ ಅವರಿಗೆ ಕೋವಿಡ್ ಗೆ ಸಂಬಂಧಿಸಿದಂತೆ ಆಕೃತಿ ಕನ್ನಡ ಕೆಲವು ಪ್ರಶ್ನೆಗಳನ್ನು ಕೇಳಿತ್ತು. ಅದಕ್ಕೆ ಅವರು ಉತ್ತರಿಸಿದ್ದಾರೆ. ನಿಮ್ಮಲ್ಲೂ ಪ್ರಶ್ನೆಗಳಿದ್ದರೆ ಕೇಳಬಹುದು,ಅದಕ್ಕೆ ಉತ್ತರಿಸಲು ಡಾಕ್ಟರ್ ಸಿದ್ಧರಿದ್ದಾರೆ.
ಡಾ. ಪ್ರಕಾಶ ಬಾರ್ಕಿ ಅವರು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಎಷ್ಟೋ ವೈದ್ಯರು ಮಾನವೀಯತೆಯನ್ನು ಬಿಟ್ಟು ,ಹಣಕ್ಕಾಗಿಯೇ ನಿಂತಿರುವಾಗ, ಅಲ್ಲೊಬ್ಬರು ಇಲ್ಲೊಬ್ಬರು ಮಾತೃ ಹೃದಯಿ ವೈದ್ಯರುಗಳು ಹಗಲು ರಾತ್ರಿಯೆನ್ನದೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ವೈದ್ಯರಲ್ಲಿ ಪ್ರಕಾಶ ಬಾರ್ಕಿಯವರು ಕೂಡಾ ಒಬ್ಬರು. ತಮ್ಮ ಬಳಿ ಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಅವರು ಎತ್ತಿದ ಕೈ. ಇದಕ್ಕೆ ಉತ್ತಮ ಉದಾಹರಣೆ ಚಂದ್ರು ಎನ್ನುವ ರೋಗಿಯ ಕತೆ. ಈ ಹಿಂದೆ ಆಕೃತಿಕನ್ನಡದಲ್ಲಿ ಪ್ರಕಟವಾಗಿತ್ತು. ಅಷ್ಟೇ ಅಲ್ಲದೆ ಯಾವುದೇ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳನ್ನು ಅವರೊಂದಿಗೆ ಯಾವ ಸಮಯದಲ್ಲಾದರೂ ಮುಕ್ತವಾಗಿ ಚರ್ಚಿಸಬಹುದು. ಸದಾ ಹಸನ್ಮುಖಿಯಾಗಿರುವ ಡಾ. ಪ್ರಕಾಶ ಬಾರ್ಕಿ ಅವರು ಕೋವಿಡ್ ಗೆ ಸಂಬಂಧಿಸಿದಂತೆ ಆಕೃತಿ ಕನ್ನಡ ಕೇಳಿದ ಪ್ರಶ್ನೆಗಳಿಗೆ ಸಂತೋಷದಿಂದ ಉತ್ತರಿಸಿದ್ದಾರೆ.

ಡಾ. ಪ್ರಕಾಶ ಬಾರ್ಕಿ (ವೈದ್ಯರು ಮತ್ತು ಲೇಖಕರು,ಹಾವೇರಿ ಜಿಲ್ಲೆ, ಕಾಗಿನೆಲೆ)
- ಪ್ರಶ್ನೆ೧. ಮಳೆ ಆಗುತ್ತಿರುವ ಸಂದರ್ಭದಲ್ಲಿ ಗಂಟಲು ಹಿಡಿಯುವಿಕೆ, ನೆಗಡಿ ಆಗೋದು ಸಹಜ.. ಇದು ಕೋವಿಡ್ ಅಥವಾ ಸಾಮಾನ್ಯ ನೆಗಡಿ ಅಂತ ಹೇಗೆ ಗೊತ್ತಾಗುತ್ತೆ???
ಗಂಟಲು ನೋವು ಮತ್ತು ನೆಗಡಿ ಕರೋನಾ ಕಾಯಿಲೆಯ ಮುಖ್ಯ ಲಕ್ಷಣಗಳು ಹೌದಾದರೂ.. ಇದರ ಜೊತೆ ಜ್ವರ, ಮೈ ನೋವು, ಸುಸ್ತು ಇತರೆ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಒಂದೆರಡು ದಿನ ಮನೆಯವರಿಂದ ಅಂತರ ಕಾಯ್ದುಕೊಂಡು ಗಮನಿಸಿ. ಇನ್ನೂ ಲಕ್ಷಣಗಳು ಕಡಿಮೆ ಆಗದೆ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅದು ಕರೋನಾ ಆಗಿರಬಹುದು.
- ಪ್ರಶ್ನೆ ೨. ತರಕಾರಿ ಬಾಗ್ , ಹಾಲಿನ ಪ್ಯಾಕೆಟ್ ಅಥವಾ ತಿನ್ನೋ ವಸ್ತು ನಿಂದ covid ಹರಡುತ್ತಾ?
ತರಕಾರಿ ಬ್ಯಾಗ್, ಹಾಲಿನ ಪ್ಯಾಕೆಟ್ ಮುಂತಾದವುಗಳು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ ಕಾಯಿಲೆ ಹರಡಬಹುದು.
- ಪ್ರಶ್ನೆ ೩. ಜಲನೀತಿಯಿಂದ covid ತಡೆಯಬಹುದು ಎಂದು ಹೇಳಿದ್ದಿರಿ, ಜಲನೀತಿ ಬಾರದೆ ಇದ್ದವರು ಹೇಗೆ ಕಲಿಯಬೇಕು… ಕಲಿಯುವಾಗ ನೀರು ಮೂಗಿನ ಒಳಕ್ಕೆ ಹೋದರೆ ತೊಂದರೆ ಆಗುತ್ತಾ?
ಜಲನೇತಿಯಿಂದ ಕೋವಿಡ್ ತಡೆಯಲು ಮುನ್ನೇಚ್ಚರಿಕಾ ಕ್ರಮವಾಗಿ ಬಳಸಬಹುದು ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಯೋಗ ಟೀಚರ್ ಅಥವಾ ಆಯುಷ್ ವೈದ್ಯರ ಮುಖೇನ ಕಲಿಯಬಹುದು. ಈಗಿನ ಸಮಯದಲ್ಲಿ ಯುಟ್ಯೂಬ್ ನೋಡಿ ಸಹ ಕಲಿಯಬಹುದು. ಕಲಿಯುವಾಗ ನೀರು ಮೂಗಿನೊಳಗೆ ಹೋದರೆ ಕೆಮ್ಮು ಬರಬಹುದು. ಆದಷ್ಟೂ ಜಾಗ್ರತೆಯಿಂದ ಕಲಿಯಿರಿ.
- ಪ್ರಶ್ನೆ ೪. ಮನೆಲ್ಲೇ ಆರೈಕೆ ಮಾಡಿಕೊಳ್ಳಲು ಹೋಗಿ ತಡವಾಗಿ ಆಸ್ಪತ್ರೆ ಸೇರುತ್ತಿದ್ದಾರೆ ಇದರಿಂದ ಸಾವು ಹೆಚ್ಚಲು ಒಂದು ಕಾರಣವಾಗಿದೆ, ಇದರ ಬಗ್ಗೆ ನಿಮ್ಮ ಅನಿಸಿಕೆ.
ಈಗಿನ ಸಮಯದಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಸಂಪರ್ಕ ಅಗತ್ಯ. ಮೊದಲು ಐದು ದಿನ ಸಾಮಾನ್ಯ ಶೀತ, ಜ್ವರದಂತೆ ಕಂಡರೂ ಕೋವಿಡ್ ಲ್ಲಿ ನಂತರ ನಿಧಾನವಾಗಿ ವಿಪರೀತ ಸುಸ್ತು, ಏದುಸಿರು, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಉಸಿರುನಾಳ, ಪುಪ್ಪುಸದಲ್ಲಿ ಕಾಣಿಸಿಕೊಳ್ಳುವ ಊತ, ರಕ್ತಹೆಪ್ಪುಗಟ್ಟುವ ಸಮಸ್ಯೆ ತೀವ್ರವಾಗಿ ದೇಹದೊಳಗೆ ಆಕ್ಸಿಜನ್ ಪ್ರಮಾಣ ಕುಸಿಯತೊಡಗುತ್ತೆ. ಆದ್ದರಿಂದ ಮೊದಲು ಕಾಯಿಲೆ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.
- ಪ್ರಶ್ನೆ ೫. ಮನೆ ಎದುರಿನ ಮನೆಯಲ್ಲಿ covid ಬಂದ್ರೆ, ಅಕ್ಕಪಕ್ಕದವರಿಗೆ covid ಬರೋದು ಖಚಿತಾನಾ?
ಮನೆಯ ಎದುರಿನ ಮನೆಯಲ್ಲಿ ಕೋವಿಡ್ ಬಂದರೆ, ಅಕ್ಕಪಕ್ಕದವರಿಗೆ ಕೋವಿಡ್ ಕಾಯಿಲೆ ಹರಡಬಹುದು, ಅದೂ ಆ ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದಿದ್ದರೆ ಮಾತ್ರ. ಇಲ್ಲವಾದರೆ ಭಯ ಬೇಡ.
- ಶಾಲಿನಿ ಹೂಲಿ ಪ್ರದೀಪ್