ಆಯುರ್ವೇದದ ನೀರಿನ ಕುಡಿಯುವ ವಿಧಾನದ ಬಗ್ಗೆ ಹೇಳುವುದಾದರೆ, ಯಾರದ್ದೋ ಮಾತು ಕೇಳಿ ಲೀಟರ್ ಗಟ್ಟಲೆ ನೀರು ಕುಡಿದರೆ ಕಿಡ್ನಿಗೆ ಹೊರೆಯಾಗಿ ಕಿಡ್ನಿಯಲ್ಲಿ ತೊಂದರೆ ಉಂಟಾಗಿ ಬೇರೊಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಡಾ. ಸೌಮ್ಯ. ಎಂ ಅವರು ಕುಡಿಯುವ ನೀರಿನ ಪದ್ದತಿಯ ಬಗ್ಗೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಮಗೆಲ್ಲ ತಿಳಿದಿರುವಂತೆ ಕೆಲವು ಆರೋಗ್ಯ ಸಲಹೆಗಾರರು , ಟಿವಿ ಜಾಹೀರಾತು, ಸಾಮಾಜಿಕ ಜಾಲತಾಣ ಇತ್ಯಾದಿಗಳಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸೇವನೆ ಬಗ್ಗೆ ತಪ್ಪಾಗಿ ತಿಳಿಸುತ್ತಾರೆ. ಅದರಲ್ಲೂ ಕೆಲವರು ಬಿಸಿನೀರು, ನಿಂಬೆಹಣ್ಣಿನ ರಸ ಹಾಗೂ ಜೇನುತುಪ್ಪ ಇತ್ಯಾದಿಗಳ ಮಿಶ್ರಣವನ್ನು ಉಪಯೋಗಿಸಲು ಸಲಹೆ ನೀಡುತ್ತಾರೆ.
ಇದರ ವೈಜ್ಞಾನಿಕ ವಿವರಣೆಯನ್ನು ನೋಡುವುದಾದರೆ… ಆಯುರ್ವೇದದ ಭಾವಪ್ರಕಾಶ ನಿಘಂಟು ಎಂಬ ಗ್ರಂಥವು ಉಷಾಪಾನದ ಬಗ್ಗೆ ಉಲ್ಲೇಖಿಸುತ್ತದೆ. ಬೆಳಗ್ಗೆ ನಿತ್ಯಕರ್ಮಗಳನ್ನು ಮುಗಿಸಿದ ನಂತರ, ಉಷಾಪಾನವನ್ನು ಮಾಡುವಂತೆ ಸೂಚಿಸಲಾಗಿದೆ. ಆದರೆ ವಿಶಿಷ್ಟವಾಗಿ, ಹಲ್ಲುಜ್ಜುವ ಮುನ್ನ ನೀರು ಕುಡಿದರೆ ಹೊಟ್ಟೆಯಲ್ಲಿರುವ ಹೈಡೋಕ್ಲೋರಿಕ್ ಆಮ್ಲದಿಂದ ಬ್ಯಾಕ್ಟಿರಿಯಾಗಳು ನಾಶವಾಗುವುದರಿಂದ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ನಿಮಗಿದು ತಿಳಿದಿರಲಿ ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಅಥವಾ ಕುದಿಯುವ ನೀರಿನಲ್ಲಿ ಹಾಕಿದರೆ ಅದರ ಔಷಧಿ ಗುಣಗಳು ಕುಂದಿ ಹೋಗಿ ವಿಷವಾಗಿ ಮಾರ್ಪಾಡಾಗುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಮಾತ್ರ ಶುದ್ಧ ಜೇನುತುಪ್ಪವನ್ನು ಬೆರಸಿ ಉಪಯೋಗಿಸಬಹುದು.

ಇದರೊಂದಿಗೆ ಆಯುರ್ವೇದದ ನೀರಿನ ಕುಡಿಯುವ ವಿಧಾನದ ಬಗ್ಗೆ ಹೇಳುವುದಾದರೆ, ಯಾರದ್ದೋ ಮಾತು ಕೇಳಿ ಲೀಟರ್ ಗಟ್ಟಲೆ ನೀರು ಕುಡಿದರೆ ಕಿಡ್ನಿಗೆ ಹೊರೆಯಾಗಿ ಕಿಡ್ನಿಯಲ್ಲಿ ತೊಂದರೆ ಉಂಟಾಗಿ ಬೇರೊಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಸಮಯಕ್ಕೆ ಅನುಗುಣವಾಗಿ ನಿಮ್ಮ ಬಾಯಾರಿಕೆಗೆ ತಕ್ಕಷ್ಟು ಆಗಾಗ ನೀರು ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ.
- ಕುಡಿಯಲು ಶುದ್ಧ ನೀರನ್ನು ಬಳಸುವುದೇ ನಿಜ ಆದರೆ R.O ತಂತ್ರಜ್ಞಾನದಿಂದ ಫಿಲ್ಟರ್ ಆದ ನೀರನ್ನು ಕಾಪರ್ ಪಾತ್ರೆಯಲ್ಲಿ ಶೇಖರಿಸಿಟ್ಟಾಗ ನೀರು ಆಮ್ಲೀಕರಣಗೊಂಡು ಅಶುದ್ಧವಾಗುತ್ತದೆ. ಕ್ರಮೇಣ ಇದು ಅಸಿಡಿಟಿ ಗ್ಯಾಸ್ ರೈಟೀಸ್ ಮುಂತಾದ ಉದರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
- ಹಲವರಿಗೆ ಫ್ರಿಡ್ಜ್ ನೀರು ಅಭ್ಯಾಸವಿದ್ದು ಇದು ನಮ್ಮ ಜಠರಾಗ್ನಿ ಯನ್ನು ನಂದಿಸಿ ಜೀರ್ಣಶಕ್ತಿಯನ್ನು ಕುಂದಿಸುತ್ತದೆ ಹಾಗಾಗಿ ನಾವು ಕುಡಿಯುವ ನೀರು ಕನಿಷ್ಠ ವಾತಾವರಣದ ತಾಪಮಾನದಲ್ಲಾದರೂ ಇದ್ದರೆ ಒಳಿತು.
- ಊಟದ ನಂತರ ಅತಿ ಹೆಚ್ಚು ನೀರು ಕುಡಿದಾಗಲೂ ನಮ್ಮ ಜೀರ್ಣಶಕ್ತಿಯ ಮೇಲೆ ಒತ್ತಡ ಉಂಟಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಊಟದ ನಂತರ ದಣಿವು ನೀಗುವಷ್ಟು ಸ್ವಲ್ಪವೇ ನೀರು ಕುಡಿದು ಸ್ವಲ್ಪ ಹೊತ್ತಿನ ಬಳಿಕ ಮತ್ತೆ ನೀರು ಕುಡಿದರೆ ಒಳಿತು.
ಆಯುರ್ವೇದದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಚಿಕಿತ್ಸೆಗಳು ಜೀವನ ಶೈಲಿಯು ಬದಲಾಗುವುದರಿಂದ ಯಾವುದೇ ನಿರ್ದಿಷ್ಟ ಮಾಪನಗಳು ಎಲ್ಲರಿಗೂ ಅನ್ವಯಿಸುವುದಿಲ್ಲ ಆದ್ದರಿಂದ ನಿಮ್ಮ ವೈದ್ಯರ ಸಲಹೆಯನ್ನು ಪಡೆದು ನಿಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಂಡರೆ ಆರೋಗ್ಯವಾಗಿರಬಹುದು.
- ಡಾ. ಸೌಮ್ಯ. ಎಂ – ರಾಜಮೃತ ವೈದ್ಯಶಾಲಾ, ದಾವಣಗೆರೆ
