ನಾನು ಮರಳಿ ಬಂದಾಗ ಗುಲಾಬಿ ಇತ್ತು, ಆ ಕ್ಷಣದ ಸಾಕ್ಷಿಯಾಗಿದ್ದೇನೆ ನಾನು…ಯುವ ಕವಿಯತ್ರಿ ದೀಪಾ ವಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಪ್ರಭಾತದ ಮೌನದಲ್ಲಿ ಗುಲಾಬಿ ಅರಳಿತ್ತು,
ಬೆಳಗಿನ ಬೆಳಕು ಅದರ ಎದೆಗೆ ತಾಗಿದಾಗ
ನನ್ನ ಕಣ್ಣುಗಳಿಗೆ ಮಾತ್ರ ಗೋಚರಿಸಿದ
ಮುತ್ತಿನ ಹನಿಗಳೊಂದು ಅದನ್ನು ಅಲಂಕರಿಸಿತ್ತು.
ಅದು ಕ್ಷಣಿಕವಾದರೂ ಶುದ್ಧವಾಗಿತ್ತು,
ಸತ್ಯವೇ ತಾನಾಗಿ ಇಳಿದು ಬಂದು
ಆ ಹೂವಿನ ಮೇಲೆ ಮುತ್ತಿಟ್ಟು
ಯಾವುದೇ ಶಬ್ದವಿಲ್ಲದೆ ದೂರ ಸರಿಯಿತು.
ನಾನು ಮರಳಿ ಬಂದಾಗ ಗುಲಾಬಿ ಇತ್ತು,
ಆದರೆ ಅದರ ಮುತ್ತುಗಳು ಇಲ್ಲ,
ಜನರು “ಇದ್ದೇ ಇರಲಿಲ್ಲ” ಎಂದು ಹೇಳಿದರು,
ನಂಬಿಕೆಯೂ ಅವರ ಮಾತಿಗೆ ತಲೆಯೊಗ್ಗಿತು.
ಆದರೂ ನನ್ನೊಳಗೆ ಒಂದು ನಿಶ್ಶಬ್ದ ಸತ್ಯ,
ಒಮ್ಮೆ ಆ ಸೌಂದರ್ಯ ಬದುಕಿತ್ತು ಎಂಬುದು,
ಕಣ್ಣಿಗೆ ಕಾಣದಿದ್ದರೂ ಮರೆಯಲಾಗದ
ಆ ಕ್ಷಣದ ಸಾಕ್ಷಿಯಾಗಿದ್ದೇನೆ ನಾನು.
- ದೀಪಾ ವಿ – ದಂತ ವೈದ್ಯರು, ಬೆಂಗಳೂರು
