ತಂದೆ ಮೃತನಾದ ನಂತರ ಮೃತನಿಗೆ ಹೆಂಡತಿ, ಇಬ್ಬರು ಗಂಡು ಮಕ್ಕಳು ಮಾತ್ರ ಎಂದು ಉತ್ತರ ಜೀವಿತ ಪತ್ರ ಪಡೆದು ಕೇವಲ ತಮ್ಮ ಹೆಸರು ದಾಖಲಿಸಿಕೊಂಡಿದ್ದರು. ಮಗಳ ಹೆಸರನ್ನು ದಾಖಲಿಸಲಿಲ್ಲ. ನ್ಯಾಯಾಲಯದಲ್ಲಿ ಅವರ ಮಗಳೆಂದು ರುಜುವಾತು ಆಯಿತಾ? ಇಲ್ಲವಾ?…ತಪ್ಪದೆ ಓದಿ, ವಕೀಲರಾದ ಪ್ರಕಾಶ ವಸ್ತ್ರದ ಅವರ ಹೊಸ ಅಂಕಣ ‘ನ್ಯಾಯದ ಕಣ್ಣು’…
ನ್ಯಾಯಾಲಯ ಕಿಕ್ಕಿರಿದ ಕಕ್ಷಿದಾರರರು, ವಕೀಲರು, ಕೋರ್ಟ್ ಸಿಬ್ಬಂದಿಗಳಿಂದ ಆವರಣ ತುಂಬಿ ತುಳುಕುತ್ತಿತ್ತು. ಅಲ್ಲದೆ ನೂರಾರು ಕಾಲೇಜ್ ವಿದ್ಯಾರ್ಥಿಗಳಿಗೆ ಕೋರ್ಟ್ ಕಲಾಪ ವೀಕ್ಷಿಸಲು ಅನುಮತಿ ನೀಡಿದ್ದರು. ಎಲ್ಲ ಕೋರ್ಟ್ ಹಾಲಗಳಲ್ಲಿ ಒಂದು ತರಹದ ಗಲಿಬಿಲಿ, ಗಜಿಬಿಜಿ ವಾತಾವರಣ. ಕೋರ್ಟ್ ಹಾಲ್ ಪ್ರವೇಶಿಸಿಸಲು ವಕೀಲರು ಜನರನ್ನು ಸರಿಸಿ ಬರಬೇಕಾದ ಅನಿವಾರ್ಯತೆ. ಇಂತಹ ಜನದಟ್ಟನೆ ಯಾವಾಗಲೋಮ್ಮೆ ನಿರ್ಮಾಣ ಆಗುತ್ತದೆ.
ಅದೊಂದು ಏನೂ ವಿಶೇಷತೆ ಇಲ್ಲದ, ಹಲವಾರು ವ್ಯಾಜ್ಯಗಳಂತೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರ ಣ. ಆದರೆ ಕಠಿಣವಾದ ತಿರುವು ಪಡೆದುಕೊಂಡಿತು. ನನ್ನ ಕಕ್ಷಿದಾರಳನ್ನು, ಅನುರಾಧ.. ಅನುರಾಧ.. ಅನುರಾಧ.. (ಹೆಸರು ಬದಲಿಸಲಾಗಿದೆ) ಎಂದು ಸಿಪಾಯಿ ಕೂಗಿದ. ಜನದಟ್ಟನೆಯನ್ನು ಛೇದಿಸಿಕೊಂಡು ಬರಲು ಸ್ವಲ್ಪ ವಿಳಂಬವಾಯಿತು. ಅವಳ ಹಿಂದಿ ನಿಂದ ಪ್ರತಿವಾದಿಯರು ಪ್ರವೇಶಿಸಿಸಿದರು. ಕೋ ರ್ಟ್ ಹಾಲಲ್ಲಿ ಉಭಯ ಕಕ್ಷಿದಾರರು ಎದುರು ಬದರಾಗಿ ಕೈ ಮುಗಿದು ನಿಂತುಕೊಂಡರು. ಈ ಪ್ರಕರಣದಲ್ಲಿ ಪ್ರತಿವಾದಿಯರು, ನನ್ನ ಕಕ್ಷಿದಾರವಾದಿ ದಾಖಲಿಸಿದ ಪ್ರತ್ಯೇಕ ಹಿಸ್ಸೆ ಮತ್ತು ಸ್ವಾಧೀನಕ್ಕೆ ಪ್ರಾರ್ಥಿಸಿದ ಸಿವಿಲ್ ದಾವೆಗೆ ತಮ್ಮ ಲಿಖಿತ ಹೇಳಿಕೆ / ಕೈಫಿಯತ ದಾಖಲಿಸ ಬೇಕಿತ್ತು.
