ಲೇಖಕರಾದ ದೀಕ್ಷಿತ್ ನಾಯರ್ ಅವರ ‘ಅವರಿಲ್ಲದೇ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿಯಲ್ಲಿ 36 ಕನ್ನಡ ಲೇಖನಗಳ ಸಂಗ್ರಹವಿದೆ. ಈ ಕೃತಿಯ ಕುರಿತು ಖ್ಯಾತ ಬರಹಗಾರರಾದ ಕೆ. ರಾಜಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅವರಿಲ್ಲದೇ ಬದುಕಿನಲ್ಲಿ ಗೆಲ್ಲಬಲ್ಲಿರಾ?
ಲೇಖಕರು : ದೀಕ್ಷಿತ್ ನಾಯರ್
ಪ್ರಕಾರ : ಹಾಯ್ ಬೆಂಗಳೂರು ಪತ್ರಿಕೆಯ ಅಂಕಣ ಬರಹಗಳು
ಪ್ರಕಾಶನ : ಕನಸುಗಳ ಇನ್ಫಿನಿಟಿ
ಖರೀದಿಗಾಗಿ : 7406854007
ಇದು ಪುಸ್ತಕವೊಂದರ ಅಪೂರ್ವ ಯಶೋಗಾಥೆ. ಬಿಡುಗಡೆಯಾದ ಈ 17 ದಿನಗಳಲ್ಲಿ ಅದು ಬೀರಿರುವ ಪರಿಣಾಮ ಅನೂಹ್ಯ. ಓದುಗರು ಇದನ್ನು ವರ್ಗಭೇದ ಮತ್ತು ವಯೋಭೇದ ಇಲ್ಲದೆ ಕೊಂಡು ಓದುತ್ತಿದಾರೆ. ಕಣ್ಣಿಲ್ಲದವರು ಸಹ ಓದಿಸಿಕೊಂಡು ಕೇಳುತ್ತಿದ್ದಾರೆ. ಮಾತು ಬರದೇ ಇರುವವರೂ ಓದಿ ಅಕ್ಷರ ನಿವಾಳಿ ಅರ್ಪಿಸಿದ್ದಾರೆ. ಇದು ಆಲಂಕಾರಿಕ ಅಥವಾ ಉತ್ಪ್ರೇಕ್ಷಿತ ಮಾತುಗಳಲ್ಲ. ಅಕ್ಷರಶಃ ದಿಟದ ನುಡಿಗಳು. ‘ಅವರಿಲ್ಲದೇ ನೀವು ಗೆಲ್ಲಬಲ್ಲಿರಾ?’. ಹೊತ್ತಗೆ ಹೊಸ ಬಗೆಯ ಗುಂಗನ್ನು ಮೂಡಿಸಿದೆ.

ಇದು ಮಲಯಾಳಿ ಮನೆಭಾಷೆಯ, 23ರ ತರುಣ ದೀಕ್ಷಿತ್ ನಾಯರ್ ಅವರ 36 ಕನ್ನಡ ಲೇಖನಗಳ ಸಂಗ್ರಹ. ಇದು ಸುಮಾರು 200 ಪುಟಗಳ ಚೆಂದದ ಕೃತಿ. ಮತ್ತೆ ಆರಂಭಗೊಂಡಿರುವ ‘ಹಾಯ್ ಬೆಂಗಳೂರು’ ಪತ್ರಿಕೆಯ ‘ವಾರೆನೋಟ’ ಅಂಕಣದಲ್ಲಿನ ಬರೆಹಗಳಿವು. ಇಲ್ಲಿ ಸಾಧಕರಿದ್ದಾರೆ. ಸೇವೆಯನ್ನು ಸಾಧನೆಯ ಎತ್ತರಕ್ಕೆ ಏರಿಸಿದವರೂ ಇದ್ದಾರೆ. ಸಾಧನೆ ಮತ್ತು ಸೇವೆ ಎರಡನ್ನೂ ಸಮನ್ವಯಗೊಳಿಸಿ ಒಟ್ಟಿಗೆ ಕರೆದೊಯ್ದವರೂ ಇದ್ದಾರೆ. ನೀವೊಮ್ಮೆ ಓದಿದರೆ ಧನ್ಯತಾಭಾವ ಆವರಿಸುತ್ತದೆ. ಬದುಕು ಒಡ್ಡುವ ಸವಾಲುಗಳನ್ನು ಎದುರಿಸಿ ಸಾಧಿಸಬೇಕು ಎಂಬ ಚಲ ಮೂಡುತ್ತದೆ. ಮನಸ್ಸು ನಿರಾಶೆಯಿಂದ ಆಶಾವಾದಕ್ಕೆ ಮರಳು ತ್ತದೆ. ಜಡಗೊಂಡ ಮನದಲ್ಲಿ ಚೈತನ್ಯ ಪುಟಿದೇಳುತ್ತದೆ. ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಸಮಾಜವೇ ಋಣಿಯಾಗಿರುವಷ್ಟು ಸೇವೆ ಮಾಡಿರುವ ಇಲ್ಲಿನವರು ಓದುಗರನ್ನು ಪ್ರೇರೇಪಿಸುತ್ತಾರೆ. ಹಿಂಡು ಹಿಂಡು ಆಸೆಗಳ ಹಿಂದೆ ಓಡುವ ಮಂದಿ ಕ್ಷಣ ನಿಂತು ಯೋಚಿಸಿ ತಮ್ಮ ಪಥ ಬದಲಿಸುತ್ತಾರೆಂಬ ಭರವಸೆಯಿದೆ. ಅಷ್ಟರಮಟ್ಟಿಗೆ ಗಾಢ ಪರಿಣಾಮ ಬೀರುವ ಕೃತಿಯಿದು.

ಈ ಕೃತಿಯ ಲೇಖಕ ಮಂಡ್ಯದ ದೀಕ್ಷಿತ್ ನಾಯರ್. ಅವರ facebook followersಗಳ ಸಂಖ್ಯೆ 5300 ಇತ್ತು. ಈ ಕೃತಿ ಬಿಡುಗಡೆಯಾದ ಅನಂತರದ 17 ದಿನಗಳಲ್ಲಿ ಈ ಸಂಖ್ಯೆ 5800ಕ್ಕೆ ಏರಿದೆ! ಪುಸ್ತಕವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವರು ಪ್ರಚಾರ ಮಾಡಿ ಹೊಸ ಓದುಗರನ್ನು ಸೃಷ್ಟಿಸುತ್ತಿದ್ದಾರೆ. ಇದು ಬೆಂಗಳೂರಿನಲ್ಲಿ ಬಿಡುಗಡೆ ಕಂಡಾಗಿದೆ. ಸದ್ಯದಲ್ಲೇ ಹುಬ್ಬಳ್ಳಿ ಮತ್ತು ಮಂಡ್ಯಗಳಲ್ಲೂ ವೇದಿಕೆ ಏರಲಿದೆ. ಸಕಾರಾತ್ಮಕ ಚಿಂತನೆಗಳ ಈ ಕೃತಿ ಮನಸ್ಸನ್ನು ಸ್ವಸ್ಥ ವಾಗಿಸುತ್ತದೆ. ಮಲಿನಗೊಂಡ ಮನಗಳನ್ನು ನಿರ್ಮಲವಾಗಿಸುತ್ತದೆ.
ಇದು ಸಾರ್ಥಕ ಓದು. ಸ್ವಾರ್ಥಕ ಓದಲ್ಲ. ಈ ಕೃತಿಯ ಓದು ಪುಳಕ ನೀಡುತ್ತದೆ. ಧನ್ಯತೆಯ ಭಾವವನ್ನು ಉಳಿಸುತ್ತದೆ. ಬದುಕನ್ನು ಸಮಾಜಕ್ಕೆ ನೆರವಾಗುವಂತೆ ಉಪಯುಕ್ತವಾಗಿ ಕಳೆಯಲು ಓದುಗರನ್ನು ಪ್ರೇರೇಪಿಸುತ್ತದೆ.
ಇದನ್ನು ನೀವೂ ಏಕೆ ಕೊಂಡು ಓದಬಾರದು? ಇದರಲ್ಲಿ ನನ್ನ ಸಾಧನೆ ಮತ್ತು ನುಡಿಚಾರಿಕೆಯನ್ನು ಕುರಿತು ಒಂದು ಲೇಖನವಿದೆ. ಅದರ ಕೊಂಡಿಯನ್ನು ಕೆಳಗೆ ನೀಡಿರುವೆ. ಆಸಕ್ತರು ಓದಿ ಪ್ರತಿಕ್ರಿಯಿಸಬಹುದು:
https://www.facebook.com/share/p/19xVSFtWzH/
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು
