ನೀ ನನ್ನ ಮುದ್ದು ತಂಗಿ, ಕಡಿಯಿತೇನೇ ಇಷ್ಕಕ್ಕೆ ಅಂಥ ಅನುಬಂಧ?…ಶಿಕ್ಷಕಿ ಶಿವದೇವಿ ಅವನೀಶಚಂದ್ರ ಬಾಬಿ ಅವರ ಅಗಲಿದ ತಂಗಿಗೆ ಭಾವನಾತ್ಮಕ ಕವಿತೆಯನ್ನು ಬರೆದಿದ್ದಾರೆ ತಪ್ಪದೆ ಓದಿ…
ಮರೆಯಾಯಿತಲ್ಲ
ಲಲಿತವಹ ರೂಪ
ಸವಿ ಮಾತಿನಲಿ ಸೆಳೆವ
ಆ ಮೋಹಕ ಪ್ರದೀಪ
ಬೇಡದವರಾರುಂಟು
ಜಗವನ್ನೆ ತಬ್ಬಿ
ಮನದಣಿಯೆ ಖಾದ್ಯಗಳು
ಸವಿಯೂಡಿ ತಣಿಸಿ
ಮರೆತವರುಂಟೆ ಇವಳಿಂದ
ಪಾಠ ಕಲಿತವರು
ತರತಮವಿಲ್ಲದೆ
ಸ್ನೇಹವುಂಡವರು
ನನ್ನಮಳ ಜೋಡಿಯಂತೆ
ಬದುಕ ನಡೆಯನು ನಡೆದು
ಸಂದರ್ಭ ಬಂದಾಗ
ಒಟ್ಟಾಗಿ ಸಂಸಾರ ತೇರೆಳೆದು
ಸಹೋದರಿಯೂ, ಗೆಳತಿಯೂ ನನಗೆ ಪ್ರತಿಸ್ಪರ್ಧಿಯೂ ಆಗಿ
ನನ್ನೆದೆಯ ತಾಯಿಯಾಗಿ
ದೂರವಿದ್ದರೂ ಮನಕೆ ಹತ್ತಿರ
ಹತ್ತಿರವಿದ್ದರೂ ದೂರವೆನಿಸುವಂತೆ
ಸಾಹಿತ್ಯ ಸಂವಾದದಲಿ
ನಾವು ಹಿತವಾಗಿ ವಿಮರ್ಶೆಯೊ ಮೆಚ್ಚುಗೆಯೊ ಸಂಪರ್ಕದಲಿ
ಉಳಿದು ಅಪ್ಪನಾ ಕನಸುಗಳ
ದೀಪವನು ಹಿಡಿದು
ಬೆಳಗಿದ್ದು ಎಷ್ಟೋ…ಬೆಳಗಿಸಿಕೊಂಡದ್ದೆಷ್ಟೋ..
ಅಕ್ಕ ಎನ್ನದೆ ನನ್ನ ಹೆಸರಿನಿಂದಲೇ ಕರೆದು ಅಲ್ಲಿ ನನ್ನ ಕಿರಿಯವಳೆನಿಸಿ ಉಳಿಸಿ ಈಗ ನೀನು ತೆರಳಿದ್ದೆಲ್ಲಿಗೆ
ನೀ ನನ್ನ ಮುದ್ದು ತಂಗಿ
ಕಡಿಯಿತೇನೇ ಇಷ್ಕಕ್ಕೆ ಅಂಥ ಅನುಬಂಧ?
ತೆರಳಿದೆ ಎಂದು ಯಾರೆಂದರು ನಿನಗೆ ಮರೆಯುವೆವೆಂದು
ಮರೆತೇವು ಹೇಗೆ ಈ ಆಜನ್ಮ ಅನುಬಂಧವ …ಕಣ್ತೆರೆದು ನೋಡು ನಿನ್ನ ಜೀವದ ಗೆಳತಿಯಿಹಳಿಲ್ಲಿ
ಹೇಳು ಇವರ
ಕೇಳುವುದಿಲ್ಲವಾ?ನಿನಗೆ
ಇಷ್ಟವಾದವರ
ನೀನು ಪ್ರೀತಿಸುವ ಮುದ್ದು ಮಕ್ಕಳ ಬಳಗವ?
ವಿದಾಯವಿದೆ ನಿನಗೆ ತಂಗಿ
ದೊರೆಯಲಿ ನಿನ್ನಾತ್ಮಕ್ಕೆ ಚಿರಶಾಂತಿ!
ನಿನ್ನ ಅಕ್ಕ
- ಶಿವದೇವಿ ಅವನೀಶಚಂದ್ರ ಬಾಬಿ – ಕೊಡಗು
