ಶ್ರೀ ಮಹಾಗಣಪತಿ ಕ್ಷೇತ್ರ : ಕುರುಡು ಮಲೆ

ಕೋಲಾರದ ಕುರುಡುಮಲೆ ದೇವಾಲಯ ಪೌರಾಣಿಕ ಹಿನ್ನೆಲೆ ಇರುವಂತ ಗಣೇಶ ಮಂದಿರ.ಬಹುಶಃ ಚೋಳರ ಕಾಲದಲ್ಲಿ ನಿರ್ಮಿತವಾದ ಈ ಮಂದಿರ ಬಹಳ ಸುಂದರವಾಗಿದೆ ಈ ಮಂದಿರದ ವಿಶೇಷತೆಯ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆದಿಪೂಜೆಯ ಅಧಿಪತಿಯಾದ ಗಣಪತಿಗೆ ಇಡೀ ಪ್ರಪಂಚದಲ್ಲಿ ಹಲವು ದೇವಾಲಯಗಳನ್ನ ನಿರ್ಮಿಸಿ ನಮಿಸಲಾಗುತ್ತಿದೆ. ವಿಘ್ನಗಳ ಪರಿಹಾರಕನಾದ ಮಂಗಳಮೂರ್ತಿ ವಿನಾಯಕನು ನೆಲೆಸಿರುವ ಗ್ರಾಮವೇ ಕುರುಡುಮಲೆ. ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಸುಮಾರು ಹನ್ನೊಂದು ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಐತಿಹಾಸಿಕ ಸ್ಥಳವೂ ಆಗಿದೆ.

ಕೋಲಾರದ ಕುರುಡುಮಲೆ ದೇವಾಲಯ ಪೌರಾಣಿಕ ಹಿನ್ನೆಲೆ ಇರುವಂತ ಗಣೇಶ ಮಂದಿರ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಪ್ರತಿಷ್ಠಾಪನೆಯಾದ ಆದಿಪೂಜಿತನ ಆಲಯವಿದು. ಕೌಂಡಿನ್ಯ ಮಹರ್ಷಿಗಳಿಂದ ಈ ವೇದ ವಂದಿತ ಪೂಜಿಸಲ್ಪಟ್ಟಿದ್ದಾನೆ. ರಾಮ, ಕೃಷ್ಣ, ಕೌರವರು ಈ ಮಹಾಮಹಿಮ ಗಣಪನ ದರ್ಶನ ಮಾಡಿದ ಐತಿಹ್ಯ ಈ ಮಂದಿರಕ್ಕಿದೆ. ಅಷ್ಟೇ ಅಲ್ಲ ಮುನ್ನೂರ ಮುವತ್ತಮೂರು ಕೋಟಿ ದೇವಾನುದೇವತೆಗಳು ಈ ಕ್ಷೇತ್ರಕ್ಕೆ ಬಂದಿದ್ದರು ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ. ಅದೇ ಕಾರಣಕ್ಕೆ ಕುರುಡು ಮಲೆ ದೇವಾಲಯವನ್ನ ಕೂಟಾದ್ರಿ ಎಂದು ಕರೆಯುತ್ತಾರೆ. ಇಲ್ಲಿರುವ ಬೆಟ್ಟವನ್ನು ಕೌಂಡಿಣ್ಯಗಿರಿ ಎಂದು ಕರೆಯಲಾಗುತ್ತದೆ. ಇಲ್ಲಿ ಕೌಂಡಿಲ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದರಿಂದ “ಕೌಂಡಿಲ್ಯ ಕ್ಷೇತ್ರ “ಎಂದೂ ಕರೆಯುತ್ತಾರೆ. ಕಲಿಯುಗದಲ್ಲಿ ಗಣೇಶನ ದರ್ಶನ ಪಡೆದ ಶ್ರೀ ಕೃಷ್ಣ ದೇವರಾಯರು ಕುರುಡು ಮಲೆ ಗಣಪತಿಗೆ ದೇವಾಲಯವಿಲ್ಲದ್ದರ ಕಾರಣದಿಂದಾಗಿ ದೇವಾಲಯ ನಿರ್ಮಾಣ ಮಾಡಿದ್ದರಂತೆ.

ಫೋಟೋ ಕೃಪೆ : google

ಮಹಾಗಣಪತಿ ಮಂದಿರ ಇಲ್ಲಿಯ ಪ್ರಾಚೀನತಮ ದೇವಾಲಯ. ಬಹುಶಃ ಚೋಳರ ಕಾಲದಲ್ಲಿ ನಿರ್ಮಿತವಾದ ಈ ಮಂದಿರ ಬಹಳ ಸುಂದರ. ಈ ದೇವಾಲಯದ ಮುಂದಿರುವ, ಗಣಪತಿಯ ವಾಹನವಾದ ಮೂಷಿಕದ ಶಿಲ್ಪ ಹಸಿರುಕಲ್ಲಿನಲ್ಲಿ ಮಾಡಲಾದ ಬೃಹದ್ಗಾತ್ರದ ಉತ್ತಮ ಕಲಾಕೃತಿ. ದೇವಾಲಯದ ಗರ್ಭಗೃಹದ ಮುಂದಿನ ಹದಿನಾರು ಮೂಲೆಗಳ ಕಂಬಗಳ ಮೇಲಿನ ಶಿಲ್ಪಗಳು ಸಾಧಾರಣವಾಗಿವೆ. ಮಹಾಗಣಪತಿಯ ವಿಗ್ರಹ 2′ ಎತ್ತರದ ಪೀಠದಮೇಲೆ 1 1/2 ಎತ್ತರದ ಆಸನದಲ್ಲಿ ಕುಳಿತಿದ್ದು 8 1/2′ ಎತ್ತರವಿದೆ. ಪಾಶಾಂಕುಶ ಹಸ್ತನಾದ ಗಣಪತಿ ತನ್ನ ಕೈಯಲ್ಲಿಯ ಮೋದಕವನ್ನು ಸವಿಯುತ್ತಿರುವಂತೆ ರೂಪಿಸಲಾಗಿದೆ. ಬೆಣ್ಣೆ ಅಲಂಕಾರ ಹಾಕಿದಾಗಲಂತೂ ಗಣಪನ ನೋಡಲು ನೂರು ಕಣ್ಣು ಸಾಲದು. ವಿಗ್ರಹ ಹಾವಿನ ಉದರ ಬಂಧ ಮತ್ತು ಯಜ್ಞೋಪವೀತಗಳನ್ನು ಧರಿಸಿದೆ. ಅದರ ಹೊಟ್ಟೆಯ ಸುತ್ತಳತೆ 13′. ನವರಂಗದ ದಕ್ಷಿಣಭಾಗದಲ್ಲಿ 5′ ಎತ್ತರದ, ಹನ್ನೆರಡು ಕೈಗಳುಳ್ಳ, ಮಯೂರವಾಹನನಾದ ಕುಮಾರನ ಪ್ರತಿಮೆಯಿದೆ. ಇದೊಂದು ಬಹಳ ಸುಂದರಶಿಲ್ಪ. ಪ್ರತಿ ವರ್ಷ ಭಾದ್ರಪದ ಚೌತಿಯ ದಿನ ಇಲ್ಲಿಗೆ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಮಾರನೇ ದಿನ ಇಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ.

