ಸೀತೆ ಸಹನಾಮಯಿ. ಕಷ್ಟಸಹಿಷ್ಣು ಎಂಬೆಲ್ಲ ಮಾತಿಗೆ ಪೂರಕವಾಗಿ, ಅನ್ಯಾಯದ ವಿರುದ್ಧ ದನಿಯೆತ್ತುವ ಮೂಲಕ ತನ್ನತನವನ್ನು ಉಳಿಸಿಕೊಳ್ಳುವತ್ತ ಗಟ್ಟಿಯಾದ ಹೆಜ್ಜೆಗಳನ್ನು ಇಡುತ್ತಿದ್ದಾಳೆ. ಮೀನಾಕ್ಷಿ ಮನೋಹರ ಅವರ ಬರೆದ ಸೀತಾದೇವಿಯ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ..
ಆಗ ಮೂಡಿದ ಅಭಿಪ್ರಾಯಗಳು ಇಂದಿಗೂ ನಿಜ. ಅಲ್ಪಸ್ವಲ್ಪ ಬದಲಾವಣೆಗಳಿರಬಹುದೇನೋ. ರಾಮಪ್ರತಿಷ್ಠಾಪನೆಯ ಮಹೋತ್ಸವದ ಶುಭ ಸಂದರ್ಭದಲ್ಲಿ , ಅವಳ ತವರು ಮನೆಯಾದ ನೇಪಾಳದ ಮಿಥಿಲಾನಗರಿಯಿಂದ ಬರುತ್ತಿರುವ ಜನರನ್ನು ಕಂಡರೆ, ತಾಯಿಯ ಮನೆಯವರು ಮಗಳ ಜೀವನದ ಬಗ್ಗೆ ಯುಗ ಯುಗಗಳೇ ಕಳೆದರೂ, ತೋರುವ ಕಕ್ಕುಲಾತಿಯು ಅಸದೃಶ.
ತವರಿನ ಬೆಂಬಲ ಇದ್ದಾಗಲೂ, ಸತೀ ಧರ್ಮವನ್ನು ಪಾಲಿಸಿ, ರಾಮನ ನೆರಳಿನಂತೆ ಹೋದವಳು. ಕುಟುಂಬ, ಗೌರವ ಮರ್ಯಾದೆಗಳಿಗೆ ಬೆಲೆ ಕೊಟ್ಟವಳು. ಎಲ್ಲಿಯೂ, ಅಪ್ಪಿ ತಪ್ಪಿಯೂ ಅತ್ತೆಯರ ಮೇಲೆ ಅಸಮಾಧಾನ ತೋರಿದವಳಲ್ಲ. ತನ್ನದಲ್ಲದ , ತನಗಲ್ಲದ ಮಾತುಗಳನ್ನು ಆಡಿದವಳಲ್ಲ.
Financially sound ಅಂದರೆ ಸುಭದ್ರ ಹಣಕಾಸಿನ ಸ್ಥಿತಿಯಿದ್ದರೂ ಕೂಡ, ಆಗಿದ್ದಾಗಲೂ ಅಹಂ ತೋರಿದವಳಲ್ಲ. ಸಮಯಕ್ಕನುಸಾರವಾಗಿ ಬಾಳಿಗೆ ಹೊಂದಿಕೊಂಡಳು. ಬಾಳುವೆ ಸಾಗಿಸಿದವಳು. ಆಕೆ ಒಳ್ಳೆಯವಳಾಗಿದ್ದಳು ಎಂಬುದಕ್ಕೆ ತವರಿನ ಬೆಂಬಲವು ಯುಗಯುಗಗಳ ನಂತರವೂ ಇರುವುದೇ ಸಾಕ್ಷಿ ಈಗ ಅಂದು ಬರೆದ ಬರಹವು ನಿಮ್ಮ ಮುಂದೆ.
ಬಾಲ್ಯದಲ್ಲಿ ಸೀತೆ ಏನು ಮಾಡಿದಳೋ ಬಿಟ್ಟಳೋ ಅಥವಾ ಮಾಡಲೇ ಇಲ್ಲವೊ ತಿಳಿಯದು. ರಾಜಕುವರಿ. ಅದಕ್ಕೆ ಬೇಕಾದ ವಾತಾವರಣ ಪೂರಕ ವಾಗಿರಬಹುದೇನೋ.
ಅವಳ ನಿಜವಾದ ವ್ಯಕ್ತಿತ್ವ ತೆರೆದು ಕೊಳ್ಳಲು ಆರಂಭಿಸುವುದು ರಾಮನ ವನವಾಸದ ಅವಧಿಯಲ್ಲೇ.
ಕೈಕೇಯಿಯ ಆಜ್ಞೆಯಂತೆ , ಪಿತೃವಾಕ್ಯ ಪರಿಪಾಲನೆಗಾಗಿ ರಾಮ ಕಾಡಿಗೆ ಹೋಗಲು ಅಣಿಯಾಗುತ್ತಾನೆ. ಆಗ ಎರಡನೆಯ ಯೋಚನೆ ಮಾಡದೆ ಸೀತಾ ಅವನೊಡನೆ ವನವಾಸಕ್ಕೆ ಹೊರಟು ನಿಲ್ಲುತ್ತಾಳೆ. ಕಾರಣ ಪತಿವ್ರತಾ ಸ್ತ್ರೀಯ ಧರ್ಮ ಅದು ಎಂದು.ಧರ್ಮೇಚ ಅರ್ಥೇಚ ಕಾಮೇಚ ಬರೀ ಗಂಡಿಗೆ ಮಾತ್ರವಲ್ಲ ಹೆಣ್ಣಿಗೂ ಅನ್ವಯ ಎಂದು ಪಾಲಿಸಿ ತೋರಿಸುತ್ತಾಳೆ.
ಅರಮನೆಯ ಪೋಷಾಕು ಬಿಟ್ಟು, ನಾರು ಮಡಿಯನುಟ್ಟು ಬರಿಗಾಲಿನಲ್ಲಿ ರಾಮನ ಹಿಂಬಾಲಿಸುತ್ತಾಳೆ. ವನವಾಸದ ಜೀವನಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವ , ಹಿಂದಿನ ಭೋಗಜೀವನವನ್ನು ನೆನೆಸದೇ ಇರುವುದು, ವರ್ತಮಾನದಲ್ಲಿ ಜೀವಿಸುವುದು ಈ ಗುಣಗಳೆಲ್ಲ ಇಂದಿಗೂ ಮಾನ್ಯ ಅತಿಯಾಸೆ ಪಡದಿರುವುದು, ಇದ್ದುದರಲ್ಲೇ ತೃಪ್ತಿ ಪಡುವುದು ಸಂತೃಪ್ತ ಜೀವನದ ಮಾರ್ಗಸೂಚಿಗಳು.

ಫೋಟೋ ಕೃಪೆ :google
ಆದರೆ ಅದಾವ ಗಳಿಗೆಯಲ್ಲಿ ಬಂಗಾರದ ಜಿಂಕೆಯನ್ನು ನೋಡಿದಳೋ ಏನೋ, ಅವಳ ಮನಸಿನಲ್ಲಿ ಅದನ್ನು ಪಡೆಯುವ ಆಸೆ ಮೊಳಕೆಯೊಡದಿತ್ತು. ಆಸೆಯೆ ದು ಖಕ್ಕೆ ಮೂಲವಾಯ್ತು.
ಹೆಂಡತಿಯ ಈ ಸಣ್ಣ ಆಸೆಯನ್ನು ಈಡೇರಿಸಲು ರಾಮ ಜಿಂಕೆಯ ಬೆನ್ನಟ್ಟಿ ಹೋದ. ಮಾಯಾಮೃಗ ರಾಮನ ಬಾಣದ ಏಟಿಗೆ ರಾಮನ ದನಿಯಂತೆ ಕೂಗುತ್ತಾ ಅಸುನೀಗಿತು.
ಸೀತೆಯ ಮನದಲ್ಲಿ ರಾಮನ ಕ್ಷೇಮದ ಬಗ್ಗೆ ಅನುಮಾನ. ಲಕ್ಷ್ಮಣನಿಗೆ ರಾಮನನ್ನು ನೋಡಲು ಬಲವಂತ ಮಾಡಿ ಕಳಿಸುತ್ತಾಳೆ ಒಲ್ಲದ ಮನಸಿನಿಂದ ಲಕ್ಷ್ಮಣ ಏಳುರೇಖೆಗಳ ಸೀಮಾರೇಖೆಯನ್ನು ಎಳೆದು ಯಾವುದೇ ಕಾರಣಕ್ಕೂ ಈ ಗೆರೆಗಳನ್ನು ದಾಟಿ ಬರಬಾರದೆಂದು ಸೀತೆಗೆ ಬಿನ್ನವಿಸಿ , ರಾಮನ ನೋಡಲು ಹೊರಡುತ್ತಾನೆ.
ಆಗ ಸೀತೆ ಒಬ್ಬಳೇ ಇರುವುದನ್ನು ಗಮನಿಸಿದ ರಾವಣ ವೇಷ ಬದಲಿಸಿ ಸನ್ಯಾಸಿಯಾಗಿ ಬರುತ್ತಾನೆ. ಇಲ್ಲಿಗೆ ರಾವಣನು ವೇಷ ಬದಲಿಸಿ ಯಾಕೆ ಬಂದ ಎಂಬುದೇ ಆಶ್ಚರ್ಯ.
ವೀರಾಧಿವೀರ, ರಾಕ್ಷಸರಾಜನಿಗೆ ಹೆದರಿಕೆಯೇ ? ಯಾರ ಹೆದರಿಕೆ ? ರಾಮಲಕ್ಷ್ಮಣರ ಕ್ಷಾತ್ರ ತೇಜಸ್ಸೋ ಅಥವಾ ಸೀತೆಯ ಪಾತಿವ್ರತ್ಯವೋ ?. ರಾಜಾರೋಷದಿಂದ ಬರದೇ ವೇಷಬದಲಿಸಿ ಬರಬೇಕಾದ ಅಗತ್ಯ ? ಯಾರೇ ಆದರೂ ಅನ್ಯಾಯದ ಮಾರ್ಗ ಹಿಡಿದಾಗ ಈ ರೀತಿಯಾದ ಬಳಸುದಾರಿಯನ್ನೇ ಅನುಸರಿಸುವುದು.
ರಾವಣ ಮಹಾಬ್ರಾಹ್ಮಣ, ಪಂಡಿತ, ಒಳ್ಳೆಯ ಜ್ಯೋತಿಷಿ. ಹಾಗಾಗಿ ರಾವಣ ಈ ತರಹ ಕೆಲಸ ಹೇಗೆ ಮಾಡಿದ ಎಂಬುದೇ ಚರ್ಚೆ. ಇರಬಹುದು ಹೆಣ್ಣಿನ ಆಸೆಯಿಂದ ಅವನ ಬುದ್ಧಿಯ ಕಣ್ಣುಗಳು ಕುರುಡಾದವೇನೋ.ಅಥವಾ ಜೀವನ ಸಾಕಾಗಿ ಮೋಕ್ಷ ಹೊಂದುವ ಅಂತಿಮ ಅಪೇಕ್ಷೆಯೋ “ಭವತಿ ಭಿಕ್ಷಾಂ ದೇಹಿ” ಎನ್ನುವ ದನಿ ಕೇಳಿ ಹೊರಬಂದ ಸೀತೆ, ಭಿಕ್ಷೆಗಾಗಿ ರಾವಣನಿಗೆ ಮುಂದೆ ಬರಲು ಕೇಳಿಕೊಳ್ಳುತ್ತಾಳೆ. ಆದರೆ ಲಕ್ಷ್ಮಣ ರೇಖೆ ರಾವಣನಿಗೆ ದಾಟಿ ಮುಂದೆ ಬರಲು ಬಿಡುವುದಿಲ್ಲ.ಸನ್ಯಾಸಿಯನ್ನು ಭಿಕ್ಷೆ ಹಾಕದೆ , ಬರಿಗೈಲಿ ಕಳಿಸುವುದು ತಪ್ಪು ಎಂಬುದು ಅಂದಿನ ತಿಳವಳಿಕೆ, ಸಂಸ್ಕಾರ.
ಸನ್ಯಾಸಿಗಳು ಸಾತ್ವಿಕರು ನಿರುಪದ್ರವಿಗಳು. ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವವರು . ತಪ್ಪು ಮಾಡುವವರಲ್ಲ ಎಂಬ ನಂಬಿಕೆ ಆಗ ಪ್ರಧಾನ. ಈಗಲೂ ಹಾಗೆಯೆ ಇದೆ.
ಆ ಮುಗ್ಧ ನಂಬಿಕೆಗಳನ್ನು ದುರಪಯೋಗ ಪಡಿಸಿಕೊಂಡ ರಾವಣ .
ಇಂದೂ ಕೂಡ ಅನೇಕ ವೇಷಧಾರಿ ರಾವಣರು ಸಮಾಜಕ್ಕೆ ಕಂಟಕವಾಗಿದ್ದಾರೆ. ಮುಗ್ಧ ಜನರನ್ನು ಮೋಸಪಡಿಸುತ್ತಲೇ ಇದ್ದಾರೆ. ತ್ರೇತಾಯುಗದ ಸೀತೆ ಮುಗ್ಧ ಜನರ ಪ್ರತಿನಿಧಿಯಾಗುತ್ತಾಳೆ. ಅತೀವ ನಂಬಿಕೆಯಿಂದ ಗೆರೆದಾಟಿ ಭಿಕ್ಷೆ ನೀಡಲು ಬಂದವಳನ್ನು ರಾವಣ ಅಪಹರಿಸುತ್ತಾನೆ.
ಅದೂ ಹೇಗೆ. ಅವಳ ಪಾತಿವ್ರತ್ಯದ ಝಳ ವನ್ನು ಮುಟ್ಟಲು ಸಾಧ್ಯವಾಗದೇ ಅವಳು ನಿಂತ ಭೂಮಿಯನ್ನೇ ಸುತ್ತ ತೆಗೆದು , ಅವಳನ್ನು ಪುಷ್ಪಕವಿಮಾನದಲ್ಲಿ ಕದ್ದೊಯ್ಯುತ್ತಾನೆ.
ಈಗಲೂ ಅವಳ ರಕ್ಷಣೆಗೆ ಕಾಲಬುಡದಲ್ಸಿರುವ ನೆಲವೇ ಗತಿ ಸಾಕ್ಷಿಯೂ ಕೂಡ. ಭೂಮಿತಾಯಿಯೇ ರಕ್ಷಣೆ..ತಕ್ಷಣದ. ಅನಿರೀಕ್ಷಿತ ಘಟನೆ. ಸೀತೆ ಅಪ್ರತಿಭಳಾಗುತ್ತಾಳೆ ಆದರೂ ಸಾವರಿಸಿ ಕೊಂಡು ಸಹಾಯಕ್ಕಾಗಿ ಕೂಗಿಕೊಳ್ಳುತ್ತಾಳೆ. ಸಮಯಪ್ರಜ್ಞೆಯಿಂದ ತಾನು ದರಿಸಿದ್ದ ಆಭರಣಗಶನ್ನು ,ತನ್ನ ಸೀರೆಯ ಅಂಚನ್ನೇ ಹರಿದು, ಅದರಲ್ಲಿ ಕಟ್ಟಿ ಕೆಳಗೆ.ಎಸೆಯುತ್ತಾಳ. ಯಾರಾದರ ಕೈಗೆ ಸಿಕ್ಕಿ ರಾಮನಿಗೆ ವಿಷಯ.ಮುಟ್ಟಲೆಂದು.
ಇಲ್ಲಿ ಸೀತೆಯಂತಯೇ ಎಷ್ಟೋ ಜನ ಹೆಣ್ಣುಮಕ್ಕಳು ತೊಂದರೆಗೆ ಸಿಲುಕಿದಾಗ.ಹೇಗೆ ಪ್ರತಿಕ್ರಿಯಸಬೇಕೆಂಬ ಸೂಚನೆಯಿದೆ. ಈಗ ಅಂತಹ ಕಠಿಣ ಪರಿಸ್ಥಿತಿಗಳಿಂದ ರಕ್ಷಿಸಿ ಕೊಳ್ಳಲು ಅನೇಕ safety appಗಳು ಲಭ್ಯ. ಉಪಯೋಗಿಸುವ ರೀತಿ ಗೊತ್ತಿರಬೇಕು. ಆ ಸಮಯದಲ್ಲಿ ಉಪಯೋಗಿಸುವ ಸಮಯೋಚಿತ ಪ್ರಜ್ಞೆ ಬೇಕು ಅಷ್ಟೇ. ನಿಮಿಷಗಳಲ್ಲಿ ಪೋಲಿಸ್ ಸಹಾಯ ಸಿಗುತ್ತದೆ ಈಗ.
ಆಗ ಜಟಾಯು ಎಂಬ ಪಕ್ಷಿ ಸೀತೆಯ ರಕ್ಷಣೆಗೆ ಬಂದರೂ ಪಾಪ ಅದಕ್ಕೆ ರಕ್ಷಿಸಲಾಗಲಿಲ್ಲ. ರಾವಣ ರೆಕ್ಕೆ ಕತ್ತರಿಸಿದ. ನೆಲಕ್ಕೆ ಬಿದ್ದ ಜಟಾಯು ರಾಮ ಬರುನ ತನಕ ಜೀವ ಹಿಡಿದು, ರಾಮನಿಗ ಸೀತೆಯ ಅಪಹರಣ ದ ವಿಷಯ ತಿಳಿಸಿ,ಅದೂ ರಾವಣನೇ ಎಂದು ಹೇಳಿ ಪ್ರಾಣ ಬಿಡುತ್ತದೆ.

ಫೋಟೋ ಕೃಪೆ :google
ಸಂದೇಶ ವಾಹಕ, ವಾಹನ , ಮಾಧ್ಯಮ ಎಲ್ಲಾ ಅಯೋಮಯ. ತಲುಪಲಿ ಎಂಬ ದೂರದ ಅಸೆ. ತಲಪಲುಬಹುದು ತಲುಪದೆಯೂ ಇರಬಹುದು. ಎಲ್ಲ “ರೇ” ಗಳ ಸಾಮ್ರಾಜ್ಯ.
ಕೊನೆಗೆ ರಾವಣ ಸೀತೆಯನ್ನು ಅಪಹರಿಸಿದ್ದು ಮಾತ್ರ ದಿಟ. ಲಂಕೆ ತಲುಪಿದ ಮೇಲೆ ರಾವಣ ಸೀತೆಯನ್ನು ಉತ್ಕೃಷ್ಚವಾದ ಅಶೋಕವನದಲ್ಲಿ ಇರಿಸುತ್ತಾನೆ. ಅಲ್ಲಿಯ ವಟವೃಕ್ಷದ ಕೆಳಗೆ ಸೀತೆಯ ವಾಸ.
ಈ ವಟ ವೃಕ್ಷ ಎಲ್ಲಾ ಮುಖ್ಯಘಟನೆಗಳಿಗೂ ಸಾಕ್ಷಿ . ಅದು ದೀರ್ಘಾಯುವೋ, ಅದು ಬಿಡುಗಡೆ ಮಾಡುವ ಶುದ್ಧವಾಯುವೋ, ಅಂತೂ ಅದರ ನೆರಳಿನ ಆಶ್ರಯ ಜ್ಞಾನದೀವಿಗೆಯಂತೆ. ಕಲುಷಿತವನ್ನು ಕಳೆದು ಶುದ್ಧ ಮಾಡುವ ವೃಕ್ಷ ದೇವತೆ. ಆ ಒಂದು ಮರದ ಪ್ರಭಾವಳಿಯ ಪ್ರಭಾವವೋ ಏನೋ, ರಾವಣ ಕೂಡ ಸೀತೆಯ ಕೂದಲನ್ನೂ ಕೊಂಕಿಸಲಿಲ್ಲ. ಇನ್ನು ಸೀತೆ ಪತಿವ್ರತಾ ಶಿರೋಮಣಿ ರಾಮನನ್ನು ಬಿಟ್ಟು ಇನ್ನೊಬ್ಬನನ್ನು ನೆನದವಳಲ್ಲ. ರಾವಣನ ಮಾತಿಗೆ ಮಧ್ಯೆ ಒಂದು ಹುಲ್ಲಗರಿಯನ್ನಿಟ್ಟು ಉತ್ತರ ಕೊಟ್ಟವಳು.
