ಜೈಲಿನ ಕಂಬಿಯ ಹಿಂದೆ ಹಸಿವಿನಿಂದ ನರಳುತ್ತಿದ್ದ ತಂದೆಗೆ ತನ್ನ ಹಾಲನ್ನು ಕುಡಿಸಿ ಜೀವ ಉಳಿಸಿದಳು ಆಕೆ. ಹೆಣ್ಣು ಕರುಣಾಮಯಿ, ದಯಾಮಯಿ. ಹೆಣ್ಣಿನ ಬಗ್ಗೆ ಕವಿಯತ್ರಿ ಧರಣೀ ಪ್ರಿಯೆ ಅವರು ಸುಂದರವಾದ ಕವನವನ್ನು ರಚಿಸಿ, ಓದುಗರ ಹೃದಯದಲ್ಲಿ ನೆಲೆಸುವಂತೆ ಮಾಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಮಗಳು ತನ್ನಯ ತಂದೆ ಬದುಕಲು
ಮಗುವು ಕುಡಿಯುವ ತನ್ನ ಹಾಲನು
ಸಿಗುತ ದಿನವೂ ಭೇಟಿ ಮಾಡುತ ಹಾಲುಣಿಸುವುದನು!
ಸೊಗಸು ಗಾರನು ಚಿತ್ರ ಬಿಡಿಸಿದ
ಜಗಕೆ ಹೆಣ್ಣಿನ ಗುಣವ ತೋರಿದ
ತೆಗೆದ ತನ್ನಯ ಮನದಿ ಮೂಡಿದ ಚೆಂದ ಪಟವನ್ನು!!
ನಡೆದ ಘಟನೆಯು ಬೇರೆ ದೇಶದಿ
ಮಿಡಿದ ಹೃದಯವು ಹೆಣ್ಣ ಮನವಿದು
ತುಡಿತಗೊಂಡಿದೆ ತಂದೆ ಹಸಿವಿಗೆ ಮಗಳು ತಾಯಾಗಿ!
ತಡೆದು ಕಂದನ ಹಸಿವ ಕಂದಿಸಿ
ಹಿಡಿದು ಮನವನು ಗಟ್ಟಿ ಮಾಡುತ
ಕೊಡುತ ತನ್ನೆದೆ ಹಾಲುಣಿಸಿದಳು ಪುತ್ರಿ ಕನಿಕರದಿ !!
ಹೊರಗೆ ಕಾದಿಹ ಜನರು ಚಕಿತದಿ
ಬರಲು ನಡೆದುದ ನೋಡಿ ಹೇಳಲು
ಜರುಗಿ ಹೋಗಲು ದಿನವುಸಿಗುತಿರೆ ಹಾಲು ಮನುಜನಿಗೆ!
ಬರದೆ ಸನಿಹಕೆ ದೂರ ಸರಿದಿದೆ
ಕೊರತೆಗಾಣದೆ ಬದುಕು ತಿರುವನು
ಸರಿದು ಹೋಗಿದೆ ಸಾವು ಬರದೆಯೆ ಯೆಂದು ತಿಳಿಯುತಲಿ!!
- ಧರಣೀ ಪ್ರಿಯೆ ದಾವಣಗೆರೆ
