ಸದಾ ನಗುಮೊಗದ ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆಪುರ ಅವರಿಗೆ ಅಕ್ಷರ ನಮನ…
ಅದು ಮೊದಲ ಅಲೆಯ ಕೋವಿಡ್. ನಾನು ನನ್ನ ಗಂಡ ಇಬ್ಬರೂ ಗಂಭೀರವಾಗಿ ಕೋವಿಡ್ ವೈರಸ್ ಗೆ ತುತ್ತಾಗಿದ್ವಿ. ತಿಂಗಳಾನುಗಟ್ಟಲೆ ಅದು ನಮ್ಮನ್ಬು ಅಟ್ಟಾಡಿಸಿ ಬಿಡ್ತು. ಆ ಸಮಯದಲ್ಲಿ ನಿಮಗೂ ಕೋವಿಡ್ ದಾಳಿ ನಡೆಸಿತ್ತು.

ಅದಾಗಿ ನಾಲ್ಕಾರು ತಿಂಗಳು ಕಳೆದಿತ್ತು. ನಿಮ್ಮೊಳಗಿನ ಲೇಖಕಿ ನಿಮ್ಮನ್ನು ಸುಮ್ಮನಿರಲುಗೊಡಲಿಲ್ಲ. ಕೋವಿಡ್ ಕುರಿತೇ ಒಂದು ಕಥಾ ಸಂಕಲನ ತರುವ ಯೋಚನೆಯಲ್ಲಿದ್ದೇನೆ. ನೀವೊಂದು ಕಥೆ ಕಳಿಸಿಕೊಡಿ ಎಂದು ಕೇಳಿದ್ರಿ. ಆಯಿತು ಅಂತ ಒಪ್ಪಿಕೊಂಡೆ. ಆದ್ರೆ ನನಗೆ ಬರೆಯಲಾಗಲಿಲ್ಲ. ಸ್ವಲ್ಪ ಟೈಮ್ ಬೇಕು ಅಂದೆ. ಆಯ್ತು, ಒಂದು ತಿಂಗಳು ಟೈಮ್ ತೊಗೊಳಿ. ಆದ್ರೆ ಬರೆದುಕೊಡಿ ಅಂದ್ರಿ. ಅಯ್ತು ಅಂತೇನೋ ಒಪ್ಪಿಕೊಂಡೆ. ಆದ್ರೆ ಆಫೀಸಿನ ಕೆಲಸದ ಒತ್ತಡ ಮತ್ತು ಅನಾರೋಗ್ಯ ಎರಡೂ ಕಾರಣದಿಂದ ಕೊನೆಗೂ ನನಗೆ ಕಥೆ ಬರೆಯಲಾಗಲಿಲ್ಲ. ಅದಕ್ಕೆ, ನಿಮಗೊಂದು ಮೆಸೇಜಿಟ್ಟೆ, ಕ್ಷಮಿಸಿ ಮೇಡಂ, ನನಗೀಗ ಬರೆಯಲಾಗುತ್ತಿಲ್ಲ. ಲೇಖನವಾಗಿದ್ರೆ ಹೇಗೋ ಬರೆದುಬಿಡುತ್ತಿದ್ದೆ. ಆದ್ರೆ ಇದು ಕಥೆ. ಕ್ರಿಯೇಟಿವಿಟಿಯನ್ನು ಬೇಡುತ್ತದೆ. ಈಗಷ್ಟೇ ಕೋವಿಡ್ ನ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳಲಾಗುತ್ತಿಲ್ಲ.ಜೊತೆಗೆ ಆಫೀಸಿನ ವಿಪರೀತ ಒತ್ತಡದ ಕೆಲಸ. ಹಾಗಾಗಿ ಬರೆಯಲಾಗುತ್ತಿಲ್ಲ. ನೀವು ನನಗಾಗಿ ಕಾಯಬೇಡಿ ಎಂದೆ. ಆಯಿತು ಎಂದು ಪ್ರಾಣಾಯಾಮ ಮಾಡಿ. ಯೋಗ ಮಾಡಿ ಎಂದೆಲ್ಲ ನನಗೆ ಸಲಹೆ ನೀಡಿದ್ರಿ. ಅಷ್ಟರ ನಂತರ ನಿಮ್ಮ ಮೆಸೇಜ್ ನನಗೆ ಬರಲಿಲ್ಲ. ನಂತರ ಕೋವಿಡ್ ಕುರಿತಾದ ಕಥಾ ಸಂಕಲನವನ್ನು ತಂದ್ರಿ ಅಂತ ನನ್ನ ಕೆಲವು ಸ್ನೇಹಿತರಿಂದ ತಿಳಿಯಿತು. ಅವರೂ ಕಥೆಗಳನ್ನು ಕಳುಹಿಸಿದ್ದರು. ಹಾಗಾಗಿ ತಿಳಿಯಿತು. ಅಷ್ಡರ ನಂತರವೂ ನೀವು ನನ್ನ ಫೇಸ್ ಬುಕ್ ಪೋಸ್ಟ್ ಗಳಿಗೆ ಕಾಮೆಂಟ್ ಹಾಕ್ತಾ ಇದ್ರಿ. ಆದ್ರೆ ಇತ್ತೀಚಿಗೆ ನೀವು ಫೇಸ್ ಬುಕ್ಕಿನಲ್ಲಿ ಕಾಣಿಸ್ತಾ ಇರಲಿಲ್ಲ. ಅದರ ಬಗ್ಗೆ ನಾವ್ಯಾರೂ ತಲೆ ಕೆಡಿಸಿಕೊಳ್ಳಲೂ ಇಲ್ಲ. ಅಷ್ಟರ ಮಟ್ಟಿಗೆ ಮರೆಯಾಗಿ ಹೋದವರ ಬಗ್ಗೆ ನಿರ್ಲಕ್ಷ್ಯ ತೋರಿದೆವು ಅನಿಸುತ್ತದೆ.
ಈಗ ನೀವು ಹೇಳದೆ ಕೇಳದೆ ಹಠಾತ್ತಾಗಿ ಹೋಗಿಬಿಟ್ಟಿರಿ. ಈಗ ಮತ್ತೆ ನೀವು ಕಳಿಸಿದ ಮೆಸೇಜೆಲ್ಲವನ್ನೂ ಓದುತ್ತಿದ್ದೇನೆ. ಪಾಪ.ನೀವು ನನಗೆ ಅದೆಷ್ಟೊಂದು ದಿನ ಕಾದಿದ್ರಿ. ಆದ್ರೂ ನಾನು ಕಥೆಯನ್ನು ಕೊಡಲಿಲ್ಲವಲ್ಲ ಎನ್ನುವ ನೋವು ನನ್ನ ಕಾಡುತ್ತಿದೆ. ಆದರೂ ಹೇಳುವೆ. ಲೇಖನವಾದ್ರೆ ನೀವು ಕೊಟ್ಟ ವಿಷಯಕ್ಕೆ ಬರೆದುಕೊಡಬಲ್ಲೆ. ಆದ್ರೆ ಕಥೆ ಮಾತ್ರ ಅದು ನನ್ನದೇ. ನನಗೆ ತೋಚಿದರೆ, ಹೊಳೆದರೆ ಮಾತ್ರ ಬರೆಯಲು ಸಾಧ್ಯ. ಹಾಗಾಗಿ ಕ್ಷಮಿಸಿಬಿಡಿ ನನ್ನನ್ನು ಹೋಗಿ ಬನ್ನಿ.
- ಭಾರತಿ ಹೆಗಡೆ
