ತ ರಾ ಸು ಅವರ ನಾಗರಹಾವು ಕಾದಂಬರಿಗೂ ಸಿನಿಮಾಕ್ಕೂ ಸ್ವಲ್ಪ ಬಂದಲಾವಣೆಗಳಿವೆ. ಅಲಮೇಲುವನ್ನು ಮದುವೆಯಾಗುವ ಹುಡುಗನ ಬಗ್ಗೆ ಕಾದಂಬರಿಯಲ್ಲಿ ಬರುವುದಿಲ್ಲ.ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಮತ್ತು ಮದುವೆ ಸೀನ್ ನಲ್ಲಿ ಬರುತ್ತಾನೆ. ಕಾದಂಬರಿಯಲ್ಲಿ ರಾಮಾಚಾರಿ ಮತ್ತು ಮಾರ್ಗರೇಟ್ ಬಾವಿಗೆ ಬಿದ್ದು ಸಾಯುತ್ತಾರೆ. ಸಿನೆಮಾದಲ್ಲಿ ಚಿತ್ರದುರ್ಗದ ಬಂಡೆಗಳನ್ನು ಬಳಸಿಕೊಳ್ಳಲಾಗಿದೆ. ಹಿರಿಯ ಲೇಖಕಿ ಪ್ರಭಾವತಿ ಎಸ ವಿ ಅವರ ದೃಷ್ಟಿಕೋನದಲ್ಲಿ ನಾಗರಹಾವು. ತಪ್ಪದೆ ಮುಂದೆ ಓದಿ…
೧೯೪೯ ರಿಂದ ೧೯೫೯ ಈ ಹತ್ತು ವರ್ಷಗಳ ಕಾಲವನ್ನು ಕನ್ನಡ ಸಾಹಿತ್ಯ ದಲ್ಲಿ ಪ್ರಗತಿಶೀಲ ಸಾಹಿತ್ಯ ಎಂದು ಗುರುತಿಸುತ್ತಾರೆ. ಅನಕೃ, ತರಾಸು, ನಿರಂಜನ ಚದುರಂಗ ಇಂತಹ ದೈತ್ಯ ಪ್ರತಿಭೆಗಳು ರೂಪುಗೊಂಡ ಕಾಲ ಅದು.
ತ ರಾ ಸು ಸರಣಿ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ದ ಹಸ್ತರು. ಕಂಬನಿಯ ಕುಯಿಲು , ರಕ್ತ ರಾತ್ರಿ , ತಿರುಗುಬಾಣ – ದಂತಹ ಐತಿಹಾಸಿಕ ಆದರೂ ಸರಿ . ಆಕಸ್ಮಿಕ ಪರಿಣಾಮ – ದಂತಹ ಸಾಮಾಜಿಕ ಆದರೂ ಸರಿ. ಅವರದು ಆಕರ್ಷಕ ಶೈಲಿ, ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪ ಮತ್ಸರ ಈ ಮೂರೂ ಸೇರಿ ನಾಗರಹಾವು ಎಂದು ನಾವು ಕರೆಯುತ್ತೇವೆ . ಏಕೆಂದರೆ ಅದೇ ಹೆಸರಿನಿಂದ ಸಿನಿಮಾ ಮಾಡಲಾಗಿ . ಮೂರು ಕಾದಂಬರಿಗಳನ್ನೂ ನಾನು ಓದಿದ್ದು ನನ್ನ ಹತ್ತನೇ ವಯಸ್ಸಿನಲ್ಲಿ. ಅದು ಸಿನಿಮಾ ಆಗಿದ್ದು ನನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಈಗ ನನ್ನ ಎಪ್ಪತ್ತನೇ ವಯಸ್ಸಿನಲ್ಲಿಯೂ ಅದರ ಪ್ರಭಾವ ಅಚ್ಚಳಿಯದೆ ಇದೆ ಎಂದರೆ ಅದರ ಅಂತಸ್ಸತ್ವ ಎಂಥದು .!!!!

ಇತ್ತೀಚಿನ ಮುದ್ರಣದಲ್ಲಿ ಮೂರು ಕಾದಂಬರಿಗಳನ್ನು ಸೇರಿಸಿ ‘ನಾಗರಹಾವು’ ಎಂದೇ ಶೀರ್ಷಿಕೆ ಕೊಡಲಾಗುತ್ತದೆ . ಹೀಗಾಗಿ ಸಿನಿಮಾ ಕೂಡ ಆ ಹೆಸರು ಹೊತ್ತೇ ಬಂದಿತು . ವಂಶವೃಕ್ಷ ಚಿತ್ರ ದ ಒಂದು ಚಿಕ್ಕ ಪಾತ್ರದ ನಂತರ ವಿಷ್ಣುವರ್ಧನ್ ಅವರಿಗೆ ದೊರೆತ ಮತ್ತು ಅವರಿಗೆ ನ್ಯಾಯವೊದಗಿಸಿದ ಪಾತ್ರ . ಅವರು ನ್ಯಾಷನಲ್ ಕಾಲೇಜ್ ವಿದ್ಯಾರ್ಥಿ ಯಾಗಿದ್ದಾಗಲೇ ನಾಟಕ ಗಳಲ್ಲಿ ಅಭಿನಯಿಸುತ್ತಿದ್ದರು . ಅಭಿನಯ ಹೊಸ ದಲ್ಲವಾದರೂ ಚಿತ್ರ ಹೊಸದು . ಮೆಜೆಸ್ಟಿಕ್ ನ ದೊಡ್ಡ ಥಿಯೇಟರ್ ನ ದೊಡ್ಡ ಬ್ಯಾನರ್ ಅನ್ನು ಕದ್ದು ನಿಂತು ಕುತೂಹಲದಿಂದ ನೋಡುತ್ತಿದ್ದರಂತೆ. ಅವರ ಜೊತೆ ಅಭಿನಯಿಸಿದ ಇಬ್ಬರು ನಾಯಕಿಯರೂ ಪಳಗಿದವರು. ಇವರಿಗೆ ಹೊಸ ಅನುಭವ ಎಂದು ಅನಿಸುವ ಹಾಗೆ ಇರಲಿಲ್ಲ ಅವರ ಅಭಿನಯ. ಅಂಬರೀಶ್ ಗೂ ಇದು ಮೊದಲ ಸಿನೆಮಾ.

ಕಾದಂಬರಿಯಲ್ಲಿ ಪ್ಲೇಗ್ ನ ಪ್ರಸ್ತಾಪವಿದೆ . ಅದನ್ನು ಸಿನೆಮಾದಲ್ಲಿ ಕೈ ಬಿಡಲಾಗಿದೆ. ರಾಮಾಚಾರಿ ಮಾರ್ಗರೇಟ್ ಬಾವಿಗೆ ಬಿದ್ದು ಸಾಯುತ್ತಾರೆ. ಸಿನೆಮಾದಲ್ಲಿ ಚಿತ್ರದುರ್ಗದ ಬಂಡೆಗಳನ್ನು ಬಳಸಿಕೊಳ್ಳಲಾಗಿದೆ . ಅಲಮೇಲುವನ್ನು ಮದುವೆಯಾಗುವ ಹುಡುಗ ಕಾದಂಬರಿಯಲ್ಲಿ ಬರುವುದಿಲ್ಲ. ಇಲ್ಲಿ ಒಂದು ಹಾಡಿನಲ್ಲಿ ಮತ್ತು ಮದುವೆ ಸೀನ್ ನಲ್ಲಿ ಬರುತ್ತಾನೆ . ಯಾರೋ ಅಲಮೇಲು ಸೂಳೆಯಾಗಿದ್ದಾಳೆ ಎಂದು ಹೇಳಿದ್ದನ್ನು ಕೇಳಿಯೇ ರಾಮಾಚಾರಿ ತಳಮಳಗೊಳ್ಳುತ್ತಾನೆ. ಆದರೆ ಸಿನೆಮಾದಲ್ಲಿ ಅಶೋಕ ಹೋಟೆಲ್, ಈಜುಕೊಳ, ಸಾಲಂಕೃತ ಆರತಿ ( ಅಲಮೇಲು). ಜೊತೆಗೆ ಹಾಡು, ಮಾತು.. ಇದು ನಾಗರ ಹಾವಲ್ಲ ಕೇರೆ ಹಾವು ಎಂದು ತ ರಾ ಸು ಅವರೇ ಟೀಕೆ ಮಾಡಿದರು. ಅದು ಪ್ರಜಾವಾಣಿಯಲ್ಲಿ ಪ್ರಕಟವಾಯಿತು . ಅದಕ್ಕೆ ಪುಟ್ಟಣ್ಣ ಉತ್ತರ ನೀಡಿದ್ದರು. ಎರಡೂ ಮಾಧ್ಯಮಗಳು ಬೇರೆ ಬೇರೆ ಎಂದು ವಿವರಿಸಿದ್ದರು. ಅದೂ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.
ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದರೂ ಅದು ಸಿನೆಮಾ ಆಗಲಿಲ್ಲ ( ಕಲ್ಲರಳಿ ಹೂವಾಗಿ ಇದರ ಆಧಾರಿತ ಅನ್ನುತ್ತಾರೆ. ಅವಿನಾಶ್ ಒಂದು ಪಾತ್ರ ಮಾಡಿದ್ದಂತೆ ನೆನಪು . ಯಾವುದೂ ಸ್ಪಷ್ಟತೆ ಇಲ್ಲ ) . ಜನರ ಮನೆ ಮಾತಾಗಲಿಲ್ಲ . ಆದರೆ ನಾಗರಹಾವು ಅದರ ಹಾಡು ದೃಶ್ಯ … ಪ್ರತಿಯೊಂದು ಇಂದೂ ಮನೆ ಮಾತಾಗಿ ಉಳಿದಿದೆ.
- ಪ್ರಭಾವತಿ ಎಸ ವಿ
