ಬೇರೆಯವರ ಮೇಲೆ ಅವಲಂಬಿತರಾಗಿ ಕೂತು ತಿಂದರೆ ಅದು ಕ್ಷಣಿಕ ಸುಖ ನೀಡುತ್ತದೆ. ಆದರೆ ಅದು ಕೊನೆಯತನಕ ಉಳಿಯುವುದಿಲ್ಲ. ಸಂಪಿಗೆ ವಾಸು ಅವರ ಒಂದು ನೀತಿ ಕತೆಯನ್ನು ತಪ್ಪದೆ ಮುಂದೆ ಓದಿ…
ನಾಯಿಯೊಂದು ಬೀದಿಯಲ್ಲಿ ನಡೆಯುತ್ತಿದ್ದ ಬೆಕ್ಕನ್ನು ಭೇಟಿಯಾಯಿತು. ಬೆಕ್ಕು ಓಡಿಹೋಗಲು ಪ್ರಯತ್ನಿಸಿತು ಆದರೆ ನಾಯಿ ಅದನ್ನು ವೇಗವಾಗಿ ಹಿಂಬಾಲಿಸಿ ಹಿಡಿಯಿತು. ತನ್ನನ್ನು ಬಿಟ್ಟು ಬಿಡುವಂತೆ ಆ ಬೆಕ್ಕು ಎಷ್ಟು ಕೇಳಿಕೊಂಡರು ನಾಯಿ ಸುತರಾಂ ಒಪ್ಪುವುದಿಲ್ಲ.
‘ನನ್ನನ್ನು ಬಿಟ್ಟರೆ ಸಿಗುವ ಆಹಾರವನ್ನೆಲ್ಲ ತಂದು ಕೊಡುತ್ತೇನೆ, ಅಲ್ಪ -ಸ್ವಲ್ಪ ಉಳಿದದ್ದನ್ನು ನಾನು ತಿನ್ನುತ್ತೇನೆ’ ಎಂದು ಬೆಕ್ಕು ನಾಯಿಯೊಂದಿಗೆ ಚೌಕಾಸಿ ಮಾಡಿತು. ಈ deal ನಾಯಿಗೆ ಇಷ್ಟವಾಯಿತು ಮತ್ತು “ಏನಾದರೂ ವ್ಯತ್ಯಾಸವಾದರೆ ನಿನ್ನನ್ನು ಸಾಯಿಸುತ್ತೇನೆ” ಎಂದು ಬೆದರಿಕೆ ಹಾಕಿ ಕಳಿಸಿತು.
ಆ ಬೆಕ್ಕು ಪ್ರತಿದಿನ ಆಹಾರವನ್ನು ಪ್ರಾಮಾಣಿಕವಾಗಿ ಆ ನಾಯಿಗಾಗಿ ತರುತ್ತಿರುತ್ತದೆ! ಕೆಲವು ದಿನಗಳು ಕಳೆದಿವೆ. ಒಂದು ದಿನ ಬೆಕ್ಕು ಬರಲೇ ಇಲ್ಲ. ನಾಯಿ ಬೆಕ್ಕನ್ನು ಹುಡುಕುತ್ತಿರುವಾಗ ಅದು ಇಲಿಯೊಂದನ್ನು ಅಟ್ಟಿಸಿಕೊಂಡು ಹೋಗಿ ಅದನ್ನು ಸಾಯಿಸಿ ತಿನ್ನುತ್ತಿರುವುದು ಕಾಣಿಸಿತು. ನಾಯಿಗೆ ಕೋಪ ಬಂದು, “ನೀನು ತಪ್ಪು ಮಾಡಿದ್ದು, ಈಗಲೇ ನಿನ್ನನ್ನು ಕೊಂದು ತಿನ್ನುತ್ತೇನೆ” ಎಂದು ಆ ಬೆಕ್ಕಿನ ಮೇಲೆ ಹಾರಿತು.
ಬೆಕ್ಕು ಹೆದರಿ ಓಡಿಹೋಯಿತು. ನಾಯಿ ಬೆನ್ನಟ್ಟಿತು. ನಾಯಿಗೆ ಯಾವುದೇ ತೊಂದರೆಯಿಲ್ಲದೆ ಪ್ರತಿದಿನ ಸಿಗುವ ಆಹಾರವನ್ನು ತಿಂದು ಚೆನ್ನಾಗಿ ಕೊಬ್ಬಿತ್ತು . ಆದ್ದರಿಂದ ಬೆಕ್ಕಿನ ವೇಗದಲ್ಲಿ ನಾಯಿಗೆ ಓಡಲಾಗಲಿಲ್ಲ. ಅವೆರಡು ಓಡುತ್ತಾ, ಬೆಟ್ಟದ ತುದಿಯನ್ನು ತಲುಪಿದವು.
ಬೆಕ್ಕು ಗುಡ್ಡ ಜಿಗಿದು ಬದುಕಬೇಕು, ಇಲ್ಲವೇ ನಾಯಿಗೆ ಸಿಕ್ಕು ಸಾಯಬೇಕಾದ ಪರಿಸ್ಥಿತಿ ಇತ್ತು. ಏನಾದರಾಗಲೆಂದು ಬೆಕ್ಕು ಜಿಗಿದು ತನ್ನ ಪ್ರಾಣವನ್ನು ಉಳಿಸಿಕೊಂಡಿತು. ಪ್ರತಿದಿನವೂ ಪುಕ್ಕಟೆಯಾಗಿ ಸಿಗುತ್ತಿದ್ದ ಆಹಾರವನ್ನು ಹೊಟ್ಟೆ ಬಿರಿಯುವಷ್ಟು ತಿಂದೂ ತಿಂದೂ ದಪ್ಪಗಿದ್ದ ನಾಯಿ ಓಡುವ ವೇಗ ಕಳೆದುಕೊಂಡು ಜಿಗಿಯುವ ಭರದಲ್ಲಿ ಬೆಟ್ಟದ ಅಂಚಿನಿಂದ ಬಿದ್ದು ಸಾವನ್ನಪ್ಪಿತು.
ಕಥೆಯ ನೀತಿ :
ಯಾವತ್ತೂ ಪರಾವಲಂಬಿಗಳಾಗಬೇಡಿ, ಅದರಿಂದ ಮೊದಲಿಗೆ ತುಂಬಾ ಸಂತೋಷವಾಗಬಹುದು. ಆದರೆ ಅಂತಿಮವಾಗಿ ಅದು ಮಾರಣಾಂತಿಕವಾಗುತ್ತದೆ.
- ಸಂಪಿಗೆ ವಾಸು
