ಕತೆ ಚಿಕ್ಕದಾದರೂ ನೀತಿ ಪಾಠ ದೊಡ್ಡದಾಗಿದೆ. ರಾಘವೇಂದ್ರ ಅಪರಂಜಿ ಅವರ ಸಾಮಾಜಿಕ ಕಾಳಜಿಯ ಈ ಕತೆ ಮನಮುಟ್ಟುತ್ತದೆ. ಈ ಕತೆ ಓದಿದ ಮೇಲೆ ಗುಟ್ಕಾ ತಿನ್ನಬೇಕೋ ಬೇಡವೋ ನೀವೇ ನಿರ್ಧಾರ ಮಾಡಿ ಎನ್ನುತ್ತಾ ಕತೆ ಪೂರ್ತಿಯಾಗಿ ತಪ್ಪದೆ ಓದಿ …
ಒಂದು ಅನ್ಯೋನ್ಯ ದಂಪತಿ. ಪತಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವಾತ. ಪತ್ನಿ ಮನೆ ನಿಭಾಯಿಸಿಕೊಂಡು ಹೋಗೋಳು. ಪತಿಗೆ ಗುಟಕಾ ತಿನ್ನುವ ಚಟ. ಈ ಚಟ ಬಿಡಲು ಪತ್ನಿ ಎಷ್ಟೇ ಬುದ್ಧಿವಾದ ಹೇಳಿದ್ರೂ ಕೇಳದ ಪತಿ. ಕೊನೆಗೊಂದು ದಿನ ಪತಿಗೆ ಬಾಯಿ ಕ್ಯಾನ್ಸರ್ ಆಯಿತು. ಚಿಕಿತ್ಸೆಗಾಗಿ ಕಂಡಕಂಡವರ ಕೈಕಾಲು ಹಿಡಿದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದು ಆಯಿತು.

ಫೋಟೋ ಕೃಪೆ : kannada.news18
ಈ ದಂಪತಿಯ ಕಷ್ಟವನ್ನು ಕಂಡಿದ್ದ ಹತ್ತಿರದವರೊಬ್ಬರು ಬ್ಯಾಂಕ್ ನಿಂದ ಹಾಲು, ಮೊಸರು ಹಾಕುವ ಅಂಗಡಿಯೊಂದನ್ನು ಹಾಕಿಕೊಟ್ಟು ಸ್ವ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟರು. ಇಷ್ಟೆಲ್ಲ ಆದ ಮೇಲೆ ಸ್ವಲ್ಪದಿನ ಎಲ್ಲವೂ ಸರಿಯಾಗೇ ನಡೆದಿತ್ತು. ಆಮೇಲೆ ಈ ಅಂಗಡಿಯಲ್ಲಿ ಗುಟಕಾ ಪಾಕೇಟ್ ಗಳು ನೇತಾಡತೊಡಗಿದವು. ವ್ಯಾಪಾರ ಭರ್ಜರಿಯಾಗೇ ನಡೆಯತೊಡಗಿತು. ಬ್ಯಾಂಕ್ ಸಾಲವನ್ನು ತೀರಿಸಿದರು. ಇದೇ ಅಂಗಡಿಯಲ್ಲಿ ಬರುವ ಲಾಭದಿಂದ ಮನೆಯೊಂದನ್ನು ಖರೀದಿಸಿದ್ರು. ಒಮ್ಮೆ ಇವರಿಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದ ಮಹಾನುಭಾವರು ಅಂಗಡಿಹತ್ತಿರ ಬಂದು ಅಲ್ಲಮ್ಮಾ ನಿನ್ನ ಪತಿ ಗುಟಕಾ ತಿಂದು ಎಷ್ಟು ಕಷ್ಟ ಅನುಭವಿಸಿದ, ಕ್ಯಾನ್ಸರ್ ಆದಾಗ ಶಸ್ತ್ರಚಿಕಿತ್ಸೆ ಗೆ ಹಣ ಹೊಂದಿಸಲು ಎಷ್ಟುಕಷ್ಟ ಪಟ್ಟೆ ಎನ್ನುವುದನ್ನು ಜ್ಞಾಪಿಸಿಕೋ. ಅದು ಹೋಗಲಿ ನಿನ್ನಂತೆ ಬೇರೆ ಹೆಣ್ಣುಮಕ್ಕಳು ಈ ಕಷ್ಟ ಅನುಭವಿಸಬಾರದು ಎನ್ನುವ ಉದ್ದೇಶಕ್ಕಾದ್ರೂ ಈ ಗುಟಕಾ ಚೀಟಿಗಳನ್ನು ನಿನ್ನ ಅಂಗಡಿಯಲ್ಲಿ ಹಾಕೋದನ್ನು ಯಾಕೆ ಬಿಡಬಾದ್ರು ಎಂದು ಕೇಳಿದ್ರು. ಅದಕ್ಕೆ ಆಕೆ ಸರ್ ನನಗೆ ಹಾಲು, ಮೊಸರಲ್ಲಿ ಸಿಗೋ ಲಾಭಕ್ಕಿಂತ ಇದರಲ್ಲೇ ಹೆಚ್ಚಿಗೆ ಸಿಗುತ್ತೆ. ಅಲ್ಲದೇ ನನ್ನ ಪತಿ ಗುಟಕಾದಿಂದ ನನ್ನ ಮನೆ ಎಲ್ಲಾ ಹಾಳು ಮಾಡಿದ್ದ. ಇದರಲ್ಲೇ ಎಲ್ಲಾ ಕಳಕೊಂಡಿದ್ದೆ.

ಫೋಟೋ ಕೃಪೆ : prajavan
ಈಗ ಅದೇ ಗುಟಕಾದಲ್ಲೇ ಮತ್ತೆ ಎಲ್ಲಾ ಪಡೆದಿದ್ದೇನೆ. ಏನು ಮಾಡೋದು ಸರ್ ಹೊಟ್ಟೆಪಾಡು ಅದನ್ನ ಬಿಡಲಿಕ್ಕೆ ಆಗಲ್ಲ ಅಂದ್ಲು. ಅದನ್ನು ಕೇಳಿದ ಮಹಾನುಭಾವರು ನೈತಿಕತೆ ಎನ್ನುವುದು ಇಂತಹ ಸ್ಟುಪಿಡ್ ಜನರ ಮಧ್ಯ ಕಳೆದು ಹೋಗಿದೆಯಾ ಎನ್ನುತ್ತಾ ತಲೆಕೆರೆದುಕೊಂಡು ಗೊಣಗುತ್ತಾ ಹೊರಟುಹೋದರು..!
- ರಾಘವೇಂದ್ರ ಅಪರಂಜಿ – ಪತ್ರಕರ್ತರು, ಲೇಖಕರು, ಹುಬ್ಬಳ್ಳಿ.
