ಕನ್ನಡ ಪುಸ್ತಕ ಪ್ರಾಧಿಕಾರದಿಂದ 2019ನೇ ಸಾಲಿನ ಚೊಚ್ಚಲ ಕೃತಿಗೆ ಕೊಡಮಾಡುವ ಬಹುಮಾನಕ್ಕೆ ಕಡಮ್ಮಕಲ್ಲು ಎಸ್ಟೇಟ್ ಕೃತಿ ಆಯ್ಕೆಯಾಗಿದೆ, ಈ ಪುಸ್ತಕದ ಕುರಿತು ಪತ್ರಕರ್ತ ವೈ ಜಿ ಅಶೋಕ್ ಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಕಡಮ್ಮಕಲ್ಲು ಎಸ್ಟೇಟ್
ಲೇಖಕರು: ನೌಶಾದ್ ಜನ್ನತ್ತ್
ಪ್ರಕಾಶನ : ನಮ್ಮ ಕೊಡಗು ಪ್ರಕಾಶನ
ಬೆಲೆ :೧೦೦/
ತಂಗಾಳಿಯಲ್ಲಿ ಹಾರಾಡುವ ಆ ನಿನ್ನ ಮುಂಗುರುಳನ್ನು ಮಿರು ಮಿರುಗುವ ಆ ನಿನ್ನ ರೂಪವನ್ನು ಸದಾ ಬೇಡುವ ನಿನ್ನ ಹೃದಯವನ್ನು ನನ್ನ ಹೃದಯದಲ್ಲಿ ಇರಿಸಿಕೊಳ್ಳುವ ಆಸೆ.
ಕೊಡುವೆಯಾ ನಿನ್ನ ಪ್ರೀತಿಯನ್ನು? ಕೊಡುವುದಾದರೆ ಕೊಡುವೆನೆನ್ನು , ಇಲ್ಲವಾದರೆ ಇಲ್ಲವೆನ್ನು, ಆದರೆ ಇಲ್ಲವೆನ್ನುವುದಕ್ಕೆ ಕಾರಣವೇನೆಂದು ತಿಳಿಸುವಂತವಳಾಗು ನೀನು….. ಬದಲಾಗಿ ಬರುವೆ, ಪ್ರೀತಿ ಪಡೆಯಲು ಮತ್ತೆ ನಾನು
– ಇಂತಿ ನಿನ್ನ…
ಈ ಪ್ರೇಮ ಪತ್ರ ನಿವೇದನೆಯು ನೌಶಾದ್ ಜನ್ನತ್ತ್ ಅವರ ನೀಳ್ಗತೆಯಂಥಹ ‘ಕಡಮ್ಮಕಲ್ಲು ಎಸ್ಟೇಟ್ ‘ ಕಿರುಕಾದಂಬರಿಯಲ್ಲಿ ಬರುವ ಕಥಾಪಾತ್ರಗಳು ನಡೆದಿರಬಹುದಾದ ಇಸವಿಯನ್ನು(1970) ಸೂಚಿಸುತ್ತದೆ.
ಕೊಡಗಿನ ಭೂರಮೆಯಲ್ಲಿ ಅಡಗಿರುವ ಲೆಕ್ಕಕ್ಕೆ ಸಿಗದಷ್ಟು ಕಥೆಗಳಲ್ಲಿ ಕಾದಂಬರಿಕಾರನ ಹಿಡಿತಕ್ಕೆ ಸಿಕ್ಕಿದಷ್ಟನ್ನು ಸುಂದರವಾಗಿ ನಿರೂಪಿಸಿದ್ದಾರೆ. ಹೆಣ್ಣು,ಹೊನ್ನು, ಮಣ್ಣಿನ ಆಸೆ ,
ಬದುಕಿನ ಅನಿವಾರ್ಯತೆ, ಕಾಫೀ ತೋಟಗಳಿಗೆ ಕೆಲಸಕ್ಕೆ ಬರುವ ವಲಸಿಗರು ತಮ್ಮ ಉಳಿವಿಗಾಗಿ ಏನೆಲ್ಲಾ ಮಾಡುತ್ತಾರೆ.ಎಂಬುದನ್ನು ನೌಶಾದ್ ತಮ್ಮ ಕಣ್ಣಳತೆಯ ಕ್ಯಾನ್ವಾಸ್ ನಲ್ಲಿ ಚಿತ್ರಿಸಿದ್ದಾರೆ. ಎಸ್ಟೇಟ್ ನ ರಾಸಲೀಲೆಗಳು ಕುತೂಹಲ ಹುಟ್ಟಿಸಿ ಓದಿಸಿಕೊಂಡು ಹೋಗುತ್ತದೆ.
ಜತೆಗೆ ಕಾಫೀ ತೋಟವನ್ನು ಹೊರಗಿನಿಂದ ನೋಡುವವರಿಗೆ ಹೂವಿನಿಂದ ಹಣ್ಣಿನವರೆಗೆ ಸಾಂದರ್ಭಿಕವಾಗಿ ಮಾಹಿತಿಗಳನ್ನು ಒದಗಿಸುತ್ತ,ಕಾಡಿನ ಹೂವು,ಹಣ್ಣು, ಕಳಲೆ, ನೇರಳೆ, ಕಡುಬು, ಅಕ್ಕಿ ರೊಟ್ಟಿ, ಭಟ್ಟಿ ಕಳ್ಳು, ಹಬ್ಬಗಳ ವಿಶೇಷತೆಗಳನ್ನು ಸೇರಿಸಬಹುದಿತ್ತೆನಿಸುತ್ತದೆ. ವಿಮರ್ಶೆ ಮಾದರಿಯ ಮುನ್ನುಡಿ ಬರೆದಿರುವ ಆನಂದತೀರ್ಥರು ಹೇಳುವಂತೆ ನುರಿತ ಕಥೆಗಾರನ ಕೈಗೆ ಈ ಕಾದಂಬರಿಯ ವಸ್ತು ಸಿಕ್ಕಿದರೆ ಈಗಿರುವ ನೂರು ಪುಟಗಳ ಅದರ ಗಾತ್ರ ಆರುನೂರು ಪುಟ ಮೀರುತ್ತಿತ್ತೋ ಏನೋ….
ಆದರೆ ನೌಶಾದ್ ಕೂಡಾ ಓಟದಲ್ಲಿ ಹಿಂದೆ ಬಿದ್ದಿಲ್ಲ.ಅವರ ಬರವಣಿಗೆಯು ಪಳಗಿದಂತಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದ ಕಡಮ್ಮಕಲ್ಲು ಎಸ್ಟೇಟ್ ಕೃತಿ ಇತರ ಸ್ಥಳೀಯ ಯುವ ಬರಹಗಾರರಿಗೆ ಪ್ರೇರಣೆಯಾಗಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕು. ಅತೀ ಅವಸರದ ಈ ಕಾಲದಲ್ಲಿ ಹಳೆಯ ಕಾಲಘಟ್ಟದಲ್ಲಿ ಕೇಳಿದ, ನೋಡಿದ,ಅನುಭವಿಸಿದ ಘಟನೆಗಳು ಪಾತ್ರಗಳು ಕಣ್ಣ ಮುಂದೆ ನಡೆಯುವ ನಾಟಕದಂತೆ ಸಂಭಾಷಣೆ ಸಹಿತವಾಗಿ ಎದುರು ನಿಲ್ಲುತ್ತವೆ.
ಹಾಗೆಯೇ ಇಲ್ಲಿನ ಮಹಿಳೆಯರು ಓದುಗರನ್ನು ಕಾಡದೇ ಬಿಡುವುದಿಲ್ಲ. ನೌಶಾದ್ ಬರೆಯುತ್ತಲೇ ಇರಿ…ಶುಭವಾಗಲೀ…
- ವೈ ಜಿ ಅಶೋಕ್ ಕುಮಾರ್ – ಪತ್ರಕರ್ತರು, ಕವಿಗಳು, ಲೇಖಕರು, ಬೆಂಗಳೂರು.