ಫೋಟೋ ಕೃಪೆ : google

ಆಲಯದ ವಿಶೇಷತೆಗಳು :

  • ಕುರುಡುಮಲೆಯಲ್ಲಿರುವ ಗಣೇಶ ಮೂರ್ತಿಯನ್ನ ಸಾಕ್ಷಾತ್ ತ್ರಿಮೂರ್ತಿಗಳೇ ಪ್ರತಿಷ್ಠಾಪಿಸಿದ್ದಾರೆ ಎಂಬ ನಂಬಿಕೆಯೂ ಇದೆ. ಸತ್ಯಯುಗದಲ್ಲಿ ತ್ರಿಪುರಾಸುರನೆಂಬ ರಾಕ್ಷಸನಿದ್ದನಂತೆ. ಅವನ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾಗ ಸನ್ಯಾನಿಯೊಬ್ಬರು ತ್ರಿಮೂರ್ತಿಗಳಿಗೆ ಹೇಳಿದರಂತೆ, ವಿವಾಹವಾದ ಮೇಲೂ ಬ್ರಹ್ಮಚರ್ಯವನ್ನು ಪಾಲಿಸುವಂಥ ಬ್ರಹಚಾರಿಯಿಂದ ಮಾತ್ರ ಈ ತ್ರಿಪುರಾಸುರನನ್ನು ಸಂಹರಸಿಲು ಸಾಧ್ಯವೆಂದು. ಆಗ ದೇವತೆಗಳು ಸಿದ್ಧಿ ಹಾಗೂ ಬುದ್ಧಿಯನ್ನು ಸೃಷ್ಟಿಸಿ ಗಣೇಶನಿಗೆ ಮದುವೆ ಮಾಡಿಸಿದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
  • ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ.ಕುರುಡುಮಲೆಯ ಹೆಸರು ಮೊದಲು ಕೂಡುಮಲೆ ಎಂದಾಗಿತ್ತೆಂದೂ, ನಂತರ ಜನರ ಬಾಯಲ್ಲಿ ಅದು ಕುರುಡುಮಲೆ ಆಯಿತೆಂದೂ ಹಲವು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ದಕ್ಷಿಣದ ಗಯಾ ಎಂದೇ ಪ್ರಸಿದ್ಧವಾಗಿರುವ ಕುರುಡುಮಲೆ ಗಣೇಶನ ದೇವಾಲಯದಲ್ಲಿ ಸಾಕ್ಷಾತ್ ದೇವತೆಗಳೆ ಬಂದು ವಿಶ್ರಮಿಸತ್ತಾರೆ ಎಂಬ ನಂಬಿಕೆ ಇದೆ. ಈಗಾಗಲೇ ಅನೇಕ ಯುಗಗಳೇ ಉರುಳಿ ಹೋಗಿವೆ. ಪ್ರತಿಯೊಂದು ಯುಗ ಕಳೆದು ನವಯುಗ ಪ್ರಾರಂಭವಾಗುವ ಸಂದರ್ಭದಲ್ಲಿಯೂ ಸಕಲ ದೇವತೆಗಳು ಇಲ್ಲಿ ಸೇರಿ ಚರ್ಚೆ ನಡೆಸುತ್ತಾರೆ ಎಂಬ ಪ್ರತೀತಿ ಇದೆ.
  • ಸ್ಥಳ ಪುರಾಣದ ರೀತ್ಯಾ ಇದು ಕೌಂಡಿನ್ಯಕ್ಷೇತ್ರ. ಕೃತ, ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಇದಕ್ಕೆ ಗಣೇಶಗಿರಿ, ಕೂಟಾಚಲ ಮತ್ತು ಯಾದವಾಚಲಗಳೆಂಬ ಹೆಸರುಗಳಿದ್ದುವೆಂದೂ ಕಲಿಯುಗದಲ್ಲಿ ಕೌಂಡಿನ್ಯಕ್ಷೇತ್ರವಾಗಿದೆಯೆಂದೂ ಪ್ರತೀತಿಯಿದೆ. ಮತ್ತೊಂದು ಐತಿಹ್ಯದ ರೀತ್ಯಾ ಕುರುಡುಮಲೆ ಎಂಬುದು ಕೂಡುಮಲೆಯ ರೂಪಾಂತರ. ಸಕಲದೇವತೆಗಳೂ ಮಹಾಗಣಪತಿಯ ಅರ್ಚನೆಗಾಗಿ ಇಲ್ಲಿ ಸೇರುತ್ತಿದ್ದುದರಿಂದ ಇದಕ್ಕೆ ಕೂಡುಮಲೆಯೆಂದು ಹೆಸರಾಯಿತೇನ್ನುವರು .
  • ವೈಜ್ಞಾನಿಕ ಲೋಕ ಎಷ್ಟೇ ಮುಂದುವರಿದರೂ ನಮ್ಮ ಪುರಾಣಗಳಲ್ಲಿನ ಅನೇಕ ವಿಚಾರಗಳ ಬಗ್ಗೆ, ಈಗಿನ ಎಷ್ಟೋ ಸಂಗತಿಗಳ ಬಗ್ಗೆ ವಿವರಿಸಲು ವಿಜ್ಞಾನದಿಂದ ಸಾಧ್ಯವಾಗಿಲ್ಲ. ಅದೇ ರೀತಿ ಇಲ್ಲಿನ ಗಣೇಶನ ವಿಗ್ರಹವು ನಿರಂತರವಾಗಿ ಬೆಳೆಯುತ್ತಿದೆ ಎಂದು ಹೇಳುತ್ತಾರೆ. ಒಂದು ಲೆಕ್ಕದ ಪ್ರಕಾರ, ಇದೊಂದು ಭ್ರಮೆಯಷ್ಟೇ. ಏಕೆಂದರೆ ಇಲ್ಲಿನ ವಿಗ್ರಹವನ್ನು ಒಂದೊಂದು ಕಡೆಯಿಂದ ನೋಡಿದಾಗ ಒಂದೊಂದು ರೀತಿಯಲ್ಲಿ ಕಾಣಿಸುತ್ತೆ ಅಂತ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
  • ಕುರುಡುಮಲೆ ಗಣೇಶನ ಮಹಿಮೆ ಅಪಾರವಾದದ್ದು. ತ್ರೇತಾಯುಗದಲ್ಲಿ ರಾವಣನು ಸೀತೆಯನ್ನು ಅಪಹರಿಸಿದಾಗ, ರಾವಣನನ್ನು ಕೊಲ್ಲಲು ಲಂಕೆಗೆ ಹೋಗುವ ಮೊದಲು ರಾಮ ಮತ್ತು ಲಕ್ಷ್ಮಣರು ಇಲ್ಲಿ ಗಣೇಶನನ್ನು ಪೂಜಿಸಿದರಂತೆ. ದ್ವಾರಪಯುಗದಲ್ಲಿ ಕೃಷ್ಣನು ಶಮಂತಕ ಮಣಿಯನ್ನು ಕದ್ದನೆಂದು ಆರೋಪಿಸಿದಾಗ, ಅವನು ಈ ಸ್ಥಳಕ್ಕೆ ಬಂದು ತನ್ನ ಪಾತ್ರದ ಮೇಲಿನ ಕಳಂಕ ಮತ್ತು ಅವಮಾನವನ್ನು ಹೋಗಲಾಡಿಸಲು ಗಣೇಶನನ್ನು ಪೂಜಿಸಿದನೆಂದು ಹೇಳುತ್ತಾರೆ. ಮಹಾಭಾರತ ಯುದ್ಧದ ಮೊದಲು ಪಾಂಡವರು ಸಹ ಇಲ್ಲಿ ಬಂದು ಪೂಜಿಸಿದರೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
  • ಇಲ್ಲಿನ ದೇವಾಲಯದಲ್ಲಿ ಪ್ರತಿ ದಿನ ರಾತ್ರಿ “ಓಂ” ಜಪ ಕೇಳಿಸುತ್ತಂತೆ. ಅನೇಕ ಸ್ಥಳೀಯರು ತಾವು ಓಂ ಜಪವನ್ನು ಕೇಳಿಸಿಕೊಂಡಿದ್ದಾಗಿ ಹೇಳಿದ್ದಾರೆ. ಕೌಂಡಿನ್ಯ ಮಹಾಮುನಿಯು ಈಗಲೂ ಇಲ್ಲಿ ಜಪ ಮಾಡುತ್ತಾರೆ, ಹಾಗಾಗಿ ಓಂ ಶಬ್ಧವು ಪ್ರತಿಧ್ವನಿಸುತ್ತದೆ ಎಂದು ಹೇಳುತ್ತಾರೆ.
  • ಅಷ್ಟೇ ಅಲ್ಲ, ರಥಸಪ್ತಮಿಯಂದು ಸಣ್ಣ ಬೆಳಕಿನ ಚೆಂಡುಗಳು ದೇವಸ್ಥಾನದ ಸುತ್ತ ಜಾರಿ ಬಂದು ದೇವಾಲಯ ಪ್ರವೇಶಿಸುತ್ತವೆ ಎಂದು ಸಹ ಹೇಳಲಾಗುತ್ತೆದೆ. ದೇವತೆಗಳು ಗಣೇಶನನ್ನು ಪೂಜಿಸಲು ಈ ರೀತಿಯಾಗಿ ದೀಪಗಳನ್ನು ಹಿಡಿದು ಬರುತ್ತಾರೆ ಎಂದು ಜನ ಈಗಲೂ ನಂಬಿದ್ದಾರೆ.
  • ಹಲವು ದಂತಕಥೆಗಳ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಂಕಣಾಚಾರಿ ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.
  • ಕುರುಡು ಮಲೆಯನ್ನು ಗಣೇಶಗಿರಿ, ಯಾದವಾಚಲ, ಕೋಟಾದ್ರಿ ಎಂದೂ ಕೂಡ ಕರೆಯುತ್ತಾರೆ. ಮತ್ತೊಂದು ಮಾಹಿತಿಯ ಪ್ರಕಾರ ಚೋಳರ ಆಳ್ವಿಕೆ ಒಳಪಟ್ಟ ದೇವಸ್ಥಾನ ಇದಾಗಿದೆ ಎನ್ನುವುದಕ್ಕೆ ಇಲ್ಲಿ ದೊರೆತಿರುವ ಶಿಲಾಶಾಸನಗಳು ಸಾಕ್ಷಿಯಾಗಿವೆ.
  • ಈ ಊರಿನಲ್ಲಿ 1300 ವರ್ಷ ಹಳೆಯ ಅತ್ಯಂತ ಸುಂದರ ಕಟ್ಟಡ ಸೋಮೇಶ್ವರ ದೇವಾಲಯ. ಇದರಲ್ಲಿ ಗರ್ಭಗುಡಿ, ಸುಕನಾಸಿ ಮತ್ತು ನವರಂಗಗಳಿವೆ ಇವೆ. ನವರಂಗದ ಅಷ್ಟಮುಖದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ – ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದು ಕಂಬದ ಮೇಲಿರುವ ಆನೆಯನ್ನು ಕೊಲ್ಲುತ್ತಿರುವ ಸಿಂಹದ ಶಿಲ್ಪ ಗಂಗರನ್ನು ಹೊಯ್ಸಳರು ಸೋಲಿಸಿದ ಸಂಕೇತವಿರಬಹುದೆಂದು ಊಹಿಸಲಾಗಿದೆ. ಹೊರಗೋಡೆಗಳ ಮೇಲೆ ಸ್ತಂಭಿಕ ಮತ್ತು ಗೂಡುಗಳ ಸುಂದರ ಅಲಂಕರಣವಿದೆ. ಗರ್ಭಗುಡಿಯಲ್ಲಿರುವ ಲಿಂಗದ ಮುಂಭಾಗದ ಕಿಟಕಿಯ ಬಳಿ ಮೂರು ವ್ಯಕ್ತಿಗಳ ಶಿಲ್ಪಗಳಿವೆ. ಇವು 13 ನೆಯ ಶತಮಾನದಲ್ಲಿ ಚೋಳರ ಸಾಮಂತನಾಗಿದ್ದ ಇಳವಂಜಿ ವಾಸುದೇವರಾಯ ಮತ್ತು ಆತನ ರಾಣಿಯರ ಮೂರ್ತಿಗಳೆಂದು ಗುರುತಿಸಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಅಂದದ ತಾಯಿ ಪಾರ್ವತಿಯು ಕ್ಷಮದಾಂಬ ದೇವಿಯ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.

ಫೋಟೋ ಕೃಪೆ : google

ದರ್ಶನದ ಸಮಯ :

ಬೆಳಗ್ಗೆ 6.30ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ದೇವಸ್ಥಾನ ತೆರೆದಿರುತ್ತದೆ. ಭಕ್ತರು ಈ ಸಮಯದಲ್ಲಿ ಇಲ್ಲಿನ ಗಣೇಶನ ದರ್ಶನ ಪಡೆಯಬಹುದು.

ಕುರುಡುಮಲೆ ಗಣೇಶ ದೇವಸ್ಥಾನದ ದೂರವಾಣಿ ಸಂಖ್ಯೆ:
ಕೆ. ಪಿ ಕಾರ್ತಿಕ್ –  9741004581

ಫೋಟೋ ಕೃಪೆ : google

ತಲುಪುವ ಬಗೆ :

ಬೆಂಗಳೂರಿನಿಂದ 110 ಕಿಲೋಮೀಟರ್ ದೂರದಲ್ಲಿರುವ ಕುರುಡುಮಲೆಗೆ ಸುಲಭವಾಗಿ ಮುಳಬಾಗಿಲಿನಿಂದ ರಸ್ತೆಯ ಮೂಲಕ ತಲುಪಬಹುದು. ರಾಜ್ಯ ಸಾರಿಗೆ ಬಸ್ಸುಗಳು ಕುರುಡುಮಲೆ ಗಣೇಶ ದೇವಾಲಯಕ್ಕೆ ಮತ್ತು ಸುತ್ತಲಿನ ವಿವಿಧ ನಗರಗಳಿಂದ ಕೂಡಾ ಸಾಗುತ್ತವೆ.

ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹತ್ತಿರವಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಹತ್ತಿರದ ರೈಲ್ವೆ ನಿಲ್ದಾಣವಿದೆ. ಇದು ದೇವಸ್ಥಾನದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿಂದ ರಿಕ್ಷಾ, ಅಥವಾ ಬಸ್‌ಗಳ ಮೂಲಕ ರಸ್ತೆಯ ಇಲ್ಲಿಗೆ ಬರಬಹುದು.

ಈ ಭವ್ಯ ಮೂರ್ತಿಯ ಸನ್ನಿಧಿಯಲ್ಲಿ ಶುದ್ಧ ಹೃದಯವುಳ್ಳ ವ್ಯಕ್ತಿಯು ಏನನ್ನಾದರೂ ಕೇಳಿದರೆ, ಅಥವಾ ಬಯಸಿದರೇ ಅದನ್ನು ಖಂಡಿತವಾಗಿಯೂ ಸಾಧಿಸುತ್ತಾರೆ ಮತ್ತು ಉತ್ತಮ ಮಟ್ಟದ ಯಶಸ್ಸನ್ನು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ.

ಇಲ್ಲಿನ ಗಣೇಶನನ್ನು “ವಿಘ್ನಹರ್ತಾ” ಎಂದು ನಂಬಿ ಬರುವ ಎಲ್ಲಾ ಭಕ್ತರಿಗೆ ಎಲ್ಲಾ ಅಡಚಣೆಗಳನ್ನು ನಿವಾರಿಸುತ್ತಾ ಆಶೀರ್ವಾದ ನೀಡುತ್ತಾನೆ.

‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW