ನಮ್ಮ ದೇಶದಲ್ಲಿ ಪ್ರತಿ 20 ನಿಮಿಷಕ್ಕೆ ಮಹಿಳೆಯೊಬ್ಬಳು ದೌರ್ಜನ್ಯಕ್ಕೆ ಒಳಗಾದರೆ, ಪ್ರತಿ 60 ನಿಮಿಷಕ್ಕೆ ಪುರುಷನಿಂದ ಓರ್ವ ಮಹಿಳೆ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾಳೆ ಎಂಬುದು ನಮ್ಮ ಕಣ್ಮುಂದೆ ಇರುವ ವಾಸ್ತವಾಂಶ. ನವೆಂಬರ್ 25ರಂದು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆ ಎಂದು ಕರೆಯಲಾಗುತ್ತದೆ.
“ಅಬಲೆಯ ರಕ್ಷಾ ಕವಚವಾದಿತೇ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆ..?
ಪ್ರಕೃತಿ (ಸ್ತ್ರೀ) ಮತ್ತು ಪುರುಷ ಸಮಾಜದ ಎರಡು ಕಣ್ಣುಗಳಿದ್ದಂತೆ. ಮಹಿಳೆಯರು ಪುರುಷರಿಗಿಂತ ಭಿನ್ನವಾದ ದೇಹರಚನೆ ಹೊಂದಿರುವುದು ಪ್ರಕೃತಿ ದತ್ತ ಕೊಡುಗೆ, ಎರಡು ಜೀವಾತ್ಮಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕರ ಸಂಯೋಜನೆಗೊಂಡು ಈ ಜಗತ್ತು ಜೀವಂತವಾಗಿರಲು ಕಾರಣವಾಗಿರುತ್ತಾರೆ. ಆದರೆ ಅನಾದಿಕಾಲದಿಂದಲೂ ಸ್ತ್ರೀಯು ಸೌಂದರ್ಯದ ಪ್ರತಿರೂಪವೆಂದೂ ಅವಳು ಪುರುಷನ ಕಾಮನೆಗಳನ್ನು ತಣಿಸಲು ಇರುವ ಒಂದು ಯಂತ್ರವೆಂದೇ ತಿಳಿದ್ದಾರೆ . ಹಲವಾರು ಸಂದರ್ಭಗಳಲ್ಲಿ ಗಂಡು ಹೆಣ್ಣು ಸಮಾನ ತಪ್ಪಿಸ್ಥರಾಗಿದ್ದರೂ ಹೆಣ್ಣಿನ ಮೇಲೆ ತಪ್ಪು ಹೇರಿ ಜಾರಿಕೊಳ್ಳುವ ಪುರುಷ ಪ್ರವೃತ್ತಿ ಮತ್ತು ಶೀಲವು ಹೆಣ್ಣಿಗೆ ಮಾತ್ರ ಸೀಮಿತವೆಂಬ ಪರಿಕಲ್ಪನೆಯನ್ನು ಬೆಳೆಸಿಕೊಂಡು ಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ತುಚ್ಛವಾಗಿ ಕಾಣುವುದನ್ನು, ಅಸಹ್ಯವಾಗಿ ಪ್ರದರ್ಶಿಸುವುದನ್ನು, ನೋವುಂಟು ಮಾಡುವುದನ್ನು , ಅಸಭ್ಯವಾಗಿ ನಡೆದುಕೊಳ್ಳುವುದು, ಅತ್ಯಾಚಾರಗಳನ್ನು ಅಪರಾಧಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸುವುದಕ್ಕೆ ಅನೇಕ ಕಾನೂನುಗಳನ್ನು ರಚಿಸಲಾಗಿದ್ಧರೂ ಅವು ಬಿನ್ನ,ಬಿನ್ನ ಶಿರೋನಾಮೆಯ ಅಧಿನಿಯದಡಿ ಚದುರಿ ಹೋಗಿರುತ್ತವೇ.
ಮಹಿಳೆಯರು ಪುರುಷರಿಂದಾದ ಕೆಲವು ತೊಂದರೆಗಳ ವಿರುದ್ಧ ದೂರು ಕೊಡಲಾಗದೆ, ಪರಿಹಾರವೂ ಕಾಣದೆ ನಿಸ್ಸಹಾಯಕಳಾದ ಸಂದರ್ಭದಲ್ಲಿ ಎದುರಿಸುಬಹುದಾದ ಮಾನಸಿ ಹಿಂಸೆಯನ್ನು ಮನಗಂಡು 1960 ರಲ್ಲಿ ವಿಶ್ವಸಂಸ್ಥೆಯು ಮಹಿಳೆಯರ ಮೇಲೆ ಉಂಟಾಗುವ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ,ಮಾನಸಿಕ ಆಘಾತಗಳನ್ನು ಮರೆಮಾಚುವ ಸಾಮಾಜಿಕ ವ್ಯವಸ್ಥೆಯ ಕುರಿತಾದ ಜಾಗೃತಿ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 25ರಂದು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲು ಕರೆ ನೀಡಿತು.
ನಮ್ಮ ದೇಶದಲ್ಲಿ ಪ್ರತಿ 20 ನಿಮಿಷಕ್ಕೆ ಮಹಿಳೆಯೊಬ್ಬಳು ದೌರ್ಜನ್ಯಕ್ಕೆ ಒಳಗಾದರೆ, ಪ್ರತಿ 60 ನಿಮಿಷಕ್ಕೆ ಪುರುಷನಿಂದ ಓರ್ವ ಮಹಿಳೆ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾಳೆ ಎಂಬುದು ನಮ್ಮ ಕಣ್ಮುಂದೆ ಇರುವ ವಾಸ್ತವಾಂಶ. ಮಹಿಳೆ ಇಂದಿನ ದಿನಮಾನದಲ್ಲಿ ಸುಶಿಕ್ಷೀತೆ, ಸ್ವಾವಲಂಬನಿ, ಧೈರ್ಯವಂತೆ, ಒಂಟಿಯಾಗಿ ಬದುಕಬಲ್ಲಳು ಎಂಬುದು ಅನೇಕ ಮನದಾಳದ ಮಾತು.. ಇದು ಪೂರ್ಣ ಪ್ರಮಾಣದ ಸತ್ಯ ಎಂದು ಹೇಳಲು ಸಾಧ್ಯವಿಲ್ಲವಾದರೂ ಭಾಗಶಃ ನಿಜವೆಂದು ಒಪ್ಪಿಕೊಳ್ಳಬಹುದು.. ಮಹಿಳೆ ಸುಶಿಕ್ಷಿತ ಆದ ಮಾತ್ರಕ್ಕೆ ಅವಳ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತ್ತೆ..? ಖಂಡಿತ ಇಲ್ಲ ಮಹಿಳೆಯ ಮೇಲೆ ಜರುಗುತ್ತಿರುವ, ಸೌಮ್ಯ ಸ್ವರೂಪದ್ದೆಂದು ಕಂಡುಬರುವ ಆದರೆ ಅದನ್ನನುಭವಿಸುವ ಮಹಿಳೆಯನ್ನು ತ್ರೀವ್ರ ಸ್ವರೂಪದ ಮಾನಸಿಕ ಹಿಂಸೆಗೆ ಈಡು ಮಾಡುವ ವಿಶೇಷ ಬಗೆಯ ದೌರ್ಜನ್ಯವೆಂದರೆ ಅದು ಲೈಂಗಿಕ ಕಿರುಕುಳ, ಇಂತಹ ದೌರ್ಜನ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗುವವರೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕವಾಗಿ ದುಡಿಯುವ ಮಹಿಳೆಯರು.

ಫೋಟೋ ಕೃಪೆ : google
ತನ್ನ ಉದ್ಯೋಗದ ಸ್ಥಳದಲ್ಲಿ ಪುರುಷ ಸಹೋದ್ಯೋಗಿಗಳಿಂದ ಯಾವುದೇ ರೀತಿಯ ಕಿರುಕುಳಕ್ಕೆ ಒಳಗಾಗದೇ ಗೌರವಯುತ ಪರಿಸರದಲ್ಲಿ ತಾನು ಕೆಲಸ ಮಾಡಬೇಕೆನ್ನುವುದು ಪ್ರತಿಯೊಬ್ಬ ದುಡಿಯುವ ಮಹಿಳೆಯ ಮೂಲಭೂತ ಹಕ್ಕು ಎಂಬುದನ್ನು ನಮ್ಮ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡುವ ಮೂಲಕ ದುಡಿಯುವ ಮಹಿಳೆಯ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ಸೂತ್ರಗಳನ್ನು ನೀಡಿದೆ.
ಅನಾವಶ್ಯಕ ದೈಹಿಕ ಸ್ಪರ್ಶ, ಲೈಂಗಿಕ ಒಲವಿಗಾಗಿ ಒತ್ತಾಯ ಅಥವಾ ಬೇಡಿಕೆ, ಅಶ್ಲೀಲ ವಿಷಯವನ್ನೊಳಗೊಂಡ ಸಾಹಿತ್ಯ ರಚನೆ ಮಾಡೋದು ಮತ್ತು ತೋರಿಸುವುದು, ದುಡಿಯುವ ಮಹಿಳೆಗೆ ಕಾನೂನಿನನ್ವಯ ಕೊಡಬೇಕಾದ ರಜೆ, ವೇತನ, ಬಡ್ತಿ ಮುಂತಾದವುಗಳನ್ನು ಮುಂದಿಟ್ಟು ಲೈಂಗಿಕ ಒಲವನ್ನು ತೋರಿಸುವಂತೆ ಆಕೆಯನ್ನು ಒತ್ತಾಯಿಸುವುದು, ಮಹಿಳೆಯ ವೇಷ-ಭೂಷಣ ಅಥವಾ ಅಂಗಾಂಗಗಳ ಸಂಬಂಧ ಅಶ್ಲೀಲ ಅಥವಾ ಲೈಂಗಿಕ ಅರ್ಥ ಬರುವ ಮಾತುಗಳನ್ನಾಡುವುದು,ಮಹಿಳೆ ಗಮನಿಸುವಂತೆ ಅಶ್ಲೀಲಕರ ಹಾಸ್ಯ ಚಟಾಕಿಗಳನ್ನು ಹಾರಿಸುವುದು , ಇವೆಲ್ಲವೂ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವೇ ಆಗಿರುತ್ತದೆ.

ಫೋಟೋ ಕೃಪೆ : google
ಮನೆಯಿಂದ ಹೊರಗೆ ದುಡಿಯುವ ಮಹಿಳೆಯರು ಎದುರಿಸುವ ಕಿರುಕುಳ, ದೌರ್ಜನ್ಯ ಒಂದೆಡೆಯಾದರೆ ಮನೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ವಾಸಿಸುವ ಹೆಣ್ಣು ಸುರಕ್ಷಿತ ವಾಗಿದ್ದಾಳೇ ಎಂದು ನೋಡಿದರೆ ಅಲ್ಲಿಯೂ ಅವಳಿಗೆ ತೊಂದರೆ ತಪ್ಪಿದ್ದಲ್ಲ.. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಪ್ರಕಾರ ಒಬ್ಬರು ಮತ್ತೊಬ್ಬರಿಗೆ ಹಿಂಸೆ ಕೊಡುವುದು ಹೇಗೆ ಅಪರಾಧ ಎನಿಸಿಕೊಳ್ಳುತ್ತದೋ, ಹಾಗೆ ವೈವಾಹಿಕ ಜೀವನದಲ್ಲಿ ಪತಿ ಪತ್ನಿಯನ್ನು ನೋಡಿಕೊಳ್ಳದೇ ಅವಳಿಗೆ ತೊಂದರೆ ಕೊಡಲೇಬೇಕೆಂಬ ಏಕೈಕ ಭಾವನೆಯಿಂದ ಮೂಲಭೂತ ಅವಶ್ಯಕತೆಗಳಾದ ಆಹಾರ ,ವಸತಿ,ಬಟ್ಟೆ ಒದಗಿಸದೆ ಇವುಗಳಿಂದ ಅವಳನ್ನು ವಂಚಿತಳನ್ನಾಗಿಸಿಗುವುದು. ವೈವಾಹಿಕ ಬಾಧ್ಯತೆಯನ್ನು ಸರಿಯಾಗಿ ಪೂರೈಸದೇ ಇರುವುದು ಸಹ ಅಪರಾಧವೆಂದೇ ಕರೆಯಲ್ಪಡುತ್ತದೆ.ಆದ ಕಾರಣ ನಮ್ಮ ಹಿಂದಿನ ಕಾಯ್ದೆಗಳಲ್ಲಿ ಕೌಟುಂಬಿಕ ವಿಷಯಗಳಲ್ಲಿ ದೌರ್ಜನ್ಯ, ಹಿಂಸೆ, ಕಿರುಕುಳ ನಡೆದರೆ ಅದಕ್ಕೆ ನಿರ್ದಿಷ್ಟವಾದ ಕಾನೂನು ಇರಲಿಲ್ಲ.. ದುಡಿಯುವ ಮಹಿಳೆಯ ಮೇಲಿನ ದೌರ್ಜನ್ಯ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇತ್ತೇ ವಿನಃ ಮನೆಯೊಳಗಿನ ಹೆಣ್ಣು ಮಕ್ಕಳಿಗೆ ಯಾವುದೇ ಕಾನೂನಿನ ಸುರಕ್ಷಾ ಕವಚ ಇರಲಿಲ್ಲ.. ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಅನುಭವಿಸುತ್ತಿದ್ದ ಅನೇಕ ಕಿರುಕುಳಗಳಿಂದ ತಪ್ಪಿಸಲು ಹಲವಾರು ಸಂಘಟನೆಗಳ ಹೋರಾಟ , ಸಾರ್ವಜನಿಕರ ಅಭಿಪ್ರಾಯಕ್ಕೆ ಸ್ಪಂದಿಸುವುದರ ಜೊತೆಗೆ 1995 ಬೀಜಿಂಗ್ ಸಮ್ಮೇಳನದಲ್ಲಿ ಒಡಂಬಡಿಕೆಯಾದ ಮೇರೆಗೆ ಭಾರತ ಸಂವಿಧಾನದ 39(ಎ) ನಿರ್ದೇಶನದನ್ವಯ ಅನುಚ್ಛೇದ 51(ಎ)ಮೇರೆಗಿನ ಕರ್ತವ್ಯಗಳನ್ನು ಕೋಟೆ ಬದ್ಧಗೊಳಿಸುವ ದಿಸೆಯಲ್ಲಿ ಮಹಿಳೆಯರ ಮೇಲಿನ ಹಿಂಸೆಗಳಿಗೆ ಹೊಸ ವ್ಯಾಖ್ಯಾನ ಮತ್ತು ಪರಿಹಾರ ಕೊಡುವ ಸಲುವಾಗಿ 2005ರಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಲಾಯಿತು.
ಈ ಕಾನೂನಿನ ಅಡಿಯಲ್ಲಿ ಪುರುಷನನ್ನು ಪ್ರತ್ಯರ್ಜಿದಾರನೆಂದು ಗುರುತಿಸಲಾಗಿದೆ, ಬಾಧಿತ ಮಹಿಳೆ ಅಥವಾ ಮಕ್ಕಳು ಘಟನೆ ಘಟಿಸಿದಾಗ ಯಾರೊಂದಿಗೆ ವಾಸಿಸುತ್ತಿದ್ದರೋ ಆ ಮನೆಯನ್ನು ಸಹಭಾಗಿತ್ವದ ಮನೆ ಎಂದು ವ್ಯಾಖ್ಯಾನಿಸದೆ ಹಿಂಸೆ, ಅವಳಿಷ್ದಕ್ಕೆ ವಿರುದ್ಧ ವಾಗಿ ವಿವಾಹ ಮಾಡೋದು, ವಿವಾಹದ ನಂತರ ಮಾನಸಿಕ/ ದೈಹಿಕವಾಗಿ ಮಕ್ಕಳಾಗಲಿಲ್ಲ ಎಂದು ಹೀಯಾಳಿಸುವುದರ ಸಹಿತವಾಗಿ ಹೊಡಿದು-ಬಡಿದು ಮಾಡಿ ಹಿಂಸಿಸಿದರೆ,ಅನ್ನ ನೀರು ಕೊಡದಿದ್ದರೆ, ಅವಳಿಷ್ಟದ ಕೆಲಸಕಾರ್ಯಗಳನ್ನು ಮಾಡದಿರುವಂತೆ ಒತ್ತಾಯಿಸಿದರೆ ಅಥವಾ ಇಷ್ಟಕ್ಕೆ ವಿರುದ್ಧ ಕಾಯಕ ಮಾಡುವಂತೆ ಹೇಳುವುದು ಹೊರಹಾಕುವುದು,ಮನೆ ಮತ್ತು ವಸ್ತುಗಳನ್ನು ಮಾರುವುದು, ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಬಾಡಿಗೆ ಸರಿಯಾಗಿ ಪಾವತಿಸದೆ ಮನೆ ಖಾಲಿ ಮಾಡುವಂತಹ ಪರಿಸ್ಥಿತಿ ತಂದೊಡ್ಡುವುದು . ಆರೋಗ್ಯ ಅಲಕ್ಷ್ಯ ಸಹಿತವಾಗಿ ಮಹಿಳೆಗೆ ಯಾರಿಂದ ತೊಂದರೆಯಾಗಿದೆಯೋ ಅವರ ವಿರುದ್ಧ ದಂಡಾಧಿಕಾರಿ ಗಳ ನ್ಯಾಯಾಲಯದಲ್ಲಿ ಪರಿಹಾರ ಕಾಣಲು ಅವಕಾಶವಿದೆ. ಗಂಡಸಿನ ಸ್ಥಾನದಲ್ಲಿರುವ ವ್ಯಕ್ತಿಯು ಅವಳ ನೋವನ್ನು ಅನುಭವಿಸಿದಾಗ ಅವಳೊಂದಿಗಿನ ಸಹಭಾಗಿತ್ವದ ಮನೆಯಲ್ಲಿರುವ ಗಂಡ,ಮಾವ,ಭಾವ,ಸ್ನೇಹಿತೆ ಮೇಲೆ ಯಾವುದೇ ಪಾತ್ರ ಇರಲಿ, ಯಾವ ಗಂಡಸಿನಿಂದ ಅವಳಿಗೆ ಅಥವಾ ಅವಳ ಮಗುವಿಗೆ ಅನ್ಯಾಯಕ್ಕೆ ಕಾರಣವಾದ ಪುರುಷನನ್ನು ಪ್ರತ್ಯರ್ಜಿದಾರನೆಂದು ಗುರುತಿಸಲಾಗಿದೆ.

ಹೀಗೆ ಘಟಿಸಿದ ಘಟನೆಗಳಿಗೆ ಸಂಬಂಧಿಸಿದಂತೆ ವರದಿ ಮಾಡಲು ಸಂರಕ್ಷಣಾಧಿಕಾರಿಗಳನ್ನು ರಾಜ್ಯ ಸರ್ಕಾರವು ನೇಮಿಸಿರುತ್ತದೆ. ತಾತ್ಕಾಲಿಕವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳೇ ಆ ಹೊಣೆಯನ್ನು ನಿರ್ವಹಿಸುತ್ತಿರುತ್ತಾರೆ. ಬಾಧಿತ ವ್ಯಕ್ತಿ ವಿಶೇಷವಾಗಿ ಅರ್ಜಿ ಬರೆಯಬೇಕಿಲ್ಲ. ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ವಿಷಯಗಳಲ್ಲಿ ಸಂಬಂಧಿಸಿದ ವಿಷಯಕ್ಕೆ ಗುರುತು ಹಾಕಬೇಕು. ಅದಕ್ಕೆ ತಕ್ಕಂತೆ ವರದಿಯನ್ನು ತಯಾರಿಸಿ, ದಂಡಾಧಿಕಾರಿಯು ವೈದ್ಯಕೀಯ ಸೌಲಭ್ಯ ಒದಗಿಸುವುದು. ವಸ್ತು ಒಡವೆ ವಾಪಸ್ಸು ಕೊಡಿಸುವುದು, ಮಾಡಿದಂತೆ ತಡೆಯುವುದು, ಸಂರಕ್ಷಣೆಗೆ ಆದೇಶ, ವಾಸ್ತವ್ಯಕ್ಕೆ ಆದೇಶ, ಆರ್ಥಿಕ ಪರಿಹಾರದ ಆದೇಶ, ಯಾರ ವಶದಲ್ಲಿರಬೇಕೆಂದು ಆಶ್ರಯ, ಮನೆ ಒದಗಿಸುವುದು. ಅಭಿರಕ್ಷೆ ಆದೇಶ ಮುಂತಾದ ಪರಿಹಾರದ ಆದೇಶಗಳನ್ನು ಹೊರಡಿಸಲು ಕಾನೂನಿನಲ್ಲಿ ಅವಕಾಶವಿದೆ.
ಅಂತಹ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಿದ ಮೇಲೆ ಹೊರಡಿಸುವ ಸೂಚನೆಯನ್ನು ಪ್ರತ್ಯರ್ಜಿದಾರರಿಗೆ ಸಂರಕ್ಷಣಾಧಿಕಾರಿಗಳು 2 ದಿನಗಳಲ್ಲಿ ಜಾರಿ ಮಾಡಬೇಕು,2 ತಿಂಗಳೊಳಗೆ ವಿಚಾರಣೆಗೆ ದಿನ ಗೊತ್ತುಮಾಡಬೇಕು. ಈ ದಿಸೆಯಲ್ಲಿ ಪೊಲೀಸರ ಸಹಾಯವನ್ನು ತೆಗೆದುಕೊಳ್ಳಬಹುದು ಸೇವಾ ಸರಬರಾಜು ದಾರರು ತಮ್ಮಲ್ಲಿರುವ ಸೇವಕರು ಹೊಂದಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯ ಅನುಭವ ಮತ್ತು ಸೌಕರ್ಯಗಳನ್ನು ತೋರಿಸಿ ಸೇವಾ ಸರಬರಾಜುದಾರ ಸಂಸ್ಥೆಯಾಗಿ ನೋಂದಾಯಸಿಕೊಳ್ಳಬೇಕು. ಅಂತಹವರಿಗೆ ರಕ್ಷಣೆಯ ಹೊಣೆ ವಹಿಸಲಾಗವುಧು. ಸಹಭಾಗಿತ್ವದ ಮನೆಯಲ್ಲಿದ್ದ ಪುರುಷ ವ್ಯಕ್ತಿ ಗಂಡನಾಗಿ ರಬಹುದು. ಸ್ನೇಹಿತನಾಗಿರಬಹುದು, ಜೊತೆ ವಾಸಿಸಿದ್ದರೆ,ಬಾಧಿತಳು ಅವಲಂಬಿಸಿದ ಪುರುಷ ವ್ಯಕ್ತಿ ಆ ಹೊಣೆ ಹೊತ್ತುಕೊಂಡಂತೆಯೇ ಸರಿ. ಅವರು ವಿರುದ್ಧ ಬಾಧಿತ ಗಳಿಗೆ ಅಗತ್ಯವಾದ ಪರಿಹಾರ ಆದೇಶ ಹೊರಡಿಸಲು ಅವಕಾಶವಿದೆ.
ದೌರ್ಜನ್ಯ ಕಾಯ್ದೆ ಅಧಿನಿಯಮದ ಮೇರೆಗೆ ಹೊರಡಿಸುವ ಆದೇಶವು ಇತರೆ ಯಾವುದೇ ಕಾನೂನಿನ ಮೇರೆಗೆ ನೀಡಿರುವ ಪರಿಹಾರಕ್ಕೆ ಹೆಚ್ಚುವರಿಯಾಗಿರುತ್ತದೆ. ಹಾಗಾಗಿ ಮಹಿಳಾಪರ ಇರುವ ಕೌಟುಂಬಿಕ ದೌರ್ಜನ್ಯ ಕಾಯ್ದೆ,, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಕಾಯ್ದೆಗಳು ಮಹಿಳೆಯರ ನೆಮ್ಮದಿಗೆ ವಿಸ್ತ್ರತ ಅಧಿಕಾರ ನೀಡುತ್ತದೆ. ಮಹಿಳೆಯರ ಸಂರಕ್ಷಣೆಗಾಗಿ ವಿಶೇಷ ಅವಕಾಶಗಳನ್ನು ಹೊಂದಿರುವ ಈ ಕಾನೂನನ್ನು ಬಹು ನಾಜೂಕಾಗಿ ಬಳಸಬೇಕು. ಈ ಅಧಿನಿಯಮ ಇತ್ತಿಚಿನ ದಿನಗಳಲ್ಲಿ ಶೋಷಿತ ಮಹಿಳೆ,ಅಬಲೆಯರ ಕಾನೂನಿನ ರಕ್ಷಾಕವಚ ಆಗಿದೆ. ಆ ನಿಟ್ಟಿನಲ್ಲಿ ಈ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆಯ ಆಚರಣೆಗಳು ಮಹಿಳೆಯರನ್ನು ಮತ್ತಷ್ಟು ಜಾಗೃತಗೊಳಿಸುವಲ್ಲಿ ಸಹಾಯವಾಗುತ್ತದೆ.. ಎನ್ನಬಹುದು, ಅದಾಗ್ಯೂ ಈ ಅಧಿನಿಯಮದ ಸದುಪಯೋಗ ಪಡಿಸಿ ಕೊಂಡರೆ ನೆಮ್ಮದಿ ಜೀವನ ಸಾಗಿಸಬಹುದು. ಕೆಲ ಸಂದರ್ಭದಲ್ಲಿ ಅಧಿನಿಯಮದ ದುರುಪಯೋಗ ಪಡಿಸಿಕೊಳ್ಳುವ ಉದಾಹರಣೆಗಳನ್ನು ನಾವು ಕಾಣಬಹುದು. ಸಣ್ಣ ಪುಟ್ಟ ವಿಷಯಗಳಿಗೆ ಆರೋಪ ಮಾಡಿದರೆ ಸಾಂಸಾರಿಕ ನೆಮ್ಮದಿ ಇರದು. ಕಾನೂನನ್ನು ಅನಿವಾರ್ಯವಾಗಿ ಸಂರಕ್ಷಣೆಗಾಗಿ ಬಳಸಬೇಕೆ ಹೊರತು ಇನ್ನೊಬ್ಬರ ಮೇಲೆ ದಾಳಿಮಾಡಲು, ತೇಜೋವಧೆ ಮಾಡಲು ಬಳಸುವುದು ಔಚಿತ್ಯವಲ್ಲ .
- ಪವಿತ್ರ ಹೆತ್ತೂರು– ವಕೀಲರು, ಸೋಮವಾರ ಪೇಟೆ
