ಶಿಕ್ಷಣವೆಂದರೆ ಶಿಕ್ಷಣವೋ ಅಥವಾ ಶಿಕ್ಷೆಯೋ

ಇಂದು ಗುರುಪೂರ್ಣಿಮೆ. ಗುರುಗಳನ್ನು ನೆನೆಯುವ ಮತ್ತು ಪೂಜಿಸುವ ದಿನ. ಶಿಕ್ಷಕ ದ್ವೇಷ, ಸಿಟ್ಟನ್ನು ಮಕ್ಕಳಲ್ಲಿ ಬಿತ್ತಿದರೆ ಮಕ್ಕಳಲ್ಲಿ ಅದು ಮೊಳಕೆಯೊಡೆದು ದ್ವೇಷ ಹೆಮ್ಮರವಾಗುತ್ತದೆ. ಈಗಿನ ಸಮಾಜಕ್ಕೆ ಬೇಕಿರುವುದು ಪ್ರೀತಿ ಹಂಚುವ ಶಿಕ್ಷಕರು. 

ನನಗೆ ಶಾಲೆಯೆಂದರೆ ಎಣ್ಣೆ, ಸಿಗೇಕಾಯಿ ಸಂಬಂಧ. ನಾಲ್ಕು ಗೋಡೆಯ ಜೈಲು. ಈಗಿನ ಮಕ್ಕಳಿಗೆ ಸಿಕ್ಕಂತಹ ಸ್ವತಂತ್ರ ಆಗ ನಮಗಿರಲಿಲ್ಲ. ಆಗ ಏನಿದ್ದರೂ ‘ದಂಡಂ ದಶಗುಣಂ’ ಪದ್ಧತಿ. ಪಾಠ ಅರ್ಥವಾಗಲಿ, ಬಿಡಲಿ ಒಂದು ದಿನ ಶಾಲೆಯಲ್ಲಿ ಕಳೆಯುವುದೆಂದರೆ ಚಳಿ ಜ್ವರ ಬಂದಂತೆ ಆಗುತ್ತಿತ್ತು. ಶಾಲೆ ಮುಗಿದರೂ ಶಿಕ್ಷಕರು ಸ್ವಪ್ನದಲ್ಲಿ ಬಂದು ಕಾಡುತ್ತಿದ್ದರು. ಆಗ ಪುಸ್ತಕವನ್ನು ಜ್ಞಾನಾರ್ಜನೆಗೆ ಓದುತ್ತಿರಲಿಲ್ಲ. ಭಯಕ್ಕೆ ಓದುತ್ತಿದ್ದೆವು.

ಈಗಿನ ಪಾಲಕರಂತೆ ಅಂದು ಶಾಲೆಗೆ ಬಂದು ಮಕ್ಕಳ ಪರವಾಗಿ ಮಾತಾಡುತ್ತಿರಲಿಲ್ಲ. ಬದಲಾಗಿ ಅಪ್ಪ-ಅಮ್ಮಂದಿರು ಕೂಡ ‘ಛಡಿ ಚಂಚಮ್, ವಿದ್ಯಾ ಗಮ್ ಗಮ್’ ಎನ್ನುವರೇ.  ಕೆಲವು ಮಕ್ಕಳಲ್ಲಿ ಗ್ರಹಿಕೆಯ ಸಾಮರ್ಥ್ಯ ಅದ್ಭುತವಾಗಿರುತ್ತದೆ. ಇನ್ನು ಕೆಲವು ಮಕ್ಕಳಲ್ಲಿ ಚಂಚಲತೆ ಇರುತ್ತದೆ. ಅಂತಹ ಮಕ್ಕಳನ್ನು ತಾಳ್ಮೆಯಿಂದ ತಮ್ಮ ಪಾಠದ ಮೂಲಕ ಒಂದೆಡೆ ಹಿಡಿದಿಡುವುದು ಮುಖ್ಯ.  ಶಿಕ್ಷಕರಲ್ಲಿ ತಾಳ್ಮೆಯೊಂದಿದ್ದರೆ ಯಾವ ಮಗುವೂ ದಡ್ಡನಾಗುವುದಿಲ್ಲ. ಜೊತೆಗೆ ಉತ್ತಮ ಶಿಕ್ಷಕನಾಗಿ ಗುರುತಿಸಿಕೊಳ್ಳುತ್ತಾನೆ.

arunimaವಿನಾಯಕ್ ಗಾವಂಕರ್ ಗುರುಗಳು

ನಮ್ಮ ಶಾಲೆಯಲ್ಲಿ ಅತಿ ಬುದ್ದಿವಂತ ಮಕ್ಕಳಿಗೆ ಶಿಕ್ಷಕರ ಕೋಲಿನಿಂದ ಗೇಟ್ ಪಾಸ್ ಸಿಗುತ್ತಿತ್ತು. ಆದರೆ ಕೆಲವು ಮಕ್ಕಳಿಗೆ ಶಿಕ್ಷಕರಿಂದ ಪಾರಾಗುವುದು ಕಷ್ಟವಿತ್ತು. ಶಿಕ್ಷಣವೆಂದರೆ ಶಿಕ್ಷೆಯೋ ಅಥವಾ ಶಿಕ್ಷಣವೋ ಅನ್ನುವಷ್ಟು ಆ ಮಕ್ಕಳು ತತ್ತರಿಸಿ ಹೋಗಿದ್ದರು. ಅಂತಹ ಸಮಯದಲ್ಲಿ ಮಕ್ಕಳಿಗೆ ಆಗ ಸಂಜೀವಿನಿಯಂತೆ ಕಂಡವರು ವಿನಾಯಕ್ ಗಾವಂಕರ್ ಸರ್ ಮತ್ತು ಎಚ್ ಎನ್ ನಾಯಕ ಸರ್ .

ರಾಕ್ಷಸರಂತೆ ಹೊಡೆಯುತ್ತಿದ್ದ ಶಿಕ್ಷಕರಿಗೆ ವಿರುದ್ಧವಾಗಿದ್ದರು ಈ ಶಿಕ್ಷಕರು. ಮಕ್ಕಳೆಂದರೆ ಪ್ರೀತಿ. ಅವರ ಕ್ಲಾಸ್ ಎಂದರೆ ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚು. ಇಬ್ಬರು ಕೂಡ ಇಂಗ್ಲಿಷ್ ಮಾಸ್ತರರು.  ನಮ್ಮ ಮೇಲೆ ಏನೋ ಇಂಗ್ಲಿಷ್ ನ ಕೃಪೆ ಇದೆಯೆಂದರೆ ಅದರಲ್ಲಿ ಅವರ ಪಾತ್ರ ದೊಡ್ಡದು. ಅವರ ಪ್ರೀತಿಗೆ, ಅವರು ನೀಡಿದ ವಿದ್ಯೆಗೆ ಸಾಷ್ಟಾಂಗ ನಮಸ್ಕಾರಗಳು.

97071578_1061252307608487_3798392995531718656_oಎಚ್ ಎನ್ ನಾಯಕ ಗುರುಗಳು

ಅವರ ಮುಖದಲ್ಲಿ ಸದಾ ನಗು ಕಾಣದಿದ್ದರೂ ಬೆಣ್ಣೆಯಂತಹ ಮನಸ್ಸು. ಹೊಡೆದರೆ ಮಾತ್ರ ವಿದ್ಯೆ ಹತ್ತುವುದು ಎಂದು ತಪ್ಪಾಗಿ ತಿಳಿದುಕೊಂಡಿದ್ದ ಎಷ್ಟೋ ಶಿಕ್ಷಕರಿಗೆ ದಾರಿ ತೋರಿಸಿದ ಶಿಕ್ಷಕರಿಗೆಯೇ ಇವರು ಗುರುಗಳು .

ನಮ್ಮ ಶಾಲೆಯಲ್ಲಿ ಓದಿ ಡಬ್ಬಾಕಿದ ಎಷ್ಟೋ ಅತಿ ಬುದ್ದಿವಂತ ವಿದ್ಯಾರ್ಥಿಗಳು ಇಂದು ಮನೆಯ ಮೂಲೆಯಲ್ಲಿ ಕೂತಿದ್ದಾರೆ. ಫೇಲ್- ಫೇಲಾಗಿ, ಅದರಲ್ಲಿಯೂ ನಿತ್ಯವೂ ಛಡಿ ಏಟು ತಿಂದ ಎಷ್ಟೋ ಬುದ್ದಿವಂತ ಮಕ್ಕಳು ಇಂದು ದೊಡ್ಡ ದೊಡ್ಡ ಕಂಪನಿಯಲ್ಲಿ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.  ಇಲ್ಲಿ ಶಿಕ್ಷಕರ ಛಡಿ ಏಟು, ಅವರಿಗೆ ದಾರಿ ದೀಪವಾಯಿತು ಅಂದುಕೊಳ್ಳುವುದು ತಪ್ಪು. ಅವರಿಗೆ ಬದುಕು ಕಟ್ಟಿಕೊಳ್ಳಲು ದಾರಿ ತೋರಿದ್ದು ಅವರ ಹಿಂದಿದ್ದ ಪ್ರೀತಿ ತೋರಿದ ಶಿಕ್ಷಕರು.

ಮಕ್ಕಳಿಗೆ ಬೇಕಿರುವ ವಿದ್ಯೆಯ ಜೊತೆಗೆ ನಿರ್ಭಯ. ಶಿಕ್ಷಕರೆಂದರೆ ಭಯ ಹುಟ್ಟಿಸುವ ಗುಮ್ಮಗಳಾಗಬಾರದು. ಶಿಕ್ಷಕರು ವಿದ್ಯೆ ನೀಡುವವರಾಗಬೇಕೇ ವಿನಃಹ ಕೋಲು ಹಿಡಿದು ಮಕ್ಕಳನ್ನು ಶಿಕ್ಷಿಸುವ ರಾಕ್ಷಸರಂತೆ ಕಾಣಬಾರದು.

ಉತ್ತಮ ಸಮಾಜವನ್ನು ರೂಪಿಸಲು ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳು ಶಿಕ್ಷಕನ ದೃಷ್ಟಿಕೋನದಲ್ಲಿ ಜಗತ್ತನ್ನು ನೋಡುತ್ತಾ ಹೋಗುತ್ತಾರೆ. ಪ್ರೀತಿ ಕೊಟ್ಟಾಗ ಪ್ರೀತಿ ಹುಟ್ಟುತ್ತದೆ, ವೈಮನಸ್ಸು ದೂರವಾಗುತ್ತದೆ. ಅದೇ ಶಿಕ್ಷಕ ದ್ವೇಷ, ಸಿಟ್ಟನ್ನು ಮಕ್ಕಳಲ್ಲಿ ಬಿತ್ತಿದರೆ ಮಕ್ಕಳಲ್ಲಿ ಅದು ಮೊಳಕೆಯೊಡೆದು ದ್ವೇಷ ಹೆಮ್ಮರವಾಗುತ್ತದೆ. ಈಗಿನ ಸಮಾಜಕ್ಕೆ ಬೇಕಿರುವುದು ಪ್ರೀತಿ ಹಂಚುವ ಶಿಕ್ಷಕರು.

ಪ್ರೀತಿ ತೋರಿದ ಎಲ್ಲ ಶಿಕ್ಷಕರಿಗೂ ಗುರುಪೂರ್ಣಿಮೆಯ ವಂದನೆಗಳು…

  • ಶಾಲಿನಿ ಹೂಲಿ ಪ್ರದೀಪ್

bf2fb3_c5eaf523bb1e481493169ef2aac381a9~mv2.jpg

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW