ದೂರ ಸರಿದರೂನು ಈಗ ತಂತು ಹರಿಯಬಿಡದೆ ಇಲ್ಲಿ…ಸಾಲುಸಾಲು ದೀಪ ಬೆಳಗಿ ನೀವು ಹೋದಿರೆಲ್ಲಿಗೆ…! ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಾದಂಬರಿ ಭೈರವರಾಗಿ
ಕನ್ನಡದ ಡಿಂಡಿಮವ ಬಾರಿಸಿ
ಬರೆಹ ಪರ್ವ ಬಾಳಿ ನೀವು
ಮೌಲ್ಯಗಳ ಬಿತ್ತಿ ತಾವು
ಹೀಗೆ ..ಹೋದಿರೆಲ್ಲಿಗೆ…?
ಜನಪ್ರಿಯತೆಯ ಮಂದ್ರದಲ್ಲಿ
ಭರ್ತ್ಸನೆಗಳಿಗೆ ಎದೆಯನೊಡ್ಡಿ
ಅಚಲ ತತ್ವದಲ್ಲಿ ನಡೆದ ನೀವು
ನೀವು ಹೋದುದೆಲ್ಲಿಗೆ….
ದೂರ ಸರಿದರೂನು ಈಗ
ತಂತು ಹರಿಯಬಿಡದೆ ಇಲ್ಲಿ
ಚಿತ್ತ ಭಿತ್ತಿಯಲ್ಲಿ ಚಿತ್ರವಾಗಿ
ಸಾಲುಸಾಲು ದೀಪ ಬೆಳಗಿ
ನೀವು ಹೋದಿರೆಲ್ಲಿಗೆ…!
ಅರಸಿ ಅರಸಿ…ಸುತ್ತಿ ಸುತ್ತಿ
ಹೊಳೆದ ವಿಚಾರಗಳ ಬೆನ್ನು ಹತ್ತಿ
ವಿರಮಿಸದೆ ಅನ್ವೇಷಿಸಿ…ಅಲೆದು
ನಿಜದ ಬೆನ್ನ ಹತ್ತಿ
ನೀವು ಹೋದಿರೆಲ್ಲಿಗೆ..?
ಮುಗಿಯಿತೇನು ನಿಮ್ಮ ಕೆಲಸ
ಮಾಡಿ ಮುಗಿಸಿ ನಿರ್ಭೀತ
ಕಲಾಸಾಹಿತ್ಯಾಂತರ್ಗತ ಧೀಮಂತ
ಸಂಸ್ಕೃತಿ ಪರಂಪರೆಯ ಶ್ರೀಮಂತ
ಇನ್ನೂ ಏನನರಸಿ ಹೋದರಲ್ಲಿಗೆ…?
ಧೀರೋದಾತ್ತ ಮತದ ನಿಲುವು
ಅಭಿವ್ಯಕ್ತಿಯ ದಿಟ್ಟತನವು
ಅಪರೂಪದ ಅಪ್ಪಟ ಚೈತನ್ಯವು
ಬಡವಾಗಿಸಿ ಸಾಹಿತ್ಯಲೋಕವ
ನೀವು ಹೋದಿರಾವ ಊರಿಗೆ..
ಮತ್ತೆ ಬರುವಿರೇನು ಇಲ್ಲಿಗೆ…?
- ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಅಂಕಣಕಾರ್ತಿ, ಕೊಡಗು
