‘ಯಂತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತಂತ್ರ ದೇವತಾ:’ ಪೂಜ್ಯಂತೇ, ರಮಂತೇ, ದೇವತಾ – ಈ ಮೂರು ಪದಗಳ ಸಂಯೋಜನೆ ನೋಡಿ, ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಪೂಜಂತೇ.. ಎಂದರೆ ಪೂಜೆಗೆ ಅರ್ಹಳಾಗಿರುವುದು, ಅಂತಹ ಪೂಜೆಗೆ ಪಾತ್ರವಾಗುವ ಹೆಣ್ಣಿನ ಯೋಗ್ಯತೆ ದೇವತೆಗಳಿಗೂ ಸಂತೋಷ ಕೊಡುವುದು.
ಸರಿ. ಹೇಗಿದ್ದರೂ ಸರಿಯೇ? ಎಂದರೆ ಅದು ಆರಾಧನೆಗೆ ಸಲ್ಲುವುದಿಲ್ಲ. ಅದು ಹೇಗಿರಬೇಕೋ ಆ ಅರ್ಹತೆಗೆ ಪಾತ್ರವಾಗಬೇಕಾದ ಮಹತಿ ಅವಳಲ್ಲಿರಬೇಕು. ಅಂದರೆ… ಮಹತ್ವ ಪೂರ್ಣವಾಗಿ, ಮಹತ್ತಾದ ಕಾರ್ಯಗಳಿಗೆ ಸಲ್ಲುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿರುತ್ತದೆ. ಎಲ್ಲ ಬಗೆಯ ಶಿಲೆಗಳೂ ಮೂರ್ತಿಯಾಗಲಾರವು.
ಶಿಲೆಯ ಅಂತಸ್ಸತ್ವದ ಆಧಾರದ ಮೇಲೆ, ಸನ್ನಿವೇಶಗಳ ಶಿಲ್ಪಿ ಕೆತ್ತಿ ರೂಪಿಸುವ ಸರ್ವ ಜನಾಕರ್ಷಕ ಶಿಲ್ಪ ಮೂರ್ತೀಭವಿಸಿ ಪೂಜಿಸಿಕೊಳ್ಳಬೇಕಾದರೆ ಅದೊಂದು ಅಸಾಧಾರಣ ಧಾರಣ ಶಕ್ತಿಯ ಪರಿಣಾಮವೇ ಆಗಿರುತ್ತದೆ. ಹೆಣ್ಣಾಗಲೀ ಗಂಡಾಗಲೀ ಅವರವರಿಗೆ ಅವರವರದೇ ವಿಶಿಷ್ಟವೆನಿಸುವ ಇಚ್ಛಾಶಕ್ತಿ ಇರುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ತನ್ನತನವನ್ನು ಹೋಮ ಮಾಡದೆ, ಅದನ್ನು ಸಂರಕ್ಷಿಸಿಕೊಳ್ಳುವ ಛಲ, ದೃಢತೆ, ನಂಬಿಕೆ, ಚಾಕ ಚಕ್ಯತೆ ಯಾರಲ್ಲಿ ಸ್ಥಿರವಾದ ರೂಪದಲ್ಲಿ ಇರುತ್ತದೋ ಅಂತಹವರು ಗಂಡಸಿಗೇನೂ ಕಡಿಮೆಯಿಲ್ಲದ ಸಾಧಕರಾಗಿಬಿಡುತ್ತಾರೆ.
ಉದಾಹರಣೆಗೆ : ಚಂದ್ರಯಾನ ೩ನ್ನು ಅತ್ಯಂತ ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿ ಮಹಿಳಾ ತಂಡ, ಆದಿತ್ಯನೆಡೆಗೆ ಧಾವಿಸುತ್ತಿರುವ ಬಾಹ್ಯಾಕಾಶ ನೌಕೆಯ ಉಡಯಾನಕ್ಕೆ ಪುರುಷರ ಹೆಗಲೆಣೆಯಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿದ ನಿಸ್ಪೃಹ ಮಹಿಳಾ ಮಣಿಗಳು ಎಂಥ ಅಭಿನಂದನಾರ್ಹರು!
ಅಂಗನ್ಯೂನತೆಯಲ್ಲಿಯೂ ಸಮರ್ಪಕ ಸಾಧನೆಯ ಮೇರನು ಏರಿ ಸಾಬೀತುಪಡಿಸಿದ ದೇಶದ ಹೆಮ್ಮೆಯ ಸಾಧಕಿಯರು! ಗೃಹ ಸ್ವಾಮ್ಯ ಮಾತ್ರವಲ್ಲ,ತನ್ನ ಔದ್ಯೋಗಿಕ ಕ್ಷೇತ್ರದಲ್ಲೂ ತನ್ನ ಬೆರಗಿನ ಛಾಪನ್ನು ಮೂಡಿಸಿದ ಶಕ್ತಿಸ್ವರೂಪಿಣಿಯರು!
‘ಇದೆಲ್ಲಾ ತನ್ನಿಂದ ಸಾಧ್ಯ ಎಂಬುದನ್ನು ತಿಳಿದೂ ಮೂಲೆಗುಂಪಾಗಿದ್ದ ಮಹಾ ಇಳೆಯನ್ನು ಇಷ್ಟು ವರ್ಷ ಅವಗಣಿಸಿದ್ದೇ ಮಹಾಪರಾಧ! ಈಗ ನಿಚ್ಚಳವಾಗಿದೆ ದಾರಿ.
ಸ್ವಾವಲಂಬನೆಯ, ಭರವಸೆಯ ಹೊಸದಿಗಂತ! ಆತ್ಮವಿಶ್ವಾಸದಲ್ಲಿ ಮುನ್ನಡಿಯಿಡುತ್ತಾ ಏಳಿಗೆಯ ರಥಕ್ಕೆ ಹೆಗಲು ಕೊಡೋಣ.
ವಿಲಾಸೀ ಜೀವನವನ್ನು ಕಡೆಗಣಿಸಿ ಸಿಂಹಸದೃಶ್ಯ ಸಾಮರ್ಥ್ಯವನ್ನು ಲೋಕೋತ್ತರಗೊಳಿಸೋಣ!
ಮನೆಯನ್ನು ತೊರೆದಲ್ಲ, ಮನೆಯೆಂಬ ನಂದನವನ್ನೂ ಪೊರೆದು..ಕರ್ತವ್ಯ ಬದ್ಧರಾಗಿ…!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ
