ದಿನಕ್ಕೊಬ್ಬ ಒಳ್ಳೆಯವರೊಂದಿಗೆ ಸ್ನೇಹ ಬೆಳೆಸುತ್ತಾ ಹೋದರೆ ಸುಮಾರು ವರ್ಷಗಳ ನಂತರ ಒಳ್ಳೆಯ ಸ್ನೇಹಿತರ ಬಳಗವೇ ನಮಗೆ ದೊರೆಯುತ್ತದೆ. ಜೊತೆಗೆ ಆ ಒಳ್ಳೆಯ ಗೆಳೆಯರ ಸಹವಾಸದಿಂದ ಅನೇಕ ಒಳ್ಳೆಯ ಲಾಭಗಳು ವೈಯಕ್ತಿಕವಾಗಿ ನಮಗೆ ಸಿಗುತ್ತವೆ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ನಾನು ಸೂಕ್ಷ್ಮವಾಗಿ ಗಮನಿಸಿದಂತೆ ಬದುಕಿನ ಸೌಂದರ್ಯ ಅತ್ಯದ್ಭುತವಾದದ್ದು. ಅದನ್ನು ಕಂಡುಕೊಳ್ಳುವ ಸಾಮರ್ಥ್ಯವಿದ್ದವನಿಗೆ ಮಾತ್ರ ಅದು ಗೋಚರವಾಗುತ್ತದೆ. ಹೀಗಾಗಿಯೇ ಬದುಕಲ್ಲಿ ಕೆಲವೇ ಕೆಲವರು ಸಂತೋಷದಿಂದ ಇರುತ್ತಾರೆ. ಉಳಿದ ಬಹುಪಾಲು ಜನ ಜೀವನವನ್ನು ಜರಿಯುತ್ತ ನಿರಾಸೆಯಲ್ಲಿಯೇ ಕೊನೆಗೊಳ್ಳುತ್ತಾರೆ.
ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಸಂತೋಷವಾಗಿರುವುದು ಹೇಗೆ? ಇರುವ ಮೂಲಗಳಲ್ಲಿ, ಸಂಪನ್ಮೂಲಗಳಲ್ಲಿ ಹೇಗೆ ತೃಪ್ತರಾಗಿರುವುದು? ಇರುವಷ್ಟರಿಂದಲೇ ಅಭಿವೃದ್ದಿ ಹೇಗೆ ಹೊಂದುವುದು? ಇದು ಸಾಧ್ಯವೇ?.
ಖಂಡಿತ ಸಾಧ್ಯವಿದೆ. ಆ ಸಾಧ್ಯತೆಯನ್ನು ಬದುಕು ನಮಗೆ ಒದಗಿಸಿದಾಗಲೂ ನಾವು ಕಾರ್ಯಗತ ಮಾಡಿಕೊಳ್ಳದೆ ಮೂಢರಾಗಿರುತ್ತೇವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಆಸೆ ಪಡುವ ಆಸೆ ಬುರುಕರಾಗಿದ್ದೇವೆಯೇ ಹೊರತು ಯೋಜನೆ ರೂಪಿಸುವಲ್ಲಿ ವಿಫಲರಾಗಿದ್ದೇವೆ.
ಒಂದು ಆಸ್ಥಾನದಲ್ಲಿ ರಾಜನು ಚೆಸ್ ಆಟದಲ್ಲಿ ಪ್ರವೀಣನಾಗಿದ್ದ. ಯಾರೊಬ್ಬರೂ ಅವನನ್ನು ಸೋಲಿಸಲು ಅಸಮರ್ಥರಾಗಿದ್ದರು. ಹೀಗಾಗಿ ಅವನು ಒಂದು ಫಾರ್ಮಾನು ಹೊರಡಿಸಿದ. ಈ ರಾಜ್ಯದಲ್ಲಿ ಯಾರಾದರೂ ನನ್ನನು ಚೆಸ್ ಆಟದಲ್ಲಿ ಸೋಲಿಸಿದರೆ ಅವರು ಕೇಳಿದ್ದನ್ನು ಕೊಡುವೆ ಎಂದ.
ಒಬ್ಬ ಬಡಪಾಯಿ ರೈತ ಪಂದ್ಯವನ್ನು ಒಪ್ಪಿಕೊಂಡು ರಾಜನ ಜೊತೆ ಆಟಕ್ಕೆ ಇಳಿದ. ರಾಜನನ್ನು ಸೋಲಿಸಿದ. ಆಶ್ಚರ್ಯಚಕಿತನಾಗಿ ರಾಜನು ಭೇಷ್.. ನಿನಗೇನು ಬೇಕು ಕೇಳು, ಕೊಡುವೆ ಎಂದ. ದೈನ್ಯತೆಯಿಂದ ರೈತ ಹೇಳಿದ ಮಹಾರಾಜರೆ ನನಗೆ ಮುತ್ತು, ರತ್ನ, ಹವಳ, ವಜ್ರ, ವೈಡೂರ್ಯ ಏನು ಬೇಡ.
ಈ ಚೆಸ್ಸ್ ಬೋರ್ಡ್ ನಲ್ಲಿ ಒಟ್ಟು 64 ಚೌಕಗಳಿವೆ. ಒಂದು ಚೌಕಿಗೆ ಒಂದು ಅಕ್ಕಿ ಕಾಳು, ಎರಡನೆ ಚೌಕಿಗೆ ಎರಡು ಅಕ್ಕಿ ಕಾಳು, ಮೂರನೆ ಚೌಕಿಗೆ 4 ಅಕ್ಕಿ ಕಾಳು, ನಾಲ್ಕನೆ ಚೌಕಿಗೆ 8…. ಹೀಗೆ ಪ್ರತಿ ಚೌಕಿಗೆ ಅದರ ಹಿಂದಿನ ಚೌಕದಲ್ಲಿರುವ ಅಕ್ಕಿಗಳ ಎರಡರಷ್ಟು ಅಕ್ಕಿ ಕಾಳುಗಳನ್ನು ಕೊಡಿ ಸಾಕು. ಬೇರೆ ಏನು ಬೇಡ ಎನ್ನುತ್ತಾನೆ.
ಮಹಾರಾಜ ನಕ್ಕು ಅದೇನು ಮಹಾ.. ಅಕ್ಕಿಯಷ್ಟೆ ತಾನೆ. ಈಗಲೇ ಕೊಡುವೆ ಎಂದು 64 ಚೌಕಗಳ ಚೆಸ್ ಬೋರ್ಡ್ ನ್ನು ಮುಂದೆ ಇಟ್ಟುಕೊಂಡು ಅಕ್ಕಿ ಕಾಳುಗಳ ಲೆಕ್ಕ ಹಾಕಲು ಪ್ರರಂಭಿಸುತ್ತಾನೆ.
ರಾಜನಿಗೆ ಮೇಲ್ನೋಟಕ್ಕೆ ಇದೇನು ಮಹಾ ಎನ್ನುವ ರೀತಿ ಕಾಣುವ ಈ ಲೆಕ್ಕ ಕೊನೆ ಕೊನೆಗೆ ಹೋದ ಹಾಗೆ ಹುಚ್ಚು ಹಿಡಿಯುವಂತೆ ಭಾಸವಯಿತು.
ಕೊನೆ ಕೊನೆಗೆ 64 ನೇಯ ಚೌಕವನ್ನು ಮುಟ್ಟುವ ಹೊತ್ತಿಗೆ ಇಡೀ ಸಾಮ್ರಾಜ್ಯದ ಅಕ್ಕಿಯನ್ನು ಒಟ್ಟು ಗೂಡಿಸಿದರೂ ಕೊಡಲು ಆಗದ ಸ್ಥಿತಿ ತಲುಪಿದ. ಮಹಾರಾಜ ಆ ರೈತನ ಎದುರು ಕೈ ಮುಗಿದು ಸೋಲೊಪ್ಪಿಕೊಂಡು ನಿಂತ. ಇದನ್ನೇ ನಾವು power of compounding ಎಂದು ಹೇಳುತ್ತೇವೆ. ಈ ಕೆಳಗೆ ತೋರಿಸಿದ ಚೆಸ್ ಬೋರ್ಡ್ ನ ಲೆಕ್ಕವನ್ನು ಕೊನೆಯವರೆಗೂ ನೀವು ಮಾಡುತ್ತಾ ಹೋಗಿ, ಈ ಸಂಯುಕ್ತ ಪ್ರಗತಿಯ ಮಹತ್ವ ಅರಿವಾಗುತ್ತದೆ.
ಹಾಗೆಯೇ ದಿನಕ್ಕೊಂದು ಸಿಗರೇಟ್ ಪ್ಯಾಕ್ ಖಾಲಿ ಮಾಡುತ್ತೀರಿ ಎಂದುಕೊಳ್ಳಿ. ಒಂದು ಪ್ಯಾಕೆಟ್ ಗೆ 50=00 ರೂ. ಎಂದುಕೊಳ್ಳೊಣ. ಒಂದು ತಿಂಗಳಿಗೆ 1500=00 ರೂ. ಆಗುವುದು. ವರ್ಷಕ್ಕೆ 18000=00 ರೂ. ಮತ್ತು ಹತ್ತು ವರ್ಷಕ್ಕೆ 1,80,000=00 ರೂ. ಇದನ್ನೆ 6% ಬಡ್ಡಿಯಂತೆ ಬ್ಯಾಂಕ್ ನಲ್ಲಿ ಇಡುತ್ತ ಬಂದರೆ ಹತ್ತು ವರ್ಷಕ್ಕೆ ಅಂದಾಜು 2,51,485=00 ರೂ ಆಗುವುದು. ಸ್ವಲ್ಪ ತಲೆಯಿರುವವ ಇದೇ ಹಣವನ್ನು mutual fund ಲ್ಲಿ ಹಾಕುತ್ತಾ 12% ನಂತೆ ಬೆಳೆಸಿದರೆ 351886=00 ರೂ ಆಗುವುದು.
ಅಕಾಸ್ಮಾತ್ ನೀವು ದಿನಕ್ಕೆ 2 ಸಿಗರೆಟ್ ಪ್ಯಾಕೆಟ್ ಖಾಲಿ ಮಾಡುತ್ತಿದ್ದರೆ ಅಂದರೆ ದಿನಕ್ಕೆ 100=00 ರೂ ಅಥವಾ 200=00 ರೂ ಅನಾವಶ್ಯಕವಾಗಿ ಖರ್ಚು ಮಾಡುತ್ತಿದ್ದರೆ 10-20 ವರ್ಷದ ಲೆಕ್ಕ ಹಾಕಿ. ಇದೇ ರೀತಿ ನೀವು ಕುಡಿಯುವ ಚಟಕ್ಕೆ ಬಲಿಯಾಗಿದ್ದರೆ ಲೆಕ್ಕ ಹಾಕುತ್ತಾ ಹೋಗಿ. ಚಟ ಮಾಡುತ್ತಾ ಇದ್ದು, ಹಣವಿಲ್ಲ ಎನ್ನುವವವರು ಚಿಂತಿಸಲೇ ಬೇಕಾದ ಮಾಹಿತಿ ಇದು.
ಇದು ಹಣಕ್ಕಷ್ಟೇ ಸೀಮಿತಗೊಳಿಸ ಬೇಕಿಲ್ಲ. ದಿನಕ್ಕೊಂದು ಒಳ್ಳೆಯ ಬರಹ ಬರೆಯುವೆ ಎಂದುಕೊಂಡು ಸುಮಾರು ಹತ್ತು ವರ್ಷದ ಬರಹಗಳ ಊಹೆ ಮಾಡಿ. ತಿಂಗಳಿಗೊಂದು ಪುಸ್ತಕ ಓದಿದರೂ ವರ್ಷಕ್ಕೆ 12 ಪುಸ್ತಕ ಓದುತ್ತೀರಿ. ಹತ್ತು ವರ್ಷಕ್ಕೆ ಊಹಿಸಿ.
ಹಾಗೆಯೇ ದಿನಕ್ಕೊಬ್ಬ ಒಳ್ಳೆಯವರೊಂದಿಗೆ ಸ್ನೇಹ ಬೆಳೆಸುತ್ತಾ ಹೋದರೆ ಸುಮಾರು ವರ್ಷಗಳ ನಂತರ ಒಳ್ಳೆಯ ಸ್ನೇಹಿತರ ಬಳಗವೇ ನಮಗೆ ದೊರೆಯುತ್ತದೆ. ಜೊತೆಗೆ ಆ ಒಳ್ಳೆಯ ಗೆಳೆಯರ ಸಹವಾಸದಿಂದ ಅನೇಕ ಒಳ್ಳೆಯ ಲಾಭಗಳು ವೈಯಕ್ತಿಕವಾಗಿ ನಮಗೆ ಸಿಗುತ್ತವೆ.
ನೆನಪಿಡಿ ಒಂದು ವೇಳೆ ನಕಾರಾತ್ಮಕ ದಾರಿಯಲ್ಲಿ ಸಂಯುಕ್ತ ಪರಿಣಾಮ ( compound effect) ವನ್ನು ಬಳಸಿಕೊಂಡರೆ ಜೀವನ ಹಾಳಾಗದೆ ಇರದು. ಯಾರೋ ಒಬ್ಬರನ್ನು ಹಾಳು ಮಾಡಲು ಹೆಚ್ಚು ಹೆಚ್ಚಾಗಿ, ಗುಂಪು ಗುಂಪಾಗಿ ಸೇರುವ ಕೆಲ ನಕಾರಾತ್ಮಕ ಆತ್ಮಗಳು ಯಾರೋ ಒಬ್ಬರನ್ನು ಕಾಲೆಳೆಯಲು ಸಮಯ ವ್ಯಯಿಸುತ್ತಾ ತಮ್ಮ ವೈಯಕ್ತಿಕ ಬದುಕಿನ ಮತ್ತು ತಮ್ಮ ಕುಟುಂಬದ ಸದಸ್ಯರ ಹಿತಾಸಕ್ತಿಯನ್ನೆ ಮರೆಯುತ್ತಾರೆ. ಇಂತವರಲ್ಲಿ ಹತ್ತು ಇಪ್ಪತ್ತು ವರ್ಷಗಳ ಸಂಚಿತ ಸಂಯುಕ್ತ ಪ್ರಗತಿಯು ಶೂನ್ಯವಾಗಿರುತ್ತದೆ. ಹೀಗಾಗಿ ನಿಮ್ಮ ಶಕ್ತಿ ಸಾಮರ್ಥ್ಯವನ್ನು ನಿಮ್ಮ ಉದ್ದಾರಕ್ಕೆ ಸಂಯುಕ್ತ ಪರಿಣಾಮದ (compound effect) ಮಾದರಿಯಲ್ಲಿ ಉಪಯೋಗಿಸಿ ನೋಡಿ ಆಗುವ ಬದಲಾವಣೆಯ.
ಹೀಗಾಗಿ ಬದುಕಿನ ಸೀಮಿತ ಅವಧಿಯ ಮಿತಿಯಲ್ಲಿಯೆ ಅಧಿಕ ಸಾರ್ಥಕತೆ ಸಾಧಿಸಲು ಸಕಾರಾತ್ಮಕ ಸಂಯುಕ್ತ ಪ್ರಗತಿಯ ಕಡೆ ಗಮನವಿರಿಸುವುದು ಒಳಿತು.
‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ಡಾ. ರಾಜಶೇಖರ ನಾಗೂರ