ಪ್ರತಿವಾದಿ ಪರ ವಕೀಲರು ಕೈ ಫಿಯತ ದಾಖಲಿಸಿ, ಪ್ರತಿಯನ್ನು ನನಗೆ ನೀಡಿದರು. ವಿವರವನ್ನು ಬಿಡುವು ಮಾಡಿಕೊಂಡು ಓದುವದು ರೂಡಿ. ಅಷ್ಟರಲ್ಲಿ ನ್ಯಾಯಾಧೀಷರು, ನನ್ನ ಕಕ್ಷಿದಾರ ವಾದಿ ಹಾಗು ಪ್ರತಿವಾದಿಯರಾದ ಸುಮಾರು 75 ವಯಸ್ಸಿನ ಹಿರಿಯಳು, ಇಬ್ಬರು ಸುಮಾರು 50 ವ ಯಸ್ಸಿನ ಆಚೆ ಈಚಿನ ಪುರುಷರನ್ನು ಗಮನಿಸಿ ನನ್ನನ್ನು ಉದ್ದೇಶಿಸಿ “ಏನು ಪ್ರಕರಣ ವಕೀಲರೆ ? ರಾಜಿ ಏಕೆ ಆಗಬಾರದು?” ಎಂದು ಪ್ರಶ್ನಿಸಿದರು.” ಯುವರ್ ಆನರ್, ವಾದಿ ನನ್ನ ಕಕ್ಷಿದಾರಳು, ತನ್ನ ತಾಯಿ ಮತ್ತು ಸಹೋದರರ ಮೇಲೆ ಮನೆತನದ ಆಸ್ತಿಯಲ್ಲಿ ಪಾಲು ಕೇಳಿ ದಾವೆ ಮಾಡಿದ್ದಾಳೆ, ಅವಳ ಹಿಸ್ಸೆ ಕೊಟ್ಟರೆ ಸಂದಾನ ಆಗುತ್ತದೆ “ಎಂದು ಮಾತು ಮುಗಿಸುವಷ್ಟರಲ್ಲಿ ಪ್ರತಿವಾದಿಯೊಬ್ಬ ತನ್ನ ವಕೀಲರು ಏನೊ ಹೇಳಬೇಕು ಅನ್ನುವಷ್ಟರಲ್ಲಿ, ” ಇವಳು ನಮ್ಮ ಮನೆತನಕ್ಕೆ ಸಂಬಂಧವಿಲ್ಲ, ನಮ್ಮ ಸಹೋದರಿ ಅಲ್ಲ “ಎಂದು ರಾಜಿ ಮಾತುಕತೆಗೆ ಕೊನೆ ಹೇಳಿದ. ಪ್ರತಿವಾದಿ ಪರ ವಕೀಲರು ” ಯುವರ್ ಆನರ್, ವಾದಿಯು ಪ್ರತಿವಾದಿಯರ ಮನೆತನಕ್ಕೆ ಅಪರಿಚಿತಳು ಎಂದು ನಮ್ಮ ಕೈಫಿಯತ್ತ ಸಲ್ಲಿಸಿದ್ದೇವೆ, ವಿಚಾರಣೆ ಆಗಲಿ “ಎಂದು ಹೇಳಿದರು. ನ್ಯಾಯಾಲಯ ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದುಡಿತು. ವಾದಿ ಕುಸಿದು ಹೋಗಿದ್ದಳು. ಭಯದಿಂದ, ಮುಂದೇನು ಎಂಬ ಭಾವದಿಂದ ನನ್ನನ್ನು ನೋಡುತ್ತಾ, ಕೋರ್ಟ್ ಹಾಲ್ ನಿಂದ ನಿರ್ಗಮಿಸಿದಳು.

ಫೋಟೋ ಕೃಪೆ :google
ಅಂದಿನ ಕೋರ್ಟಿನ ಪ್ರಾರ್ಥಮಿಕ ವಿಚಾರಣೆ ಹಂತ ಮುಗಿದು ಹಲವು ಕೇಸುಗಳು ಮುಂದುಡಿ, ಕೆಲವು ಕೇಸುಗಳನ್ನು ವಿಚಾರಣೆಗೆ ಇರಿಸಿಕೊಳ್ಳುವ ಪ್ರಕ್ರಿಯೆ ಮುಗಿದ ನಂತರ ಹೊರಗೆ ಬಂದೆನು. ಹಲವಾರು ಕಕ್ಷಿದಾರರು ಸುತ್ತುರುವರೆದರು. ಅವರಿಗೆ ಮುಂದಿನ ಮುದ್ದತ್ತು ನೀಡಿದೆ. ಅನುರಾಧ ಇವರನ್ನು ಕರೆದು ಏನು ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ವಿರಾಮವಾಗಿ ಕುಳಿತು ಚರ್ಚೆ ಮಾಡೋಣ ಆಫೀಸಕ್ಕೆ ಬನ್ನಿರಿ ಎಂದು ಹೇಳಿ ಕಳಿಸಿದೆ.
ಮುಂಚೆ ತಿಳಿಸಿದಂತೆ ಅನುರಾಧ ಹೋಮ್ ಆಫೀಸಕ್ಕೆ ಬಂದರು. ಅನುರಾಧ ಇವರ ಲಗ್ನವಾಗಿ ಸುಮಾರು ಇಪ್ಪತ್ತು ವರ್ಷವಾಗಿವೆ. ಅವಳಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದಾರೆ. ಗಂಡನಿಗೆ ಯಾವುದೆ ಆಸ್ತಿ ಇಲ್ಲ. ಸಣ್ಣ ವ್ಯಾಪಾರ ಮಾಡುತ್ತಾನೆ. ಇವಳು ಟೇಲರ್ ಅಂಗಡಿಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಾಳೆ. ಹೊಟ್ಟೆ ಬಟ್ಟೆಗೆ ಇಬ್ಬರು ದುಡಿಯುವದು ಅನಿವಾರ್ಯ. ಹೀಗೆ ಬದುಕು ಸಾಗಿದೆ. ಈಗ ಒಂದು ವರ್ಷದ ಹಿಂದೆ ಇವಳ ತಂದೆ ತೀರಿಕೊಂಡರು. ತವರು ಮನೆಗೆ ಹೋಗಿ ಮಾತನಾಡಿಸಿ ಬರುವ ಧೈರ್ಯ ಸಾಲಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಿನ ಭವಿಷ್ಯದ ಸವಾಲು ಎದುರಾಯಿತು. ತಾಯಿ ಅಣ್ಣಂದಿರನ್ನು ಏಕೆ ಕೇಳಬಾರದು ಎಂದು ತಮ್ಮ ಸಮೀಪ ಸಂಬಂಧಿಕರ ಮೂಲಕ ವಿಚಾರಿಸಿದಳು. ಪಾಲು ಕೊಡುವದಿಲ್ಲವೆಂದು ನಿರಾಕರಿಸಿದರು. ತವರು ಮನೆತನಕ್ಕೆ ಸುಮಾರು 18 ಎಕರೆ ಫಲವತ್ತವಾದ ಜಮೀನು ಮೂರು ಮನೆ ಇದ್ದವು. ಕಂದಾಯ, ನಗರ ಸಭೆ ದಾಖಲಾತಿಗಳನ್ನು ತೆಗೆದು ನೋಡಲಾಗಿ, ತಂದೆ ಮೃತನಾದ ನಂತರ ಮೃತನಿಗೆ ಹೆಂಡತಿ, ಇಬ್ಬರು ಗಂಡು ಮಕ್ಕಳು ಮಾತ್ರ ಎಂದು ಉತ್ತರ ಜೀವಿತ ಪತ್ರ ಪಡೆದು ಕೇವಲ ತಮ್ಮ ಹೆಸರು ದಾಖಲಿಸಿಕೊಂಡಿದ್ದರು. ಮೃತನ ಹೆಣ್ಣು ಮಗಳ ಹೆಸರು ಪ್ರಸ್ತಾಪವಾಗಿರಲಿಲ್ಲ. ನೇರವಾಗಿ ತಾಯಿ,ಅಣ್ಣಂ ದಿರನ್ನು ಪ್ರಶ್ನಿಸಿದಳು ಉತ್ತರಿಸಲಿಲ್ಲ. ಕೊನೆಗೆ ನನ್ನ ಕಡೆಗೆ ಬಂದಳು. ಪಾಲು ಹಿಸ್ಸೆ, ಸ್ವಾಧೀನದ ದಾವೆ ಮಾಡುವುದು ಉಚಿತವೆಂದು ದಾವೆ ದಾಖಲಿಸಿದೆ. ಅನುರಾಧ ಇವರನ್ನು ನೇರವಾಗಿ ಕೇಳಿದೆ “ನೀನು ಮಗಳೆ ಅಲ್ಲ ಎಂದು ನಿಮ್ಮ ತಾಯಿ ಹೇಳಲು ಕಾರಣ ಏನು? “. ಅವಳು ಹೇಳಿದ್ದು ಇಷ್ಟು ” ಸರ್, ನಾನು ಇಲ್ಲಿಯವರೆಗೆ ನಿಮಗೆ ಹೇಳಿರಲಿಲ್ಲ. ನಾನು ಬೇರೆ ಜಾತಿಯವನನ್ನು ಪ್ರೀತಿಸಿ, ಮನೆಯವರ ಮಾತು ಮೀರಿ ಓಡಿ ಹೋಗಿ ಮದುವೆ ಆಗಿದ್ದೇನೆ. ಆವಾಗಿನಿಂದ ತವರು ಮನೆ ಪಾಲಿಗೆ ಸತ್ತು ಹೋಗಿದ್ದೇನೆ. ತಂದೆ ತಾನು ಸತ್ತ ನಂತರ ಕೂಡ ಅವಳನ್ನು ಕರೆಯ ಬೇಡಿ ಎಂದು ಮಾತು ತೆಗೆದು ಕೊಂಡಿದ್ದರಂತೆ”, ಅಳಲಾರಂಬಿಸಿದಳು. ಸಮಾಧಾನಿಸಲು ಮಾತು ಇರಲಿಲ್ಲ. ಮಗಳು ಎನ್ನಲು ಏನಾದ ರು ದಾಖಲಾತಿ ಇದೆಯೇ ಎಂದು ವಿಚಾರಿಸಿದೆ. ಇಲ್ಲ ಎಂದಳು. ಶಾಲಾ ದಾಖಲಾತಿಗಳ ಬಗ್ಗೆ ವಿಚಾರಿಸಿದೆ. ಚಿಕ್ಕಂದಿನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರಿಂದ ಶಾಲೆಗೆ ಕಳಿಸಿರಲಿಲ್ಲ. ನಂತರದ ದಿನದಲ್ಲಿ ಮನೆ ಪಾಠದಿಂದ ಓದಲು ಬರೆಯಲು ಕಲಿತಿದ್ದಳು. ಮಗಳು ಎಂದು ರುಜುವಾತು ಪಡಿಸಲು ದಾಖಲೆ ಇರಲಿಲ್ಲ. ಪ್ರಕರಣದ ಯಶಸ್ಸು ಕ್ಲಿಷ್ಟ ಸಾಧ್ಯ ತಿಳಿಸಿದೆ. “ಸರ್ ಪ್ರಯತ್ನಿಸಿ, ಮುಂದೆ ನನ್ನ ಹಣೆ ಬರಹ “ಎಂದಳು. ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ಮೊದಲಿಗೆ ವಾದಿ ಅನುರಾಧಳ ಮುಖ್ಯ ವಿಚಾರಣೆ ಪ್ರಮಾಣ ಪತ್ರ ಹಾಜರುಪಡಿಸಿದೆ. ಆಸ್ತಿಗಳ ದಾಖಲಾತಿ ಹೊರತು ಪಡಿಸಿ ಯಾವುದೆ ದಾಖಲೆ ಇರಲಿಲ್ಲ. ಪ್ರತಿವಾದಿ ಪರ ವಕೀಲರ ಪ್ರಶ್ನೆಗಳಿಗೆ ತತ್ತರಿಸಿ ಉತ್ತರಿಸದೆ ಹೋದಳು. ಇವಳ ಪರವಾಗಿ ಯಾರು ಸಾಕ್ಷಿ ಹೇಳಲು ಬರಲಿಲ್ಲ. ಶಸ್ತ್ರ ಇಳಿಸುವ ಪ್ರಶ್ನೆ ಇರಲಿಲ್ಲ. ಕೊನೆಯ ಅಸ್ತ್ರವಾಗಿ ಪಿತೃತತ್ವ ಪರೀಕ್ಷೆಗಾಗಿ ವೈ ಜ್ಞಾನಿಕ ತಜ್ಞರಿಂದ ಡಿ ಎನ್ ಎ ಪರೀಕ್ಷೆಗೆ ವಾದಿ ಮತ್ತು ಪ್ರತಿವಾದಿಯರನ್ನು ಒಳಪಡಿಸುವಂತೆ ಅರ್ಜಿ ದಾಖಲಿಸಿದೆ. ಎದುರುದಾರರು ತಮ್ಮ ತಕರಾರು ದಾಖಲಿಸಿ, ವಾದಿ ಮೇಲ್ನೋಟಕ್ಕೆ ಲಿಖಿತ ಹಾಗು ಸಂಬಂಧಿಕರ ಸಾಕ್ಷಿ ಹಾಜರು ಪಡಿಸಿಲ್ಲ. ತಾವು ಪರೀಕ್ಷೆಗೆಒಳ ಪಡಲು ಸಿದ್ದರಿಲ್ಲ ಎಂದು ನಿರಾಕರಿಸಿದರು. ನ್ಯಾಯಾಲಯ ಅರ್ಜಿಯನ್ನು ಅಂತಿಮ ತೀರ್ಪಿನ ಜೊತೆ ವಿಚಾರಣೆಗೆ ಅದೇಶಿಸಿಸಿತು. ಪ್ರತಿವಾದಿ ಪರಸಾಕ್ಷಿದಾರರನ್ನು ಪರೀಕ್ಷಿಸಿದರು. ವಾದಿ ಪ್ರತಿ ವಾದಿ ಪರ ಸುಧೀರ್ಘ ವಾದವನ್ನು ನ್ಯಾಯಾಲಯ ಆಲಿಸಿ ತೀರ್ಪುಗಾಗಿ ಪ್ರಕರಣ ಮುಂದುಡಿತು.
ತೀರ್ಪು : ವಾದಿಯ ದಾವೆಯನ್ನು ವಜಾಗೊಳಿಸಿ, ವಾದಿ ಲಿಖಿತ, ಮೌಖಿಕ ಸಾಕ್ಷಿ ಮೂಲಕ ಮೃತನ ಮಗಳು ಎಂದು ರುಜುವಾತು ಪಡಿಸಲು ವಿಫಲವಾಗಿದ್ದಾಳೆ ಎಂದು ಅಭಿಪ್ರಾಯ ಪಟ್ಟಿತು. ಉಚ್ಚ ನ್ಯಾಯಾಲದ ಮಾರ್ಗದರ್ಶಿ ತೀರ್ಪಿನಂತೆ, ಮೇಲ್ನೋಟಕ್ಕೆ ಸಂಬಂಧ ರುಜುವಾತು ಪಡಿಸಬೇಕು ಮತ್ತು ಎದುರುದಾರರು ಡಿ ಎನ್ ಎ ಪರೀಕ್ಷೆಗೆ ಒಪ್ಪಿರಬೇಕು, ಇಂತಹ ಸಂದರ್ಭದಲ್ಲಿ ಡಿ ಎನ್ ಎ ಪರೀಕ್ಷೆ ಸೂಕ್ತವೆಂದು ಅಭಿಪ್ರಾಯ ಪಟ್ಟಿದೆ. ಈ ಪ್ರಕರಣದಲ್ಲಿ ಡಿ ಎನ್ ಎ ಪರೀಕ್ಷೆ ಯೋಗ್ಯ ಅಲ್ಲವೆಂದು ನಿರ್ಣಯಿಸಿತು.
ತೀರ್ಪಿನ ಮೇಲೆ ಮೆಲ್ಮನವಿ ಯೋಗ್ಯ ಎಂಬ ಅಭಿಪ್ರಾಯ ಕಕ್ಷಿದಾರಳಿಗೆ ತಿಳಿಸಿದೆ. ಮುಂದೇನಾಯಿತು ತಿಳಿಯಲಿಲ್ಲ. ಗೆಲುವು ಸೋಲುಗಳ ಮೇಲೆ ವೃತ್ತಿಪರಿ ಗಣಿಸಿಸಲ್ಪಡುತ್ತದೆ. ಸೋಲು ನಮ್ಮದಾಗುತ್ತದೆ, ಗೆಲುವು ಕಕ್ಷಿದಾರದೆ. ಎಲ್ಲರು ಅಪೇಕ್ಷಿಸುವುದು ಗೆಲುವು ಎಂತಹ ಅಶಕ್ತ ಕೇಸು ಇದ್ದರು !
ನ್ಯಾಯ ವ್ಯವಸ್ಥೆಯಲ್ಲಿ ಲಿಖಿತ, ಮೌಕಿಕ ಬಲವಾದ ಸಂಭವನಿಯ, ನಂಬುವ ಸಾಕ್ಷಾಧಾರಗಳ ಮೇಲೆ ತೀರ್ಪುಗಳು ಹೊರ ಬರುತ್ತವೆ. ಪ್ರತಿ ಕೇಸಿನ ತೀರ್ಪು ಆ ಕೇಸಿನ ಸಾಕ್ಷಾಧಾರ ಅವಲಂಬಿತ ಆಗಿರುತ್ತದೆ.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ
