ಹೆಣ್ಣಾಗಿದ್ದಕ್ಕೆ ಸಂಕಟಬೇಡ – ದೀಪಿಕಾ ಬಾಬು

ಅಮ್ಮ ಪಾಯ ಹಾಕಿದ್ದರು… ಅವನು ಗೋಡೆ ಕಟ್ಟಿ ಎತ್ತರಿಸಿದ… ನಾನೇ ಮಾಡು ಹಾಕಿ ಮುಚ್ಚಿಕೊಂಡ ಸಮಾಧಿಯ ಇಟ್ಟಿಗೆಗಳನೆಲ್ಲ ಕಿತ್ತಾಕಿ ಇದ್ದ ಬದ್ದ ಉಸಿರನೆಲ್ಲ ಬಸಿದು ಧೈರ್ಯವಾಗಿ ಬರೆದೆ, ದೀಪಿಕಾ ಬಾಬು ಅವರು ಬರೆದ ಆ ಕವಿತೆಯವುದು ತಪ್ಪದೆ ಮುಂದೆ ಓದಿ….

ಸಿಗರೇಟನ್ನು ಸೇದದೆ ಸುಮ್ಮನೆ ಸುಡುವಂತೆ ಹಗಲು ಇರುಳುಗಳನ್ನು ಸುಟ್ಟುಹಾಕಿದೆ. ಕೊಂಡುಕೊಂಡ ಪುಸ್ತಕಗಳು, ಅದರಲ್ಲಿನ ಕತೆಗಳು ಅಲ್ಲೇ ಉಳಿದವು, ಓದಿ ಏನಾಗಬೇಕು , ಬದುಕೇ ಮುಗಿದು ಹೋಗಿದೆ, ಇನ್ಯಾರದ್ದೋ ಕತೆ ಕಟ್ಟಿಕೊಂಡು ಏನುಮಾಡಲಿ ಎನ್ನುವ ತಾತ್ಸಾರ, ನನ್ನ ಕತೆ ಹೇಳಿಕೊಳ್ಳಲು ಒಬ್ಬರು ಗತಿ ಕೂಡ ಇರಲಿಲ್ಲ, ಜನರ ಸಮಯಕ್ಕೆ ಕಾಸಿನ ಕಿಮ್ಮತ್ತು , ಒಂಟಿತನ.

ಧೈರ್ಯವಿರದ ಬದುಕು ಒಂದು ಬದುಕಾ ಅನಿಸಿತು. ಬದುಕಿನ ಮೇಲೆ ಸಿಟ್ಟು , ಅಮ್ಮನ ಮೇಲೆ ಸಿಟ್ಟು , ನನ್ನ ಮೇಲೆ ಸಿಟ್ಟು , ಅವನ ಮೇಲೆ ಸಿಟ್ಟು ….ಅವನೇ ಪ್ರಪಂಚ ಎಂದು ಕೊಂಡಿದ್ದಾಗ , ಅವನ ನಿರ್ದಾಕ್ಷಿಣ್ಯ ತಿರಸ್ಕಾರದಿಂದ , ಇಡೀ ಪ್ರಪಂಚವೇ ನನ್ನನ್ನು ತಿರಸ್ಕರಿಸಿ ಬಿಟ್ಟಿತು ಎನ್ನುವ ಭಯ. ಮುಂದೇನು ತತ್ತರಿಸಿ ಹೋದೆ ಎಲ್ಲ ಗಂಡಸರು ಹೆಚ್ಚು ಕಡಿಮೆ ಒರಟಾಗೆ ಸ್ಪಂದಿಸಿದ್ದರು. ಅವನು ತಿರಸ್ಕರಿಸುವಂತ ತಪ್ಪನ್ನು ನೀನು ಏನು ಮಾಡಿದೆ ಕೇಳುತ್ತಿದ್ದರು. ಬಾಯಿಗೆ ಬಂದಂಗೆ ನೀತಿ ಪಾಠ ಮಾಡಿದರು. ಬಯಸಿದಂತೆ ಉಪಯೋಗಿಸಿಕೊಳ್ಳುವುದು ಅವನ ಹಕ್ಕು, ಅದಕ್ಕಿಂತ ನಿನ್ನ ಕರ್ತವ್ಯ ಏನಿದೆ ಎಂಬಂತೆ ನಿರ್ಣಯ ಕೊಟ್ಟರು …ನಾನು ಓದಿದ್ದು, ಬರೆದಿದ್ದು, ಬೆಳೆದಿದ್ದು, ಬದುಕಿದ್ದು,ಕೆಲಸ ಮಾಡುತ್ತಿರುವುದು ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಲಾಜಿಕ್ ಗಳ ಮೇಲೆ ನಾಲಿಗೆ ಹೋದಂಗೆ ಮಾತಾಡಿದರು. ಮರುಗಟ್ಟಿ ಹೋದೆ.

ಕವನಗಳು ವಿಷಾದವನ್ನೇ ಉಸಿರಾಡಿದವು. ಯಾರನ್ನು ತಲುಪದೇ ಮಲಗಿದವು. ಬಡವನ ಕೋಪ ದವಡೆಗೆ ಮೂಲ ಎಂಬಂತೆ ಏನೂ ಪ್ರಯೋಜನಕ್ಕೆ ಬರಲಿಲ್ಲ. ಬರೆದು ಏನಾಗಬೇಕು ಎನ್ನುವ ಉದಾಸೀನತೆ. ಯಾವೊಂದು ವಿಷಯದಲ್ಲೂ ಆಸಕ್ತಿ ಉಳಿಯಲಿಲ್ಲ. ಬದುಕಲ್ಲಿ ಭರವಸೆ ಇರಲಿಲ್ಲ. ಇನ್ನಿಲ್ಲದಂತೆ ಬಲವಂತದಿಂದ ಬದುಕಿದೆ…ಅವನು ವಾಪಸು ಬಾರದ ಹೊರತು ಏನನ್ನೂ ಪ್ರೀತಿಸಲಾರೆ ಎಂದುಕೊಂಡು ಸುಮ್ಮನೆ ಜಡಗಟ್ಟಿ ಹೋದೆ.

ಅವನೊಬ್ಬ ಹುಡುಗ ಎಲ್ಲ ಗಂಡಸರಂತೆ ಮಾತಾಡಲಿಲ್ಲ. ಕನಿಕರವಿತ್ತು, ತಿಳುವಳಿಕೆ ಇತ್ತು , ಕನಿಷ್ಠ ಪಕ್ಷ ನೋಯಿಸಬಾರದು ಎನ್ನುವ ಕಾಳಜಿ ಇತ್ತು, ಶಿಷ್ಟಾಚಾರವಿತ್ತು… ಸಣ್ಣ ಭರವಸೆ ನೀಡಿದ. ಏನೋ ಬರೆದು ಕೊಂಡೆ..ಇನ್ಯಾರೋ ಹುಡುಗ ಸ್ಪಂದಿಸಿದ..ನಿಮ್ಮ ಕವನಗಳನ್ನು 5 -6 ವರ್ಷಗಳ ಹಿಂದೆಯೇ ಸ್ವೀಕರಿಸಿದ್ದೆ ಎಂದ. ನಿಮ್ಮನ್ನು ಪ್ರೀತಿ ಮಾಡಿದ್ದೆ ಎಂದ…. ಆಗ ಕರೆದ್ದಿದ್ದರೆ ಬದುಕಿಗೆ ಬಂದಿರುತ್ತಿದ್ದಿರ ತುಂಟ ಪ್ರಶ್ನೆ ಕೇಳಿದ.

ತಿರಸ್ಕಾರ, ನೋವು, ಹಿಂಸೆಯನ್ನೇ ಉಂಡುಂಡು ಸತ್ತಿದ್ದವಳಿಕೆ ಸಣ್ಣ ಎಳೆಯಲ್ಲಿ ಜೀವ ಚೈತನ್ಯ.  ಹೆಣ್ಣೆ ಅಲ್ಲ ಎಂದವರಿಗೆ, frigid ಎಂದವರಿಗೆ, ಬೆಂಕಿ ಎಂದವರಿಗೆ , ಬೇಡ ಎಂದವರಿಗೆ ಹೇಳಬೇಕಿತ್ತು ಒಬ್ಬ ಪ್ರೀತಿಯ ಗಂಡ, ಮುದ್ದು ಮಗು, ಬೆಚ್ಚಗಿನ ಮನೆ, ಚೆಂದದ ಸಂಸಾರ , ಪ್ರೀತಿಯ ತೇರು ಅಷ್ಟೇ ನನ್ನ ಕವನ, ಕನಸು, ಬದುಕು ಬಯಸಿದ್ದು, ಕನವರಿಸಿದ್ದು ಎಂದು. ಅದನ್ನೂ ನೀಡಲಾಗದ ಅವನೊಬ್ಬ ಶುದ್ಧಾನು ಶುದ್ಧ ಅಯೋಗ್ಯ ಎಂದು.

ಅಮ್ಮ ಪಾಯ ಹಾಕಿದ್ದರು , ಅವನು ಗೋಡೆ ಕಟ್ಟಿ ಎತ್ತರಿಸಿದ , ನಾನೇ ಮಾಡು ಹಾಕಿ ಮುಚ್ಚಿಕೊಂಡ ಸಮಾಧಿಯ ಇಟ್ಟಿಗೆಗಳನೆಲ್ಲ ಕಿತ್ತಾಕಿ ಇದ್ದ ಬದ್ದ ಉಸಿರನೆಲ್ಲ ಬಸಿದು ಧೈರ್ಯವಾಗಿ ಬರೆದೆ …

ಅದ್ಭುತ ಪ್ರೆಯಸಿಯಾಗಬಲ್ಲೆ
ಅಪ್ಪಟ ಪ್ರೇಮಿಯೊಬ್ಬಬೇಕು
ಅವನ ಕನಸುಗಳನೆಲ್ಲ
ಕೊಂಡುಕೊಂಡು ಬಿಡಬಲ್ಲೆ
ತ್ವರಿತಕ್ಕೆ ಒಂದಿಷ್ಟು ಕವನಗಳು
ಮಾತ್ರ ಮಾರಾಟಕ್ಕಿವೆ
ಅರ್ಹತೆಯ ಅಗತ್ಯ ಒಂದೇ
ಪ್ರೀತಿಸಲ್ಪಡುವ ಯೋಗ್ಯತೆ
ಉದ್ದ ಆಳ ಅಗಲ ಸವಿಸ್ತಾರವಾಗಿ
ಪ್ರೀತಿಸಿದರು ಮುಗಿಯದಷ್ಟು ದಾಹವಿದೆ
ಹೆಣ್ಣಾಗಿದಕ್ಕೆ ಸಂಕಟಬೇಡ
ಇನ್ನು ಮುಂದೆ
ಹಳೆ ಜನ್ಮದ ಪಾಪವೆಲ್ಲ ತೊಳೆದುಕೊಂಡು ಬಿಡುವೆ
ಸಂಭ್ರಮಕ್ಕೆ ಒಂದು ಚೆಂದದ ನೆವ ಬೇಕು
ಯಾರಾದರು ಇದ್ದೀರಾ ಕಣ್ಣ ಹಿಂದೆ ??

ಯಾರಿಗೆ ಅರ್ಪಿಸಬೇಕೋ, ಎಲ್ಲಿ ಕೂಗಿ ಓದಬೇಕೋ ತಿಳಿಯದೆ ಸಂತೆಯಲ್ಲಿ ಕಳೆದು ಹೋದೆ .. ಕನಿಷ್ಠ ಪಕ್ಷ ಕನಸಲ್ಲಿ ಮತ್ತೆ ಬದುಕಿ ಬಂದೆ.


  • ದೀಪಿಕಾ ಬಾಬು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading