ಹರಿದು ಬಿಡಲಿ ಬಾನ ಬಯಲ ಶೂನ್ಯದಲಿ ನನ್ನ ದುಃಖ…ಕವಿ ಹೆಚ್ ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಹರಿದು ಬಿಡಲಿ
ನನ್ನ ದುಃಖ
ಕವಿದ ಕಾರಿರುಳ
ಮಸಣ ಮೌನಗಳಲ್ಲಿ
ಭಣ ಗುಟ್ಟುವ ನಿರ್ಜನ
ಹೊರಳು ಹಾದಿಗಳಲ್ಲಿ
ಹರಿದು ಬಿಡಲಿ
ನನ್ನ ದುಃಖ
ಕತ್ತಲು ಕವಿದ
ದಟ್ಟಡವಿಯ ಮೂಲೆಗಳಲ್ಲಿ
ನರಪಿಳ್ಳೆಯೂ ಸುಳಿಯದ
ಹಾಳು ಕೊಂಪೆಗಳಲ್ಲಿ
ಹರಿದು ಬಿಡಲಿ
ನನ್ನ ದುಃಖ
ಬಾನ ಬಯಲ
ಶೂನ್ಯದಲಿ
ಸಾಗರದ ಒಡಲ
ಪಾತಾಳದಲಿ
ಹರಿದು ಬಿಡಲಿ
ನನ್ನ ದುಃಖ
ಕಡಲ ಅಲೆಗಳ
ಮೊರೆತಗಳಲ್ಲಿ
ಮೌನದಿ ನಿಂತ
ಬೆಟ್ಟ ಕಣಿವೆಗಳಲ್ಲಿ
ಏಕೆಂದರೆ
ಪ್ರಶ್ನಿಸುವುದಿಲ್ಲ ಇವು ನಮ್ಮನ್ನು
ನಮ್ಮ ದುಃಖಗಳಿಗೆ ಕಾರಣವನ್ನು
ಕೇಳಿ ಕೆದಕಿ
ಉಂಟು ಮಾಡುವುದಿಲ್ಲ ಮತ್ತೆ ಮತ್ತೆ
ಮನಕೆ ನೋವನ್ನು.
- ಹೆಚ್ ಪಿ. ಕೃಷ್ಣಮೂರ್ತಿ, ಬೆಂಗಳೂರು
