ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವಾಯಿತು ಅನ್ನುವಂತೆ ಧರ್ಮ ಧರ್ಮಗಳ ಹೊಡೆದಾಟದಲ್ಲಿ ಮಾನವೀಯತೆ ಮರೆಯಾಯಿತೇ?… ಖ್ಯಾತ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ಈ ಕವನ ಮನಸಿಗೆ ತಟ್ಟದೇ ಇರದು, ಮುಂದೆ ಓದಿ…
ಧರ್ಮ ಧರ್ಮದ ಜಗಳಕ್ಕೆ,
ಸಾವು ನೋವಿಗೆ ಈಗ ದೇವರು
ಸಾಕ್ಷಿಯಾಗಿದ್ದಾನೆ.
ರೈತ ಬೆಳೆದ ಕಲ್ಲಂಗಡಿಗೆ,
ಧರ್ಮದ ಮುದ್ರೆ ಬಿದ್ದಿದೆ.
ಅವರು ಮಾರುವುದು ಬೇಡ,
ನಾಳೆ ಅವರು ತಿನ್ನುವುದು ಬೇಡ?
ಎನ್ನುವ ವಿಕೃತ ಮನಸ್ಸಿನ ಕೂಗಿಗೆ,
ಈಗ ದೇವರು ಸಾಕ್ಷಿಯಾಗಿದ್ದಾನೆ.
ಕಾಲವೇನು ದೂರವಿಲ್ಲ.
ಮನುಷ್ಯತ್ವ ಮಣ್ಣು ಪಾಲಾಗಲು.
ಈಗ ದೇವರು ಕಲ್ಲಂಗಡಿ ಹಣ್ಣಿನೊಳಗೆ,
ರಕ್ತ ಕಾರಿದ್ದಾನೆ.
ನಾಳೆ ಮಂದಿರ ಮಸೀದಿಯಲ್ಲಿ
ದೇವರೇ ಇಲ್ಲವಾಗುತ್ತಾನೆ.
ಆಗ ಮನುಷ್ಯ ಸಾಕ್ಷಿಯಾಗುತ್ತಾನೆ.
ಧರ್ಮ ಡಂಗೂರ ಸಾರುತ್ತದೆ…..!!
- ಅಲ್ಲಾಗಿರಿರಾಜ್ ಕನಕಗಿರಿ (ಖ್ಯಾತ ಗಜಲ್ ಕವಿ, ಲೇಖಕರು)
