ಮಾನಸ….ಇದು ಮನಸಿನ ಮಾತು (ಭಾಗ-೩೩)

ತಂದೆ ತಾಯಿಗೆ ಸಿಹಿಯ ಮಾತುಗಳನ್ನಾಡುತ್ತಾ ಸಮಾಧಾನ ನೀಡಬೇಕು, ಅವರ ಬಾಳಿನ ಕೊನೆಯ ಹಂತವನ್ನು ನೆಮ್ಮದಿಯಾಗಿರುವಂತೆ ಮಾಡಬೇಕು. ಅಕ್ಕ-ತಂಗಿಯರೊಂದಿಗೆ ಆಪ್ತ ಸಂಬಂಧವನ್ನು ಕಾಪಾಡಿಕೊಂಡು, ನಿಮ್ಮ ಹೊಸ ಕುಟುಂಬದ ನಿರ್ವಹಣೆಗೆ ಜವಾಬ್ದಾರಿಯುತ ನಿರ್ಣಯ ಹಾಗು ಮನಸಿಟ್ಟು ಜೀವನ ತೊಡಗಿಸಿಕೊಳ್ಳಬೇಕು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ನಿಮಗೆ ನಾನು ಇಂಪಾರ್ಟೆಂಟಾ ಅವಳು ಇಂಪಾರ್ಟೆಂಟಾ ಕೇಳುತಿದ್ದಳು ಅವಳು, ಅದಕ್ಕವನು ನೀನೇ ಇಂಪಾರ್ಟೆಂಟ್ ಕಣೆ, ಯಾಕೆ ಸುಮ್ನೆ ಕೋಪ ಮಾಡ್ಕೊತಿಯಾ ಸುಮ್ನೆ ಇರು ಅಂತ ಹೇಳಿದ. ಅಲ್ಲ ಕಣೋ ನಿನ್ನ ಒಡ ಹುಟ್ಟಿದ ತಂಗಿಗಿಂತಾ ನಿನ್ನ ಹೆಂಡತಿನಾ? ಅವಳನ್ನೇ ವಹಿಸಿಕೊಂಡು ಮಾತಾಡ್ತಿಯಲ್ಲ. ಹುಟ್ಟಿದಾಗಿನಿಂದ ಅವಳೇ ಇದ್ದಳಾ? ಇದು ಒಬ್ಬ ಹೆಂಡತಿಗೆ ಗಂಡನಾಗಿ, ತಂಗಿಗೆ ಅಣ್ಣನಾಗಿ ಇರುವ ಹುಡುಗನ ಗೋಳು. ಈ ಸಂಬಂಧಗಳು ಒಂದಕ್ಕೊಂದು ಕೊಂಡಿ ಇದ್ದ ಹಾಗೆ. ಒಬ್ಬರಿಗೆ ಬೇಜಾರಾದರೆ ಎಲ್ಲರಿಗೂ ಬೇಸರವಾಗುತ್ತದೆ. ಒಬ್ಬರಿಗೆ ಸಂತೋಷವಾದರೆ ‌ಅದೂ ಸಹ ಎಲ್ಲರಿಗೂ ಆಗುತ್ತದೆ.

ಹೆಣ್ಣು ಮಕ್ಕಳು ಅವರ ಬದುಕು, ಬವಣೆ ಒಂದು ರೀತಿಯಾದರೆ ಗಂಡು ಮಕ್ಕಳದು ಇನ್ನೊಂದು ರೀತಿಯ ಗೋಳು. ತಾಯಿಗೆ ಮಗನಾಗಿ, ಹೆಂಡತಿಗೆ ಗಂಡನಾಗಿ ತಂಗಿಗೆ ಅಣ್ಣನಾಗಿ, ಅಕ್ಕನಿಗೆ ತಮ್ಮನಾಗಿ ಇರುವುದು ಬಹಳ ಕಷ್ಟ. ಅವನದು ಏಕಪಾತ್ರಾಭಿನಯ. ಮದುವೆಗೆ ಮೊದಲು ಒಂದು ರೀತಿಯ ಜೀವನವಿರುತ್ತದೆ. ನಂತರ ಹೆಂಡತಿ ಬಂದ ಮೇಲೆ ಜೀವನ ಬದಲಾವಣೆ ಕಾಣುತ್ತದೆ. ಎಲ್ಲರನ್ನೂ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಯಾರಿಗೂ ಬೇಜಾರಾಗದ ರೀತಿ ಸಮತೋಲನವಾಗಿ ಇರಬೇಕೆಂದರೆ ಮೊದಲಿಗೆ ಅವರ ಮನಸ್ಥಿತಿ, ಮನೋಬಲ ಎಲ್ಲದರ ನಡುವೆ ಸಂಬಂಧಗಳನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ.

ಫೋಟೋ ಕೃಪೆ :google

ಮದುವೆಯ ನಂತರ ಹೆಂಡತಿ ಇವನ ಮನಸ್ಥಿತಿ, ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಹುಡುಗಿಯಾದರೆ ಯಾವ ತೊಂದರೆಯೂ ಇರುವುದಿಲ್ಲ ಆದರೆ ವಾಸ್ತವ ಅರಿಯದೆ ತನ್ನದೇ ಪ್ರಪಂಚ ಸೃಷ್ಟಿಸಿಕೊಂಡು ಗಂಡ ತನಗೊಬ್ಬನಿಗೇ ಮೀಸಲು ಎನ್ನುವ ಅಹಂಭಾವ ಇರುವ ಹೆಂಡತಿಯ ಜೊತೆ ಜೀವನ ಸಾಗಿಸಲು ಬಹಳ ಕಷ್ಟವೆನಿಸಬಹುದು.

ಓದುಗರಿಗೆ ಅನಿಸಬಹುದು, ಗಂಡು ಮಕ್ಕಳೂ ಸಹ ಹೆಂಡತಿಗೆ ಹೊಂದಿಕೊಂಡು ಹೋಗಬೇಕು ಬರೀ ಹೆಣ್ಣು ಮಕ್ಕಳಿಗೆ ಏಕೆ ಈ ನಿಬಂಧನೆಗಳು ಎಂದು. ನಮ್ಮ ಸಂಸ್ಕೃತಿಯ ಪ್ರಕಾರ ಹೆಣ್ಣನ್ನು ಗಂಡನ ಮನೆಗೆ ಕಳುಹಿಸಿಕೊಡುವ ಪದ್ಧತಿ ಇದೆಯೇ ಹೊರತು ಗಂಡು ಮಕ್ಕಳನ್ನು ಹೆಂಡತಿ ಮನೆಗೆ ಕಳುಹಿಸಿಕೊಡುವ ಪದ್ಧತಿ ಇಲ್ಲ. ಹಾಗೆಯೇ ಹೆಣ್ಣು ಮಗಳು ತನ್ನ ತವರನ್ನು ಬಿಟ್ಟು ಬರುವಾಗ ಅಲ್ಲಿ ಕೆಲವು ರೀತಿ ರಿವಾಜುಗಳನ್ನು ಅಲ್ಲಿಯೇ ಬಿಟ್ಟು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ, ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿ ಎದುರಿಸಲೇ ಬೇಕಾಗುತ್ತದೆ.

ಇದೆಲ್ಲದರ ನಡುವೆ ಮದುವೆಯಾದ ಗಂಡು ಮಕ್ಕಳು ಅವರ ಜೀವನದ ಆಯ್ಕೆಯಂತೆ ಅವರು ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸಲೇ ಬೇಕು. ಖರ್ಚು ವೆಚ್ಚದ, ಅಸಮತೋಲನ, ತಂದೆ ತಾಯಿಯನ್ನು ನೋಡಿಕೊಳ್ಳುವುದು, ಅವರ ಖರ್ಚು ವೆಚ್ಚಗಳು, ಔಷಧೋಪಚಾರಗಳು, ನೆಂಟರಿಷ್ಟರ ಮನೆಗೆ, ಅವರ ಸ್ನೇಹಿತರ ಮನೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯ ಜೊತೆಗೆ ಬಂಧು ಮಿತ್ರರ ಆಗಮನವನ್ನು ನಿಭಾಯಿಸುವ ಜವಾಬ್ದಾರು ಇವನ ಮೇಲೆ ಇದುವುದರಿಂದ ಅದನ್ನು ನಿಭಾಯಿಸಲೇಬೇಕು. ಹೆಂಡತಿ ಬಂದ ಮೇಲೆ ಕೆಲವು ದಿನಚರಿ ಬದಲಾಗಬಹುದೇ ವಿನಃ ಅವರ ಜವಾಬ್ದಾರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗಾಗಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲೇಬೇಕು.

ಯಾರಿಗೂ ಬೇಸರವಾಗದ ರೀತಿ, ಮನಸ್ಥಾಪಗಳಾಗದ ಹಾಗೆ ನಿಭಾಯಿಸುವುದು ಬಹಳ ಕಷ್ಟವೆನಿಸಬಹುದು. ಅಕ್ಕ ತಂಗಿಯರ ಮದುವೆ, ಬಸಿರು ಬಾಣಂತನ ಹೀಗೆ ಹಲವಾರು ರೀತಿಯ ಜವಾಬ್ದಾರಿಗಳನ್ನು ನಿಭಾಯಿಸುವ ಜೊತೆಯಲ್ಲಿ ಹೆಂಡತಿಯನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಮದುವೆಯಾದ ವ್ಯಕ್ತಿ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಸಮತೋಲನದಿಂದ ಇರುವುದು ಅತ್ಯಗತ್ಯ. ಅಮ್ಮ, ಅಪ್ಪ, ಹೆಂಡತಿ, ಅಕ್ಕ-ತಂಗಿಯರನ್ನು ಸಮಾನವಾಗಿ ನೋಡಿಕೊಳ್ಳಬೇಕಾಗುತ್ತದೆ.

ತಾಯಿಯನ್ನು ಆಕೆಯ ತ್ಯಾಗ ಮತ್ತು ನಿಸ್ವಾರ್ಥ ನಿರ್ವಹಣೆಗಾಗಿ ಸದಾ ಕೃತಜ್ಞತೆಯಿಂದ ಇರಬೇಕು. ಆಕೆಯ ಅಭಿಪ್ರಾಯಗಳಿಗೆ ಗೌರವ ಕೊಡಬೇಕು. ಹೆಂಡತಿಯ ಮೇಲೆ ಅಭಿಮಾನ ಮತ್ತು ಅಗತ್ಯಗಳಿಗೆ ಪ್ರಾಮುಖ್ಯತೆ ಕೊಡಬೇಕು, ವಿವಾಹ ಸಂಬಂಧದಲ್ಲಿ ನಂಬಿಕೆ ಮತ್ತು ಪ್ರೀತಿಯನ್ನು ಬೆಳಸಿಕೊಳ್ಳಬೇಕು. ಅಕ್ಕ ತಂಗಿಯವರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು, ಆದರೆ ವೈವಾಹಿಕ ಜೀವನದ ಮಿತಿಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಕುಟುಂಬದ ಎಲ್ಲರೊಂದಿಗೆ ಒಳ್ಳೆಯ ಸಮಯವನ್ನು ಕಳೆಯಲು ಪ್ರಯತ್ನಿಸಬೇಕು.

ಫೋಟೋ ಕೃಪೆ :google

ತಾಯಿ ಮತ್ತು ಹೆಂಡತಿ ಅವರಿಬ್ಬರೊಂದಿಗೆ ಪ್ರಾಮಾಣಿಕವಾದ ಸಂವಾದವನ್ನು ಬೆಳೆಸಿರಿ. ಬೇಡಿಕೆಯ ವಿಷಯಗಳಲ್ಲಿ ಸ್ಪಷ್ಟತೆ ತರಲು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಅವರನ್ನು ಮೆಚ್ಚಿಸಲು ಅವರ ರೀತಿಯಂತೆ, ಇವಳನ್ನು ಮೆಚ್ಚಿಸಲು ಇವಳ ರೀತಿಯಂತೆ ದ್ವಿಪಾತ್ರಾಭಿನಯ ಖಂಡಿತ ಸಾಧ್ಯವಿಲ್ಲ. ಇರುವ ವಿಚಾರವನ್ನು ಇಬ್ಬರಿಗೂ ವಿವರಿಸಿ ಹೇಳಬೇಕು.
ಅಕ್ಕ ತಂಗಿಯರೊಂದಿಗೆ ಸಹಾನುಭೂತಿಯಿಂದ ಮಾತನಾಡಬೇಕು, ಅವರಿಗೆ ಅಗತ್ಯವಿದ್ದಾಗ ಬೆಂಬಲ ನೀಡಬೇಕು. ಎಲ್ಲರೂ ಕೆಟ್ಟವರಿರುವುದಿಲ್ಲ ಪರಿಸ್ಥಿತಿ ಕೆಲವರನ್ನು ಕೆಟ್ಟವರನ್ನಾಗಿ ಮಾಡುತ್ತದೆ. ಪರಸ್ಪರ ಘರ್ಷಣೆಗೆ ಒಳಗಾಗದಂತೆ ನೋಡಿಕೊಳ್ಳಬೇಕು.

ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರತಿಯೊಬ್ಬರ ಅಭಿಪ್ರಾಯವನ್ನು ಪರಿಗಣಿಸಬೇಕು. ಕುಟುಂಬದ ವಿಚಾರದಲ್ಲಿ ಎಲ್ಲರ ಸಮ್ಮತಿಯೂ ಅತ್ಯಗತ್ಯ. ಅಂತಿಮ ನಿರ್ಧಾರವು ನಿಮ್ಮ ಕುಟುಂಬ ಜೀವನದ ಎಲ್ಲರ ಹಿತಕ್ಕಾಗಿ ಇರಬೇಕು.

ತಂದೆ ತಾಯಿಗೆ ಸಿಹಿಯ ಮಾತುಗಳನ್ನಾಡುತ್ತಾ ಸಮಾಧಾನ ನೀಡಬೇಕು, ಅವರ ಬಾಳಿನ ಕೊನೆಯ ಹಂತವನ್ನು ನೆಮ್ಮದಿಯಾಗಿರುವಂತೆ ಮಾಡಬೇಕು. ಅಕ್ಕ-ತಂಗಿಯರೊಂದಿಗೆ ಆಪ್ತ ಸಂಬಂಧವನ್ನು ಕಾಪಾಡಿಕೊಂಡು, ನಿಮ್ಮ ಹೊಸ ಕುಟುಂಬದ ನಿರ್ವಹಣೆಗೆ ಜವಾಬ್ದಾರಿಯುತ ನಿರ್ಣಯ ಹಾಗು ಮನಸಿಟ್ಟು ಜೀವನ ತೊಡಗಿಸಿಕೊಳ್ಳಬೇಕು.
ಯಾವುದೇ ಸಂಬಂಧಗಳಿಗೆ ಅಭದ್ರತೆ ಕಾಡುತ್ತದೆ. ಎಲ್ಲರಿಗೂ ಪ್ರೀತಿ ಪಾತ್ರದವರನ್ನು ಕಳೆದುಕೊಂಡು ಬಿಡುತ್ತೇವೆ ಎಂಬ ಭಯ ಕಾಡುತ್ತದೆ. ಅದಕ್ಕಾಗಿ ಮನಸ್ಥಾಪಗಳು, ಕೋಪ, ದ್ವೇಷ ಹುಟ್ಟಿಕೊಳ್ಳುತ್ತದೆ. ಇದರ ಜೊತೆಗೆ ಎಲ್ಲರೂ ಭರವಸೆಯ ಬದುಕು ಸಾಗಿಸಬೇಕು. ಸಂಬಂಧಗಳಲ್ಲಿ ಪರಸ್ಪರ ಪ್ರೀತಿ, ತ್ಯಾಗ, ಅನುಕಂಪ, ಉಪಕಾರ ಮನೋಭಾವದಿಂದ ಜೀವನ ಸಾಗಿಸಬೇಕು. ಇದೇ ಮಾನವ ಧರ್ಮ, ಇದೇ ಜೀವನದ ನಿಯಮ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW