ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ಶುಭಾಶಯಗಳು ಹೇಳುತ್ತಾ…ಇದು ಕೇವಲ ಭಾಷಣ, ಬರಹಕ್ಕಷ್ಟೇ ಸೀಮಿತವಾಗದೆ ಹೆಣ್ಣಿನ ಅವಶ್ಯಕತೆಗಳಿಗೆ ಸ್ಪಂದಿಸಬೇಕು. ಹೆಣ್ಣು ಸಮಸ್ಯೆಗಳಿಗೆ ನ್ಯಾಯ ಸಿಕ್ಕ ದಿನವೇ ಹೆಣ್ಣು ಮಕ್ಕಳ ದಿನಾಚರಣೆ – ರೇಶ್ಮಾ ಗುಳೇದಗುಡ್ಡಾಕರ್, ಒಂದು ಚಿಂತನ ಲೇಖನ ತಪ್ಪದೆ ಓದಿ…
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಚಾರಣೆ ಕೇವಲ ಪೊಸ್ಟ್ , ಬರಹ, ಭಾಷಣಕ್ಕೆ ಮಾತ್ರ ಸೀಮಿತವೇ? ಎಂಬ ಪ್ರಶ್ನೆ ಇದೆ. ಬಣ್ಣ ಬಣ್ಣದ ಪೊಸ್ಟ್ ಗಳು, ಅಬ್ಬರಿಸುವ ಪ್ರಚಾರ, ಭಾಷಣಗಳು ಜಗಮಗಿಸುವ ವೇದಿಕೆಯಲ್ಲಿ ನಡೆಯುತ್ತವೆ. ಆದರೆ ನೈಜತೆಯ ಕರಾಳ ದರ್ಶನ ಬೇರೆಯೇ ಇದೆ. ಒಂದು ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಮಾತ್ರ ಬೇಕು. ಆದರೆ… ಅಕ್ಕ, ತಂಗಿ, ಮಗಳಾಗಿ ಬೇಡವೇ ಬೇಡ ಎಂಬ ನಿಲುವು ದಿನದಿನಕ್ಕೂ ಗಟ್ಟಿಯಾಗಿದೆ. ಹೆಂಡತಿ ಗೃಹಿಣಿಯಾಗಿ ಅಷ್ಟೇ ಅಲ್ಲ, ಆರ್ಥಿಕವಾಗಿ ಸಬಲವಾಗಿದ್ದರೂ ಅವಳ ಸ್ಥಾನ ಸಂಸಾರದಲ್ಲಿ ಶೂನ್ಯವಾಗಿದೆ. ಇನ್ನು ಒಂಟಿ ಹೆಣ್ಣು, ಸಿಂಗಲ್ ಪೇರೆಂಟ್ ಪಾಡು ಹೇಳತೀರದು. ಸಾಲು ಸಾಲು ಸಂಘಟನೆಗಳು ಲೆಕ್ಕವಿಲ್ಲದಷ್ಟು ಎನ್ ಜಿ ಓಗಳು ಇದ್ದರು ಲಿಂಗ ಸಮಾನತೆ, ರಕ್ಷಣೆ, ಶಿಕ್ಷಣ ಎಂಬ ತೀರಗಳು ಹೆಣ್ಣಿನ ಪಾಲಿಗೆ ನಿಲುಕದ ನಕ್ಷತ್ರವಾಗದೆ.
ಅಸಮಾನತೆ ದೇಶದ ಉದ್ದಗಲಕ್ಕೂ ಹಿಂದಿಗಿಂತ ಹೆಚ್ಚಾಗಿ ಹೆಣ್ಣನ್ನು ನಲುಗಿಸಿದೆ. ಗಂಡಿಗೆ ಸೂಕ್ತ ವಧು ಸಿಗದೆ ಇದ್ದರೂ ಕೌಟುಂಬಿಕ ದೌರ್ಜನ್ಯ ಮುಗಿಲು ಮುಟ್ಟಿದೆ. ಕೌಟುಂಬಿಕ ದೌರ್ಜನ್ಯ ವೈಯಕ್ತಿಕ ವಿಚಾರವಾಗಿ ಮನೆಯ ಒಳಗೆ ಸುಟ್ಟು ಕರಕಲಾಗುತ್ತದೆ. ಅದನ್ನು ವಿರೋಧಿಸಿ ಹೊರ ಬಂದರು ಅದರ ಕಾವು ಅವಳ ಬಿಡುವುದಿಲ್ಲ. ಕಾರಣ ನ್ಯಾಯಾಲಯ ಸುಲಭವಾಗಿ ಸಂತ್ರಸ್ತರಿಗೆ ಬಾಗಿಲು ತೆರೆಯದು.
ಫೋಟೋ ಕೃಪೆ : google
ಕೌಟುಂಬಿಕ ಸಮಾಲೋಚಕರ ಮುಂದೆ ಹಾಜರಾಗಿ ಅಲ್ಲಿ ಬಸವಳಿದು ನ್ಯಾಯಾಲಯದ ಮೆಟ್ಟಿಲು ಏರುವುದು ನರಕ. ಇನ್ನೂ ಉಚಿತ ಸಲಹೆಯನ್ನು ಸತ್ಯದ ತಲೆಯ ಮೇಲೆ ಹೊಡಂದಂತೆ ನೀಡುವ ವಕೀಲರಿಗೇನು ಕಮ್ಮಿ ಇಲ್ಲ. ಹೆಣ್ಣು ಮಕ್ಕಳಿಗೆ ಇಲ್ಲಿ ಸಂತ್ವಾನ, ನ್ಯಾಯ ಸಿಗುವುದಕ್ಕಿಂತ ಸಮಸ್ಯೆಗೆ ಹೊಂದಿಕೊಂಡು ಬಾಳುವಂತೆ ಸಲಹೆ ನೀಡಿ ಕೈ ಚೆಲ್ಲಿಕೊಳ್ಳುತ್ತಾರೆ. ಸಮಸ್ಯೆಯ ಸ್ವರೂಪ, ಅದನ್ನು ಪರಿಹರಿಸುವ ಪ್ರಯತ್ನಯಾರು ಮಾಡುವುದಿಲ್ಲ.
‘ಹೆಣ್ಣಿಗೆ ನ್ಯಾಯ ಕೊಡಿಸಬೇಕು ಎನ್ನುವ ಮನಸ್ಥಿತಿ ಇದ್ದರೂ ವೈಯಕ್ತಿಕ ಕಾರಣದಿಂದ ಅಸಹಾಯಕರಾಗಿದ್ದೇವೆ’ ಎನ್ನುತ್ತಾರೆ ಯುವ ಸಾಮಾಜಿಕ ಕಾರ್ಯಕರ್ತೆ.
ಅದೇರೀತಿ ಗ್ರಾಮೀಣ ಮಹಿಳಾ ಸಂಘಟನಾಕಾರರೊಬ್ಬರು ನೋವಿನಿಂದ ಹೇಳುತ್ತಾರೆ “ಗಂಟೆಗಟ್ಟಲೇ ಮಹಿಳಾ ದಿನದಂದು ಭಾಷಣ ಮಾಡುವ ಪೋಲಿಸ್ ಅಧಿಕಾರಗಳನ್ನು ಎಷ್ಟೋ ಬಾರಿ ಮನವಿ ಮಾಡಿ ನಮ್ಮ ಸಂಘಟನೆ ಹಾಗೂ ಹಳ್ಳಿಗಳಿಗೆ ಬನ್ನಿ, ಬಂದು ಅಲ್ಲಿನ ಹೆಣ್ಣುಮಕ್ಕಳ ಸಮಸ್ಯೆಯನ್ನು ಒಮ್ಮೆ ಆಲಿಸಿ ಎಂದರೆ ಯಾರೂ ಹತ್ತಿರಕ್ಕೆ ಸುಳಿಯರು ಎನ್ನುತ್ತಾರೆ.
“ಹಳ್ಳಿ ನಮ್ಮದು. ನಮ್ಮೂರಿಗೆ ಬಸ್ ನ ಸರಿಯಾದ ವ್ಯವಸ್ಥೆಗಳಿಲ್ಲ ಅದಕ್ಕೆ ಮುಂದೆ ಓದಲು ಅಗದೆ ಕೂಲಿ ಕೆಲಸಕ್ಕೆ ಹೋಗುತ್ತಿರುವೆ ” ಎನ್ನುತ್ತಾಳೆ ಹತ್ತನೆ ತರಗತಿ ಮುಗಿಸಿದ ಬಾಲಕಿಯೊಬ್ಬಳು.

ಹೀಗೆ ಹೆಣ್ಣುಮಕ್ಕಳ ಸಾಕಷ್ಟು ಸಮಸ್ಯೆಗಳು ಹೆಣ್ಣಿನ ಬಾಯಲ್ಲಿಯೇ ಕೇಳಬಹುದಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದಿದೆ, ಅಂತರ್ಜಾಲದಲ್ಲಿ 3 g ಇಂದ 5 g ಗೆ ವೇಗ ಪಡೆಯಿತು. ಆದರೆ ರಸ್ತೆ, ಪ್ರಾಥಮಿಕ ಆರೋಗ್ತ ಕೇಂದ್ರ, ಶಾಲೆ, ಕಾಲೇಜುಗಳು ತಲೆ ಅವಶ್ಯಕತೆ ಇದ್ದಲ್ಲಿ ತಲೆ ಎತ್ತಿಲ್ಲ. ಮೂಲಭೂತ ಸೌಕರ್ಯಗಳಾದ ರಸ್ತೆ, ಬಸ್ ವ್ಯವಸ್ಥೆ, ನಿರುದ್ಯೋಗ ನಿವಾರಿಸುವ, ಶಿಕ್ಷಣ ಉತ್ಕೃಷ್ಟ ವಾಗಿಸುವ ಆಲೋಚನೆ ಜನಪ್ರತಿನಿಧಿ ಗಳಿಗೆ ಬಂದಿಲ್ಲ ಎನ್ನುವುದೇ ವಿಷಾದನೀಯ. ಇಲ್ಲ ಸಲ್ಲದ ಜಾತಿ ಮತಗಳ ತಿಕ್ಕಾಟವನ್ನು ಅರಚಾಟ ಮಾಡುವ ಅವರಿಗೆ ಸಮಸ್ಯೆಗಳನ್ನು ಪರಿಹರಿಸಲು ಸಮಯವೇಲ್ಲಿ ?.ಇಡೀ ವ್ಯವಸ್ಥೆಯ ಶೀತಲೀಕರಣ ಹೆಣ್ಣು ಜೀವಕ್ಕೆ ಉರುಳಾಗಿದೆ.
ಈ ಎಲ್ಲ ಸಮಸ್ಯೆಗಳನ್ನು ನಡುವೆಯೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ಬೆರಗು ಕಣ್ಣಿಂದಲೆ ಜಗವ ನೋಡುವ… ಎಲ್ಲರಲ್ಲೂ ಒಂದಾಗಿ ಬೇರೆಯುವ… ಬೆಳದಿಂಗಳ ನಗುವಿನ ಒಡತಿಯರಿಗೆ ಶುಭಾಶಯಗಳು ..
- ರೇಶ್ಮಾ ಗುಳೇದಗುಡ್ಡಾಕರ್