ನಮ್ಮವ್ವ ನನ್ನ ಕಣ್ಣುಗಳು ಯಾವಾಗಲೂ ನಿನ್ನನ್ನೇ ಹುಡುಕುತಿರುತ್ತವೆ. ನೀನೀಗ ಇಲ್ಲದೇ ಹೋದರೂ ನಮ್ಮ ಹೃದಯದಲ್ಲಿ ಬೆಚ್ಚಗೆ ಬೀಡು ಬಿಟ್ಟಿರುವೆ ಅವ್ವ. ಪ್ರೀತಿಯ ಅವ್ವನಿಗೆ ಖ್ಯಾತ ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರು ಬರೆದ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
2010 ಮೇ ಒಂದನೇ ತಾರೀಖು. ನುಡಿದಂತೆ ನಡೆದು ತೋರಿದ ಕೀರ್ತಿವಂತೆ ನಮ್ಮ ಮಾತೆ ನಮ್ಮನ್ನಗಲಿ ಹೋಗಿ ಶಿವೈಕ್ಯಳಾದ ಪುಣ್ಯ ದಿನವಿಂದು. 14 ವರ್ಷ ಹೇಗೆ ಕಳೆದು ಹೋಯಿತೋ ತಿಳಿಯದು. ತವರಿಗೆ ಹೋದಾಗ, ಹಟ್ಟಿಗೋ, ಗದ್ದೆಗೋ ಹೋಗಿದ್ದಾಳೆ, ಈಗ ಬರುತ್ತಾಳೆ ನಮ್ಮವ್ವ ಎಂದು ಕಣ್ಣುಗಳು ನಿನ್ನನ್ನೇ ಹುಡುಕುತಿರುತ್ತವೆ. ನೀನೀಗ ಇಲ್ಲದೇ ಹೋದರೂ ನಮ್ಮ ಹೃದಯದಲ್ಲಿ ಬೆಚ್ಚಗೆ ಬೀಡು ಬಿಟ್ಟಿರುವೆ ಅವ್ವ. ಆ ನೆನಪಿನಿಂದ ನೀನೆಂದೂ ನಮ್ಮನ್ನು ಅಗಲಲಾರೆ. ನಿನ್ನಷ್ಟು ತಾಳ್ಮೆ, ಸಹನೆ ನಮಗಿಲ್ಲ ಅವ್ವ. ಆದರೂ ನೀ ತೋರಿದ ಹಾದಿಯಲ್ಲಿ ಸುಗಮವಾಗಿ ಸಾಗುತಿರುವೆವು. ಇನ್ನೇನು ನಾವು ಕೂಡ ಜೀವನದ ಪಯಣದಂಚಿನಲ್ಲಿ ಇರುವೆವು. ನಿನ್ನ ನೆನಪೊಂದೇ ನಮಗೆ ಸಕಲ ಸಹಿಷ್ಣುತೆಯನ್ನು ತಂದು ಕೊಡುತಿದೆ.

ನೆನಪಿನಂಗಳ ತೆರೆದು ಕೊಂಡಿದೆ
ನಮ್ಮನಗಲಿದ ದಿನವಿದು
ಕನಸಿನಂತಿದೆ ನಂಬಲಾಗದ
ಸತ್ಯವೆಮ್ಮಯ ಮುಂದಿದೆ
ಹೊತ್ತು ಹೆತ್ತಿಹ ಮಾತೆ ಮಮತೆಯು
ತೊರೆಯಲಾರದ ಬಂಧವು
ಹತ್ತು ಮಕ್ಕಳನೊಂದೆ ತೆರದಲಿ
ಬೆಳೆಸಿದಂತಹ ಚಂದವು
ಕಥೆಯ ಹೇಳುತ ಸತ್ಯ ಧರ್ಮದ
ಪಥದೊಳೆಮ್ಮನು ನಡೆಸಿದೆ
ಸುತನು ದೊರೆತರು ಅಷ್ಟ ಕನ್ಯೆಯ
ರನ್ನು ತೋಷದಿ ಸಲಹಿದೆ
ಕಷ್ಟ ಕೋಟಲೆಗಳನು ಸಹಿಸುತ
ದುಡಿಯುತೆಮ್ಮನು ಸಾಕಿದೆ
ಇಷ್ಟದಿಂದಲೆ ವಿದ್ಯೆ ಬುದ್ಧಿಯ
ಕಲಿಸೆ ಶಾಲೆಗೆ ಕಳುಹಿದೆ
ನಂದ ಕಂದನ ಮೀರಿಸುವತೆರ
ಗೋವುಗಳ ನೀ ಪೊರೆದಿಹೆ
ಕಂದ ಕರುಗಳ ಮನೆಯೊಳಿರಿಸುತ
ಮಗುವಿನಂತೆಯೆ ಕಂಡಿಹೆ
ಯಾವ ದೇವಿಯ ರೂಪ ಕಾಣೆನು
ಲಕ್ಷ್ಮಿ ಸರಸತಿ ಪಾರ್ವತಿ
ದೇವ ಲೋಕದ ಸರಳಸುಂದರಿ
ಕಾವ ಕರುಣೆಯ ಮೂರುತಿ
- ಬಿಟ್ಟೀರ ಚೋಂದಮ್ಮ, ಬೆಂಗಳೂರು
