ಚಿಕ್ಕವರಿದ್ದಾಗ ಒಂದು ರೀತಿಯ ಭಾವನೆಗಳಿರುತ್ತದೆ. ದೊಡ್ಡವರಾದರೆ ಓದುವುದು ಇರುವುದಿಲ್ಲ, ಕೈಯಲ್ಲಿ ಹಣವಿರುತ್ತದೆ ಎನ್ನುವ ಭಾವ, ಅದೇ ದೊಡ್ಡವರಾದಾಗ ಚಿಕ್ಕವರಿದ್ದಾಗ ಮನೆಯ ಸಾಲ, ಮನೆ ಮಕ್ಕಳ ಜವಾಬ್ದಾರಿ ಇರಲಿಲ್ಲ ಬಾಲ್ಯವೇ ಚನ್ನಾಗಿತ್ತು ಎನ್ನುವ ಭಾವ. ನಟರಾಜು ಮೆದುನಹಳ್ಳಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ನಾವು ಚಿಕ್ಕವರಿದ್ದಾಗ ಯಾವಾಗ ದೊಡ್ಡವರಾಗುತ್ತೇವೋ ಅಂದುಕೊಳ್ಳುತ್ತಿರುತ್ತೇವೆ. ದೊಡ್ಡವರಾದರೆ ಸಂಬಳ ಬರುತ್ತದೆ, ಅಪ್ಪನನ್ನು ಖರ್ಚಿಗೆ ದುಡ್ಡು ಕೇಳುವ ಹಾಗಿಲ್ಲ, ಬೇಕಾದ್ದನ್ನು ಕೊಂಡುಕೊಳ್ಳಬಹುದು, ಎಲ್ಲಿಗಾದರೂ ಹೋಗಬೇಕಾದರೆ ಯಾರ ಪರ್ಮಿಷನ್ ಕೇಳುವ ಹಾಗಿಲ್ಲ, ಸುಂದರ ಸಂಗಾತಿಯನ್ನು ಮದುವೆಯಾಗಿ ಆಕೆಯ ಜೊತೆ ಸುಖವಾಗಿರಬಹುದು, ನಮ್ಮ ಇಷ್ಟದ ಹೊಸ ಮನೆ ಕಟ್ಟಿಕೊಳ್ಳಬಹುದು, ಹೊಸ ಕಾರು ತೆಗೆದುಕೊಂಡು ಜಮ್ ಅಂಥ ಓಡಾಡಬಹುದು, ಬೇಕಾದ ಬಟ್ಟೆ ತಗೋಬಹುದು, ಎಲ್ಲಕ್ಕಿಂತ ಮುಖ್ಯವಾಗಿ ಶಾಲೆಗೆ ಹೋಗಬೇಕಾಗಿಲ್ಲ, ಹೋಂ ವರ್ಕ್ ಬರೆಯಬೇಕಾಗಿಲ್ಲ, ಎಕ್ಸಾಂಗೆ ನಿದ್ದೆಗೆಟ್ಟು ಓದಬೇಕಾಗಿಲ್ಲ, ಎಷ್ಟು ಹೊತ್ತು ಟಿವಿ, ಸಿನಿಮಾ ನೋಡಿದರೂ, ಕ್ರಿಕೆಟ್ ಆಡಿದರೂ ಬೈಯುವವರಿರುವುದಿಲ್ಲ… ವ್ವೆ…ವ್ವೆ..ವ್ವೆ ಹೀಗೆ.

ದೊಡ್ಡವರಾದ ಮೇಲೆ :
ಬಾಲ್ಯ ಎಷ್ಟು ಚೆನ್ನಾಗಿತ್ತು, ಯಾವ ಜವಾಬ್ದಾರಿಯೂ ಇಲ್ಲದೆ ಫ್ರೆಂಡ್ಸ್ ಜೊತೆ ಆಟ ಆಡ್ತಿದ್ವಿ, ಹೊಲ, ತೋಟ, ನದಿ, ಕೆರೆ ಎಲ್ಲಾ ಆರಾಮಾಗಿ ಸುತ್ತಾಡ್ತಿದ್ವಿ, ನೆಂಟರ ಮದುವೆಗಳಿಗೆ ಹೋದರೆ ನಾಲ್ಕೈದು ದಿನ ಖುಷಿಯಾಗಿ ಫ್ರೆಂಡ್ಸ್ ಜೊತೆ ಇರುತ್ತಾ ಅಲ್ಲೇ ಠಿಕಾಣಿ ಹೂಡ್ತಿದ್ವಿ, ಸ್ಟೂಡೆಂಟ್ ಲೈಫ್ ಎಷ್ಟು ಚೆನ್ನಾಗಿತ್ತು, ಈಗ ಬೆಳಗ್ಗೆ ಎದ್ದರೆ ಡ್ಯೂಟಿಗೆ ಹೋಗಬೇಕು, ಯಾವುದೇ ಮದುವೆಗೆ ಸಮಾರಂಭಕ್ಕೆ ಹೋದರೂ ಅಟೆಂಡ್ ಮಾಡಿ, ಊಟ ಮುಗಿಸಿ ತಕ್ಷಣ ವಾಪಸ್ ಬರಬೇಕು ಎನ್ನುವ ಬ್ಯುಸಿ ಶೆಡ್ಯೂಲ್ , ನೆಂಟರ ಮನೆಗಳಿಗೆ ಹೋಗಲಾರದಷ್ಟು ಕೆಲಸಗಳ ಒತ್ತಡಗಳು, ಜವಾಬ್ದಾರಿಗಳು, ಮನೆ ಸಾಲ, ಕಾರು ಸಾಲ ಮುಂತಾದವುಗಳ EMI ಹೊಂದಿಸುವ, ಮಕ್ಕಳಿಗೆ ಒಳ್ಳೆಯ ಶಾಲೆಗಳಲ್ಲಿ ಓದಿಸಬೇಕು ಎಂದು ದುಬಾರಿ ಫೀಸ್ ಹೊಂದಿಸಲು ಹೆಣಗಾಡುವ ಆರ್ಥಿಕ ಯೋಚನೆಗಳು, ಬಿಪಿ, ಶುಗರ್ ಇತರೆ ಕಾಯಿಲೆಗಳು ವಕ್ಕರಿಸಿ ಬಯಸಿದ್ದನ್ನು ತಿನ್ನಲಾರದ ಸಂಕಟ, ದೇಹ ಫಿಟ್ ಆಗಿ ಇಟ್ಟುಕೊಳ್ಳಲು ಬಲವಂತದ ವಾಕಿಂಗ್, ಜಾಗಿಂಗ್, ಯೋಗ, ಡಯಟ್ ಗಳು,… ಯಾವಾಗ ಬೇಕಾದರು ಸಾವು ಬರಬಹುದು, ಈ ಜೀವನ ಕ್ಷಣಿಕ ಎಂದು ಅರಿವಾಗಿರುತ್ತದೆ, ಮತ್ತೊಮ್ಮೆ ಬಾಲ್ಯ ಸಿಕ್ಕರೆ ಎಷ್ಟು ಚೆಂದ ಎಂದು ಪ್ಲಾಷ್ ಬ್ಯಾಕ್ ಗೆ ಹೋಗುತ್ತೇವೆ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..
- ನಟರಾಜು ಮೆದುನಹಳ್ಳಿ
