ಅರಿಯದ ಮಾತಿಗಿಷ್ಟು ಸಿಟ್ಟು ತರವೆ ಚೆಲುವೆ…ಬರೆಯುವೆ ನಿನಗೆ ಮತ್ತೇನ ಅರಿಯೆ…ಪದಗಳೆಲ್ಲ ನಿನ್ನನ್ನೆ ಹಾಡುವವು…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬರೆಯುವ ಪದಗಳು ನಿನ್ನನ್ನೇ ಹಾಡುವವು
ಮತ್ತೆ ಮತ್ತೆ ಬರೆಯಲು ಕೇಳುವವು
ಹತ್ತಿರಿರದ ನಿನ್ನ ಮೇಲೆ ಪದಗಳಿಗೆ ಒಲವು
ಎತ್ತ ತಿರುಗಲು ಬಿಡದೆ ಬರೆಸುವವು
ಒಮ್ಮೆ ಬರೆದೆನು ನಿನ್ನೊಲವ ಸ್ಪೂರ್ತಿ ನೆನೆದು
ಬರೆಯುತ್ತಿರಲು ಪದಗಳ ಕುಣಿತ
ಕ್ಷಣ ಕ್ಷಣವು ಸ್ಮರಿಸುವೆನೆ ಪದಗಳಿಗೆ ಮಣಿದು
ಬರೆಯಲು ನಿನ್ನೊಲವು ಅಗಣಿತ
ಭಾವನೆಗಳ ಓಘಕ್ಕೆ ಇಲ್ಲ ಮನದಿ ಕಡಿವಾಣ
ಹಾಡುವೆ ಬಳಿಗೆ ಬಾ ನೀ ಮತ್ತೊಮ್ಮೆ
ನಿನ್ನ ನೆನಪೆ ನನ್ನ ಪ್ರೀತಿ ಕನವರಿಕೆಗೆ ನಿಲ್ದಾಣ
ಮುನಿಸು ಬಿಟ್ಟು ನೋಡು ಇನ್ನೊಮ್ಮೆ
ಅರಿಯದ ಮಾತಿಗಿಷ್ಟು ಸಿಟ್ಟು ತರವೆ ಚೆಲುವೆ
ಬರೆಯುವೆ ನಿನಗೆ ಮತ್ತೇನ ಅರಿಯೆ
ಪದಗಳ ಹೊಸೆವೆ ಮತ್ತಾವ ಆಸೆಗು ಮಣಿಯೆ
ನಿನ್ನನ್ನೆ ಹಾಡಲು ಎಂದೆಂದು ದಣಿಯೆ
ಕೇರಿ ತಿರುವಲ್ಲಿ ಬರುವ ನಿನಗೆ ಕಾಯುವುದೆ
ನನ್ನ ಪದಗಳ ನಿತ್ಯ ಕಾಯಕವಾಗಿದೆ
ದೇವರಲ್ಲಿ ನಿನಗಾಗಿ ಮೊರೆಯಿಟ್ಟು ನಿಲ್ಲುವುದೆ
ನನ್ನ ಜೀವನದ ಏಕೈಕ ಗುರಿಯಾಗಿದೆ
ಮಾತನ್ನೆ ಹಿಡಿದು ಕೂತರೆ ಬದುಕಿದು ನಿಲ್ಲದು
ನೀನಿಲ್ಲದ ದಿನಗಳಿವು ಸುಡು ಬೇಸಿಗೆ
ಪದಗಳ ಕರೆಯ ಕೇಳು ನನ್ನೊಲವು ನಿನ್ನದು
ನೀ ಬರಲು ವಸಂತ ಮನದ ಮನೆಗೆ
- ಟಿ.ಪಿ.ಉಮೇಶ್ – ಸಾಹಿತಿಗಳು, ಹೊಳಲ್ಕೆರೆ.