ಸುತ್ತಲಿದ್ದ ರಾಕ್ಷಸಿಯರ ಹಿಂಸೆಗೆ ಬೇರೆಯಾರೇ ಆಗಿದ್ದರೂ ಪ್ರಾಣ ಕಳೆದುಕೊಂಡು ಬಿಡುತ್ತಿದ್ದರೇನೋ..ಆದರೆ ತನ್ನ ಪತಿ ರಾಮ ತನ್ನನ್ನು ಬಿಡಿಸಿಕೊಂಡು ಹೋಗಲು ಹೇಗಾದರೂ ಬಂದೇ ಬರುತ್ತಾನೆ ಎಂಬುದು ಸೀತೆಯ ಅಚಲ ನಂಬಿಕೆ. ಅವನಿಗಾಗಿ ಸುದೀರ್ಘವಾಗಿ ಕಾಯುತ್ತಾಳೆ.
ಇದು ನಮಗೆ ಒಂದು ನೀತಿಪಾಠದಂತೆ.
ಯಾವುದೇ ಕಷ್ಟವೂ ಶಾಶ್ವತವಲ್ಲ. ಸಮಯ ಕಳೆದಂತೆ ಪರಿಹಾರ ಕಾಣುತ್ತದೆ. ಪರಿಹಾರ ಸಿಗುತ್ತದೆ ಎಂಬ ಆಶಾಭಾವನೆ ಬೇಕು. May be today’s popular word “ Positive Attitude . ಸಹನೆಯಿಂದ ಕಷ್ಟದ ಸಮಯ ಕಳೆದರೆ ,ಮುಂದೆ ಒಳ್ಳೆಯ ಕಾಲಬರುತ್ತದೆ. ಒಳ್ಳೆಯದಾಗುತ್ದದೆ ಎಂಬ ನಂಬಿಕೆ ಆ ದುಷ್ಟರಾಕ್ಷಸಿಯರ ಮಧ್ಯೆ ಬೆಳಕಾಗಿ ಬಂದವಳು ತ್ರಿಜಟೆ. ಅವಳೂ ರಾಕ್ಷಸಿಯೇ ಆದರೂ ನ್ಯಾಯದಪರ ನಿಂತವಳು. ಸೀತೆಗೆ ಸಾಂತ್ವನ ಹೇಳಿದಳು. ಸೀತೆಗೆ ನೈತಿಕ ಬೆಂಬಲವಾಗಿ ನಿಂತವಳು. ಕುಸಿಯುತ್ತಿದ್ದ ಸೀತೆಯಲ್ಲಿ ಮನೋಬಲವ ತುಂಬಿದವಳು.
ಕಷ್ಟದ ಸಮಯದಲ್ಲಿ ಒಂದು ಸಾಂತ್ವನದ ಮಾತು, ಒಂದು ಸಮಾಧಾನದ ನುಡಿ ಕಷ್ಟವನ್ನು ಎದುರಿಸುವ ಆತ್ಮ ಸ್ಥೈರ್ಯವನ್ನು ಕೊಡುತ್ತದೆ ಎನ್ನುವುದಕ್ಕೆ ಸೀತೆ-ತ್ರಿಜಟೆಯರೇ ಸಾಕ್ಷಿ. ಸ್ನೇಹದ ಬಲವೇ ಹಾಗೆ. ಈ ರೀತಿಯ ಕಾಲಘಟ್ಟದಲ್ಲಿ ಹನುಮನ ಪ್ರವೇಶ. ರಕ್ಕಸರ ಮಾಯಾಜಾಲದ ಮೋಸಗಳಿಂದ ಬಸವಳಿದಿದ್ದ ಸೀತೆಗೆ ಈಗ ಅನುಮಾನ, ನಂಬಲೂ ಭಯ.
ಆಗ ರಾಮನಾಮ ಭಜನೆಯೊಂದಿಗೆ ಹನುಮ ಮುದ್ರಿಕೆಯುಂಗುರ ನೀಡಿದಾಗ , ಸೀತೆಗೆ ನಿರಾಳ ನೆಮ್ಮದಿ.
ರಾಮಲಕ್ಷ್ಮಣರ ಕುಶಲ ತಿಳಿದು ನೆಮ್ಮದಿಯ ನಿಟ್ಟುಸಿರು. ತನ್ನ ಚೂಡಾಮಣಿಯನ್ನು ಹನುಮನ ಕೈಯಲ್ಲಿ ಕೊಟ್ಟು ರಾಮನಿಗೆ ಬೇಗ ಬಂದು ಕರೆದುಕೊಂಡು ಹೋಗಲು ಹೇಳು ಎಂದಾಗ ಕರುಳು ಕಿವಿಚಿದಂತಾಗುತ್ತದೆ.
