ಧರ್ಮ ಹಾಗೂ ರಾಜಕಾರಣದ ನಡುವಿನ ಸಂಬಂಧಗಳ ಸೂಕ್ಷ್ಮತೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಡುವ ನಾ. ಮೊಗಸಾಲೆ ಅವರ ಕಾದಂಬರಿ “ಧರ್ಮಯುದ್ಧ” ಈ ಶತಮಾನದ ವಾಸ್ತವತೆಗೆ ಹಿಡಿದ ಕೈಗನ್ನಡಿ. ಪುಸ್ತಕ ಪರಿಚಯವನ್ನು ಲೇಖಕರಾದ ಶಿವಕುಮಾರ್ ಬಾಣಾವರ ಅವರು ಓದುಗರಿಗೆ ಮಾಡಿಕೊಟ್ಟಿದ್ದಾರೆ ಮುಂದೆ ಓದಿ…
ಅಧರ್ಮದ ಹಾದಿಯಿಂದ ಗಳಿಸಿದ ಹಣದ ನೆರವಿನಿಂದ ಧರ್ಮವನ್ನು ಖರೀದಿಸುವ ಮನೋಸ್ಥಿತಿಯು ಹೇಗೆ ಧರ್ಮದೊಳಗಿನ ಸಾತ್ವಿಕತೆ ಕಾಣೆಯಾಗುವಂತೆ ಮಾಡಿದೆ ಎಂಬ ವಿದ್ಯಮಾನದ ವಿಶ್ಲೇಷಣೆ ಕೃತಿಯಲ್ಲಿದೆ. ಸಹಾಯದ ನೆಪದಲ್ಲಿ ಸಮಸ್ಯೆಗೆ ಒಳಗಾದವರನ್ನು ಮತ್ತಷ್ಟು ಅಸಹಾಯಕತೆಗೆ ತಳ್ಳುವ ಪರಿ ಹಾಗೂ ಅದಕ್ಕೆ ಧರ್ಮ ಪರೋಕ್ಷವಾಗಿ ಹೇಗೆ ಕಾರಣವಾಗಿದೆ ಎಂಬುದರ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಡಲಾಗಿದೆ.
(ಹಿರಿಯ ವಿದ್ವಾಂಸರಾದ ಡಾ.ನಾ ಮೊಗಸಾಲೆ ಅವರ ಕೃತಿಗಳು)
“ಭಯವೇ ಧರ್ಮದ ಹುಟ್ಟಿಗೆ ಕಾರಣವೇ? ಧರ್ಮದಿಂದಲೇ ಭಯ ಹುಟ್ಟಿದೆಯೇ?” ಎನ್ನುವ ಜಿಜ್ಞಾಸೆ ಕೂಡ ಕಾದಂಬರಿಯಲ್ಲಿದೆ. ವೈದಿಕ – ಅವೈದಿಕ ಸಂಸ್ಕೃತಿಯ ನಡುವಿನ ಸಂಘರ್ಷದ ನೆಲೆಗಟ್ಟು ಕೂಡ ಕೃತಿಗೆ ಇದೆ. ಸರಳವಾದ ಭಾಷೆ, ನಿರೂಪಣಾ ಶೈಲಿಯ ಮೂಲಕ ಕಾದಂಬರಿಯ ಘಟನೆಗಳು ಇಲ್ಲಿಯೇ ನಮ್ಮ ಸುತ್ತ ನಡೆದಂಥದ್ದು ಎಂಬ ಭಾವನೆ ಓದುಗರಿಗೆ ಮೂಡಿಸುತ್ತದೆ.
ಯಾವುದೇ ಒಂದು ಕೃತಿ ಈ ನೆಲದ ಸತ್ಯಗಳಿಗೆ ಮುಖಾಮುಖಿಯಾಗಿ ಸತ್ಯದ ಪರವಾಗಿ ನಿಂತಾಗ ಅದಕ್ಕೆ ಸಾರ್ವಕಾಲಿಕ ಗುಣ ಒದಗುತ್ತದೆ. ಅಂತಹ ಗುಣ “ಧರ್ಮಯುದ್ಧ” ಕಾದಂಬರಿಗೆ ಇದೆ.
ಧರ್ಮಯುದ್ಧ ಎಂದರೆ ಎರಡು ವಿಭಿನ್ನ ಧರ್ಮಗಳ ನಡುವಿನ ಸಂಘರ್ಷ ಏಂಬ ಪೂರ್ವ ಭಾವನೆಯನ್ನು ತೊಡೆದುಹಾಕಿ ಒಂದು ಧರ್ಮದೊಳಗಿನ ವೈರುಧ್ಯಗಳ ಬಗ್ಗೆ ಧ್ವನಿಸುವಲ್ಲಿ “ಧರ್ಮಯುದ್ಧ” ಕೃತಿಯ ವಿಶಿಷ್ಟತೆ ಅಡಗಿದೆ.
ಧರ್ಮಗಳ ಚೌಕಟ್ಟಿನ ಬಗ್ಗೆ ಚಿಂತನೆಗೆ ಹಚ್ಚುವ ಸಾಮರ್ಥ್ಯವನ್ನು ಕೃತಿ ಹೊಂದಿದೆ. ಧರ್ಮಗಳ ಚೌಕಟ್ಟನ್ನು ಮೀರುವ ಬಗೆ, ಅದರಾಚೆಗೂ ಒಂದು ಸತ್ಯವಿದೆ ಎಂಬುದರ ಬಗ್ಗೆ ಜಿಜ್ಞಾಸೆ ನಡೆಸುತ್ತಲೇ ಕೃತಿಯು #ಧರ್ಮ ಎಂದರೆ ಬದುಕಿನ ಮೌಲ್ಯ, ಸತ್ಯಾನ್ವೇಷಣೆಗಳ ದಾರಿ ಎಂಬುದನ್ನು ಪ್ರತಿಪಾದಿಸುತ್ತದೆ.
ಕೃತಿಯು ವೇದ ಮೂಲದ ಸಂಸ್ಕೃತಿ ಹಾಗೂ ನೆಲಮೂಲದ ಸಂಸ್ಕೃತಿ ನಡುವಿನ ಸಂಘರ್ಷದ ಕಥನವೂ ಆಗಿದೆ. ಅರೆಕಾಲ್ಪನಿಕ – ಅರೆವಾಸ್ತವಿಕ ಸ್ವರೂಪದ ಈ ಕಾದಂಬರಿಯಲ್ಲಿ ಬಳಕೆಯಾಗಿರುವ ಪರಿಭಾಷೆಗಳು ಕೃತಿಯ ಸಹಜತೆ – ಸಾಧ್ಯತೆಗಳಿಗೆ ಅಡ್ಡಿಯಾಗಿದೆ. ಸ್ತೀ ಪಾತ್ರಗಳನ್ನು ಅಲಕ್ಷ್ಯ ಮಾಡಿರುವುದು ಕೃತಿಯ ಮಿತಿಯಾಗಿದೆ.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು )