ಲತಾ ಕೆ.ಎಸ್. ಹೆಗಡೆ ಅವರ ಒಂದೊಂದು ಕತೆಗಳು ಓದುವಾಗ ಪುಸ್ತಕ ಕೆಳಕ್ಕೆ ಇಡಬೇಕು ಎನ್ನಿಸುವುದಿಲ್ಲ. ಓದುಗರನ್ನು ಕುತೂಹದಿಂದ ಕೊಂಡೊಯ್ಯುತ್ತದೆ. ರಾಘವೇಂದ್ರ ಪಿ ಅಪರಂಜಿ ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಗುಬ್ಬಿಯ ಗೂಡು
ಲೇಖಕಿ : ಲತಾ ಕೆ.ಎಸ್. ಹೆಗಡೆ
ಪ್ರಕಾರ : ಕಥಾಸಂಕಲನ
ಪ್ರಕಾಶನ : ಕಥಾ ಬಿಂದು
ಮನೆ ಮುಂದೆ ಇರುವ ಮುಳ್ಳಿನ ಕಂಟಿಯ ಟೊಂಗೆಯೊಂದಕ್ಕೆ ಕಟ್ಟಿದ ‘ಗುಬ್ಬಿಯ ಗೂಡು’ ಗಾಳಿಗೆ ಮೇಲೆ ಕೆಳಗೆ ಓಲಾಡತಾನೆ ಇತ್ತು. ಅದೆಷ್ಟೇ ಜೋರಾದ ಗಾಳಿ ಬೀಸಿದರೂ ಆ ಗೂಡು ಟೊಂಗೆಯಿಂದ ಬೇರ್ಪಡುತ್ತಿರಲಿಲ್ಲ. ಅಬ್ಬಾ ಈ ಗೂಡನ್ನ ಅದೆಷ್ಟು ತನ್ಮಯತೆಯಿಂದ ಕಟ್ಟಿರಬೇಕು ಈ ಗುಬ್ಬಚ್ಚಿಗಳು ಅಂತ ಅನ್ನಕೊಂಡೆ…
ಅಲ್ಲಲ್ಲಿ ಬಿದ್ದ ಕಸ ಕಡ್ಡಿಗಳೇ ಈ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಆಧಾರ. ಅದರ ಚುಂಚೇ ಅದರ ಅಳತೆಗೋಲು. ಎಲ್ಲ ಗೂಡುಗಳು ಸಮಾನ ಆಕಾರ. ಅಬ್ಬಾ ಪ್ರಕೃತಿ ಸೊಬಗು ಅದೆಷ್ಟು ಚೆಂದ ಅಲ್ವಾ.

ಅದೇ ತರ ಬೆಂಗಳೂರು ಇಂದಿರಾ ನಗರದ ಲೇಖಕಿ ಲತಾ ಕೆ.ಎಸ್. ಹೆಗಡೆ ಅವರು ಸಂಗ್ರಹಿಸಿದ ‘ಗುಬ್ಬಿಯ ಗೂಡು’ ಕಥಾಸಂಕಲನವಿದೆ. ಗುಬ್ಬಿ ಹೇಗೆ ತನ್ಮಯತೆಯಿಂದ ತನ್ನ ಗೂಡಿಗೆ ಬೇಕಾದ ಕಡ್ಡಿಗಳನ್ನು ಸಂಗ್ರಹಿಸುತ್ತದೆಯೋ ಅದೇ ತರ ಸಮಾಜದ ಎಲ್ಲ ಮಗ್ಗಲುಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಲೇಖಕಿ.

ಪುಸ್ತಕವನ್ನು ತೆಗೆದು ಓದಲು ಆರಂಭಿಸಿದರೆ ಕೆಳಗೆ ಇಡಲು ಮನಸ್ಸು ಬರಲೇ ಇಲ್ಲ. ಒಂದಾದ ಮೇಲೊಂದು ಕಥೆಗಳು ಚಿಂತನೆಗೆ ಹಚ್ಚಿದವು. ನಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಅನಾವರಣ ಅದೆಷ್ಟು ಕಾಳಜಿಯಿಂದ ಕಟ್ಟಿಕೊಟ್ಟಿದ್ದಾರಲ್ಲ ಅನಿಸಿತು.
ಜಾತ್ರೆಯ ಸಂಭ್ರಮ, ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವ ದಲ್ಲಾಳಿಗಳ ಹಿಂಸೆ, ಗಾಳಿ ಮಾತಿನಿಂದ ಹೆಣ್ಣೊಬ್ಬಳು ಸಮಾಜದಲ್ಲಿ, ಮನೆಯಲ್ಲಿ ಅನುಭವಿಸುವ ಸಂಕಟ, ಹೆತ್ತ ಮಗು ಹೇಗೆ ಇದ್ದರೂ ಅದನ್ನು ಕಾಪಾಡಿಕೊಳ್ಳುವ ತಾಯಿಯ ಕರುಳು, ವಿದೇಶದಲ್ಲಿ ಯುವತಿಯೊಬ್ಬಳು ಅನುಭವಿಸಿದ ಕಷ್ಟ, ಜತೆಗೆ ನಂಬಿದ ದೇವರು ಕೈಹಿಡಿದ ಪರಿ, ದೈಹಿಕ ಚಿಂತೆಗಳು, ಕೊರೊನಾ ಕಾಲದ ಪರಿಸ್ಥಿತಿಗಳು, ಕನ್ನಡಿಯನ್ನು ವರ್ಣಿಸಿದ ಪರಿ, ಪರಿಸರದ ಕಾಳಜಿ ಕಡೆಗೆ ನಾವೇನೆ ಅಂದುಕೊಂಡರೂ ಸಮಾಜ ನಮಗೆ ಕೊಡುವ ವ್ಯಂಗ್ಯ ನಾಮಾವಳಿ…ಎಲ್ಲವೂ ಈ ‘ಗುಬ್ಬಿಯ ಗೂಡು’ ಕಥಾ ಸಂಕಲನದಲ್ಲಿ ಅಡಕವಾಗಿವೆ…
ಓದುಗನ ಮನಸ್ಸನ್ನು ತಣಿಸುವ ಈ ಕಥೆಗಳು ನಮ್ಮ ಸುತ್ತಲಿನ ಘಟನೆಗಳಿಗೂ ಜೀವ ತುಂಬಿಸುವಂತೆ ಇವೆ….ಈ ಪುಸ್ತಕ ನಮ್ಮನೆಯೊಳಗೊಂದು ಪುಟ್ಟ ‘ಗುಬ್ಬಿಯ ಗೂಡು’ ಕಟ್ಟಿದಂತೆ ಇದೆ….
ನನಗೂ ‘ಗುಬ್ಬಿಯ ಗೂಡು’ ಒಳಗಿನ ಕಥಾ ಸಂಕಲನದ ಸವಿ ಸವಿಯಲು ಅವಕಾಶ ಮಾಡಿಕೊಟ್ಟ ಲತಾ ಮೇಡಂಗೆ ಧನ್ಯವಾದಗಳು…
- ರಾಘವೇಂದ್ರ ಪಿ ಅಪರಂಜಿ
