ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗಿಯ ಭಾಗಮ್ಮ ದೇವಾಲಯಕ್ಕೆ ಬಂದು ಪ್ರಾರ್ಥಿಸಿದರೆ ತಮ್ಮದೆಲ್ಲ ಇಷ್ಟಾರ್ಥಗಳು ನೂರಕ್ಕೆ ನೂರು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ನಿತ್ಯ ಕನಿಷ್ಟ 2000 ಸಾವಿರ ಭಕ್ತರಿಗೆ ಇಲ್ಲಿ ದಾಸೋಹ ನಡೆಯುತ್ತದೆ. ಅರುಣ್ ಪ್ರಸಾದ್ ಅವರು ತಾಯಿ ಘತ್ತರಗಿಯ ಭಾಗಮ್ಮನ ಮಹಿಮೆಯ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ನಾನು ಈ ಚೌಡಿಕೆಯ ಪ್ರಕಾರದ ಸ್ಥಳ ಪುರಾಣದ ಹಾಡು ಒಂದು ಸಾವಿರಕ್ಕೂ ಹೆಚ್ಚು ಸಾರಿ ಕೇಳಿದ್ದೇನೆ ಉತ್ತರ ಕರ್ನಾಟಕದ ಸೊಗಡಿನ ಕನ್ನಡದಲ್ಲಿ ತಮ್ಮದೇ ಸಂಪ್ರದಾಯಿಕ ವಾದ್ಯದೊಂದಿಗೆ ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗ ಎಂಬ ಊರಿನ ಬಾಗಮ್ಮ ತಾಯಿಯ (ಭಾಗ್ಯವಂತೆ ದೇವಿಯ) ಸ್ಥಳ ಪುರಾಣದ ಕಥೆ ಹೇಳುವು ಹಾಡು ಇದು.
ನೀವು ಈ ಲಿಂಕ್ ಕ್ಲಿಕ್ ಮಾಡಿ ಇದನ್ನು ಕೇಳ ಬಹುದು.
ವಿಜಯನಗರದ ಅರಸರ ಕುಲದೇವತೆ ಭಾಗ್ಯವತಿ ವಿಜಯನಗರದ ಸಿರಿ ಸಮೃದ್ಧಿಗೆ ಕಾರಣಳಾದವಳೆಂದು ಕೃಷ್ಣದೇವರಾಯರ ನಂತರ ಕೊನೆಯ ಅರಸ ರಾಮರಾಯನು ಈ ದೇವಿಯ ವಚನ ಮಾನ್ಯ ಮಾಡದಾದನು, ಇದರ ಪರಿಣಾಮ ವಿಜಯ ನಗರದ ಮಹಾ ಸಂಪತ್ತು ಕ್ಷೀಣಿಸ ತೊಡಗಿತ್ತು. ಆ ಕಾಲದಲ್ಲಿ ದೇವಿಯ ಕಡೆಗಾಣಿಸಿದ್ದರಿಂದ ದೇವಿ ತುಂಗಾ ಭದ್ರಾ ನದಿಗೆ ಸರ್ಪದ ರೂಪದಲ್ಲಿ ಹಾರಿ ನಂತರ ಪ್ರವಾಹದಲ್ಲಿ ಸಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಹಿಸುವ ಭೀಮಾ ನದಿ ಮಾರ್ಗವಾಗಿ ಘತ್ತರಗಿ ಎಂಬ ಊರಿನಲ್ಲಿ ನೆಲೆಸುತ್ತಾಳೆ.
ದ್ಯಾವಣ್ಣ ಎಂಬ ದೈವಭಕ್ತ ಕಡು ಬಡವನಿಗೆ ಗಾಜಿನ ಒಂದು ಕಂಬದ ರೂಪದಲ್ಲಿ ಗೋಚರಿಸುತ್ತದೆ. ಅದರಲ್ಲಿ ಬೇರೆ ನೀರು ಮತ್ತು ಘಟ ಸರ್ಪ ನೋಡುತ್ತಾನೆ. ಆ ಕಂಬದಿಂದ ವಿಚಿತ್ರವಾದ ಧ್ವನಿ ಕೇಳಿ ಬರುತ್ತದೆ. ಅದನ್ನು ಊರಲ್ಲಿ ತಿಳಿಸಿದರೆ ಯಾರೂ ನಂಬುವುದಿಲ್ಲ.
ಘತ್ತರಗಿಯ ಭಾಗಮ್ಮ ದೇವಿ (ಫೋಟೋ ಕೃಪೆ : google)
ಬಡ ಕುರುಬನ ಈ ಮಾತು ಹುಚ್ಚರಾಡುವ ಮಾತು ಎಂದು ಊರ ಜನ ಹೀಯಾಳಿಸುತ್ತಾರೆ. ನಂತರ ನಡೆದ ಕೆಲ ಪವಾಡಗಳಿಂದ ದೇವಿಗೆ ಗುಡಿ ನಿರ್ಮಿಸುತ್ತಾರೆ. ಈ ದೇವಾಲಯದಲ್ಲಿ ಸಿಡಿ ಆಡುವ ಹರಕೆ ಪದ್ಧತಿ ಪ್ರಸಿದ್ಧಿ ಪಡೆದಿತ್ತು. ನಂತರ ಮಾನವ ಹಕ್ಕುಗಳ ಆಯೋಗದ ತೀರ್ಮಾನವನ್ನು ಮನ್ನಿಸಿ, ರಾಜ್ಯ ಸರ್ಕಾರ ಇಲ್ಲಿ ಸಿಡಿ ಪದ್ಧತಿ ರದ್ದು ಮಾಡಿದೆ. ಆದ್ದರಿಂದ ದೇವಾಲಯದ ಒಳಗೆ ಶತಮಾನಗಳಿಂದ ಆಚರಣೆಯಲ್ಲಿದ್ದ ಸಿಡಿ ಕಂಬಗಳನ್ನು ಸಂರಕ್ಷಿಸಿಟ್ಟಿದ್ದಾರೆ.
ಸುಮಾರು ನಾಲ್ಕು ನೂರು ವರ್ಷಗಳಿಂದ ಇಲ್ಲಿ ಪ್ರಾರ್ಥನೆ ಮಾಡಿದರೆ ಭಕ್ತರ ಇಷ್ಟಾರ್ಥ ಸಿದ್ದಿ ನೂರಕ್ಕೆ ನೂರು ಶತಸಿದ್ಧ ಎಂಬ ನಂಬಿಕೆ ಭಕ್ತರಲ್ಲಿದೆ. ನಂತರ ಘತ್ತರಗದ ಭಾಗಮ್ಮ ಸಿರಿ ಸಂಪತ್ತುಗಳನ್ನು ನೀಡುವ ಏಕೈಕ ದೇವತೆ ಎಂದು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಭಕ್ತರು ಬರಲು ಪ್ರಾರಂಭಿಸಿದ ಮೇಲೆ ಈ ಕ್ಷೇತ್ರ ಇನ್ನೂ ಹೆಚ್ಚು ಪ್ರಸಿದ್ದಿ ಪಡೆಯಿತು.
ಪ್ರತಿನಿತ್ಯ ಇಲ್ಲಿನ ಅನ್ನ ದಾಸೋಹಕ್ಕೆ ಕನಿಷ್ಟ 2,000 ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ವಿಶೇಷ ದಿನದಲ್ಲಿ ಇದರ 5- 6 ಪಟ್ಟು ಹೆಚ್ಚು ಭಕ್ತರು ಬರುತ್ತಾರೆ. ಇಲ್ಲಿಂದ ದೇವರ ಗಾಣಗಾಪುರದ ದತ್ತ ಮಂದಿರ ಕೇವಲ 28 ಕಿ.ಮಿ.ದೂರದಲ್ಲಿದೆ.
ದೇವಸ್ಥಾನದಲ್ಲಿ ಲೇಖಕರು
ನಾನು ಮೊನ್ನೆ ಅಂದರೆ ಸೆಪ್ಟೆಂಬರ್ 5, 2023 ರ ಮಂಗಳವಾರ ಬೆಳಿಗ್ಗೆ 7ಕ್ಕೆ ನಮ್ಮ ಮನೆಯಿಂದ ಪ್ರಯಾಣ ಪ್ರಾರಂಬಿಸಿ 440 ಕಿ.ಮಿ.ದೂರದ ಇಲ್ಲಿಗೆ ಹುಬ್ಬಳ್ಳಿ- ನರಗುಂದ – ಕೊಲ್ಹಾರ – ಬಸವನ ಬಾಗೇವಾಡಿ ಮಾರ್ಗದಲ್ಲಿ ಈ ದೇವಾಲಯ ಮಧ್ಯಾಹ್ನ 2ಕ್ಕೆ ತಲುಪಿದಾಗ ದೇವರ ದರ್ಶನಕ್ಕೆ ಸಾವಿರಾರು ಜನ ಸರತಿ ಸಾಲಿನಲ್ಲಿದ್ದರು. ಈ ದೇವಾಲಯದ ಸಿಬ್ಬಂದಿ ವರ್ಗದ ಪ್ರಮುಖರಲ್ಲಿ ಒಬ್ಬರಾದ ಬೀಮರಾಯ ದೊಡ್ಡಮನಿ ನಮಗೆ ದೂರದಿಂದ ಬಂದವರೆಂದು ಸುಲಭದರ್ಶನ ಭಾಗ್ಯ ಕೊಡಿಸಿ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದರು.
ನಿಮ್ಮ ಪ್ರಾರ್ಥನೆ ದೇವಿಯಲ್ಲಿ ಮಾಡಿಕೊಳ್ಳಿ ನೂರಕ್ಕೆ ನೂರು ಸಿದ್ಧಿ ಆಗೇ ಆಗುತ್ತೆ ನಿಮ್ಮ ಪ್ರಾರ್ಥನೆ ಈಡೇರಿದ ಮೇಲೆ ಇಲ್ಲಿಗೆ ಬಂದು ನಿಮ್ಮ ಹರಕೆ ತೀರಿಸಿ (ಹಿಂದೆ ಪ್ರಾರ್ಥನೆ ಈಡೇರಿದರೆ ಸಿಡಿ ಆಡುವುದಿತ್ತು ಈಗ ಇಲ್ಲ) ಎಂದರು. ಈ ದೇವಾಲಯದ ಗರ್ಭಗುಡಿಯ ಹಿಂಬಾಗದ 3 ಅಡಿ ಎತ್ತರದ 2 ಅಡಿ ಅಗಲದ ಅತ್ಯಂತ ಚಿಕ್ಕ ಬಾಗಿಲಿನಿಂದ ಗರ್ಭಗುಡಿ ಪ್ರವೇಶ ಇದೆ. ಗರ್ಭಗುಡಿಯ ಹೊರ ಭಾಗದ ಕಿಟಕಿಯ ಕಿಂಡಿಯಿಂದಲೂ ದೇವಿ ದರ್ಶನಕ್ಕೆ ಅವಕಾಶ ಇದೆ.
ಫೋಟೋ ಕೃಪೆ : ಅರುಣ್ ಪ್ರಸಾದ್
ಗರ್ಭಗುಡಿಯಲ್ಲಿ ಭೀಮಾ ನದಿಯಲ್ಲಿ ತೇಲಿ ಬಂದ ಭಾಗಮ್ಮ ದೇವಿಯ ಕಾಜಿನ ಕಂಬ ನಿಲ್ಲಿಸಿದ್ದಾರೆ. ಅದರ ಎದರು ದೇವಿಯ ಬೆಳ್ಳಿಯ ಮುಖವಾಡ ಮತ್ತು ಪಾದುಕೆಗಳ ಪೂಜೆ ನಿರ್ವಹಿಸುವವರು ಅರ್ಚಕರಲ್ಲ, ತಲೆ ತಲಾಂತರದಿಂದ ಪೂಜಾ ಕಾರ್ಯ ನಿರ್ವಹಿಸುವ ಹಿಂದುಳಿದ ಜಾತಿಯ ಗಂಗಾ ಮತಸ್ಥ ಮಹಿಳೆಯರೆಂದು ಭೀಮರಾಯ ದೊಡ್ಡಮನಿ ತಿಳಿಸಿದರು.
ಇಲ್ಲಿಂದ ದೇವರ ಗಾಣಿಗಾಪುರದ ದತ್ತಾತ್ರೇಯ ಮಂದಿರಕ್ಕೆ ನಮ್ಮ ಮುಂದಿನ ಪ್ರಯಾಣ ಪ್ರಾರಂಭಿಸಿದೆವು. ಒಂದು ಹಾಡು ಸುಮಾರು ಒಂದು ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿ ಈ ಸ್ಥಳದ ದರ್ಶನ ಮಾಡಿಸಿತು ಎ೦ಬುದೇ ವಿಶೇಷ ಮೇಲಿನ ಲಿಂಕ್ ನಲ್ಲಿ ಒಮ್ಮೆ ನೀವೂ ಆ ಹಾಡು ಕೇಳಿ ನೋಡಿ.
- ಅರುಣ್ ಪ್ರಸಾದ್