ವೈದ್ಯಕೀಯ ಭಾಷೆಯಲ್ಲಿ “ಲಝಾರಸ್ ಸಿಂಡ್ರೋಮ್” ಅಥವಾ “ಲಾಜರಸ್ ಸಿಂಡ್ರೋಮ್” ಎಂದು ಕರೆಯುತ್ತಿದ್ದು ಇದೊಂದು ಅತ್ಯಂತ ಅಪರೂಪದ ವೈದ್ಯಕೀಯ ವಿದ್ಯಮಾನದಿಂದಾಗಿ ಕೆಲವೊಮ್ಮೆ ಸತ್ತ ಎಂದು ಘೋಷಿಸಿದ ವ್ಯಕ್ತಿಯು “ಎದ್ದೇಳಬಹುದು”. ಇದಕ್ಕೆ “ಅಟೋ ರಿಸಕ್ಷಿಟೇಷನ್” ಎಂದೂ ಸಹ ಕರೆಯುತ್ತಾರೆ. ಡಾ.ಎನ್.ಬಿ.ಶ್ರೀಧರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮೃತನೆಂದು ಆಸ್ಪತ್ರೆಯಿಂದ ಕರೆ ತರುವಾಗ ದಾರಿಯ ಮಧ್ಯೆ ಧಾಬಾದಲ್ಲಿ ಊಟಕ್ಕೆಂದು ಅಂಬುಲೆನ್ಸ್ ನಿಲ್ಲಿಸಿದಾಗ ಎದ್ದು ಕುಳಿತು ಹಸಿವಿನಿಂದ ಎದ್ದು ಕುಳಿತ ವ್ಯಕ್ತಿ ಹೀಗೆ ಹಲವಾರು ಸುದ್ಧಿಗಳನ್ನು ನಾವು ಗಮನಿಸುತ್ತಾ ಇರುತ್ತೇವೆ. ಹಾಗಿದ್ದರೆ ಇದು ಆಸ್ಪತ್ರೆಯವರ ತಪ್ಪೆ? ಅವರು ಸರಿಯಾಗಿ ಹೃದಯ ಮಿಡಿತ, ಮೆದುಳಿನ ನಿಷ್ಕ್ರಿಯತೆ, ನಿಶ್ಚಲ ಸ್ಥಿತಿ ಇತ್ಯಾದಿಗಳನ್ನು ಗಮನಿಸದೇ ಪ್ರಮಾಣ ಪತ್ರ ನೀಡಿ ಬಿಡುತ್ತಾರೆಯೇ ಎಂಬೆಲ್ಲಾ ಸಂಶಯಗಳು ಸಹಜ. ಜೀವವೆಂಬ ವಿಸ್ಮಯಕಾರಿ ಜಗತ್ತಿನಲ್ಲಿ ಕೋಟ್ಯಾಂತರ ಅಚ್ಚರಿಗಳಲ್ಲಿ ಇದೂ ಸಹ ಒಂದು ಸಹಜ ಪ್ರಕ್ರಿಯೆ ಎಂದರೆ ಆಶ್ಚರ್ಯ ಪಡುತ್ತೀರಿ !
ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ “ಲಝಾರಸ್ ಸಿಂಡ್ರೋಮ್” ಅಥವಾ “ಲಾಜರಸ್ ಸಿಂಡ್ರೋಮ್” ಎಂದು ಕರೆಯುತ್ತಿದ್ದು ಇದೊಂದು ಅತ್ಯಂತ ಅಪರೂಪದ ವೈದ್ಯಕೀಯ ವಿದ್ಯಮಾನದಿಂದಾಗಿ ಕೆಲವೊಮ್ಮೆ ಸತ್ತ ಎಂದು ಘೋಷಿಸಿದ ವ್ಯಕ್ತಿಯು “ಎದ್ದೇಳಬಹುದು”. ಇದಕ್ಕೆ “ಅಟೋ ರಿಸಕ್ಷಿಟೇಷನ್” ಎಂದೂ ಸಹ ಕರೆಯುತ್ತಾರೆ.
ಆದರೆ ನಮಗೆ ಇದು ಹೊಸ ವಿಷಯವೇ ಅಲ್ಲ. ನಮ್ಮ ಪುರಾಣಗಳಲ್ಲಿಯೂ ಸಹ ಈ ರೀತಿಯ ಅನೇಕ ಘಟನೆಗಳ ಕುರಿತು ಉಲ್ಲೇಖಿಸಲಾಗಿದೆ. ಸತ್ಯವಾನ್ ಸಾವಿತ್ರಿಯ ಕಥೆಯಲ್ಲಿ ಯಮನು ಪಾಶವನ್ನು ಹಾಕಿ ಹೀರಿದ ಸತ್ಯವಾನನ ಪ್ರಾಣಪಕ್ಷಿಯನ್ನು ಸಾವಿತ್ರಿ ಯಮನನ್ನೇ ಇಕ್ಕಟ್ಟಿಗೆ ಸಿಲುಕಿಸಿ ಗಂಡನ ಜೀವವನ್ನು ಮರಳಿ ಪಡೆದ ಕಥೆಯೂ ಸಹ ಇದರಲ್ಲಿ ಸೇರಿದೆ.
ನಚಿಕೇತ ಎಂಬ ಬಾಲಕ ಯಮನನ್ನು ಆರಾಧಿಸಿ ಇಹಲೋಕ ತ್ಯಜಿಸಿ ೪ ದಿನಗಳ ಕಾಲ ಯಮಲೋಕದಲ್ಲಿದ್ದು ನಂತರ ಪುನ: ಐಹಿಕ ಶರೀರವನ್ನು ಸೇರಿ ಪುನ: ಜೀವನ ಸಾಗಿಸಿದ. ಇದೇ ರೀತಿಯ ಅನೇಕ ಸನ್ನಿವೇಶಗಳು ಶ್ರೀ ರಾಘವೇಂದ್ರ ಸ್ವಾಮಿಗಳು, ಶ್ರೀ ಸಾಯಿಬಾಬಾ ಶ್ರೀ ಶಿರಡಿ ಸಾಯಿಬಾಬ ಇತ್ಯಾದಿ ಅನೇಕ ಪವಾಡ ಪುರುಷರುಗಳ ಕಥನದಲ್ಲಿಯೂ ಸಹ ಸತ್ತ ವ್ಯಕ್ತಿಗಳನ್ನು ಬದುಕಿಸಿದ ಬಗ್ಗೆ ಉಲ್ಲೇಖಿತವಾಗಿವೆ. ಮಹಾಭಾರತದಲ್ಲಿ ಯಕ್ಷ ಎಲ್ಲಾ ಪಾಂಡವರನ್ನು ಯಮಪುರಿಗೆ ಅಟ್ಟಿ ಧರ್ಮರಾಯ ಆತನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇತ್ತಾಗ ಎಲ್ಲರನ್ನು ಅನೇಕ ಘಂಟೆಗಳ ಕಾಲದ ನಂತರ ಬದುಕಿಸಿದ ಎಂಬ ಬಗ್ಗೆ ಉಲ್ಲೇಖಗಳಿವೆ. ಭಬ್ರುವಾಹನ ಆತನ ತಂದೆ ಅರ್ಜುನನ್ನು ಕೊಂದು ಆತನ ಶಿರಸ್ಸನ್ನು ಅಪಹರಿಸಿದಾಗ ೨-೩ ದಿನಗಳ ನಂತರ ಜೋಡಿಸಿ ಅದಕ್ಕೆ ಜೀವ ತುಂಬಿದ ಎಂಬ ಐತಿಹ್ಯಗಳಿವೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸತ್ತ ಎಂದು ಘೋಷಣೆಯಾಗುವುದು ಆತನ ಹೃದಯ ಮತ್ತು ಶ್ವಾಸಕೋಶ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ. ಹೃದಯದ ಕೆಲಸ ನಿಂತಿದೆ ಎನ್ನುವುದನ್ನು ಸ್ಟೆತೋಸ್ಚೋಪ್ ಮೂಲಕ ಮತ್ತು ಶ್ವಾಸ ನಿಂತಿದೆ ಎಂಬುದನ್ನು ಗಮನಿಸುವಿಕೆಯ ಮೂಲಕ ದೃಢೀಕರಿಸಿಕೊಂಡು ನಂತರ ಮರಣವನ್ನು ಖಚಿತಪಡಿಸಲಾಗುತ್ತದೆ. ಕೆಲವೊಮ್ಮೆ ಮಾತ್ರ ಇಸಿಜಿ ಮತ್ತು ಇತರ ವಿಧಾನಗಳ ಮೂಲಕ ದೃಢಪಡಿಸಿಕೊಳ್ಳಲಾಗುತ್ತದೆ.
ವೈದ್ಯಕೀಯವಾಗಿ ಮರಣವನ್ನು ನಿಂತ ನಾಡಿ ಮಿಡಿತ, ೨-೪ ನಿಮಿಷದ ವರೆಗೆ ಹೃದಯ ಬಡಿತವನ್ನು ಪರೀಕ್ಷಿಸಿದಾಗ ಅದರ ಬಡಿತದ ಶಬ್ಧ ಕೇಳದಿರುವುದು, ಉಸಿರಾಟ ನಿಲ್ಲುವುದು, ಕಣ್ಣಿನ ಪಾಪೆ ಅಗಲ ಗೊಳ್ಳುವುದು, ಕಣ್ಣಿನ ಮೇಲ್ಬಾಗವನ್ನು ಒತ್ತುವುದು, ಬೆರಳು ಅಥವಾ ಚರ್ಮವನ್ನು ಚಿವುಟಿದಾಗ ಮತ್ತು ಎದೆಯ ಭಾಗದ ಎಲುಬನ್ನು ಒತ್ತಿದಾಗ ನೋವಿನ ಲಕ್ಷಣ ತೋರದಿರುವುದು ಇತ್ಯಾದಿ ಲಕ್ಷಣಗಳನ್ನು ನೋಡಿ ಹೇಳುತ್ತಾರೆ.

ಕೆಲವೊಂದು ವೈದ್ಯಕೀಯ ಪರೀಕ್ಷೆಗಳು ವ್ಯಕ್ತಿಯ ಮರಣವನ್ನು ಖಚಿತವಾಗಿ ಹೇಳುತ್ತವೆ. ಅವುಗಳಲ್ಲಿ ಎಲೆಕ್ಟ್ರೋಕಾರ್ಡಿಯೋಗ್ರಾಮ್, ಎಲೆಕ್ಟ್ರೋಎನ್ಸೆಫಾಲೋಗ್ರಾಮ್, ಸೆರೆಬ್ರಲ್ ಆಂಜಿಯೋಗ್ರಫಿ, ಟ್ರಾನ್ಸ್ಕ್ರೇನಿಯಲ್ ಡಾಪ್ಲರ್ ಅಲ್ಟ್ರಾಸೌಂಡ್,ಆಂಜಿಯೋಗ್ರಫಿ ಇತ್ಯಾದಿ ವಿಧಾನಗಳೂ ಇವೆ. ಇವುಗಳ ನಿಖರತೆ ಜಾಸ್ತಿ. ಆದರೆ ದುಬಾರಿ.
” ಲಝಾರಸ್ ಸಿಂಡ್ರೋಮ್” ಇದಕ್ಕೆ ನಿಖರವಾದ ಕಾರಣಗಳು ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಒಂದು ಊಹೆಯೆಂದರೆ ಹೃದಯ ರಕ್ತನಾಳದ ಪುನರುಜ್ಜೀವನವು ಸತ್ತನೆಂದು ಘೋಷಣೆಯಾದವನ ಎದೆಯಲ್ಲಿ ಸಾಗಣೆ ಇತ್ಯಾದಿ ಕಾರಣಗಳಿಂದ ಒತ್ತಡ ಹೆಚ್ಚಿ ವಫೆಯ ಮೇಲೆ ಒತ್ತಡ ಬಿದ್ದಾಗ ಸಹ ಆಗಬಹುದು. ಒತ್ತಡದ ರಚನೆಯು ಅದರ ವಿಶ್ರಾಂತಿಯ ನಂತರ ಹೃದಯವನ್ನು ವಿಸ್ತರಿಸಲು ಮತ್ತು ಹೃದಯ ಬಡಿತವನ್ನು ಮರು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಇತರ ಅಂಶಗಳು ಹೈಪರ್ಕಲೇಮಿಯಾ (ಹೆಚ್ಚಿನ ಪೊಟ್ಯಾಸಿಯಮ್ ಮಟ್ಟಗಳು) ಅಥವಾ ಹೆಚ್ಚಿನ ಪ್ರಮಾಣದ ಅಡ್ರಿನಾಲಿನ್ ಅನ್ನು ಒಳಗೊಂಡಿರಬಹುದು.
“ಲಝಾರಸ್ ಅಥವಾ ಲಾಜರಸ್ ಸಿಂಡ್ರೋಮ್” ಎಂಬ ಶಬ್ಧ ಮೂಲತ: ಬೈಬಲ್ಲಿನಲ್ಲಿ ಉಲ್ಲೇಖಿತವಾಗಿದ್ದು ಏಸು ಕ್ರಿಸ್ತ ಸತ್ತು ಹೋದ ಈತನನ್ನು ೪ ದಿನಗಳ ನಂತರ ಸಾವಿನ ಹಾಸಿಗೆಯಿಂದ ಎಬ್ಬಿಸಿದ ಎಂಬುದರ ಮೇಲೆ ಬಂದಿದೆ ಎಂದು ಹೇಳಲಾಗಿದೆ. ಆದರೆ ಕೆಲವೊಮ್ಮೆ ಮೃತರೆಂದು ಘೋಷಿತ ವ್ಯಕ್ತಿಯ ಸಂಬಂಧಿಕರು ಅಥವಾ ನೆಂಟರು ಇದ್ದಕ್ಕಿದ್ದ ಹಾಗೆ ಅಳು, ಚೀರಾಟ ನಡೆಸಿದಲ್ಲಿ ವೈದ್ಯ ಸಿಬ್ಬಂದಿ ಗಾಬರಿಯಾಗಿ ತಪ್ಪು ನಿರ್ಣಯ ಕೊಡುವ ಸಾಧ್ಯತೆಯನ್ನೂ ಸಹ ತಳ್ಳಿ ಹಾಕಲಾಗದು.
ಅಪಸ್ಮಾರ ಮತ್ತು ಮೆದುಳಿನ ಲಕ್ವಾದಂತ ಕಾಯಿಲೆಯಿಂದ ಬಳಲುವ ವ್ಯಕ್ತಿಯ ಹೃದಯ ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಕಾರ್ಯ ನಿಲ್ಲಿಸಿ ವೈದ್ಯರನ್ನು ಗಲಿಬಿಲಿಗೊಳಿಸುತ್ತದೆ ನಂತರ ಅದು ಕೆಲಸವನ್ನು ಪುನರಾರಂಭಿಸಬಹುದು. ಎಲ್ಲೋ ಲಕ್ಷಕೊಮ್ಮೆ ಹೃದಯವು ಸ್ವಯಂಪ್ರೇರಿತವಾಗಿ ಪುನರಾರಂಭಗೊಳ್ಳುತ್ತದೆ. ಇದು ವ್ಯಕ್ತಿಯು ಸತ್ತನೆಂದು ಘೋಷಣೆಯಾದ ಬಳಿಕ ಪುನ: ಎದ್ದು ಕುಳಿತುಕೊಳ್ಳಲು ಕಾರಣವಾಗಬಹುದು. ಇದು ತೀರಾ ಅಸಾಧಾರಣವಾಗಿದೆ ಮತ್ತು ಆಗಾಗ್ಗೆ ಸ್ವಲ್ಪ ಸಮಯದವರೆಗೆ ಇರುತ್ತದೆ.
ಹೃದಯ ಮತ್ತು ಶ್ವಾಸಕೋಶ ಕೆಲಸ ನಿಲ್ಲಿಸಿದಾಗ ಸತ್ತ ವ್ಯಕ್ತಿಯನ್ನು ವಾಹನ ಇತ್ಯಾದಿಗಳಲ್ಲಿ ಸಾಗಿಸುವಾಗ ಅದರ ನಿರಂತರ ಕುಲುಕುವಿಕೆಯಿಂದ ಕೆಲವೊಮ್ಮೆ ಎದೆಯಲ್ಲಿ ಒತ್ತಡದ ಹೆಚ್ಚಳದಂತಹ ಅಂಶಗಳಿಂದಾಗಿ ರಕ್ತದ ಹರಿವು ಜಾಸ್ತಿಯಾಗಿ ಇದ್ದಕ್ಕಿದ್ದ ಹಾಗೆ ಹೃದಯ ಬಡಿದುಕೊಳ್ಳಲು ಪ್ರಾರಂಭಗೊಳ್ಳುತ್ತದೆ. ಕೆಲವೊಮ್ಮೆ ಪಾರ್ಶ್ವವಾಯುವಿನಂತ ಸಂದರ್ಭಗಳಲ್ಲಿ ವ್ಯಕ್ತಿಯ ಬಹುತೇಕ ಕ್ರಿಯೆ-ಪ್ರತಿಕ್ರಿಯೆಗಳು ನಿಂತು ಹೋಗಿ ಮರಣವು ತಪ್ಪು ದಾಖಲಾಗುವ ಲಕ್ಷಣಗಳಿವೆ. ಕೆಲವೊಂದು ಔಷಧಗಳು, ಅರಿವಳಿಕೆಗಳು, ಹೃದಯ ಬಡಿತವನ್ನು ತೀವ್ರವಾಗಿ ಕಡಿಮೆ ಮಾಡಿ ತಪ್ಪು ಸಾವಿನ ಗ್ರಹಿಕೆಯನ್ನುಂಟುಮಾಡಬಹುದು.

ಫೋಟೋ ಕೃಪೆ : google
ವ್ಯಕ್ತಿಯ ಚಲನವಲನಗಳು ಇದ್ದಕ್ಕಿದ್ದ ಹಾಗೆ ನಿಂತಾಗ ಆತನ ಸಂಬಂಧಿಕರೇ ಮರಣವನ್ನು ಘೋಷಿಸಿ ವೈದ್ಯರ ಮೇಲೆ ಒತ್ತಡವೇರ್ಪಡುವುದರಿಂದ ವೈದ್ಯಕೀಯ ವೃತ್ತಿಪರರು ಸಹ ಮರಣದ ಪ್ರಮುಖ ಚಿಹ್ನೆಗಳನ್ನು ಮೌಲ್ಯಮಾಪನ ಮಾಡುವಲ್ಲಿ ದೋಷಗಳನ್ನು ಮಾಡಬಹುದು.
ಅನೇಕ ಸಲ ಹಳ್ಳಿಗಳಲ್ಲಿ ವ್ಯಕ್ತಿಯ ಉಸಿರಾಟ ನಿಂತಾಗ ಆತ ಮರಣ ಹೊಂದಿದನೆಂದು ಬೋರಾಡಿ ಅತ್ತು ಆತನ ಶರೀರದ ಮೇಲೆ ಬಿದ್ದು ಹೊರಳಿದಾಗ ವಫೆಯ ಮೇಲೆ ಒತ್ತಡ ಬಿದ್ದು ನಿರ್ವಾತ ಸೃಷ್ಟಿಯಾಗಿ ಆತನ ಹೃದಯ ಬಡಿತ ಮತ್ತು ಶ್ವಾಸೋಚ್ಚಾಸ ಪ್ರಾರಂಭವಾದಾಗ ಇದೊಂದು ಪವಾಡವೆಂದು ತಿಳಿದಿರುವ ಅನೇಕ ಘಟನೆಗಳು ಪತ್ರಿಕೆಯಲ್ಲಿ ವರದಿಯಾದರೂ ಸಹ ಇದಕ್ಕೆ ಯಾವುದೇ ಸಬೂತು ಇರುವುದಿಲ್ಲ. ಕೆಲವೊಮ್ಮೆ ಸುದ್ಧಿ ಮಾದ್ಯಮಗಳೇ ರಂಜನೀಯ ವಿಷಯವೆಂದು ಇದನ್ನು ಸೃಷ್ಟಿಸಿವೆ ಎನ್ನಲಾಗಿದೆ.
ಆಸ್ಪತ್ರೆಗಳಲ್ಲಿ ಮರಣ ಹೊಂದಿದನೆಂದು ತಿಳಿಸಿದ ಘಟನೆಯಲ್ಲಿ ಆತ ಪುನ: ಎದ್ದು ಕುಳಿತ ಘಟನೆಗಳ ಪ್ರಮಾಣ ಶೇ:೧೪.೬೮ ಇದ್ದರೆ ಆಸ್ಪತ್ರೆಯನ್ನು ಹೊರತು ಪಡಿಸಿ ಇತರ ಮಟ್ಟದಲ್ಲಿ ಅಂದರೆ ಹಳ್ಳಿ ಅಥವಾ ಪಟ್ಟಣಗಳಲ್ಲಿ ಸ್ಥಳೀಯರು, ಸಂಬಂಧಿಕರು ಮರಣ ಹೊಂದಿದನೆಂದು ಘೋಷಣೆ ಮಾಡಿದವರು ಎದ್ದು ಕುಳಿತವರ ಸಂಖ್ಯೆ ಶೇ: ೬೫.೪೩ ಇರುತ್ತಿದ್ದು ಇದು ಬಹಳ ಸಲ ಸಾಯುವಿಕೆಯನ್ನು ತಪ್ಪಾಗಿ ಗೃಹಿಸಿದ ಘಟನೆ ಜಾಸ್ತಿ ಎನ್ನಲಾಗಿದೆ.
ಪ್ರಪಂಚದಲ್ಲಿ ಆಧುನಿಕ ವೈದ್ಯಕೀಯ ವಿಜ್ಞಾನದ ಅಸ್ತಿತ್ವ ಬಂದ ಮೇಲೆ ೧೯೦೧ ರಿಂದ ಈ ವರೆಗೆ ವರದಿಯಾದ ಆದ ವೈದ್ಯಕೀಯವಾಗಿ ಮನುಷ್ಯ ಸತ್ತ ಎಂದು ಘೋಷಿಸಿದವರು ಎದ್ದು ಕುಳಿತವರ ಸಂಖ್ಯೆ ಕೇವಲ ೩೮. ಉಳಿದಂತೆ ದಿನ ಬೆಳಗಾದರೆ ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ಧಿಗಳು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಯಾರೂ ದೃಢೀಕರಿಸಿಲ್ಲ. ಸತ್ಯಾನ್ವಷಣೆಗೆ ಹೊರಟಾಗ ಕೆಲವೊಮ್ಮೆ ಇವು ಪಕ್ಕಾ ಕಟ್ಟು ಕಥೆಗಳು ಎಂದು ಸಂಶೋಧಕರು ತಿಳಿಸಿದ್ದಾರೆ.
ಕಾರಣ ಮರಣವೆಂದು ಘೋಷಿಸುವ ಸಂದರ್ಭದಲ್ಲಿ ವೈದ್ಯರಿಗೆ ಅರ್ಧ ಗಂಟೆಯಷ್ಟಾದರೂ ಸಮಯವನ್ನು ನೀಡಿ ವಿವಿಧ ಅವಶ್ಯಕ ಪರೀಕ್ಷೆಗಳ ಮೂಲಕ ನಿಖರ ಮರಣ ಘೋಷಣೆ ಮಾಡಲು ಅನುವು ಮಾಡಿಕೊಡಬೇಕು. ಸ್ವಯಂ ಮರಣ ಘೋಷಣೆ ಮಾಡುವುದಕ್ಕಿಂತ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲು ಅನುವು ಮಾಡಿಕೊಟ್ಟರೆ ಈ ರೀತಿಯ ಅವಘಡಗಳು ತಪ್ಪುತ್ತವೆ.
- ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