ಇಲ್ಲಿ ಗಂಡ ಹೆಂಡತಿಯೇ ಆಗಬಹುದು ಅಥವಾ ತಾಯಿ ಮಕ್ಕಳೇ ಇರಬಹುದು. ಬಹಳಕಾಲ ದೂರವಾದಾಗ,ದೂರವಿರುವಾಗ , ಈ ಕಕ್ಕುಲಾತಿ ಸಹಜ. ತಾಯಿಯಾದರೋ ಆ ಮಕ್ಕಳಿಗೆ ಇಷ್ಟವಾದ ತಿಂಡಿಗಳನ್ನು ಇಂದಿಗೂ ಪರಿಚಯಸ್ಥರ ಕೈಯಲ್ಲಿ ಕಳಿಸುವುದಿದೆ.
ಆದರೆ ಈಗಿನ ವಿಡಿಯೋ ಕಾಲ್ ಗಳು ಸ್ವಲ್ಪ ಮಟ್ಟಿಗೆ ಆ ದೂರವನ್ನು ಸಹ್ಯ ಮಾಡಿವೆ. ಮುದ್ರಿಕೆ, ಗುರತುಗಳ ಜಾಗವನ್ನು WhatsUp ಗಳಂತಹ Social media ಗಳು ತುಂಬಿವೆ.
ಸೀತೆಯನ್ನು ನೋಡಿದ ಹನುಮ ವೈರಿಯಾದ ರಾವಣನ ಬಲಾಬಲವನ್ನು ತಿಳಿಯಲು ಹೊರಟಾಗ ಸೀತೆ ಬೇಡವೆಂದು ತಡೆಯುತ್ತಾಳೆ. ಇದು ಅವಳ ಕಾಳಜಿಯ ಭಾವ. ತನಗಾಗಿ ಹುಡುಕಿ ಬಂದವ. ಅವನಿಗೆ ಏನಾದರೂ ಪೆಟ್ಟಾದರೆ ಎಂಬ ದೂರದ ಭಯ. ಅವನು ತಿರುಗಿ ಹೋಗದಿದ್ದರೆ ಇಲ್ಲಿಯ ವಿಷಯ ರಾಮರಿಗೆ ತಿಳಿಯುವುದು ಹೇಗೆ ಎಂಬ ಪ್ರಶ್ನೆ. ಇದು ಸಹಜವಾದದ್ದೇ.

ಫೋಟೋ ಕೃಪೆ : google
ಆದರೂ ಎಚ್ಚರಿಕೆ ಹೇಳಿ, ಹನುಮನಿಗೆ ಹರಸುವುದು ಇದೆಯಲ್ಲಾ ಅದುವೇ ಧೈರ್ಯ. ‘ಧೈರ್ಯಂ ಸರ್ವತ್ರ ಸಾಧನಂ’ ಕ್ಷತ್ರಿಯೋಚಿತ. ಲಂಕೆಯ ನೆಲದಲ್ಲಿ ರಾಮ ಕಾಲಿಟ್ಟೊಡನೆ ಸೀತೆಗೆ ಮೈಯೆಲ್ಲಾ ರೋಮಾಂಚನ. ಇತ್ತ ರಾಮನಿಗೆ ಸೀತೆಯ ನಮನದ ಪಾದಸಿಂಚನ.
ಇದು ಇಂದಿನ underground cable communications ಗೇ ಸಮೀಪವೇನೋ. ಆದರೂ ಅವರಿಬ್ಬರ ಭಾವಮಿಳಿತ, ಭಾವಸ್ಪಂದನಕ್ಕೇ ಅವರೇ ಸಾಟಿ. ಎಲ್ಲಾ ರೀತಿಯಲ್ಲೂ ಮಾನಿನಿ ಸೀತೆ. ಆದರೆ ಅವಳ “ಅಗ್ನಿಪರೀಕ್ಷೆ “ ಸ್ವಲ್ಪ ಕಠೋರವಾಯಿತೇನೋ. ರಾಮಸೀತೆಯರಲ್ಲಿ ತಮ್ಮನ್ನೇ ಕಾಣುವ ಜನರಗೆ ಎಲ್ಲೋ ಒಂದು ತಪ್ಪು ಸಂದೇಶ. ರಾವಣನೋ ದುರಾತ್ಮ . ಅವನ ದುರ್ವತನಗೆ ಸೀತೆಗೇಕೆ ಶಿಕ್ಷೆ. ಅದೂ ಅಗ್ನಿಪರೀಕ್ಷೆಯಂತಹ ಕಠೋರ ಪರೀಕ್ಷೆ.
ಮೊದಲೇ ವರದಕ್ಷಿಣೆಗಾಗಿ ಹೆಣ್ಣು ಈಗಲೂ ದೈಹಿಕ , ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿರುವಾಗ.ಈಗ ಅದರ ಪ್ರಮಾಣ ಕಡಿಮಯಾಗಿರಬಹುದೇ ಹೊರತು, ಪೂರ್ತಿಯಾಗಿ ಹೋಗಿಲ್ಲ. Dowri Deaths. ಅದರ ಜೊತೆಗೆ ನಡತೆಯ ಬಗ್ಗೆ ಅನುಮಾನದ ಪಿಶಾಚಿಯೂ ಸೇರಿಕೊಂಡರೆ ಅಷ್ಟೇ. ಹೆಣ್ಣಿನ ಬಾಳು ನರಕ. ಅನುಮಾನದ ಬೆಂಕಿಯ ಬಿಸಿಯನ್ನು ತಾಳಲಾಗದೆಯೋ ಎಂಬಂತೆ ಮುಂದೆ ಅಗಸನ ನಂಜಿನ ನಾಲಿಗೆಗೆ ಬೇಸತ್ತು , ಈ ಸಮಾಜದ ಹಂಗೇ ಬೇಡವೆಂದು ಮತ್ತೆ ವನದತ್ತ ಮುಖ ಮಾಡಿದಳೇ ಜಾನಕಿ.
ತನ್ನ ವೈಯಕ್ತಿಕ ಬದುಕನ್ನೇ ಬಲಿಯಾಗಿಸಿ, ಮಕ್ಕಳನ್ನು ಹೊತ್ತು,ಹೆತ್ತು ಲಾಲಿಸಿ ಪಾಲಿಸಿದ ಧೈರ್ಯವಂತೆ.
ಸಹೃದಯ ವಾಲ್ಮೀಕಿಯ ಆಶ್ರಮದ ಸಾಂಗತ್ಯವೇ ಸೀತೆಗೆ ಆಸರೆಯಾದರೆ , ಇಂದಿನ ಅದೆಷ್ಟೋ ಸೀತಯರಿಗೆ ಅಬಲಾಶ್ರಮ, ಅಭಯಾಶ್ರಮಗಳ ಆಸರೆ. ಈಗೀಗ ಸಮಾಜದ ದೃಷ್ಠಿಕೋನವೂ ಬದಲಾಗುತ್ತಿದೆ. ಹುಸಿಮಾನಮರ್ಯಾದೆಗಳನ್ನು ಬದಿಗಿಟ್ಟು, ನಿಜವಾಗಲೂ ಸೀತೆಯಾಗಿರುವ ಹೆಣ್ಣು ಮಕ್ಕಳ ತಂದೆತಾಯಿಯರು ಆಸರೆ, ಬೆಂಬಲ ನೀಡುತ್ತಿರುವುದು
ಒಂದು ಉತ್ತಮವಾದ ಬದಲಾವಣೆ.
ಸೀತೆ ಸಹನಾಮಯಿ. ಕಷ್ಟಸಹಿಷ್ಣು ಎಂಬೆಲ್ಲ ಮಾತಿಗೆ ಪೂರಕವಾಗಿ, ಅನ್ಯಾಯದ ವಿರುದ್ಧ ದನಿಯೆತ್ತುವ ಮೂಲಕ ತನ್ನತನವನ್ನು ಉಳಿಸಿಕೊಳ್ಳುವತ್ತ ಗಟ್ಟಿಯಾದ ಹೆಜ್ಜೆಗಳನ್ನು ಇಡುತ್ತಿದ್ದಾಳೆ.
ಇನ್ನೂ ಇದೆ…
- ಮೀನಾಕ್ಷಿ ಮನೋಹರ
