ಇಲಿಗಳ ಸಂಶೋಧನಾ ಯೋಜನೆ – ಶಕುಂತಲಾ ಶ್ರೀಧರ

ನನ್ನ ವಿಷಯದಲ್ಲಿ ನಾನು ಬೆಂಗಳೂರಿನಲ್ಲಿಯೇ ವಿದೇಶಿ ತಜ್ಞರಿಂದ ತರಬೇತಿ ಪಡೆಯುವ ಅದೃಷ್ಟವನ್ನು ಹೊಂದಿದ್ದೆ. ಏಕೆಂದರೆ ಈ ತಜ್ಞರು ಇಲಿ ನಿಯಂತ್ರಣದ ತಂತ್ರಗಳಲ್ಲಿ ಪರಿಣತಿಯನ್ನು ಹೊಂದಿದ್ದರು ಮತ್ತು ತಮ್ಮ ದೇಶಗಳಲ್ಲಿ ದಶಕಗಳ ನಿಯಂತ್ರಣ ತಂತ್ರಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದರು. ಮುಂದೆ ಓದಿ ವಿಜ್ಞಾನಿ ಶಕುಂತಲಾ ಶ್ರೀಧರ ಅವರ ಪಿಚ್ ಡಿ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ನಾನು ಇಲಿಗಳ ಸಂಶೋಧನಾ ಯೋಜನೆಗೆ ಸೇರಿದಾಗ (1973), ಆಂಫಿಬಿಯಾ ವರ್ಗಕ್ಕೆ ಸೇರಿದ ಕಪ್ಪೆಗಳ ಮೇಲೆ ಮಾತ್ರ ಕೆಲಸ ಮಾಡಿದ್ದರಿಂದ ಈ ವರ್ಗದ ಸಸ್ತನಿಗಳ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಇಂಗ್ಲೆಂಡ್ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ವಿಶೇಷವಾಗಿ ಡೆನ್ಮಾರ್ಕ್‌ನಲ್ಲಿ ತೀವ್ರವಾಗಿ ನಡೆಸಿದ ದಶಕಗಳ ಸಂಶೋಧನೆಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಉತ್ತಮ ಶ್ರೇಣಿಯ ದಂಶಕಶಾಸ್ತ್ರಜ್ಞರು ಆಗ ಇರಲಿಲ್ಲ. ಸಾಮಾನ್ಯವಾಗಿ ಭಾರತೀಯ ವಿಜ್ಞಾನಿಗಳು ವಿಶೇಷ ವಿಷಯದಲ್ಲಿ ತರಬೇತಿ ಪಡೆಯಲು ವಿದೇಶಕ್ಕೆ ಹೋಗುತ್ತಾರೆ.

ಆದರೆ ನನ್ನ ವಿಷಯದಲ್ಲಿ ನಾನು ಬೆಂಗಳೂರಿನಲ್ಲಿಯೇ ವಿದೇಶಿ ತಜ್ಞರಿಂದ ತರಬೇತಿ ಪಡೆಯುವ ಅದೃಷ್ಟವನ್ನು ಹೊಂದಿದ್ದೆ. ಏಕೆಂದರೆ ಈ ತಜ್ಞರು ಇಲಿ ನಿಯಂತ್ರಣದ ತಂತ್ರಗಳಲ್ಲಿ ಪರಿಣತಿಯನ್ನು ಹೊಂದಿದ್ದರು ಮತ್ತು ತಮ್ಮ ದೇಶಗಳಲ್ಲಿ ದಶಕಗಳ ನಿಯಂತ್ರಣ ತಂತ್ರಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದರು. ಆದರೆ ವೈವಿಧ್ಯಮಯವಾದ ಕೃಷಿ, ಪಶುಪಾಲನೆ, ಮರುಭೂಮಿ ಮತ್ತು ಅರಣ್ಯ ಪರಿಸರ, ಜೊತೆಗೆ ಮೂವತ್ತಕ್ಕೂ ಹೆಚ್ಚು ಜಾತಿಯ ಇಲಿ, ಹೆಗ್ಗಣ ವಾಸಿಸುವ ಭಾರತ ವಿಭಿನ್ನ ಸನ್ನಿವೇಶವಾಗಿತ್ತು. ನಾವು ಸ್ಥಳೀಯ ದಂಶಕಗಳನ್ನು ಅಧ್ಯಯನ ಮಾಡಬೇಕಾಗಿತ್ತು ಮತ್ತು ನಮ್ಮ ದೇಶಕ್ಕೆ ಸೂಕ್ತವಾದ ನಿಯಂತ್ರಣ ವಿಧಾನಗಳನ್ನು ಕಂಡು ಹಿಡಿಯಬೇಕಾಗಿತ್ತು. ಅದೃಷ್ಟವಶಾತ್ ನಮ್ಮ ಸಂಶೋಧನಾ ಯೋಜನೆಯ ಅಡಿಯಲ್ಲಿ ದಂಶಕಗಳ ನಿಯಂತ್ರಣದಲ್ಲಿ ಪರಿಣಿತರಾದ ವಿದೇಶಿ ಸಲಹೆಗಾರರನ್ನುನೇಮಿಸಿಕೊಳ್ಳಲು ಸಾಧ್ಯತೆ ಇತ್ತು. ಫೋರ್ಡ್ ಫೌಂಡೇಶನ್ ಪ್ರಾಜೆಕ್ಟ್‌ನ ಅನುದಾನಿತರು ಈ ವಿಷಯದಲ್ಲಿ ಇಬ್ಬರು ವಿದೇಶಿ ತಜ್ಞರನ್ನು ಸೀಮಿತ ಅವಧಿಗೆ ನೇಮಿಸಿಕೊಳ್ಳಲು ಅವಕಾಶ ಒದಗಿಸಿದ್ದರು.ಮೊದಲ ಎರಡು ವರ್ಷಗಳ ಕಾಲ ಪ್ರೊ.ಎಸ್.ಎ. ಬಾರ್ನೆಟ್ಟ್ ಎಂಬ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ (ಕ್ಯಾನ್‌ಬೆರಾ) ಇಲಿಗಳ ತಜ್ಞ,ಅವರ ಪತ್ನಿ ಮತ್ತು ಮಗುವಿನೊಂದಿಗೆ ಸಲಹೆಗಾರರಾಗಿ 1974 ರಲ್ಲಿ ನಮ್ಮಲ್ಲಿಗೆ ಬಂದರು. S. A. ಬರ್ನೆಟ್ (1915-2003) ಅವರು ಆಕ್ಸ್‌ಫರ್ಡ್‌ನ ಮ್ಯಾಗ್ಡಲೆನ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು, ಅಲ್ಲಿ ಅವರು ಪ್ರಾಣಿಶಾಸ್ತ್ರದಲ್ಲಿ ಪ್ರಥಮ ಸ್ಥಾನವನ್ನು ಪಡೆದ ನಂತರ ಕ್ರಿಸ್ಟೋಫರ್ ವೆಲ್ಚ್ ವಿದ್ವಾಂಸರಾದರು. ಅವರು ಹಿರಿಯ ಉಪನ್ಯಾಸಕರಾಗಿದ್ದರು ಮತ್ತು ಅಂತಿಮವಾಗಿ 1971 ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. 150 ಕ್ಕೂ ಹೆಚ್ಚು ಪ್ರಕಟಣೆಗಳು ಮತ್ತು ಒಂಬತ್ತು ಪುಸ್ತಕಗಳನ್ನು ಬರೆದಿದ್ದರು.

ಪ್ರೊ.ಎಸ್.ಎ. ಬಾರ್ನೆಟ್ಟ್

ಮೂಲತಃ ಬಾರ್ನೆಟ್ ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಿಂದ ಬಂದವರು. ಎಲ್ಲಾ ಸ್ಕಾಟ್‌ಗಳಂತೆ ಅವರು ತಮ್ಮ ಸ್ಕಾಟಿಷ್ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದ್ದರು. ಸ್ಕಾಟ್‌ ಲಾಂಡಿನ ಪ್ರಜೆಗಳು ತಮ್ಮ ಸಂಸ್ಕೃತಿ, ಪಾಕ ಪದ್ಧತಿ, ಚರಿತ್ರೆ, ನಡೆವಳಿಕೆಗಳಲ್ಲಿ ಇಂಗ್ಲಿಷ್‌ರಿಂದ ಭಿನ್ನರು. ಅವರ ಇಂಗ್ಲಿಷ್ ಕೂಡ ಇಂಗ್ಲೆಂಡ್‌ಗಿಂತ ಸ್ವಲ್ಪ ಭಿನ್ನವಾಗಿದೆ. ಐತಿಹಾಸಿಕವಾಗಿ ಇಂಗ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್‌ಗಳು ಅನೇಕ ಬಾರಿ ಯುದ್ಧಗಳಲ್ಲಿ ತೊಡಗಿದ್ದವು ಮತ್ತು ಇಂಗ್ಲೆಂಡ್ ಅನ್ನು ಸ್ಕಾಟ್‌ಲ್ಯಾಂಡ್‌ನ ರಾಜರು ಸ್ವಲ್ಪ ಕಾಲ ಆಳಿದ್ದರು. ಬಾರ್ನೆಟ್ ಜನ್ಮತಹ ತಮ್ಮ ಸ್ಕಾಟಿಷ್ ಪರಂಪರೆಯನ್ನು ತೀವ್ರವಾಗಿ ಅನುಸರಿಸುತ್ತಿದ್ದರು . ಈ ಜಿಗುಟುತನವನ್ನು, ಹಮ್ಮನ್ನು ಬಿಟ್ಟರೆ ಅವರು ಉತ್ತಮ ಸಂಭಾವಿತ ವ್ಯಕ್ತಿಯಾಗಿದ್ದರು. ಪ್ರಾಣಿಗಳ ನಡವಳಿಕೆಯ ಬಗ್ಗೆ ನುರಿತ ಜೀವಶಾಸ್ತ್ರಜ್ಞರಾಗಿದ್ದ ಅವರು, ದಂಶಕಗಳ ನಡವಳಿಕೆಯನ್ನು ಮಾತ್ರವಲ್ಲದೆ, ಇಲಿ ನಿಯಂತ್ರಣದ ಸಂಶೋಧನೆಯಲ್ಲಿ ಮೊದಲಿಗರಾಗಿದ್ದರು. ಇಲಿಗಳು ಸೈನ್ಯದ ಪ್ರಮುಖ ಸಂವಹನ ಸಾಧನಗಳಲ್ಲಿ ತಂತಿಗಳನ್ನು ಕತ್ತರಿಸುವುದನ್ನು ತಡೆಗಟ್ಟಲು ಬ್ರಿಟಿಷ್ ಸಶಸ್ತ್ರ ಪಡೆಗಳಿಗೆ ಯಶಸ್ವಿ ಇಲಿ ನಿಯಂತ್ರಣ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಟ್ಟಿದ್ದರು .

ಫೋಟೋ ಕೃಪೆ : amazon

ಬಾರ್ನೆಟ್ ಅವರು ನಮಗೆ ಇಲಿಗಳ ನಡವಳಿಕೆ ಮತ್ತು ನಿಯಂತ್ರಣದ ವಿಧಾನಗಳನ್ನು,ದಂಶಕಗಳ ನಿಯಂತ್ರಣದ ಮೂಲಭೂತ ಅಂಶಗಳನ್ನು ಕಲಿಸಿದರು. ಇದು ದಂಶಕಗಳ ನಿಯಂತ್ರಣದ ಬಗ್ಗೆ ನಮ್ಮ ಅಧ್ಯಯನಗಳಿಗೆ ಅಡಿಪಾಯವಾಗಿತ್ತು. ಎಲ್ಲಾ ಪ್ರಖ್ಯಾತ ವಿಜ್ಞಾನಿಗಳಂತೆ ಅವರು ತಾಳ್ಮೆಯಿಂದ ಬೋಧಿಸುತಿದ್ದರು. ಆದರೆ ನಾವು ಅವರ ನಿರೀಕ್ಷೆಯ ಮಟ್ಟಕ್ಕೆ ಕಲಿಯದಿದ್ದರೆ ಅವರಿಗೆ ತುಂಬಾ ಕೋಪ ಬರುತ್ತಿತ್ತು. ಅವರು ಇಲ್ಲಿ ಭಾರತದಲ್ಲಿ ಕಳೆದ ಮೂರು ತಿಂಗಳುಗಳನಲ್ಲಿ , ಒಂದು ನಿಮಿಷವೂ ವ್ಯರ್ಥ ಮಾಡಲಿಲ್ಲ. ಸ್ಥಳೀಯ ಜಾತಿಯ ದಂಶಕಗಳು, ನಮ್ಮ ಬೆಳೆಗಳು, ಅವುಗಳಿಗೆ ದಂಶಕಗಳ ಹಾನಿ ಮತ್ತು ಅವುಗಳ ನಿಯಂತ್ರಣಕ್ಕಾಗಿ ತಂತ್ರಗಳನ್ನು ಯೋಜಿಸುವ ಬಗ್ಗೆ ಜ್ಞಾನವನ್ನು ಸ್ಪಂಜಿನoತೆ ಹೀರಿಕೊಳ್ಳುತ್ತಿದ್ದರು. ನಂತರ ಅವರು ಇಲ್ಲಿ ಕಲಿತಿದ್ದನ್ನು ಪುಸ್ತಕವಾಗಿ ಬರೆದರು. ಆ ಸಮಯದಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ಈ ಗುಣಲಕ್ಷಣಗಳನ್ನು ಕಲಿಯದಿದ್ದರೂ, ನನ್ನ ಉಪಪ್ರಜ್ಞೆಯು ಅವರಿಂದ ಈ ಅಭ್ಯಾಸಗಳನ್ನು ಹೀರಿಕೊoಡಿತ್ತು. ಜೊತೆಗೆ ಅವರು ದಂಶಕಗಳ ನಿಯಂತ್ರಣದ ಮೇಲೆ ಸುಮಾರು ಪ್ರಕಟಿತ ಲೇಖನಗಳನ್ನು ನಮಗಾಗಿ ತಂದಿದ್ದರು.

ಭಾರತದ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಬಗ್ಗೆ ಚೆನ್ನಾಗಿ ತಿಳಿದಿದ್ದ ಬಾರ್ನೆಟ್ ಹೆಚ್ಚಿನ ಬ್ರಿಟಿಷರoತೆ ನಮ್ಮ ದೇಶದ ಬಗ್ಗೆ ಒಂದು ರೀತಿಯ ಅಭಿಮಾನ, ಆಕರ್ಷಣೆ ಹೊಂದಿದ್ದರು. ಅವರು ನಮ್ಮ ಭೌಗೋಳಿಕತೆ, ಪ್ರಾಣಿಸಂಕುಲ , ಸಂಸ್ಕೃತಿ ಮತ್ತು ರಾಜಕೀಯ ವಾತಾವರಣದ ಬಗ್ಗೆ ಸಾಕಷ್ಟು ತಿಳಿದಿದ್ದರು. ಅವರ ಅಡಿಯಲ್ಲಿ ನನ್ನ ಪ್ರಾರಂಭಿಕ ಸಂಶೋಧನಾ ಅವಧಿಯನ್ನು ಕಳೆದ ನಾನು ನಂತರ ಇಂಗ್ಲೆಂಡ್, ಯುರೋಪಿಯನ್ ದೇಶಗಳು ಮತ್ತು ಅಮೆರಿಕಕ್ಕೆ ಹೋದಾಗ ಈ ಅನುಭವ ನನಗೆ ತುಂಬಾ ಸಹಾಯ ಮಾಡಿತು. ನಾನು ಅಲ್ಲಿ ಎಂದಿಗೂ ಅಪರಿಚಿತಳೆಂದು ಭಾವಿಸಲಿಲ್ಲ. ಅಲ್ಲಿನ ಉಪನ್ಯಾಸ ಸಭಾಂಗಣಗಳಲ್ಲಿ, ಪ್ರಯೋಗಾಲಯಗಳಲ್ಲಿ ಅಥವಾ ಮನೆಗಳಲ್ಲಿ ಯಾವ ಸಂಕೋಚವನ್ನೂ, ಭಯವನ್ನೂ ಅನುಭವಿಸಲಿಲ್ಲ. ದಂಶಕಗಳ ನಿಯಂತ್ರಣದ ಮೂಲಭೂತ ಅಂಶಗಳನ್ನು ನಾನು ಅವರಿಂದ ಕಲಿತೆ ಎಂದು ಇಂದಿಗೂ ಹೆಮ್ಮೆಪಡುತ್ತೇನೆ. ಹೀಗಾಗಿ ಬಾರ್ನೆಟ್ ತರಗತಿಯ ಆಚೆಗೆ ನನ್ನ ಎರಡನೆಯ ಗುರುಗಳಾಗಿದ್ದರು.


  • ಶಕುಂತಲಾ ಶ್ರೀಧರ –  ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಾಣಿ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆಡಿದ್ದು, ಭಾರತೀಯ ದಶಕಗಳ ಮೇಲಿನ ಅವರ ಪ್ರವರ್ತಕ ಕೆಲಸವನ್ನು ಗುರುತಿಸಿ, ಡಾ.ಶ್ರೀಧರ ಅವರನ್ನು ಆಕ್ಸ್‌ಫರ್ಡ್, ನಾಟಿಂಗ್‌ಹ್ಯಾಮ್, ಯಾರ್ಕ್, ಮ್ಯೂನಿಚ್, ಡ್ಯಾನಿಶ್ ಕೀಟ ನಿಯಂತ್ರಣ ಪ್ರಯೋಗಾಲಯ, ಸ್ಪೇನ್, ವಿಯೆನ್ನಾ, ಟುಬಿಂಗೆನ್,ಅಮೇರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲ್ಸಯಾಗಳೇ ಸೇರಿದಂತೆ ವಿಶ್ವದಾದ್ಯಂತ ಸೆಮಿನಾರ್‌ಗಳನ್ನು ನೀಡಲು ಆಹ್ವಾನಿಸಿದ್ದಾರೆ. 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW