ಕೆಲವು ಬಲಾಢ್ಯರು (ಹಣವುಳ್ಳವರು) ಕಾನೂನುಗಳಿಗೆ ಹೆದರುವುದಿಲ್ಲ. ಕಾನೂನು ಅವರ ಪಾಲಿಗೆ ಬೆದರು ಗೊಂಬೆಯಾಗಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಹೀಗಿದ್ದಾಗ ಕಾನೂನಿನ ಮುಂದೆ ಎಲ್ಲರೂ ಸಮಾನರಾಗಬೇಕು. ಲೇಖಕ ಶಿವಕುಮಾರ್ ಅವರು ತಮ್ಮ ವಿಚಾರವನ್ನು ಈ ಒಂದು ಲೇಖನದ ಮೂಲಕ ವಿನಿಮಯ ಮಾಡಿಕೊಂಡಿದ್ದಾರೆ. ಮುಂದೆ ಓದಿ…
ಕಾನೂನು – ಇದಕ್ಕೆ ನಿಯಮ ಎಂಬುದು ಸಮಾನಾರ್ಥಕ ಪದ. ಸಮಾಜದಲ್ಲಿ ಶಿಸ್ತು, ನ್ಯಾಯ, ಸಮಾನತೆ, ಸುವ್ಯವಸ್ಥೆ, ಶಾಂತಿ, ನೆಮ್ಮದಿ ಮುಂತಾದವುಗಳನ್ನು ‘ಕಾನೂನು’ ನಿರ್ವಹಿಸುತ್ತದೆ. ಏಳು ದಶಕಗಳ ಹಿಂದೆ ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದರು. ಅವರು ತಮಗೆ ಅನುಕೂಲಕರವಾದ ಕಾನೂನುಗಳನ್ನು ಜಾರಿಗೆ ತಂದಿದ್ದರು.
ಮುಂದೆ ಭಾರತ ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ಮಾದರಿ ರಾಷ್ಟ್ರವಾದ ಬಳಿಕ, ಸಮಗ್ರ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನವೆಂದರೆ, ಅದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾನೂನುಗಳ ಬೃಹತ್ ಗ್ರಂಥ. ೧೨ ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗುವುದು ಎಂದು ಇತ್ತೀಚೆಗೆ ಕಾನೂನು ಬಂದಿದೆ. ಕಾಲ ಕಾಲಕ್ಕೆ ಕಾನೂನಿಗಳಿಗೆ ತಿದ್ದುಪಡಿ ಆಗುವುದುಂಟು.
ಪ್ರಜೆಗಳ ಸಮಗ್ರ ಹಿತಾಸಕ್ತಿಗಳನ್ನು ಕಾಪಾಡಲು, ಕಾನೂನುಗಳನ್ನು ರೂಪಿಸಲಾಗಿದೆ. ಯಾವುದೇ ವ್ಯಕ್ತಿಗಿಂತ ಕಾನೂನು ಶ್ರೇಷ್ಠವಾದುದು ಎಂದು ನಮ್ಮ ಸಂವಿಧಾನ ಸಾರುತ್ತಿದೆ. ಕಾನೂನುಗಳನ್ನು ಎಲ್ಲರೂ ಪಾಲಿಸಬೇಕು ಹಾಗೂ ಗೌರವಿಸಬೇಕು. ನಿಜ. ಆದರೆ, ಕೆಲವು ಬಲಾಢ್ಯರು (ಹಣವುಳ್ಳವರು) ಕಾನೂನುಗಳಿಗೆ ಹೆದರುವುದಿಲ್ಲ. ಕಾನೂನು ಅವರ ಪಾಲಿಗೆ ಬೆದರು ಗೊಂಬೆ. ಕಾನೂನುಗಳನ್ನು ಅಪರಾಧಿಗಳನ್ನು ದಂಡಿಸಲು ತಯಾರಿಸಿದ ಮೀನಿನ ಬಲೆಗೆ ಹೋಲಿಸಬಹುದು.
ಫೋಟೋ ಕೃಪೆ : India TV
ಅಪರಾಧಿಗಳನ್ನು ಹಿಡಿಯಲು ಬಲೆ ಬೀಸಿದಾಗ, ದುರ್ಬಲವಾದ ಮೀನುಗಳು ಸಿಕ್ಕಿಹಾಕಿಕೊಳ್ಳುತ್ತವೆ. ತಿಮಿಂಗಿಲಗಳಂತಹ ಬಲಿಷ್ಠ ಜೀವಿಗಳು ಬಲೆ ಹರಿದು ಪಾರಾಗಿ ಹೋಗುತ್ತವೆ. ಕಾನೂನುಗಳು ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ದುರ್ಬಲರನ್ನು ಹೆದರಿಸುತ್ತವೆ. ಶಿಕ್ಷಿಸುತ್ತವೆ. ಆದರೆ ಬಲಾಢ್ಯರನ್ನು ರಕ್ಷಿಸುತ್ತವೆ. ಕಾನೂನುಗಳು ಬಡವರಿಗೆ ಮಣ್ಣು ತಿನ್ನಿಸುತ್ತವೆ. ಬಲಿಷ್ಠರಿಗೆ ಸಕ್ಕರೆ ತುಪ್ಪ ತಿನ್ನಿಸುತ್ತವೆ. ಕಾನೂನು ಸಾಹುಕಾರನ ಕಾಲು ಒತ್ತುತ್ತವೆ. ಬಡವರನ್ನು, ನಿರ್ಗತಿಕರನ್ನು ಕಾಲಲ್ಲಿ ತುಳಿಯುತ್ತವೆ. ನಮ್ಮದು ಮಹಾನ್ ಪ್ರಜಾಪ್ರಭುತ್ವ ಮಾದರಿ ದೇಶವೆಂದು ಬಡಾಯಿ ಕೊಚ್ಚಿಕೊಳ್ಳುತ್ತೇವೆ. ಆದರೆ ಕಾನೂನುಗಳು ಉಳ್ಳವರಿಗೆ ವರವಾಗಿ, ಬಡವರಿಗೆ ಶಾಪವಾಗಿ ಪರಿಣಮಿಸಿವೆ. ಕಾನೂನು ಪಾಲನೆಯಲ್ಲಿ ಸಂಪೂರ್ಣ ಸಮಾನತೆ ಇನ್ನೂ ಬಂದಿಲ್ಲ.
ಒಬ್ಬ ಸರ್ಕಾರಿ ಉದ್ಯೋಗಿ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದರೆ, ಅವನನ್ನು ಸೇವೆಯಿಂದ ತೆಗೆದು ಶಿಕ್ಷೆ ನೀಡಲಾಗುತ್ತದೆ. ಆದರೆ ಬಹು ಕೋಟಿ ಹಣ ಲಂಚವಾಗಿ ಪಡೆದ ಹಾಗೂ ಭೂಹಗರಣಗಳಂತಹ ಅಪರಾಧಗಳಲ್ಲಿ ಜೈಲಿಗೆ ಹೋಗಿ ಬಂದ ರಾಜಕಾರಣಿಗಳನ್ನು ಮತ್ತೆ ಮಂತ್ರಿ ಮಾಡುವ ಕಾನೂನುಗಳಿವೆಯಲ್ಲಾ? ಇದಕ್ಕೆ ಏನು ಹೇಳುವುದು?. ರಾಜಕಾರಣಿಗಳು ದೊಡ್ಡ ಪ್ರಮಾಣದ ಅಪರಾಧಗಳನ್ನು ಮಾಡಿದರೂ, ಅವರಿಗೆ ಶಿಕ್ಷೆಯಾಗುವುದಿಲ್ಲ. ವಿಚಾರಣೆ ಎಂಬುದು ಬರೀ ನಾಟಕೀಯ ಪ್ರಹಸನವಾಗಿ ನಡೆಯುತ್ತದೆ.
ಭಾರತದಲ್ಲಿ ವಿವಿಧ ಜಾತಿ, ಧರ್ಮಗಳಿವೆ. ಎಲ್ಲ ಧರ್ಮೀಯರಿಗೂ ಏಕ ರೂಪ ಕಾನೂನುಗಳು ಕಡ್ಡಾಯವಾಗಿ ಕಾರ್ಯರೂಪದಲ್ಲಿ ಬರಬೇಕು. ಭಾರತದಲ್ಲಿರುವ ಎಲ್ಲಾ ಧರ್ಮೀಯರಿಗೂ, ಭಾರತ ಸಂವಿಧಾನದಲ್ಲಿರುವ ಎಲ್ಲಾ ಕಾನೂನುಗಳು ಕಟ್ಟುನಿಟ್ಟಾಗಿ ಅನ್ವಯವಾಗಬೇಕು. ಅಂದಾಗ ಮಾತ್ರ ‘ಪ್ರಜಾಪ್ರಭುತ್ವ’ ಎಂಬ ಪದಕ್ಕೆ ಬೆಲೆ ಬಂದಂತಾಗುತ್ತದೆ.
- ಶಿವಕುಮಾರ್ ಬಾಣಾವರ್